ಆ್ಯಪ್ನಗರ

ಪ್ರಕೃತಿ ಉಳಿಸಲು ನಮಗೆ ನಾವೇ ಮಾದರಿಯಾಗಬೇಕು

ಪ್ರಕೃತಿ ಉಳಿಸುವ ನಿಟ್ಟಿನಲ್ಲಿ ನಮಗೆ ನಾವೇ ಮಾದರಿಯಾಗಬೇಕು. ಪ್ಲಾಸ್ಟಿಕ್‌ ಚೀಲ ಬಳಸುವ ಬದಲು ಬಟ್ಟೆ ಚೀಲ ಬಳಸುವ ಮೂಲಕ ನಮ್ಮನ್ನು ನಾವೇ ಮಾದರಿ ಮಾಡಿಕೊಳ್ಳಬಹುದು ಎಂದು ಮಂಗಳೂರು ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ(ಎಸಿಎಫ್‌) ಶಂಕರೇಗೌಡ ಹೇಳಿದರು.

Vijaya Karnataka 18 Aug 2019, 5:00 am
ಮಂಗಳೂರು: ಪ್ರಕೃತಿ ಉಳಿಸುವ ನಿಟ್ಟಿನಲ್ಲಿ ನಮಗೆ ನಾವೇ ಮಾದರಿಯಾಗಬೇಕು. ಪ್ಲಾಸ್ಟಿಕ್‌ ಚೀಲ ಬಳಸುವ ಬದಲು ಬಟ್ಟೆ ಚೀಲ ಬಳಸುವ ಮೂಲಕ ನಮ್ಮನ್ನು ನಾವೇ ಮಾದರಿ ಮಾಡಿಕೊಳ್ಳಬಹುದು ಎಂದು ಮಂಗಳೂರು ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ(ಎಸಿಎಫ್‌) ಶಂಕರೇಗೌಡ ಹೇಳಿದರು.
Vijaya Karnataka Web 17my quiz


ನಗರದ ಬೆಸೆಂಟ್‌ ಪಿಯು ಕಾಲೇಜಿನಲ್ಲಿ ವಿಜಯ ಕರ್ನಾಟಕ ಹಾಗೂ ಅರಣ್ಯ ಇಲಾಖೆ ಮಂಗಳೂರು ವಿಭಾಗವು ಯೆನೆಪೋಯ ಡೀಮ್ಡ್‌ ಟು ಬಿ ಯುನಿವರ್ಸಿಟಿ, ವಿಕಾಸ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಶನ್‌, ಎನ್‌ಎಂಪಿಟಿ ಟ್ರಸ್ಟ್‌ , ಕರ್ನಿರೆ ಫೌಂಡೇಶನ್‌, ಭಾರತ್‌ ಪೆಟ್ರೋಲಿಯಂ, ಸಿಎಫ್‌ಎಎಲ್‌ ಹಾಗೂ ಎಂಎಸ್‌ಇಝೆಡ್‌ ಸಹಭಾಗಿತ್ವದಲ್ಲಿ ಶನಿವಾರ ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಇಡೀ ವಿಶ್ವದಲ್ಲಿ ವಾಯುಮಾಲಿನ್ಯದಿಂದ ಉಂಟಾಗುವ ನಾನಾ ಕಾಯಿಲೆಗಳಿಗೆ ವರ್ಷಕ್ಕೆ 6.8 ಮಿಲಿಯನ್‌ ಜನರು ಸಾಯುತ್ತಿದ್ದಾರೆ. ಚೀನಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಯು ಮಾಲಿನ್ಯ ಉಂಟಾಗುವುದನ್ನು ಮನಗಂಡ ಅಲ್ಲಿನ ಆಡಳಿತ ಎಲೆಕ್ಟ್ರಿಕ್‌ ಕಾರುಗಳ ಉತ್ಪಾದನೆ ಮುಂದಾಯಿತು. ಇದೀಗ ವಿಶ್ವದಲ್ಲೇ ಉತ್ಪಾದನೆಯಾಗುವ ಎಲೆಕ್ಟ್ರಿಕ್‌ ಕಾರುಗಳಲ್ಲಿ ಶೇ.50ರಷ್ಟು ಚೀನಾ ದೇಶದಲ್ಲಿದೆ ಎಂದರು.

ಬೆಸೆಂಟ್‌ ವಿಮೆನ್ಸ್‌ ನ್ಯಾಷನಲ್‌ ಎಜುಕೇಶನ್‌ ಸೊಸೈಟಿ ಕಾರ್ಯದರ್ಶಿ ದೇವಾನಂದ ಪೈ ಮಾತನಾಡಿ, ಭೂಮಿ ಉಳಿದರಷ್ಟೇ ನಮಗೆ ಬದುಕು. ಈ ನೆಲ-ಜಲ-ಅರಣ್ಯದ ಉಳಿವಿಗಾಗಿ ಪ್ರತಿಯೊಬ್ಬರು ತನಗಾಗುವಷ್ಟು ಸೇವೆ ಮಾಡಲೇಬೇಕು. ನಮ್ಮ ಸ್ವಂತ ಭೂಮಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವೈ. ಶಿವರಾಮಯ್ಯ ಮಾತನಾಡಿ, ವಿದ್ಯಾರ್ಥಿಗಳಿಗೆ ವಿಜಯ ಕರ್ನಾಟಕ ಉತ್ತಮ ಕೊಡುಗೆಗಳನ್ನು ನೀಡುತ್ತಿದೆ. ಈ ಹಿಂದೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಮಯದಲ್ಲಿ ಅವರಲ್ಲಿ ಪ್ರೇರಣೆ ಹಾಗೂ ವಿಶ್ವಾಸ ತುಂಬಿಸುವ ಕೆಲಸ ಮಾಡಿತ್ತು. ಈಗ ಪರಿಸರ ರಸಪ್ರಶ್ನೆಯ ಮೂಲಕ ಮತ್ತಷ್ಟು ಜಾಗೃತಿ ಹುಟ್ಟುಹಾಕುವ ಕಾರ‍್ಯ ನಡೆಯುತ್ತಿದೆ. ವಿಶೇಷವಾಗಿ ಮಕ್ಕಳ ನಿರ್ಮಲ ಮನಸ್ಸಿನ ಮೂಲಕ ಅವರ ಹೆತ್ತವರಿಗೂ ಅರಿವು ನೀಡುವ ಕಾರ‍್ಯ ಇದಾಗಿದೆ ಎಂದರು.

ಮಂಗಳೂರು ಅರಣ್ಯ ಇಲಾಖೆಯ ಆರ್‌ಎಫ್‌ಒ ಶ್ರೀಧರ್‌ ಮಾತನಾಡಿ, ವಿಜಯ ಕರ್ನಾಟಕ ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದು, ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನೂ ಅತಿವೃಷ್ಟಿ ಹಾಗೂ ಅನಾವೃಷ್ಟಿ ನಿಸರ್ಗದ ಮುನಿಸಿಗೆ ಸಾಕ್ಷಿಯಾಗಿದೆ. ಗುಡ್ಡ ಕುಸಿತ ಪಶ್ಚಿಮ ಘಟ್ಟಗಳಲ್ಲಿ ಆಳವಾಗಿ ಕೊರೆದು ಮನೆ ಕಟ್ಟಬಾರದಿತ್ತು. ಪರಿಸರಕ್ಕೆ ಮಾಡಿದ ಅನ್ಯಾಯದ ಫಲ ಅನುಭವಿಸುತ್ತಿದ್ದೇವೆ. ಸಾವಿರಾರು ಮರಗಳು ಪಶ್ಚಿಮ ಘಟ್ಟಗಳಲ್ಲಿ ನಾಶವಾಗಿದೆ. ಪತ್ರಿಕೆಗಳನ್ನು ಓದುವುದರಿಂದ ಜ್ಞಾನ ಹೆಚ್ಚಿಸಬಹುದು. ಮರವನ್ನು ಬೆಳೆಸಿ ಉಳಿಸುವ ಕಾರ್ಯ ನಡೆಯಬೇಕು ಎಂದರು.

ವಿಜಯ ಕರ್ನಾಟಕದ ಪತ್ರಿಕೆಯ ಸ್ಥಾನೀಯ ಸಂಪಾದಕ ಯು.ಕೆ.ಕುಮಾರ್‌ನಾಥ್‌ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ರಸಪ್ರಶ್ನೆ ಸ್ಪರ್ಧೆಯಲ್ಲಿ ಒಟ್ಟು 7 ತಾಲೂಕುಗಳ 325 ಹೈಸ್ಕೂಲ್‌ಗಳ 650 ಮಕ್ಕಳು ಪಾಲ್ಗೊಂಡಿದ್ದಾರೆ. ಇದರ ಪೂರ್ವಭಾವಿಯಾಗಿ ನಡೆದ ಅಭಿಯಾನದಲ್ಲಿ 3 ಸಾವಿರಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದಾರೆ. ರಸಪ್ರಶ್ನೆ ಸ್ಪರ್ಧೆಯ ಅಂತಿಮ ಪ್ರಶಸ್ತಿ ಪ್ರದಾನ ಶೀಘ್ರವೇ ನಡೆಯಲಿದೆ ಎಂದರು.

ಕ್ವಿಜ್‌ ಮಾಸ್ಟರ್‌ ಪ್ರೊ. ಉದಯ ಕುಮಾರ್‌, ರೆಸ್ಪಾನ್ಸ್‌ ವಿಭಾಗದ ಎಜಿಎಂ ರಾಮಕೃಷ್ಣ ಡಿ. ಉಪಸ್ಥಿತರಿದ್ದರು. ಟೈಮ್ಸ್‌ ಸಮೂಹದ ಆರ್‌ಎಂಡಿ ವಿಭಾಗದ ಎಜಿಎಂ ಕದ್ರಿ ನವನೀತ್‌ ಶೆಟ್ಟಿ ವಂದಿಸಿದರು. ಮುಖ್ಯ ಉಪಸಂಪಾದಕ ಬಿ. ರವೀಂದ್ರ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ