ಆ್ಯಪ್ನಗರ

Mangaluru Dasara | ಪುತ್ತೂರಿನಲ್ಲಿ ನವರಾತ್ರಿ ವೈಭವದ ಉತ್ತುಂಗ: ಇಂದು ಮಹಾನವಮಿ, ನಾಳೆ ವಿಜಯದಶಮಿ ಸಂಭ್ರಮ

ಆದಿಶಕ್ತಿಯ 9 ರೂಪಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿಯವರ ಆರಾಧನೆ ಈಗಾಗಲೇ 8 ರಾತ್ರಿಗಳಲ್ಲಿ ನಡೆದಿದೆ. 9ನೇ ರಾತ್ರಿಯಾದ ಮಂಗಳವಾರ 9ನೇ ರೂಪವಾದ ಸಿದ್ಧಿಧಾತ್ರಿಯ ಉಪಾಸನೆ ನಡೆಯಲಿದೆ. ಇದರೊಂದಿಗೆ ಮಂಗಳವಾರ ರಾತ್ರಿ ಮಹಾನವಮಿ ಪೂಜೆ ನಡೆದು ಗದ್ದಿಗೆ ಇಳಿಯುವ ವಿಧಿ ನಡೆಯಲಿದೆ. ವಿಶೇಷವಾಗಿ ದಸರಾ ಉತ್ಸವದ ಕ್ಷೇತ್ರಗಳಲ್ಲಿ ಬುಧವಾರ ವಿಜಯ ದಶಮಿಯ ದಿನ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ.

Vijaya Karnataka 4 Oct 2022, 6:59 am
ಪುತ್ತೂರು: ಆದಿಶಕ್ತಿಯನ್ನು 9 ರೂಪಗಳಲ್ಲಿ ಆರಾಧಿಸುವ ಅತ್ಯಂತ ವಿಶಿಷ್ಟ ಉಪಾಸನಾ ಪರ್ವವಾದ ನವರಾತ್ರಿಯ ಸಂಭ್ರಮ, ಸಡಗರ ಹಳ್ಳಿ-ಹಳ್ಳಿಗಳಲ್ಲೂ ಕಳೆಗಟ್ಟಿದೆ. ಸೆಪ್ಟೆಂಬರ್‌ 26ರಂದು ಆರಂಭಗೊಂಡ 9 ರಾತ್ರಿಗಳ ಉತ್ಸವ ಅಕ್ಟೋಬರ್‌ 4ರಂದು ಮಹಾನವಮಿ ಪೂಜೆಯ ಮೂಲಕ ಸಮಾಪನಗೊಳ್ಳಲಿದೆ. 5ರಂದು ವಿಜಯದಶಮಿಯಾಗಿದ್ದು, 9 ರಾತ್ರಿಗಳ ವ್ರತ, ಪೂಜೆ, ಪುನಸ್ಕಾರಗಳಿಗೆ ವಿಜಯೋತ್ಸವದ ಕಲಶವಿಡಲಿದೆ.
Vijaya Karnataka Web Dasara festivities.
ಸಾಂದರ್ಭಿಕ ಚಿತ್ರ


15 ದಿನಗಳ ಪಿತೃಪಕ್ಷ ಕಳೆದು, ಮಹಾಲಯ ಅಮಾವಾಸ್ಯೆಯ ಮೂಲಕ ನವರಾತ್ರಿಯ ಪರ್ವ ಆರಂಭಗೊಂಡಿತ್ತು. ಪ್ರತೀ ದುರ್ಗಾ ದೇಗುಲಗಳಲ್ಲಿ 26ರಂದು ಗದ್ದಿಗೆ ಏರುವ ಮೂಲಕ ಜಗನ್ಮಾತೆಯ ಆರಾಧನೆ ಆರಂಭಗೊಂಡಿತ್ತು. ದುರ್ಗಾ ದೇವಾಲಯಗಳಲ್ಲಿ ಪ್ರಧಾನ ದೇವಿಗೆ ನವರಾತ್ರಿಯ ಸಂದರ್ಭ 8 ರಾತ್ರಿ ಹೂವಿನ ಪೂಜೆ, ನವರಾತ್ರಿ ಪೂಜೆ, ದುರ್ಗಾ ಪೂಜೆ, ರಂಗ ಪೂಜೆ ಇತ್ಯಾದಿಗಳು ನಡೆದಿವೆ. ಇತರ ದೇವಾಲಯಗಳಲ್ಲಿ ಅಲ್ಲಿನ ಪರಿವಾರ ಗುಡಿಯಲ್ಲಿರುವ ದುರ್ಗೆಗೆ ಇದೇ ಮಾದರಿಯ ಉಪಾಸನೆ ನಡೆದಿದೆ.

ಮಂಗಳೂರು ದಸರಾ ಶೋಭಾಯಾತ್ರೆಗೆ ಮೆರುಗು ನೀಡಲಿದೆ 23 ಜಿಲ್ಲೆಗಳ ಕಲಾ ತಂಡ
ಆದಿಶಕ್ತಿಯ 9 ರೂಪಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿಯವರ ಆರಾಧನೆ ಈಗಾಗಲೇ 8 ರಾತ್ರಿಗಳಲ್ಲಿ ನಡೆದಿದೆ. 9ನೇ ರಾತ್ರಿಯಾದ ಮಂಗಳವಾರ 9ನೇ ರೂಪವಾದ ಸಿದ್ಧಿಧಾತ್ರಿಯ ಉಪಾಸನೆ ನಡೆಯಲಿದೆ. ಇದರೊಂದಿಗೆ ಮಂಗಳವಾರ ರಾತ್ರಿ ಮಹಾನವಮಿ ಪೂಜೆ ನಡೆದು ಗದ್ದಿಗೆ ಇಳಿಯುವ ವಿಧಿ ನಡೆಯಲಿದೆ. ವಿಶೇಷವಾಗಿ ದಸರಾ ಉತ್ಸವದ ಕ್ಷೇತ್ರಗಳಲ್ಲಿ ಬುಧವಾರ ವಿಜಯ ದಶಮಿಯ ದಿನ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ. ಅಸುರೀ ಶಕ್ತಿಯ ವಿರುದ್ಧ ಆದಿಶಕ್ತಿಯು ವಿಜಯ ಸಾಧಿಸಿದ ದಿನವಾಗಿ ವಿಜಯ ದಶಮಿಯನ್ನು ಬಣ್ಣಿಸಲಾಗುತ್ತಿದ್ದು, ಇದೇ ದಿನ ರಾಮನ ಪಟ್ಟಾಭಿಷೇಕ, ಪಾಂಡವರ ಅಜ್ಞಾತವಾಸ ಅಂತ್ಯ ಇತ್ಯಾದಿ ಘಟನೆಗಳು ನಡೆದಿವೆ ಎಂಬ ನಂಬಿಕೆಯಿದೆ.

ಎಲ್ಲೆಲ್ಲೂಹಬ್ಬದ ಕಳೆ

ಪ್ರತಿ ರಾತ್ರಿ ದೇಗುಲಗಳಲ್ಲಿ ನಡೆದ ವಿಶೇಷ ಪೂಜೆ, ಉತ್ಸವಕ್ಕಾಗಿ ಭಕ್ತರು ತೆರಳುವ ಸಂಭ್ರಮ ಒಂದೆಡೆಯಾದರೆ, ಹೊಸ ವಸ್ತುಗಳ ಖರೀದಿ, ಹೊಸ ವಾಹನಗಳ ಖರೀದಿಯ ಖುಷಿ ಮತ್ತೊಂದೆಡೆ. ಆಯುಧ ಪೂಜೆ- ವಾಹನ ಪೂಜೆಯ ಸಡಗರ ಮತ್ತೊಂದೆಡೆ ಮೇಳವಿಸಿದ ಕಾರಣ ಇಡೀ ನವರಾತ್ರಿ ಪ್ರತೀ ಊರಲ್ಲೂ, ಮನೆ-ಮನೆಯಲ್ಲೂ ಹಬ್ಬದ ಸಂಭ್ರಮ ಸೃಷ್ಟಿಸಿತ್ತು. ಈ ಬಾರಿ ಅಲ್ಲಲ್ಲಿ ಮಳೆಯಾಗಿದ್ದು ಬಿಟ್ಟರೆ ಒಟ್ಟಾರೆಯಾಗಿ ನವರಾತ್ರಿ ಸಂಭ್ರಮಕ್ಕೆ ಮಳೆ ಅಡ್ಡಿಯಾಗಿಲ್ಲ. ಆಯುಧ ಪೂಜೆಯ ಕಾರಣದಿಂದಾಗಿ ಲಕ್ಷಾಂತರ ವಾಹನಗಳು ಪುಷ್ಪಾಲಂಕಾರಗೊಳ್ಳುವ, ಕಾರ್ಖಾನೆ, ಗ್ಯಾರೇಜ್‌ ಇತ್ಯಾದಿಗಳಲ್ಲಿ ಪೂಜೆಯ ವೈಭವ ಎದ್ದು ಕಂಡಿತು. ನವರಾತ್ರಿಯ ಕಾರಣದಿಂದ ಇಡೀ ಮಾರುಕಟ್ಟೆಗೆ ಹೊಸ ಕಳೆ ತುಂಬಿದೆ.

ವಿಕ ನವರಂಗ ವೈಭವ

ನವರಾತ್ರಿ ಸಂದರ್ಭದಲ್ಲಿ ವಿಜಯ ಕರ್ನಾಟಕ ನಡೆಸಿಕೊಂಡು ಬರುತ್ತಿರುವ 'ವಿಕ ನವರಂಗ್‌' ಉತ್ಸವ ಈ ವರ್ಷ 8ನೇ ಆವೃತ್ತಿಯಲ್ಲಿ ಹೊಸ ಮೇನಿಯಾವನ್ನೇ ಸೃಷ್ಟಿಸಿತು. ಪ್ರತೀ ಕಚೇರಿ, ಪ್ರತೀ ಮನೆ, ಪ್ರತೀ ಸಂಸ್ಥೆಗಳಲ್ಲೂ ಮಹಿಳೆಯರ ನಿತ್ಯದ ಚರ್ಚೆಯ ವಸ್ತುವಾಗಿ ವಿಕ ನವರಂಗ್‌ ಹವಾ ಸೃಷ್ಟಿಸಿದ್ದು, ನವರಾತ್ರಿಗೆ ಹೊಸ ರೂಪ ನೀಡುವಲ್ಲಿ ಯಶಸ್ವಿಯಾಯಿತು. ಪ್ರತೀ ದಿನದ ಬಣ್ಣದ ಬಗ್ಗೆ ಚರ್ಚಿಸುವ, ಆಯಾ ದಿನದ ಬಣ್ಣಗಳಲ್ಲಿ ಉಡುಪು ಧರಿಸಿ ಫೋಟೋ ಕಳಿಸಿಕೊಡುವ, ಮರುದಿನ ಪತ್ರಿಕೆ ಕೊಂಡು ನೋಡುವ, ಫೋಟೋ ಬಂದಿದ್ದಲ್ಲಿ ಸಂಭ್ರಮಿಸುವ, ಬಾರದಿದ್ದಲ್ಲಿ ಮರಳಿ ಯತ್ನ ಮಾಡುವ, ಪ್ರಕಟಗೊಂಡ ಫೊಟೋಗಳನ್ನು ಮೊಬೈಲ್‌ ಸ್ಟೇಟಸ್‌ ಹಾಕುವ ಪರಿಪಾಠ ಹೊಸ ಟ್ರೆಂಡ್‌ ಸೃಷ್ಟಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ