ಆ್ಯಪ್ನಗರ

ಉಳ್ಳಾಲ ಒಳಚರಂಡಿ ಯೋಜನೆಗೆ ಸಿಕ್ಕಿಲ್ಲ ಮುಕ್ತಿ: 14 ವರ್ಷವಾದರೂ ಮುಗಿಯದ ಕಾಮಗಾರಿ

ಉಳ್ಳಾಲ ಒಳಚರಂಡಿ ಯೋಜನೆ 14 ವರ್ಷವಾದರೂ ಅನುಷ್ಠಾನ ಆಗಿಲ್ಲ. 62 ಕಿ,ಮೀ ಪೈಪ್ ಲೈನ್ ಕಾಮಗಾರಿ ಮುಗಿದಿದ್ದು, ಎಂಟು ವೆಟ್‌ವೆಲ್ ಹಾಗೂ 2 ಎಸ್‌ಟಿಪಿ ನಿರ್ಮಾಣ ಆಗಬೇಕಿದೆ.

Vijaya Karnataka Web 31 Jan 2023, 11:02 am

ಹೈಲೈಟ್ಸ್‌:

  • ಅಧಿಕಾರಿಗಳಿಗೆ ಇಚ್ಛಾಶಕ್ತಿ ಇಲ್ಲದಿದ್ದರೆ, ಸಾರ್ವಜನಿಕರು ಪ್ರಶ್ನಿಸದಿದ್ದರೆ ಮೂರು ವರ್ಷದಲ್ಲಿ ಮುಗಿಯಬೇಕಿದ್ದ ಯೋಜನೆ ನೂರು ವರ್ಷವಾದರೂ ಮುಗಿಯದು ಎಂಬುದಕ್ಕೆ ಉಳ್ಳಾಲದ ಒಳಚರಂಡಿ ಯೋಜನೆ ನಿದರ್ಶನ.
  • ಸಕಾಲದಲ್ಲಿ ಭೂಹಸ್ತಾಂತರ ನಡೆಯದ ಹಿನ್ನೆಲೆಯಲ್ಲಿ ಕೊಳವೆ ಅಳವಡಿಕೆ ಮತ್ತು ಮ್ಯಾನ್‌ಹೋಲ್‌ ಜಾಲಕ್ಕೆ ಮಾತ್ರ ಟೆಂಡರ್‌ ಕರೆದು, 62 ಕಿ.ಮೀ. ಪೈಪ್‌ಲೈನ್‌ ಕಾಮಗಾರಿ ಮುಗಿಸಲಾಗಿದೆ.
  • ಎರಡನೇ ಹಂತದಲ್ಲಿ2019 ರಲ್ಲಿ ಭಾಗಶಃ ಜಮೀನು ಹಸ್ತಾಂತರ ನಡೆದಿದ್ದು, ಆಗ ವೆಟ್‌ವೆಲ್‌ ಮತ್ತು ಎಸ್‌ಟಿಪಿ ನಿರ್ಮಾಣಕ್ಕೆ ಟೆಂಡರ್‌ ಕರೆದಿದ್ದು, ಒಟ್ಟು ಎಂಟು ವೆಟ್‌ವೆಲ್‌ ಮತ್ತು ಎರಡು ಎಸ್‌ಟಿಪಿ ನಿರ್ಮಿಸಬೇಕಿದೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web sewerage project
  • ಮುಹಮ್ಮದ್‌ ಆರಿಫ್‌
ಮಂಗಳೂರು: ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಇಚ್ಛಾಶಕ್ತಿ ಇಲ್ಲದಿದ್ದರೆ, ಸಾರ್ವಜನಿಕರು ಪ್ರಶ್ನಿಸದಿದ್ದರೆ ಮೂರು ವರ್ಷದಲ್ಲಿ ಮುಗಿಯಬೇಕಿದ್ದ ಯೋಜನೆ ನೂರು ವರ್ಷವಾದರೂ ಮುಗಿಯದು ಎಂಬುದಕ್ಕೆ ಉಳ್ಳಾಲದ ಒಳಚರಂಡಿ ಯೋಜನೆ ನಿದರ್ಶನ.
2009 ರಲ್ಲಿಉಳ್ಳಾಲ ಪುರಸಭೆಯಾಗಿದ್ದಾಗ 55.71 ಕೋಟಿ ರೂ. ಮೊತ್ತದ ಒಳಚರಂಡಿ ಯೋಜನೆಯು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮೂಲಕ ಮಂಜೂರಾಗಿತ್ತು. ಆರಂಭದಿಂದ ಇಲ್ಲಿವರೆಗೆ ಹಲವು ಅಡೆತಡೆಗಳನ್ನು ಎದುರಿಸಿ ಒಂದಷ್ಟು ಕಾಮಗಾರಿ ನಡೆದಿತ್ತು. ಇದೀಗ 14 ವರ್ಷಗಳು ಕಳೆದರೂ ಇನ್ನೂ ಕಾಮಗಾರಿ ಪೂರ್ಣ ಪ್ರಮಾಣದಲ್ಲಿಅನುಷ್ಠಾನ ಗೊಂಡಿಲ್ಲ.

ಮಂಗಳೂರಿನ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ದೂರು; ಪೊಲೀಸ್ ಕಮೀಷನರ್ ಗೆ ಲೋಕಾಯುಕ್ತ ನೋಟಿಸ್

ಸಂಸ್ಕರಣೆ ಪ್ರಕ್ರಿಯೆ:

ಉಳ್ಳಾಲದ ಮನೆಗಳ ಶೌಚಾಲಯಗಳ ಮಲ ಮೂತ್ರ ಸಹಿತ ಕೊಳಚೆ ನೀರನ್ನು ಒಳಚರಂಡಿಯ ಮುಖ್ಯ ಕೊಳವೆಗಳಿಗೆ ಸಂಪರ್ಕಿಸಿ, ವೆಟ್‌ವೆಲ್‌ನಲ್ಲಿ ಸಂಗ್ರಹಿಸಿ, ಅಲ್ಲಿಂದ ತ್ಯಾಜ್ಯ ಸಂಸ್ಕರಣೆ ಘಟಕ (ಸೀವೇಜ್‌ ಟ್ರೀಟ್‌ಮೆಂಟ್‌ ಪ್ಲಾಂಟ್‌-ಎಸ್‌ಟಿಪಿ)ಕ್ಕೆ ಪಂಪ್‌ ಮಾಡಿ, ಅಲ್ಲಿ ಫಿಲ್ಟರ್‌ ಪ್ರೆಸ್‌ ಮೂಲಕ ಸಂಸ್ಕರಣೆ ಮಾಡಿ, ಉಳಿದ ತ್ಯಾಜ್ಯದಿಂದ ಗೊಬ್ಬರ ತಯಾರಿಸುವುದು ಈ ಯೋಜನೆಯ ಉದ್ದೇಶ. ಬಯಾಲಾಜಿಕಲ್‌ ಆಕ್ಸಿಜನ್‌ ಡಿಮಾಂಡ್‌ (ಬಿಓಡಿ) ನಿಯಮಾನುಸಾರ ಸಂಸ್ಕರಣೆ ಪ್ರಕ್ರಿಯೆ ನಡೆಯುತ್ತದೆ.

ಎರಡು ಪ್ಯಾಕೇಜ್‌

ಯೋಜನೆಯ ಮೊದಲ ಹಂತದಲ್ಲಿ ವೆಟ್‌ವೆಲ್‌ ಮತ್ತು ಎಸ್‌ಟಿಪಿ ನಿರ್ಮಾಣಕ್ಕೆ ಜಮೀನು ಗುರುತಿಸಲಾಗಿತ್ತು. ಪುರಸಭೆಯು ಭೂಸ್ವಾಧೀನಪಡಿಸಿಕೊಂಡು ಒಳಚರಂಡಿ ಮಂಡಳಿಗೆ ಜಮೀನು ಹಸ್ತಾಂತರ ಮಾಡಬೇಕಿತ್ತು. ಸಕಾಲದಲ್ಲಿ ಭೂಹಸ್ತಾಂತರ ನಡೆಯದ ಹಿನ್ನೆಲೆಯಲ್ಲಿ ಕೊಳವೆ ಅಳವಡಿಕೆ ಮತ್ತು ಮ್ಯಾನ್‌ಹೋಲ್‌ ಜಾಲಕ್ಕೆ ಮಾತ್ರ ಟೆಂಡರ್‌ ಕರೆದು, 62 ಕಿ.ಮೀ. ಪೈಪ್‌ಲೈನ್‌ ಕಾಮಗಾರಿ ಮುಗಿಸಲಾಗಿದೆ.

ಎರಡನೇ ಹಂತದಲ್ಲಿ2019 ರಲ್ಲಿ ಭಾಗಶಃ ಜಮೀನು ಹಸ್ತಾಂತರ ನಡೆದಿದ್ದು, ಆಗ ವೆಟ್‌ವೆಲ್‌ ಮತ್ತು ಎಸ್‌ಟಿಪಿ ನಿರ್ಮಾಣಕ್ಕೆ ಟೆಂಡರ್‌ ಕರೆದಿದ್ದು, ಒಟ್ಟು ಎಂಟು ವೆಟ್‌ವೆಲ್‌ ಮತ್ತು ಎರಡು ಎಸ್‌ಟಿಪಿ ನಿರ್ಮಿಸಬೇಕಿದೆ. ನೇತ್ರಾವತಿ ನದಿ ಸೇತುವೆಯಿಂದ ತಲಪಾಡಿ ಕಡೆಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯ ಬಲ ಭಾಗಕ್ಕೆ ಕೋಡಿ ಕೋಟೆಪುರದಲ್ಲಿ ಮತ್ತು ಎಡಭಾಗಕ್ಕೆ ಕಲ್ಲಾಪು ಬುದ್‌ರ್‍ನಲ್ಲಿಎಸ್‌ಟಿಪಿ ನಿರ್ಮಿಸಬೇಕಿತ್ತು.

ಸಣ್ಣ ಅಪಘಾತ, ದೊಡ್ಡ ಪ್ರಕರಣ: ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನು ಕಿ.ಮೀ. ದೂರ ಹೊತ್ತೊಯ್ದ ಮಹಿಳೆ, ಐವರು ಅರೆಸ್ಟ್‌
ಜಾಗದ ವಿವಾದ:
ಕೋಡಿ ಕೋಟೆಪುರದಲ್ಲಿ ವೆಟ್‌ವೆಲ್‌ ಮತ್ತು ಎಸ್‌ಟಿಪಿ ನಿರ್ಮಾಣಗೊಂಡಿದೆ. ಕೈಕೊ ಸುಭಾಸ್‌ ನಗರದಲ್ಲಿ ವೆಟ್‌ವೆಲ್‌ ನಿರ್ಮಾಣಕ್ಕೆ ಸಾರ್ವಜನಿಕರ ವಿರೋಧವಿದೆ. ಬಂಡಿಕೊಟ್ಯ ಮತ್ತು ತೊಕ್ಕೊಟ್ಟು ಜಂಕ್ಷನ್‌ನಲ್ಲಿ ನೆಲಮಟ್ಟದ ತನಕ ವೆಟ್‌ವೆಲ್‌ ನಿರ್ಮಿಸಲಾಗಿದೆ. ಹೊಸಗದ್ದೆ ಮತ್ತು ಕಲ್ಲಾಪು ಬುದ್‌ರ್‍ನ ಜಮೀನು ವಿವಾದ ಕೋರ್ಟ್‌ನಲ್ಲಿದೆ. ಕಲ್ಲಾಪು ಮೊನೆಪು ಮತ್ತು ಕಲ್ಲಾಪು ಪಟ್ಲದ ಜಾಗ ನಗರಸಭೆಯಿಂದ ಹಸ್ತಾಂತರವಾಗಿಲ್ಲ.

ಈಗ ನಿರ್ಮಿಸುತ್ತಿರುವ ಒಳಚರಂಡಿ ವ್ಯವಸ್ಥೆ ಅವೈಜ್ಞಾನಿಕ ಎಂದು ಪುಕಾರು ಕೆಲವರದ್ದು. ಉಳ್ಳಾಲದಲ್ಲಿ ವಸತಿ, ವಾಣಿಜ್ಯ ಸಮುಚ್ಚಯಗಳ ನಿರ್ಮಾಣಕ್ಕೆ ಪುರಸಭೆ ಅನುಮತಿ ನೀಡುತ್ತಿದೆ. ಜನಸಂಖ್ಯೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಶೀಘ್ರ ಒಳಚರಂಡಿ ಅನುಷ್ಠಾನ ಸರಕಾರದ ಜವಾಬ್ದಾರಿ.

ಕೆಲವು ಕಾರಣಗಳಿಂದ ಉಳ್ಳಾಲ ಒಳಚರಂಡಿ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ. ಇದನ್ನು ಸರಿಪಡಿಸಿ, ಶೀಘ್ರ ಯೋಜನೆ ಅನುಷ್ಠಾನಕ್ಕಾಗಿ ನಗರಾಭಿವೃದ್ಧಿ ಸಚಿವರ ಗಮನ ಸೆಳೆದಿದ್ದು, ಸ್ಥಳ ಸಮೀಕ್ಷೆ ನಡೆಸಿದ್ದಾರೆ. ಕಾಮಗಾರಿ ಮುಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಮಂಗಳೂರು ಶಾಸಕ ಯು.ಟಿ.ಖಾದರ್‌ ಹೇಳಿದ್ದಾರೆ.

ಒಂದು ದೂರದರ್ಶಿ ಯೋಜನೆಯನ್ನು ವ್ಯವಸ್ಥಿತವಾಗಿ ಮಾಡಬೇಕಿತ್ತು. ಆದರೆ ಸಪೂರದ ಕೊಳವೆಗಳನ್ನು ಅಳವಡಿಸಿ, ಅವೈಜ್ಞಾನಿಕವಾಗಿ ಆರಂಭಿಸಿ, ಹೇಗಾದರೂ ಮುಗಿಸುವ ತವಕದಲ್ಲಿದ್ದಾರೆ. ವೆಟ್‌ವೆಲ್‌ ಜಾಗ ಸರಿ ಇಲ್ಲ. ಮನೆಗಳಿಗೆ ತ್ಯಾಜ್ಯ ವಾಪಸ್‌ ಬರುವ ಸಾಧ್ಯತೆ ಇದೆ. ಈ ಬಗ್ಗೆ ವಿಧಾನ ಪರಿಷತ್‌ನಲ್ಲಿ ಚರ್ಚಿಸಿದ್ದೇನೆ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಎಂ.ಫಾರೂಕ್‌, ಹೇಳಿದ್ದಾರೆ.

ಮುಂದಿನ ಲೇಖನ