ಆ್ಯಪ್ನಗರ

ಭೂಗತ ಪಾತಕಿ ಆಸ್ಗರ್‌ ಆಲಿ ಬಂಧನ

ಕುಖ್ಯಾತ ಭೂಗತ ಪಾತಕಿ, ಪೊಳಲಿ ಅನಂತು, ಟಾರ್ಗೆಟ್‌ ಇಲ್ಯಾಸ್‌ ಕೊಲೆ ಪ್ರಕರಣದ ಆರೋಪಿ ನಟೋರಿಯಸ್‌ ರೌಡಿ ಆಸ್ಗರ್‌ ಆಲಿ ಎಂಬಾತನನ್ನು ನಗರ ಪೊಲೀಸರು ಬಂಧಿಸಿದ್ದಾರೆ.

Vijaya Karnataka 16 Jun 2019, 5:00 am
ಮಂಗಳೂರು: ಕುಖ್ಯಾತ ಭೂಗತ ಪಾತಕಿ, ಪೊಳಲಿ ಅನಂತು, ಟಾರ್ಗೆಟ್‌ ಇಲ್ಯಾಸ್‌ ಕೊಲೆ ಪ್ರಕರಣದ ಆರೋಪಿ ನಟೋರಿಯಸ್‌ ರೌಡಿ ಆಸ್ಗರ್‌ ಆಲಿ ಎಂಬಾತನನ್ನು ನಗರ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web 15m-asgar aropi


ಆರೋಪಿಗೆ ನಕಲಿ ಪಾರ್ಸ್‌ಪೋರ್ಟ್‌ ನೀಡಿ ಸಹಕರಿಸಿದ ನವಾಝ್‌ ಮತ್ತು ರಶೀದ್‌ ಎಂಬವರನ್ನು ಕೂಡ ಬಂಧಿಸಲಾಗಿದೆ. ಈತನ ಮೇಲೆ ನಗರದ ನಾನಾ ಪೊಲೀಸ್‌ ಠಾಣೆಗಳಲ್ಲಿ 3 ಕೊಲೆ ಪ್ರಕರಣ ಸೇರಿದಂತೆ ಕೊಲೆ ಬೆದರಿಕೆ, ಸುಲಿಗೆ, ದರೋಡೆ ಸಹಿತ 9 ಪ್ರಕರಣಗಳಿವೆ. ಈತ 2007ರಲ್ಲಿ ನಕಲಿ ಪಾಸ್‌ಪೋರ್ಟ್‌ ಬಳಸಿಕೊಂಡು ದುಬೈಗೆ ಪರಾರಿಯಾಗಿದ್ದ.

ಕೇರಳದಲ್ಲಿ ತಲೆಮರೆಸಿಕೊಂಡಿದ್ದ: ಭೂಗತಪಾತಕಿ ಆಸ್ಗರ್‌ ದುಬೈನಿಂದ ಮರಳಿ ಊರಿಗೆ ಬಂದ ಬಳಿಕ ಕೇರಳದ ಉಪ್ಪಳದಲ್ಲಿ ತಲೆಮರೆಸಿಕೊಂಡಿದ್ದ. ಈ ಬಗ್ಗೆ ಖಚಿತ ಮಾಹಿತಿ ನಗರ ಪೊಲೀಸರಿಗೆ ದೊರೆತಿದ್ದು, ಕಂಕನಾಡಿ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಜಗದೀಶ್‌ ಮತ್ತು ಎಸಿಬಿ ಇನ್‌ಸ್ಪೆಕ್ಟರ್‌ ಶ್ಯಾಮಸುಂದರ್‌ ಅವರನ್ನೊಳಗೊಂಡ ತಂಡ ಭೂಗತ ಪಾತಕಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಭೂಗತ ಪಾತಕಿಗೆ ನಕಲಿ ಪಾರ್ಸ್‌ಪೋರ್ಟ್‌ ಮಾಡಲು ಸಹಕರಿಸಿದ ಆರೋಪಿಗಳನ್ನು ಹೆಚ್ಚಿನ ತನಿಖೆಗೊಳಪಡಿಸಲಾಗಿದೆ.

ಮೂರನೇ ಕೊಲೆ ಕೇಸು: ಟಾರ್ಗೆಟ್‌ ಇಲ್ಯಾಸ್‌, ಅನಂತು ಕೊಲೆ ಪ್ರಕರಣದ ಆರೋಪಿ ಆಸ್ಗರ್‌ ಆಲಿ ಮೇಲೆ ಉಳ್ಳಾಲ ಯುವತಿ ಶಕಿನಾ ಕೊಲೆ ಪ್ರಕರಣದ ಆರೋಪವೂ ಇದೆ. ಉಳ್ಳಾಲ ಠಾಣೆಯಲ್ಲಿ ಯುವತಿನಾಪತ್ತೆ ಪ್ರಕರಣ ದಾಖಲಾಗಿತ್ತು. ಆದರೆ ಪಾತಕಿ ಮಾಡೂರು ಇಸುಬು ಬಂಧನ ವೇಳೆ ಯುವತಿ ಶಕಿನಾ ಕೊಲೆಯಾಗಿರುವ ಬಗ್ಗೆ ಮತ್ತು ಇದರಲ್ಲಿ ಆಸ್ಗರ್‌ ಆಲಿ ಶಾಮೀಲಾಗಿರುವ ಬಗ್ಗೆ ಬಾಯ್ಬಿಟ್ಟಿದ್ದ. ಇದರಿಂದ ನಗರದಲ್ಲಿ ಆಸ್ಗರ್‌ ಮೇಲೆ 3 ಕೊಲೆ ಪ್ರಕರಣವಿದೆ.

ಪಾಸ್‌ಪೋರ್ಟ್‌ನಲ್ಲಿ ಅಶ್ರಫ್‌ ಆಲಿ

ಈತ ನಕಲಿ ಪಾಸ್‌ಪೋರ್ಟ್‌ ಹೊಂದಿದ್ದು, ಅದರಲ್ಲಿ ಅಶ್ರಫ್‌ ಆಲಿ ಎಂದು ಹೆಸರು ಕೊಟ್ಟಿದ್ದ. ಈ ನಕಲಿ ಪಾಸ್‌ಪೋರ್ಟ್‌ ಮಾಡಲು ಸಹಕಾರ ನೀಡಿದ ಇಬ್ಬರನ್ನು ಬಂಧಿಸಲಾಗಿದೆ. ಅವರಿಂದ ಸುಮಾರು 35 ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ಅಸಲಿಯೆಷ್ಟು? ನಕಲಿಯೆಷ್ಟು ಎಂದು ಪತ್ತೆಹಚ್ಚಲಾಗುವುದು. ನಕಲಿ ಪಾಸ್‌ಪೋರ್ಟ್‌ ಜಾಲದ ಹಿಂದೆ ಇನ್ನಷ್ಟು ಮಂದಿ ಶಾಮೀಲಾಗಿರುವ ಸಾಧ್ಯತೆಯಿದ್ದು, ಅವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.

ದುಬೈನಲ್ಲಿದ್ದು ಇಲ್ಯಾಸ್‌ ಟಾರ್ಗೆಟ್‌

ಮಾಡೂರು ಇಸುಬು, ರಶೀದ್‌ ಮಲಬಾರಿಯ ನಿಕಟವರ್ತಿಯಾಗಿರುವ ಆಸ್ಗರ್‌ ಆಲಿ ಮತ್ತು ಟಾರ್ಗೆಟ್‌ ಗ್ಯಾಂಗ್‌ನ ಇಲ್ಯಾಸ್‌ ಮಧ್ಯೆ ವೈಮನಸ್ಸಿದ್ದು ಇಲ್ಯಾಸ್‌ ಕೊಲೆಗೆ ದುಬೈನಲ್ಲಿದ್ದೇ ಟಾರ್ಗೆಟ್‌ ಹಾಕಿ ಸುಪಾರಿ ನೀಡಿದ್ದ. ಇಲ್ಯಾಸ್‌ ಕೊಲೆಯಾದ ಬಳಿಕ ಪ್ರಕರಣದ ಆರೋಪಿಗಳನ್ನು ಮುಂಬಯಿಗೆ ಕರೆಸಿ ಔತಣ ಕೂಟವನ್ನೂ ಏರ್ಪಡಿಸಿದ್ದಾನೆಂದು ತನಿಖೆಯಿಂದ ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ