ಮಂಗಳೂರು: ವಿಜಯ ಕರ್ನಾಟಕ ಪತ್ರಿಕೆ ಕಂಬಳ ಸಂಸ್ಕತಿ ಉಳಿಸುವುದಕ್ಕಾಗಿ 20ದಿನಗಳಿಂದ ನಿರಂತರವಾಗಿ ನಡೆಸಿದ ಅಭಿಯಾನವು ತಾರ್ಕಿಕ ಅಂತ್ಯಕಂಡಿದೆ. ಕೃಷಿ ಸಂಸ್ಕೃತಿಯ ನಾಡಿದು, ಜಾನಪದ ವೈವಿಧ್ಯತೆಯ ಬೀಡಿದು, ಕರುನಾಡಿಗರು ಒಂದಾಗೋಣ, ಕಂಬಳದ ಕರಿಛಾಯೆ ತೊಲಗಿಸೋಣ....ಎಂಬ ಒಕ್ಕೊರಲಿನ ಅಭಿಪ್ರಾಯ ಶನಿವಾರ ವಿಜಯ ಕರ್ನಾಟಕವು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಆಯೋಜಿಸಿದ ಕಂಬಳದ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಗಣ್ಯರು, ಕಲಾವಿದರಿಂದ ಮೂಡಿಬಂತು.
ಬೆಳಗ್ಗೆ 11ಗಂಟೆಗೆ ಸರಿಯಾಗಿ ಲಾಂಛನ ಬಿಡುಗಡೆ ಕಾರ್ಯಕ್ರಮ ಆರಂಭಗೊಂಡಿತ್ತು. ಅಲಂಕಾರಗೊಂಡ ಕಂಬಳದ ಕೋಣಗಳು ವಿದ್ಯಾಗಿರಿ ಪ್ರವೇಶಿಸುತ್ತಿದ್ದಂತೆ ಕೊಂಬು ಕಹಳೆ ಮೊಲಗಿದವು. ರಾಜಗಾಂಭೀರ್ಯದಲ್ಲಿ ಹೆಜ್ಜೆ ಹಾಕಿದ ಕೋಣಗಳು ಡಾ.ವಿ.ಎಸ್. ಆಚಾರ್ಯ ಸಭಾಂಗಣದ ಮುಂದೆ ಬಂದು ನಿಂತವು. ಇದಾದ ಬಳಿಕ ಗಣ್ಯರು, ಜನಪ್ರತಿನಿಧಿಗಳು, ಕಂಬಳ ಸಮಿತಿ ಪದಾಧಿಕಾರಿಗಳು, ಕಲಾವಿದರ ಉಪಸ್ಥಿತಿಯಲ್ಲಿ ಕಂಬಳ-ಬೆಂಬಲ ಅಭಿಯಾನದ ರಾಯಭಾರಿ ಆನಂದ್ ಆಳ್ವ ಲಾಂಛನ ಬಿಡುಗಡೆಗೊಳಿಡಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕಂಬಳ ನಿರಂತರ ಮುಂದುವರಿಯುವ ಆಶಯ ವ್ಯಕ್ತಪಡಿಸಿದರು. ನಿಗದಿತ ಸಮಯಕ್ಕೆ ಕಾರ್ಯಕ್ರಮ ಮುಗಿದ ಬಳಿಕ ಸೆಲೆಬ್ರಿಟಿಗಳು ವಾಹನಗಳಿಗೆ ಕಂಬಳ ಅಭಿಯಾನ ಸ್ಟಿಕ್ಕರ್ಗಳನ್ನು ಲಗತ್ತಿಸಿದರು. ಕ್ಯಾಂಪಸ್ನಲ್ಲಿರುವ ವಿದ್ಯಾರ್ಥಿಗಳೊಂದಿಗೆ ಸೆಲ್ಪಿ ತೆಗೆಸಿಕೊಂಡರು.
ವಿಕ ಕಚೇರಿಯಲ್ಲಿ ಸಂವಾದ :
ಬಳಿಕ ನಗರದ ಎಂಜಿ ರಸ್ತೆಯಲ್ಲಿ ಬೈಕ್, ಕಾರು, ಬಸ್, ರಿಕ್ಷಾ ಸೇರಿದಂತೆ ನಾನಾ ವಾಹನಗಳಿಗೆ ಸ್ಟಿಕ್ಕರ್ ಲಗತ್ತಿಸುವ ಮೂಲಕ ಜಾಗೃತಿ ಕಾರ್ಯಕ್ರಮ ನಡೆಯಿತು. ಕಂಬಳ ತಾರ್ಕಿಕ ಅಂತ್ಯ ಕಂಡು ಮತ್ತೆ ಕಂಬಳೋತ್ಸವ ಆರಂಭವಾಗುವವರೆಗೆ ನಾವೆಲ್ಲ ಸಂಘಟಿತರಾಗಿ ಕಂಬಳ ಪರ ಧ್ವನಿಯಾಗಲಿದ್ದೇವೆ ಎಂಬ ಆಶಯವನ್ನು ಎಲ್ಲರೂ ವ್ಯಕ್ತಪಡಿಸಿದರು.