ಆ್ಯಪ್ನಗರ

ಬಲವಂತದ ಹಿಂದಿ ಹೇರಿಕೆಗೆ ವಿರೋಧ: ಕೆಪಿಸಿಸಿ ಉಪಾಧ್ಯಕ್ಷ ರಾಧಾಕೃಷ್ಣ

ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದಿ ಹೇರಿಕೆ ಬಗ್ಗೆ ಈಗಾಗಲೇ ಸ್ಪಷ್ಟ ವಿರೋಧ ವ್ಯಕ್ತವಾಗಿದೆ. ಒಬ್ಬ ವಿದ್ಯಾರ್ಥಿಗೆ ಆತ ಕಲಿಯುವ ಭಾಷೆ ಆತನ ಆಯ್ಕೆಗೆ ಬಿಡಬೇಕು. ಇದರ ಬದಲಾಗಿ ನೀನು ಇದನ್ನೇ ಕಲಿಯಬೇಕು ಎಂದು ಭಾಷೆಯನ್ನು ಹೇರುವ ಸಂಪ್ರದಾಯವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

Vijaya Karnataka Web 3 Jun 2019, 2:56 pm
ಮಂಗಳೂರು: ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಹೊಸ ಸರಕಾರ ಅಸ್ತಿತ್ವಕ್ಕೆ ಬಂದಿರುವ ಜತೆಯಲ್ಲೇ ಪ್ರೊ.ಕಸ್ತೂರಿ ರಂಗನ್ ಅವರ ಹೊಸ ಶಿಕ್ಷಣ ನೀತಿಯ ವರದಿ ಅನುಷ್ಠಾನ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಕರಡು ವರದಿಯಲ್ಲಿ ಹಿಂದಿಯನ್ನು ಒತ್ತಾಯಪೂರ್ವಕವಾಗಿ ಹೇರುವ ಬಗ್ಗೆ ಸೂಚನೆ ಲಭಿಸಿದ್ದು, ಇದನ್ನು ನಾವು ಸ್ಪಷ್ಟವಾಗಿ ವಿರೋಧಿಸುತ್ತೇವೆ ಎಂದು ಕೆಪಿಸಿಸಿ ಉಪಾಧ್ಯಕ್ಷ ರಾಧಾಕೃಷ್ಣ ತಿಳಿಸಿದ್ದಾರೆ.
Vijaya Karnataka Web Hindi imposition


ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಷೆ ಎನ್ನುವಂತವುದು ಸಹಜವಾಗಿ ಬೆಳೆದು ಬರಬೇಕು. ಯಾವುದೇ ಕಾರಣಕ್ಕೂ ಮಾತೃಭಾಷೆಯನ್ನು ಬಿಟ್ಟು ಹಿಂದಿ ಭಾಷೆಯನ್ನು ಹೇರುವ ಪ್ರಯತ್ನವನ್ನು ಕೇಂದ್ರ ಸರಕಾರ ಮಾಡಬಾರದು. ಒಂದು ದೇಶ, ಒಂದು ಭಾಷೆ ಎನ್ನುವ ನೀತಿಗೆ ನಮ್ಮ ವಿರೋಧ ಇದೆ. ಒಂದು ಭಾಷೆ, ವಿವಿಧ ಭಾಷೆ ಎಂಬುದು ನಮ್ಮ ನೀತಿಯಾಗಬೇಕು ಎಂದು ಅವರು ಆಗ್ರಹಿಸಿದರು.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದಿ ಹೇರಿಕೆ ಬಗ್ಗೆ ಈಗಾಗಲೇ ಸ್ಪಷ್ಟ ವಿರೋಧ ವ್ಯಕ್ತವಾಗಿದೆ. ಒಬ್ಬ ವಿದ್ಯಾರ್ಥಿಗೆ ಆತ ಕಲಿಯುವ ಭಾಷೆ ಆತನ ಆಯ್ಕೆಗೆ ಬಿಡಬೇಕು. ಇದರ ಬದಲಾಗಿ ನೀನು ಇದನ್ನೇ ಕಲಿಯಬೇಕು ಎಂದು ಭಾಷೆಯನ್ನು ಹೇರುವ ಸಂಪ್ರದಾಯವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಮುಂಬಯಿಯ ಐಎಎಸ್ ಅಧಿಕಾರಿ ನಿಧಿ ಚೌಧರಿ ಎಂಬವರು ನೋಟುಗಳಿಂದ, ಕೋರ್ಟ್ ಹಾಲ್‌ಗಳಿಂದ, ಸರಕಾರಿ ಕಚೇರಿಗಳಿಂದ ಗಾಂಧೀಜಿ ಅವರ ಫೋಟೋವನ್ನು ತೆಗೆದು ಹಾಕುವಂತೆ ಸಲಹೆ ನೀಡಿದ್ದು, ಈ ಮೂಲಕ ಒಬ್ಬ ಅಧಿಕಾರಿಯಾಗಿ ರಾಷ್ಟ್ರಪಿತನಿಗೆ ಅಗೌರವ ತೋರಿದ್ದಾರೆ. ದುರದೃಷ್ಟ ಎಂದರೆ ಈ ಬಗ್ಗೆ ಪ್ರಧಾನಿ ಸೇರಿದಂತೆ ಒಬ್ಬನೇ ಒಬ್ಬ ಕೇಂದ್ರ ಸರಕಾರದ ಸಚಿವರು ಇದನ್ನು ಖಂಡಿಸಿ ಹೇಳಿಕೆ ನೀಡಲಿಲ್ಲ. ಈ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಂಡು ಸೇವೆಯಿಂದ ವಜಾ ಮಾಡಬೇಕು ಎಂದು ರಾಧಾಕೃಷ್ಣ ಆಗ್ರಹಿಸಿದರು.

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ಮಾಡಿ ಅತಿ ಹೆಚ್ಚಿನ ಸ್ಥಾನಗಳನ್ನು ಪಡೆದಿದೆ. ಕೆಲವೇ ದಿನಗಳ ಅಂತರದಲ್ಲಿ ನಡೆದ ಈ ಚುನಾವಣೆಯಲ್ಲಿ ಅಷ್ಟೊಂದು ಪ್ರಮಾಣದಲ್ಲಿ ಮತಗಳು ಸ್ವಿಂಗ್ ಆದದ್ದು ಹೇಗೆ ಎನ್ನುವ ಸಂಶಯ ಮೂಡಿದೆ. ಇದಕ್ಕೆ ಚುನಾವಣೆ ಆಯೋಗವೇ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಬರ ಸಮಸ್ಯೆ ತೀವ್ರವಾಗಿ ಕಾಡಿದೆ. ಕುಡಿಯುವ ನೀರಿಗೆ ತಾತ್ವಾರ ಬಂದಿದೆ. ಜಿಲ್ಲೆಯ 8 ವಿಧಾನ ಸಭೆ ಕ್ಷೇತ್ರಗಳಲ್ಲಿ 7 ಮಂದಿ ಬಿಜೆಪಿ ಶಾಸರು ಆಯ್ಕೆಯಾಗಿದ್ದಾರೆ. ಅವರೆಲ್ಲ ಇಲ್ಲಿ ಆರೋಪ, ಪ್ರತ್ಯಾರೋಪ ಮಾಡುವುದನ್ನು ಬಿಟ್ಟು ವಿಧಾನ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿ ಯಾವ ಯೋಜನೆಯನ್ನು ಅನುಷ್ಠಾನಕ್ಕೆ ತರಬಹುದು ಎಂಬ ಬಗ್ಗೆ ಚರ್ಚೆ ನಡೆಸಲಿ ಎಂದು ಕಿವಿ ಮಾತು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಕಾರ್ಪೊರೇಟರ್ ಎ.ಸಿ.ವಿನಯರಾಜ್, ಮುಖಂಡರಾದ ಸದಾಶಿವ ಉಳ್ಳಾಲ್, ನೀರಜ್‌ಪಾಲ್, ಟಿ.ಕೆ.ಸುಧೀರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ