ಆ್ಯಪ್ನಗರ

ವಿಧವಾ ಸೊಸೆಗೆ ಅತ್ತೆಯಿಂದ ಕಂಕಣ ಭಾಗ್ಯ

ಮದುವೆಯಾಗಿ ಒಂದು ವರ್ಷದೊಳಗೆ ಗಂಡನನ್ನು ಕಳೆದುಕೊಂಡ ಸೊಸೆಯನ್ನು ಮಗಳಂತೆ ಕಂಡ ಅತ್ತೆ ಮತ್ತೀಗ ಆಕೆಗೆ ಮರುಮದುವೆ ಮಾಡಿಸಿದ್ದಾರೆ.

Vijaya Karnataka 17 Jul 2019, 10:23 am
ಸುಳ್ಯ: ಅತ್ತೆ ಸೊಸೆ ಎಂದರೆ ಉತ್ತರ ದಕ್ಷಿಣವೆಂದೇ ನಂಬಲಾಗುತ್ತಿರುವ ಈ ಕಾಲಘಟ್ಟದಲ್ಲಿ ಆದರ್ಶ ಅತ್ತೆಯೊಬ್ಬರು ತನ್ನ ವಿಧವಾ ಸೊಸೆಗೆ ಮರು ಮದುವೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.
Vijaya Karnataka Web Marriage


ಸುಳ್ಯ ತಾಲೂಕಿನ ಬೆಳ್ಳಾರೆಯ ಕೋಟೆ ದೇವಸ್ಥಾನದಲ್ಲಿ ಸೋಮವಾರ ನಡೆದ ಅಪರೂಪದ ಮದುವೆ ಸಮಾರಂಭವು ಇತರ ಕುಟುಂಬಗಳಿಗೂ ಪ್ರೇರಣೆಯಂತಿದೆ.

ತಾಲೂಕಿನ ಕಳಂಜ ಗ್ರಾಮದ ಗೋಪಾಲಕಜೆ ನಿವಾಸಿ ಶಾಂತಪ್ಪ ಗೌಡರ ಪುತ್ರಿ ಸುಶೀಲಾ ಅವರನ್ನು ಅದೇ ಗ್ರಾಮದ ದಿ.ಪದ್ಮಯ್ಯ ಎಂಬವರ ಪುತ್ರ ಮಾಧವ ಎಂಬವರಿಗೆ ವಿವಾಹ ಮಾಡಲಾಗಿತ್ತು. ಆದರೆ ವಿವಾಹವಾದ ವರ್ಷದೊಳಗೆ ಮಾಧವ ಅಪಘಾತದಿಂದ ಇಹಲೋಕ ತ್ಯಜಿಸಿದ್ದರು.

ಅದಾಗಲೇ ಗರ್ಭಿಣಿಯಾಗಿದ್ದ ಸುಶೀಲ ಅವರ ಬದುಕು ಮೊಗ್ಗಾಗಿರುವಾಗಲೇ ಚಿವುಟಿ ಹೋಗಿತ್ತು. ಪತಿಯ ಮನೆಯವರು ಚಿಕ್ಕ ವಯಸ್ಸಿನ ಸೊಸೆಯ ಬದುಕು ಹಾಳಾಗದಂತೆ ನೋಡಿಕೊಳ್ಳಲು ತೀರ್ಮಾನಿಸಿ ಮರುಮಾಂಗಲ್ಯಕ್ಕೆ ನಿಶ್ಚಯಿಸಿದರು. ಅದರಂತೆಯೇ ಪತಿಯ ತಾಯಿ ಕುಂಞ್ಯಕ್ಕಳ ಮುತುವರ್ಜಿಯಲ್ಲಿ ಬಂಟ್ವಾಳ ತಾಲೂಕಿನ ಕನ್ಯಾನದ ಜಯಪ್ರಕಾಶ್‌ ಎಂಬವರೊಂದಿಗೆ ಕೋಟೆ ದೇವಸ್ಥಾನದಲ್ಲಿ ಸರಳವಾಗಿ ವಿವಾಹೋತ್ಸವ ನೆರವೇರಿಸಿ ಆದರ್ಶ ಅತ್ತೆಯಾಗಿದ್ದಾರೆ.

ಮೂರು ವರ್ಷಗಳ ಹಿಂದೆ ಕಜೆಮೂಲೆ ಬಳಿ ಭೀಕರ ಟ್ರ್ಯಾಕ್ಟರ್‌ ಪಲ್ಟಿ ದುರಂತ ನಡೆದಿದ್ದು, ಅದರಲ್ಲಿ ಸುಶೀಲರ ಪತಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಬಳಿಕ ಸುಶೀಲ ಅವರು ಮಗನ ಭವಿಷ್ಯಕ್ಕಾಗಿ ಮರು ಮದುವೆಯಾಗದಿರಲು ನಿಶ್ಚಯಿಸಿದ್ದರು. ಆದರೆ ಪತಿ ಮನೆಯವರ ಸತತ ಪ್ರಯತ್ನಗಳ ನಂತರ ಮರು ಮದುವೆಗೆ ಒಪ್ಪಿಗೆ ಸೂಚಿಸಿದರು. ವಿಶೇಷವೆಂದರೆ ಮೊದಲನೆಯ ಮದುವೆಯೂ ಮೂರು ವರ್ಷಗಳ ಹಿಂದೆ ಅದೇ ಕೋಟೆ ದೇವಸ್ಥಾನದಲಿ ನಡೆದಿತ್ತು.

ಎರಡೂ ಕಡೆಯವರ ಒಪ್ಪಿಗೆಯ ಮೇರೆಗೆ ಈ ಲಗ್ನ ನಡೆದಿದ್ದು, ಮಹಿಳೆಗೆ ಸುಭದ್ರ ಜೀವನ ಕಲ್ಪಿಸುವ ಸಲುವಾಗಿ ಈ ಮದುವೆ ನಡೆದಿದೆ. ಇಂತಹ ಕಾರ್ಯಗಳು ಸಮಾಜಕ್ಕೆ ಉತ್ತಮವಾದ ಸಂದೇಶ ಹಾಗೂ ಸ್ಫೂರ್ತಿಯನ್ನು ನೀಡುತ್ತದೆ ಎಂದು ವರನ ಸಂಬಂಧಿ ಪ್ರಭಾಕರ ಹೇಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ