ಆ್ಯಪ್ನಗರ

ಕೇಂದ್ರದ ಅಂಗಳಕ್ಕೆ ಮಸೀದಿ ಮೇಲಿನ ಲೌಡ್‌ ಸ್ಪೀಕರ್‌ ಚೆಂಡು! ಏಕರೂಪ ನಿಯಮ ಜಾರಿಗೆ ಮಹಾರಾಷ್ಟ್ರ ಆಗ್ರಹ

ಮಹಾರಾಷ್ಟ್ರದ ಮಸೀದಿಗಳಿಂದ ಮೈಕ್‌ ತೆರವುಗೊಳಿಸುವ ವಿಚಾರ ಶಿವಸೇನೆ ಹಾಗೂ ಬಿಜೆಪಿ ನಡುವೆ ಸಮರಕ್ಕೆ ಕಾರಣವಾಗಿದೆ. ಲೌಡ್‌ ಸ್ಪೀಕರ್‌ಗಳನ್ನು ತೆರವುಗೊಳಿಸದಿರಲು ಮಹಾರಾಷ್ಟ್ರ ಮೈತ್ರಿ ಸರಕಾರ ತೀರ್ಮಾನಿಸಿದ್ದು, ಕೇಂದ್ರವೇ ಎಲ್ಲ ರಾಜ್ಯಗಳಿಗೂ ಅನ್ವಯಿಸುವಂತೆ ನಿಯಮ ರಚಿಸಲಿ ಎಂದು ವಿವಾದವನ್ನು ದಿಲ್ಲಿ ಕಡೆ ತಿರುಗಿಸುವ ಪ್ರಯತ್ನ ಮಾಡಿದೆ.

Edited byಅವಿನಾಶ ವಗರನಾಳ | Vijaya Karnataka 25 Apr 2022, 10:35 pm

ಹೈಲೈಟ್ಸ್‌:


  • ಕೇಂದ್ರ ಸರ್ಕಾರದ ಅಂಗಳಕ್ಕೆ ಮಸೀದಿ ಮೇಲಿನ ಲೌಡ್‌ ಸ್ಪೀಕರ್‌ ಸದ್ದು
  • ಏಕರೂಪ ನಿಯಮ ತರುವಂತೆ ಕೇಂದ್ರಕ್ಕೆ ಮಹಾರಾಷ್ಟ್ರ ಸರ್ಕಾರ ಆಗ್ರಹ
  • ಲೌಡ್‌ ಸ್ಪೀಕರ್‌ ತೆರವುಗೊಳಿಸದಿರಲು ಮಹಾರಾಷ್ಟ್ರದ ಮೈತ್ರಿ ಸರ್ಕಾರ ತೀರ್ಮಾನ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Loudspeakers
ಮುಂಬಯಿ: ಮಹಾರಾಷ್ಟ್ರದ ಮಸೀದಿಗಳಲ್ಲಿಅಳವಡಿಸಿರುವ ಲೌಡ್‌ ಸ್ಪೀಕರ್‌ಗಳ ತೆರವು ವಿಚಾರವು ದಿನೇದಿನೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ರಾಜಕೀಯ ಮೇಲಾಟಕ್ಕೂ ಕಾರಣವಾಗಿದೆ. ಲೌಡ್‌ ಸ್ಪೀಕರ್‌ ವಿಚಾರದ ಕುರಿತು ಚರ್ಚಿಸಲು ಶಿವಸೇನೆ ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ಸಭೆಗೆ ಬಿಜೆಪಿ ಗೈರಾಗುವ ಜತೆಗೆ ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.
ಅತ್ತ, ಲೌಡ್‌ಸ್ಪೀಕರ್‌ ಅಳವಡಿಕೆ ಕುರಿತು ಕೇಂದ್ರ ಸರಕಾರವೇ ದೇಶಾದ್ಯಂತ ಅನ್ವಯವಾಗುವ ನಿಯಮಗಳನ್ನು ರೂಪಿಸಲಿ ಎಂದು ಮೈತ್ರಿಕೂಟವು ಒತ್ತಾಯಿಸಿದೆ. ಇದರ ಬೆನ್ನಲ್ಲೇ, 'ಹನುಮಾನ್‌ ಚಾಲೀಸಾ' ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಪಕ್ಷೇತರ ಸಂಸದೆ ನವನೀತ್‌ ಕೌರ್‌ ರಾಣಾ ಹಾಗೂ ಅವರ ಪತಿ, ಪಕ್ಷೇತರ ಶಾಸಕ ರವಿ ರಾಣಾ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಗೊಳಿಸಲು ಮುಂಬಯಿ ಹೈಕೋರ್ಟ್‌ ನಿರಾಕರಿಸಿದೆ.

ಮತ್ತೊಂದೆಡೆ, ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಎದುರು ಹನುಮಾನ್‌ ಚಾಲೀಸಾ ಪಠಿಸಲು ಹಾಗೂ ನಮಾಜ್‌ ಮಾಡಲು ಅನುಮತಿ ನೀಡುವಂತೆ ಎನ್‌ಸಿಪಿ ನಾಯಕಿ ಫಾಹ್ಮಿದಾ ಹಸನ್‌ ಖಾನ್‌ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದಿದ್ದಾರೆ.

ಇಷ್ಟೆಲ್ಲ ಬೆಳವಣಿಗೆಗಳಿಂದಾಗಿ ಮಹಾರಾಷ್ಟ್ರದಾದ್ಯಂತ ಸೃಷ್ಟಿಯಾಗಿರುವ ಲೌಡ್‌ ಸ್ಪೀಕರ್‌ ವಿವಾದವು ಈಗ ರಾಷ್ಟ್ರಮಟ್ಟದಲ್ಲಿಸದ್ದು ಮಾಡುತ್ತಿದೆ. ಹಾಗಾಗಿ, ಹಲವು ರಾಜ್ಯಗಳಲ್ಲಿ ಮಸೀದಿಗಳಲ್ಲಿಅಳವಡಿಸುವ ಮೈಕ್‌ಗಳನ್ನು ತೆರವುಗೊಳಿಸಬೇಕು ಎಂಬ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ, ಈ ಕುರಿತು ಕೇಂದ್ರ ಸರಕಾರವು ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಹನುಮಾನ್ ಚಾಲೀಸಾ ವಿವಾದ; ಮುಂಬೈಯಲ್ಲಿ ರಾಣಾ ದಂಪತಿ ಮನೆಗೆ ನುಗ್ಗಲು ಶಿವಸೇನೆ ಕಾರ್ಯಕರ್ತರ ಯತ್ನ!
ಮೋದಿ ನಿವಾಸದ ಎದುರು ನಮಾಜ್‌!
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ನಿವಾಸ 'ಮಾತೋಶ್ರೀ' ಎದುರು ಹನುಮಾನ್‌ ಚಾಲೀಸ್‌ ಪಠಿಸಲಾಗುವುದು ಎಂದು ನವನೀತ್‌ ಕೌರ್‌ ಹಾಗೂ ರವಿ ರಾಣಾ ಹೇಳಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಎದುರು ಹನುಮಾನ್‌ ಚಾಲೀಸಾ ಹಾಗೂ ನಮಾಜ್‌ ಮಾಡಲು ಅವಕಾಶ ನೀಡಬೇಕು ಎಂದು ಎನ್‌ಸಿಪಿ ಫಾಹ್ಮಿದಾ ಹಸನ್‌ ಖಾನ್‌ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದಿದ್ದಾರೆ. ''ಕೌರ್‌ ಹಾಗೂ ರಾಣಾ ಅವರು ಮಾತೋಶ್ರೀ ಎದುರು ಹನುಮಾನ್‌ ಚಾಲೀಸಾ ಪಠಿಸುವುದಾದರೆ, ನಾನೇಕೆ ಮೋದಿ ನಿವಾಸದ ಎದುರು ಹನುಮಾನ್‌ ಚಾಲೀಸಾ, ದುರ್ಗಾ ಚಾಲೀಸಾ ಪಠಿಸಬಾರದು? ನಾನೇಕೆ ನಮಾಜ್‌ ಮಾಡಬಾರದು,'' ಎಂದು ಪ್ರಶ್ನಿಸಿದ್ದಾರೆ.

ಠಾಕ್ರೆ ನಿವಾಸದ ಮುಂದೆ ಹನುಮಾನ್ ಚಾಲೀಸ ಪಠಿಸುವ ಸವಾಲು: ರಾಣಾ ದಂಪತಿ ಬಂಧನ!
ಎಫ್‌ಐಆರ್‌ ರದ್ದಿಲ್ಲ
ಹನುಮಾನ್‌ ಚಾಲೀಸಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷೇತರ ಸಂಸದೆ ನವನೀತ್‌ ಕೌರ್‌ ರಾಣಾ ಹಾಗೂ ಅವರ ಪತಿ, ಪಕ್ಷೇತರ ಶಾಸಕ ರವಿ ರಾಣಾ ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ರಿಟ್‌ ಅರ್ಜಿಯನ್ನು ಮುಂಬಯಿ ಹೈಕೋರ್ಟ್‌ ತಿರಸ್ಕರಿಸಿದೆ. ಮಸೀದಿಗಳಲ್ಲಿ ಅಳವಡಿಸಲಾಗಿರುವ ಮೈಕ್‌ಗಳನ್ನು ತೆರವುಗೊಳಿಸದಿದ್ದರೆ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ನಿವಾಸ 'ಮಾತೋಶ್ರಿ' ಎದುರು ನಮ್ಮ ಬೆಂಬಲಿಗರು ಹನುಮಾನ್‌ ಚಾಲೀಸಾ ಪಠಿಸಲಿದ್ದಾರೆ ಎಂದು ದಂಪತಿಯು ಬೆದರಿಕೆ ಹಾಕಿದ್ದರು. ಇದಾದ ಬಳಿಕ ಇಬ್ಬರನ್ನೂ ಶನಿವಾರ ರಾತ್ರಿ ಪೊಲೀಸರು ಬಂಧಿಸಿದ್ದರು. ದಂಪತಿಯನ್ನು ನ್ಯಾಯಾಲಯವು 14 ದಿನ ನ್ಯಾಯಾಂಗ ಬಂಧನಕ್ಕೆ ವಹಿಸಿದೆ.

Maharashtra: ಶಿವ ಸೇನಾ ಸೈನಿಕರಿಂದ ನನ್ನ ಹತ್ಯೆ ಪ್ರಯತ್ನ: ಬಿಜೆಪಿ ಮುಖಂಡನ ಆರೋಪ
ಕೇಂದ್ರವೇ ನಿರ್ಧರಿಸಲಿ
ಧಾರ್ಮಿಕ ಸ್ಥಳಗಳಲ್ಲಿಲೌಡ್‌ಸ್ಪೀಕರ್‌ಗಳ ಅಳವಡಿಕೆ ಕುರಿತು ದೇಶಾದ್ಯಂತ ಅನ್ವಯಿಸುವಂತೆ ಕೇಂದ್ರ ಸರಕಾರವೇ ನಿಯಮ ರೂಪಿಸಲಿ ಎಂದು ಮಹಾರಾಷ್ಟ್ರ ಸರಕಾರ ತಿಳಿಸಿದೆ. ಸರ್ವಪಕ್ಷ ಸಭೆ ಬಳಿಕ ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಗೃಹ ಸಚಿವ ದಿಲೀಪ್‌ ವಾಲ್ಸೆ ಪಾಟೀಲ್‌, ''ಕೇಂದ್ರ ಸರಕಾರವು ಎಲ್ಲರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗುವಂತೆ ನಿಯಮ ರೂಪಿಸಿ ಎಂದು ನಾವು ಮನವಿ ಮಾಡುತ್ತೇವೆ. ಹಾಗಾದಾಗ ಮಾತ್ರ, ಒಂದೊಂದು ರಾಜ್ಯಗಳಲ್ಲಿ ಪ್ರತ್ಯೇಕವಾಗಿ ಉಂಟಾಗುವ ವಿವಾದವು ಬಗೆಹರಿಯುತ್ತದೆ,'' ಎಂದಿದ್ದಾರೆ.


ಹಿಟ್ಲರ್‌ ರೀತಿ ವರ್ತನೆ!
ಮಹಾರಾಷ್ಟ್ರ ಸರಕಾರವು ಹಿಟ್ಲರ್‌ ರೀತಿ ವರ್ತಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ''ಸರ್ವಪಕ್ಷ ಸಭೆಗೆ ಬರಬೇಕು ಎಂದು ಮಹಾರಾಷ್ಟ್ರ ಗೃಹ ಸಚಿವರು ಆಹ್ವಾನಿಸಿದ್ದರು. ಆದರೆ, ಹಿಟ್ಲರ್‌ ರೀತಿ ವರ್ತಿಸುತ್ತಿರುವವರ ಜತೆ ಸಂವಹನ ನಡೆಸುವ ಬದಲು ಹೋರಾಡುವುದೇ ಸೂಕ್ತ ಎಂದು ಸಭೆಗೆ ಗೈರಾಗಿದ್ದೇವೆ. ಅಷ್ಟಕ್ಕೂ, ಉದ್ಧವ್‌ ಠಾಕ್ರೆಯವರೇ ಸಭೆಗೆ ಗೈರಾಗಿರುವಾಗ ನಾವು ಹೋದರೆ ಏನು ಪ್ರಯೋಜನ,'' ಎಂದು ಪ್ರಶ್ನಿಸಿದ್ದಾರೆ.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ