ಆ್ಯಪ್ನಗರ

ಅಂಬಾನಿ ಮನೆಗೆ ಬಾಂಬ್‌ ಬೆದರಿಕೆ ಪ್ರಕರಣ, ಹಿರೇನ್‌ ಕೊಲೆಗೆ ವಾಜೆಯದೇ ಸಂಚು!

ಉದ್ಯಮಿ ಮುಕೇಶ್‌ ಅಂಬಾನಿ ನಿವಾಸ ಸಮೀಪ ಸ್ಫೋಟಕ ತುಂಬಿದ ವಾಹನ ಪತ್ತೆಯಾದ ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ಕೈವಾಡ ಇರುವುದು ದೃಢಪಟ್ಟಿದೆ. ಮಾತ್ರವಲ್ಲ, ಮನ್‌ಸುಖ್‌ ಹಿರೇನ್‌ ಸಾವಿನ ಹಿಂದೆ ವಾಜೆ ಕೈವಾಡ ಇದೆ.

Vijaya Karnataka Web 24 Mar 2021, 2:41 pm
ಮುಂಬಯಿ: ಉದ್ಯಮಿ ಮುಕೇಶ್‌ ಅಂಬಾನಿ ಅವರ ನಿವಾಸ 'ಆ್ಯಂಟಿಲಿಯಾ' ಸಮೀಪ ಸ್ಫೋಟಕ ತುಂಬಿದ ವಾಹನ ಪತ್ತೆಯಾದ ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ಕೈವಾಡ ಇರುವುದು ದೃಢಪಟ್ಟಿದೆ.
Vijaya Karnataka Web Sachin Waze


''ವಾಹನದ ಮಾಲೀಕ ಎನ್ನಲಾಗಿರುವ ಮನ್‌ಸುಖ್‌ ಹಿರೇನ್‌ ಸಾವಿನ ಹಿಂದೆ ವಾಜೆ ಕೈವಾಡ ಇದೆ. ಈ ಬಗ್ಗೆ ಸಾಕಷ್ಟು ಸಾಕ್ಷ್ಯಗಳು ಲಭಿಸಿವೆ. ಆದರೆ ಯಾವ ಕಾರಣದಿಂದ ಅವರು ಹಿರೇನ್‌ ಹತ್ಯೆಯ ಸಂಚು ರೂಪಿಸಿದರು ಎನ್ನುವುದು ಇನ್ನೂ ತಿಳಿದು-ಬಂದಿಲ್ಲ,'' ಎಂದು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಮುಖ್ಯಸ್ಥ ಜೈಜೀತ್‌ ಸಿಂಗ್‌ ಹೇಳಿದ್ದಾರೆ.

''ಹಿರೇನ್‌ ಯಾರು ಎನ್ನುವುದೇ ತಮಗೆ ಗೊತ್ತಿಲ್ಲ ಎಂಬುದಾಗಿ ವಾಜೆ ವಾದಿಸುತ್ತಿದ್ದಾರೆ. ಅದು ಸುಳ್ಳು ಎನ್ನುವುದನ್ನು ಸಾಬೀತುಪಡಿಸಲು ನಮ್ಮ ಬಳಿ ಪುರಾವೆಗಳಿವೆ. ಜತೆಗೆ ಪ್ರಕರಣಕ್ಕೆ ಮಹತ್ವದ ತಿರುವು ನೀಡಬಲ್ಲ ವೊಲ್ವೊ ಕಾರೊಂದು ದಮನ್‌ನಲ್ಲಿ ಪತ್ತೆಯಾಗಿದ್ದು, ವಿಧಿವಿಜ್ಞಾನ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಹಿರೇನ್‌ ಸಾವಿನ ವೇಳೆ ವಾಜೆ ಹಾಜರಿಲ್ಲದಿದ್ದರೂ, ಹತ್ಯೆಗೆ ಅವರೇ ಆದೇಶಿಸಿದ್ದಾರೆ ಎನ್ನುವ ಶಂಕೆ ಬಲವಾಗಿದೆ,'' ಎಂದು ಸಿಂಗ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಂಬಾನಿ ಮನೆಗೆ ಬಾಂಬ್‌ ಬೆದರಿಕೆ, ತನ್ನದೇ 'ಬಾಂಬ್‌' ಜಾಲದಲ್ಲಿ ಸಿಕ್ಕಿಬಿದ್ದ ಚಾಲಾಕಿ ಪೊಲೀಸ್‌ 'ವಾಜೆ'!

ನಕಲಿ ಆಧಾರ್‌ ಕಾರ್ಡ್‌ ಬಳಕೆ: ಹಿರೇನ್‌ ಅವರದ್ದು ಎನ್ನಲಾಗಿರುವ ಸ್ಫೋಟಕ ತುಂಬಿದ ಎಸ್‌ಯುವಿ ವಾಹನವೊಂದು ಕಳುವಾಗುವ ಮುನ್ನಾ ದಿನ ದಕ್ಷಿಣ ಮುಂಬಯಿನ ಐಷಾರಾಮಿ ಹೋಟೆಲ್‌ಗೆ ವಾಜೆ ಭೇಟಿ (ಫೆ.16ಕ್ಕೆ )ಕೊಟ್ಟಿದ್ದರು. ಆ ವೇಳೆ ತಮ್ಮ ಗುರುತಿನ ಚೀಟಿಯಾಗಿ ನಕಲಿ ಆಧಾರ್‌ ಕಾರ್ಡ್‌ ಬಳಸಿರುವುದು ಕೂಡ ಬೆಳಕಿಗೆ ಬಂದಿದೆ. ಆ ವೇಳೆ ವಾಜೆ ಅವರು ತಮ್ಮ ಹೆಸರನ್ನು 'ಸುಶಾಂತ್‌ ಸದಾಶಿವ್‌ ಖಾಮ್ಕರ್‌' ಎಂದು ಹೋಟೆಲ್‌ ಸಿಬ್ಬಂದಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಅಂಬಾನಿ ಬಂಗಲೆ ಬಳಿ ಸ್ಪೋಟ ಪತ್ತೆ ಪ್ರಕರಣ, ಹಿರೇನ್‌ರನ್ನು ನೀರಿಗೆ ತಳ್ಳಿ ಹತ್ಯೆ ಮಾಡಿರುವ ಸಂಶಯ

ಅಂಬಾನಿ ಅವರ ನಿವಾಸದ ಸಮೀಪ ಸ್ಫೋಟಕ ತುಂಬಿದ್ದ ಎಸ್‌ಯುವಿ ವಾಹನವನ್ನು ನಿಲ್ಲಿಸುವ ವೇಳೆ ವಾಹನವು ವಾಜೆ ಅವರ ಸುಪರ್ದಿಯಲ್ಲಿಯೇ ಇತ್ತು ಎಂದು ಎಟಿಎಸ್‌ ಶಂಕಿಸಿದೆ. ಸ್ಫೋಟಕಗಳು ಸಿಕ್ಕಿರುವ ಸಂಬಂಧ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕೂಡ ಕೈಗೆತ್ತಿಕೊಂಡಿದೆ. ಸಹಾಯಕ ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿದ್ದ ವಾಜೆ ಬಳಿ ಇದ್ದ ಐದು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ