ಹುಣಸೂರು: ಹುಣಸೂರು ತಾಲೂಕಿನ ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆ ವ್ಯಾಪ್ತಿಯಲ್ಲಿ 1377 ಲೈಸೆನ್ಸ್ದಾರರು ಲೈಸೆನ್ಸ್ ನವೀಕರಣಕ್ಕೆ ಅರ್ಜಿ ಸಲ್ಲಿಸಿಲ್ಲ, ಲೈಸೆನ್ಸ್ ನವೀಕರಣಕ್ಕೆ ಮೇ 16 ಅಂತಿಮ ದಿನವಾಗಿದ್ದು, ಕೂಡಲೇ ನವೀಕರಣ ಮಾಡಿಸಿಕೊಳ್ಳುವಂತೆ ಮಂಡಳಿಯ ಹಿರಿಯ ಗ್ರೇಡಿಂಗ್ ಅಧಿಕಾರಿ ಶಿವರಾಮ್ ತಿಳಿಸಿದರು.
ತಾಲೂಕಿನ ಹನಗೋಡು ಹೋಬಳಿಯ ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆ ವ್ಯಾಪ್ತಿಯ ಬೆಳೆಗಾರರಿಗೆ ರಸಗೊಬ್ಬರ ವಿತರಿಸಿ ಮಾತನಾಡಿ, ಕಂಪಲಾಪುರ ತಂಬಾಕು ಮಾರುಕಟ್ಟೆ ವ್ಯಾಪ್ತಿಯಲ್ಲಿ ಒಟ್ಟು 4422 ಮಂದಿ ನೋಂದಾಯಿತ ತಂಬಾಕು ಬೆಳೆಗಾರರಿದ್ದು, ಈ ಪೈಕಿ 3045 ಮಂದಿ ರೈತರು ತಮ್ಮ ತಂಬಾಕು ಲೈಸೆÜನ್ಸನ್ನು ನವೀಕರಣ ಮಾಡಿಸಿಕೊಂಡಿದ್ದಾರೆ. ಉಳಿದ ರೈತರು ಮೇ 16ರೊಳಗೆ ಯಾವುದೇ ದಂಡವಿಲ್ಲದೆ ನಿಗದಿತ ಶುಲ್ಕದೊಂದಿಗೆ ನವೀಕರಿಸಗೊಳ್ಳÜಬಹುದು. ಬಳಿಕ ಮೇ 23ರವರೆಗೆ 100 ರೂ, 31ರವರೆಗೆ 400 ರೂ. ದಂಡ ಪಾವತಿಸಿ ನವೀಕರಿಸಿಕೊಳ್ಳಬಹುದು ಎಂದರು.
ಹರಾಜು ವ್ಯವಸ್ಥಾಪಕ ಮಂಜುರಾಜ್ ಮಾತನಾಡಿ, ಈ ಹಿಂದೆ ಮಂಡಳಿಯಿಂದ ರೈತರಿಗೆ 2-3 ಹಂತದಲ್ಲಿ ಗೊಬ್ಬರ ವಿತರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಒಂದೇ ಬಾರಿಗೆ ಗೊಬ್ಬರ ನೀಡುತ್ತಿದ್ದು, ಇದರಿಂದ ರೈತರು ಗೊಬ್ಬರಕ್ಕಾಗಿ ಮಂಡಳಿಗೆ ಪ್ರತಿನಿತ್ಯ ಅಲೆಯುವುದನ್ನು ತಪ್ಪಿಸಿದೆ. ಅಂತಾರಾಷ್ಟ್ರೀಯಾ ಮಾರುಕಟ್ಟೆಯಲ್ಲಿ ಮೈಸೂರು ಜಿಲ್ಲೆಯ ತಂಬಾಕಿಗೆ ಉತ್ತಮ ಬೇಡಿಕೆ ಇದ್ದು, ಗುಣಮಟ್ಟದ ತಂಬಾಕನ್ನು ಬೆಳೆಯಿರಿ, ಮಾರುಕಟ್ಟೆಗೆ ತಂಬಾಕು ಬೇಲ್ ತರುವ ವೇಳೆ ಅನ್ಯ ಪದಾರ್ಥಗಳು ಸೇರದಂತೆ ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿದರು. ಸಭೆಯಲ್ಲಿ ಕ್ಷೇತ್ರ ಪಾಲಕ ಶಂಭುಲಿಂಗೇಗೌಡ ಹಾಗೂ ಬೆಳೆಗಾರರು ಭಾಗವಹಿಸಿದ್ದರು.