-ಸಂಸದ ಧ್ರುವನಾರಾಯಣ್ ತರಾಟೆ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಮೈಸೂರು ತಾಲೂಕಿನಲ್ಲೇ ಕೇಂದ್ರ ಸರಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಹಾಗೂ ಬಡವರಿಗೆ ಸೂರು ಒದಗಿಸುವ ಪ್ರಧಾನಮಂತ್ರಿ ಆವಾಸ್ ಯೋಜನೆಗಳ ಅನುಷ್ಠಾನ ಹಿಂದುಳಿದಿದೆ. ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸಂಸದ ಆರ್.ಧ್ರುವನಾರಾಯಣ್ ತರಾಟೆಗೆ ತೆಗೆದುಕೊಂಡರು.
ಕೇಂದ್ರ ಸರಕಾರದ ಪುರಸ್ಕೃತ ಯೋಜನೆಗಳ ಜಿಲ್ಲಾ ಜಾಗೃತಿ ಪ್ರಗತಿ ಪರಿಶೀಲನಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಂಗಳವಾರ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಾತನಾಡಿದ ಧ್ರುವನಾರಾಯಣ್, ''ನರೇಗಾ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 2 ಕೋಟಿ ರೂ. ಮೊತ್ತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಹಿಂದಿನ ಸಭೆಯಲ್ಲಿಯೇ ಸೂಚಿಸಿದ್ದೆ. ಆದರೆ, ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ'' ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭುಸ್ವಾಮಿ ಮಧ್ಯ ಪ್ರವೇಶಿಸಿ, ''ಹಣ ಬಿಡುಗಡೆಯಾಗದ ಕಾರಣ ಈ ಸಮಸ್ಯೆ ಉದ್ಭವಿಸಿದೆ'' ಎಂದು ಸಮರ್ಥಿಸಿಕೊಳ್ಳಲು ಮುಂದಾದರು. ಆಗ ಸಂಸದರು, ''ಇನ್ನು 10 ದಿನಗಳಲ್ಲಿ ಹಣ ಬಿಡುಗಡೆಯಾಗಲಿದೆ. ಮೊದಲು ನೀವು ಯೋಜನೆ ರೂಪಿಸಿ ಕಾಮಗಾರಿ ಕೈಗೆತ್ತಿಕೊಳ್ಳಿ'' ಎಂದರು.
''ಸಭೆಯಲ್ಲಿ ಮಂಡಿಸಲಾದ ವರದಿ ಪ್ರಕಾರ ಆ. 10ರವರೆಗೆ ತಾಲೂಕಿನಲ್ಲಿ 4,028 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಕೇವಲ 38 ಕಾಮಗಾರಿಗಳು ಪೂರ್ಣಗೊಂಡಿವೆ. ಅಲ್ಲದೆ, ಕೇವಲ ಮೂರು ಕಾಮಗಾರಿಗಳು ನೂರು ದಿನ ಪೂರ್ಣಗೊಂಡಿವೆ. ಜಿಲ್ಲೆಯ ಉಳಿದ ತಾಲೂಕುಗಳಿಗೆ ಹೋಲಿಸಿದರೆ ಮೈಸೂರಿನ ಪ್ರಗತಿ ತೀರಾ ಕಡಿಮೆ. ಮೈಸೂರು ಜಿಲ್ಲೆಯಲ್ಲಿ ಒಟ್ಟು 33,492 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ 3397 ಕಾಮಗಾರಿಗಳು ಪೂರ್ಣಗೊಂಡಿವೆ. 12,239 ಕಾಮಗಾರಿಗಳು ಪ್ರಗತಿಯಲ್ಲಿದ್ದು, 2.12 ಲಕ್ಷ ಮಂದಿಗೆ ಉದ್ಯೋಗ ಚೀಟಿ ನೀಡಲಾಗಿದೆ. ಮೈಸೂರು ತಾಲೂಕು ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲೂ ಹಿಂದುಳಿದಿದೆ. ಯೋಜನೆಯಲ್ಲಿ 2015-16ನೇ ಸಾಲಿನಲ್ಲಿ 854 ಮನೆಗಳನ್ನು ನಿರ್ಮಿಸುವ ಗುರಿ ಇದೆ. ಇನ್ನೂ 212 ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ನಂಜನಗೂಡು ತಾಲೂಕಿನಲ್ಲೂ ಯೋಜನೆ ಅನುಷ್ಠಾನ ಹಿಂದುಳಿದಿದೆ'' ಎಂದು ಸಂಸದರು ಹೇಳಿದರು.
ಅನುದಾನ ಕೊರತೆ
''ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಇನ್ನು ಮೂರು ವರ್ಷದೊಳಗೆ ಬಯಲು ಬಹಿರ್ದೆಸೆ ಮುಕ್ತ ದೇಶ ಮಾಡುವ ಗುರಿ ಇದೆ. ಆದರೆ, ಈ ಯೋಜನೆಯಲ್ಲಿ ಜಿಲ್ಲೆಯಲ್ಲಿ ಆಗಿರುವ ಪ್ರಗತಿ ಸಾಲದು'' ಎಂದರು ಸಂಸದರು. ಇದಕ್ಕೆ ವಿವರಣೆ ನೀಡಿದ ಅಧಿಕಾರಿಗಳು, ''ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಶೌಚಾಲಯ ನಿರ್ಮಿಸಲು 3 ಕೋಟಿ ರೂ. ಅನುದಾನದ ಕೊರತೆ ಇದೆ. ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ'' ಎಂದರು.
ಜಿಲ್ಲೆಯಲ್ಲಿ ಬಹುಗ್ರಾಮ ಶಾಶ್ವತ ಕುಡಿಯುವ ನೀರು ಸರಬರಾಜು ಯೋಜನೆ
ಪ್ರಸ್ತುತ ಹಂತ ಯೋಜನೆ ಆವರಿಸಿರುವ ಗ್ರಾಮಗಳು
ಪೂರ್ಣಗೊಂಡ ಕಾಮಗಾರಿ 9 189
ಪೂರ್ಣಗೊಳ್ಳುವ ಹಂತ 8 151
ಪ್ರಗತಿಯಲ್ಲಿರುವ ಕಾಮಗಾರಿ 8 320
ಟೆಂಡರ್/ತಾಂತ್ರಿಕ ಮಂಜೂರಾತಿ ಪ್ರಕ್ರಿಯೆ 6 155
ಮಂಜೂರಾಗಬೇಕಿರುವ ಯೋಜನೆ 9 270
ಒಟ್ಟು 40 1,085
* ಕಾವೇರಿ ಹಾಗೂ ಕಬಿನಿ ಜಲಾಶಯದಿಂದ ನೀರು ಸರಬರಾಜು
*****
2016-17ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಸ್ವಚ್ಛ ಭಾರತ ಯೋಜನೆಯಡಿ ಶೌಚಾಲಯ ನಿರ್ಮಾಣ
ತಾಲೂಕು ಗುರಿ ಶೌಚಾಲಯ ನಿರ್ಮಾಣ
ಎಚ್.ಡಿ.ಕೋಟೆ 6,660 906
ಹುಣಸೂರು 5,550 1,509
ಕೆ.ಆರ್.ನಗರ 6,660 1,014
ಮೈಸೂರು 6,105 1,651
ನಂಜನಗೂಡು 12,265 1,333
ಪಿರಿಯಾಪಟ್ಟಣ 6,660 1,214
ತಿ.ನರಸೀಪುರ 11,100 1,654
ಒಟ್ಟು 55,000 9,281
****
ಮುಖ್ಯಾಂಶಗಳು
* ಮುಖ್ಯಮಂತ್ರಿ ತವರು ತಾಲೂಕಿನಲ್ಲೇ ಕೇಂದ್ರ ಯೋಜನೆಗಳು ಕುಂಠಿತ
* ಸ್ವಚ್ಛ ಭಾರತ ಮಿಷನ್ ಯೋಜನೆಗೆ ಅನುದಾನದ ಕೊರತೆ
* ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲೂ ಹಿಂದೆ