ಮೈಸೂರು: ಧರ್ಮದ ಮಾರ್ಗದಲ್ಲಿ ನಡೆದರೆ ದೇಶದಲ್ಲಿ ಉಂಟಾಗಿರುವ ಭ್ರಷ್ಟತೆ, ಅನಾಚಾರವನ್ನು ತೊಡೆದು ಹಾಕಲು ಸಾಧ್ಯ ಎಂದು ಮಾಜಿ ರಾಜ್ಯಪಾಲ ನ್ಯಾ.ರಾಮಾಜೋಯಿಸ್ ತಿಳಿಸಿದರು.
ಗನ್ಹೌಸ್ ಬಳಿ ಇರುವ ಶಂಕರಮಠದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಶನಿವಾರ ಆರಂಭಗೊಂಡ ಎರಡು ದಿನಗಳ ರಾಜ್ಯ ಮಟ್ಟದ ಬ್ರಾಹ್ಮಣ ಯುವ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
''ಧರ್ಮ ಮತ್ತು ರಿಲೀಜಿಯನ್ ಅನ್ನು ಇಂಗ್ಲಿಷ್ನಲ್ಲಿ ತಪ್ಪಾಗಿ ಅರ್ಥೈಸಲಾಗಿದೆ. ಧರ್ಮ ಎನ್ನುವುದು ಮನುಷ್ಯ ಹೇಗೆ ವರ್ತಿಸಬೇಕು ಎನ್ನುವ ನಿಯಮವಾಗಿದೆ. ರಿಲೀಜಿಯನ್ ಎನ್ನುವುದು ಆತ ಯಾವ ದೇವರನ್ನು ಪೂಜೆ ಮಾಡುತ್ತಾನೆ ಎನ್ನುವುದಕ್ಕೆ ಸಂಬಂಧಿಸಿದೆ. ಸಮಾಜದ ಎಲ್ಲರೂ ಧರ್ಮಿಷ್ಠರಾಗಿ ಬದುಕುವುದು ಮುಖ್ಯ. ಇದನ್ನು ಉಳಿಸುವ ಜವಾಬ್ದಾರಿ ಬ್ರಾಹ್ಮಣರ ಮೇಲೆ ಇದೆ. ಬ್ರಾಹ್ಮಣರು ಸಮಾಜದ ಮುಂಚೂಣಿಯಲ್ಲಿದ್ದು, ಅವರು ನಡತೆಯಲ್ಲಿ ತಪ್ಪು ಮಾಡಬಾರದು'' ಎಂದು ಹೇಳಿದರು.
''ಧರ್ಮ, ಅರ್ಥ, ಕಾಮವನ್ನು ತ್ರಿವರ್ಗಗಳೆಂದು ಕರೆಯುತ್ತಾರೆ. ಹಣ, ಆಸೆ ಇಲ್ಲದೆ ಮನುಷ್ಯ ಬದುಕಲಾರ. ಆದರೆ ಇವೆರಡೂ ಧರ್ಮವನ್ನು ಮೀರುವುದು ಸರಿಯಲ್ಲ. ಇಂದು ಮಹಿಳೆಯರ ವಿರುದ್ಧ ಅತ್ಯಾಚಾರ ನಡೆಯುತ್ತಿದೆ. ಸ್ತ್ರೀಯರ ಮನಸು ನೋಯಿಸಿದರೆ ಯಾವುದೇ ಮನೆ ಉದ್ಧಾರ ಆಗುವುದಿಲ್ಲ. ಸ್ತ್ರೀಯರಿಗೆ ಗೌರವ ನೀಡುವುದು, ರಕ್ಷಣಾ ಸಹಿತವಾದ ಸ್ವಾತಂತ್ರ್ಯ ನೀಡುವುದು ಭಾರತೀಯ ಸಂಸ್ಕೃತಿಯ ಭಾಗವಾಗಿದೆ'' ಎಂದರು.
''ಇಂದು ನೀಡಲಾಗುತ್ತಿರುವ ಶಿಕ್ಷಣದಲ್ಲಿ ಜ್ಞಾನ ಇದೆ. ಆದರೆ ಚಾರಿತ್ರ್ಯ ನಿರ್ಮಾಣ ಮಾಡುವ ಅಂಶಗಳಿಲ್ಲ. ನಮಗೆ ಧರ್ಮಬದ್ಧವಾಗಿ ನಡೆಯುವ ಶಿಕ್ಷಣ ಬೇಕಿದೆ. ಸಮಾಜಕ್ಕೆ ತೊಂದರೆ ಆಗುವ ರೀತಿಯಲ್ಲಿ ಯಾರೂ ಬದುಕಬಾರದು. ಇಂದು ಜ್ಞಾನದ ಜೊತೆಗೆ ಸಂಸ್ಕಾರ ಉಳ್ಳ ಶಿಕ್ಷಣ ಬೇಕಿದೆ. ಯುವಕರು ಸರಿ ಆಗುವವರೆಗೆ ದೇಶ ಸರಿ ಆಗುವುದಿಲ್ಲ'' ಎಂದು ಅವರು ಹೇಳಿದರು.
ಕಡ್ಡಾಯ ಶಿಕ್ಷಣ ಜಾರಿಗೆ 8 ವರ್ಷ ಹಿಡಿಯಿತು: ''ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ಪರಿಗಣಿಸಬೇಕೆಂದು ವಿದ್ಯಾರ್ಥಿಗಳ ಪರವಾಗಿ ನಾನು ಸುಪ್ರಿಂಕೋರ್ಟ್ನಲ್ಲಿ 1994ರಲ್ಲಿ ವಾದ ಮಾಡಿದೆ. ಆಗ ಜೀವನ್ ರೆಡ್ಡಿ ಅವರು ನ್ಯಾಯಾಧೀಶರಾಗಿದ್ದರು. ಆಗ ನಾನು ಬರ್ತೃಹರಿಯ 'ವಿದ್ಯಾ ವಿಹೀನ ಪಶು' ಎನ್ನುವ ಶ್ಲೋಕವನ್ನು ಉಲ್ಲೀಖಿಸಿದೆ. ಸುಪ್ರೀಂ ಕೋರ್ಟ್ ಇದನ್ನು ಒಪ್ಪಿಕೊಂಡು ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ತೀರ್ಪು ನೀಡಿತು. ಆದರೆ ಸಂಸತ್ತು ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ತಿದ್ದುಪಡಿ ಮಾಡಲು 7-8 ವರ್ಷ ತೆಗೆದುಕೊಂಡಿತು'' ಎಂದು ಅವರು ವಿಷಾದಿಸಿದರು.
ಮೈಸೂರಿನ ಅವಧೂತ ಗಣಪತಿ ಸಚ್ಚಿದಾನಂದ ಆಶ್ರಮದ ದತ್ತ ವಿಜಯಾನಂದ ಸ್ವಾಮೀಜಿ ಮಾತನಾಡಿ, ''ಇಂದು ಬ್ರಾಹ್ಮಣರಿಗೆ ಸರಿಯಾಗಿ ಮನ್ನಣೆ ಸಿಗುತ್ತಿಲ್ಲ. ಬ್ರಾಹ್ಮಣರಲ್ಲಿ ಅನೇಕರಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ. ಮನುಷ್ಯನಿಗೆ ವಿದ್ಯೆ, ವೈದ್ಯ, ಅನ್ನ ಬಹಳ ಮುಖ್ಯ. ಇವು ಬ್ರಾಹ್ಮಣರು ಸೇರಿದಂತೆ ಸಮಾಜದ ಎಲ್ಲರಿಗೂ ಸಿಗಬೇಕಿದೆ'' ಎಂದರು.
''ಯಾರೋ ನಗುತ್ತಾರೆ ಎನ್ನುವ ಕಾರಣಕ್ಕೆ ಬ್ರಾಹ್ಮಣರು ತಮ್ಮ ಸಂಪ್ರದಾಯವನ್ನು ಬಿಡಬಾರದು. ಹಿಂದೆ ಬ್ರಾಹ್ಮಣರಿಗೆ ಗೌರವ ಇತ್ತು. ಇಂದು ಇದು ಕಡಿಮೆ ಆದಂತೆ ಭಾಸವಾಗುತ್ತಿದೆ. ಬ್ರಾಹ್ಮಣರು ಆತ್ಮವಿಶ್ವಾಸದಿಂದ ಮುನ್ನಡೆದರೆ ಗೌರವ ಸಿಗುತ್ತದೆ. ಮುಂದಿನ ಸಮಾವೇಶ ಅವಧೂತ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಡೆಯಲಿ'' ಎಂದು ಆಶಿಸಿದರು.
ಸಮ್ಮೇಳನಾಧ್ಯಕ್ಷ ಮುಳ್ಳೂರು ಗುರುಪ್ರಸಾದ್ ಮಾತನಾಡಿ, ''ಬ್ರಾಹ್ಮಣರಿಗೆ ಸರಕಾರದಿಂದ ಜಾತಿ ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಆಗಬೇಕಿದೆ. ಅಂತೆಯೇ ಬಡ ಬ್ರಾಹ್ಮಣರಿಗೆ ಮೀಸಲು ಸೌಲಭ್ಯ ಕಲ್ಪಿಸಬೇಕಿದೆ'' ಎಂದರು.
ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿಯ ಭಾನುಪ್ರಕಾಶ್ ಶರ್ಮಾ, ವಂಗೀಪುರ ಮಠದ ಇಳ್ಳೈ ಆಳ್ವಾರ್ ಸ್ವಾಮೀಜಿ, ಮಾಜಿ ಸಚಿವ ಎಸ್.ಎ.ರಾಮದಾಸ್, ಬಿಜೆಪಿ ಮುಖಂಡ ಎಚ್. ವಿ.ರಾಜೀವ್, ಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್, ಗಾಯಕಿ ಅರ್ಚನಾ ಉಡುಪ, ಮುಖಂಡರಾದ ಶ್ರೀಧರಮೂರ್ತಿ, ವಿಕ್ರಂ ಇತರರು ಇದ್ದರು.