-'ನಗದು ರಹಿತ ಆರ್ಥಿಕತೆಯ ಪರಿಣಾಮ' ಕಮ್ಮಟದಲ್ಲಿ ನಾಗರಾಜು ಅಭಿಮತ
ಮೈಸೂರು: ನಗದು ರಹಿತ ಆರ್ಥಿಕ ವಹಿವಾಟು ಭಾರತದಂತಹ ದೇಶಕ್ಕೆ ಕಷ್ಟವಾದರು ಆರ್ಥಿಕ ಪ್ರಗತಿಗೆ ಮತ್ತು ಕೆಲ ಮೂಲಭೂತ ಸಮಸ್ಯೆಗಳನ್ನು ತಡೆಯಲು ಅಗತ್ಯ ಎಂದು ಬೆಂಗಳೂರು ಆರ್ಎಸ್ಎಸ್ ಕ್ಷೇತ್ರೀಯ ಸಂಘ ಚಾಲಕ ವಿ.ನಾಗರಾಜು ಅಭಿಪ್ರಾಯಪಟ್ಟರು.
ನಗರದ ಶಾರದಾ ವಿಲಾಸ ಫಾರ್ಮಸಿ ಕಾಲೇಜು ಮತ್ತು ನವದೆಹಲಿಯ ಎಐಸಿಟಿಇ ಸಹಯೋಗದಲ್ಲಿ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ 'ಡಿಜಿಟಲ್ ಆರ್ಥಿಕ ವಹಿವಾಟು ಮತ್ತು ನಗದು ರಹಿತ ಆರ್ಥಿಕತೆಯ ಪರಿಣಾಮ' ಕುರಿತ ಕಮ್ಮಟದಲ್ಲಿ ಅವರು ಮಾತನಾಡಿದರು.
''ಕೇಂದ್ರ ಸರಕಾರದ 500 ಮತ್ತು ಸಾವಿರ ರೂ. ಮುಖಬೆಲೆಯ ನೋಟುಗಳ ಅಮಾನ್ಯೀಕರಣ ಕ್ರಮ ಐತಿಹಾಸಿಕ ತೀರ್ಮಾನವಾಗಿದ್ದು, ಇದನ್ನು ಕೆಲವರು ಸ್ವಾಗತಿಸಿದರೆ ಮತ್ತೆ ಕೆಲವರು ವಿರೋಧಿಸಿದ್ದಾರೆ. ಸರಕಾರದ ಈ ಕ್ರಮದಿಂದ ಅರ್ಥವ್ಯವಸ್ಥೆಯ ಮೇಲೆ ಸಕರಾತ್ಮಕ ಪರಿಣಾಮ ಬೀರಲಿದೆ. ಇದರಿಂದ ದೇಶದ ಕಪ್ಪುಹಣದ ಪ್ರಮಾಣ ತಗ್ಗಿಸಲು, ಭೂ ಮಾಫಿಯಾ, ಭೂಗತ ಜಗತ್ತಿನ ಚಟುವಟಿಕೆಗಳನ್ನು ನಿಯಂತ್ರಿಸಲು ಸಹಕಾರಿಯಾಗಿದೆ'' ಎಂದು ಹೇಳಿದರು.
''ಮಧ್ಯಮ ವರ್ಗಗಳು, ಬಡವರಿಗೆ ನೇರವಾದ ಸಂಕಷ್ಟ ತಂದಿರುವ ಈ ಕ್ರಮ ಯಶಸ್ವಿಯಾಗಬೇಕಾದರೆ, ದೇಶದ ಇಡೀ ಅರ್ಥ ವ್ಯವಸ್ಥೆ ಅತಿ ಶೀಘ್ರದಲ್ಲಿ ಡಿಜಿಟಲೀಕರಣವಾಗಬೇಕು. ನಗದು ರಹಿತ ಆರ್ಥಿಕ ವಹಿವಾಟು ವ್ಯವಸæಯನ್ನು ದೇಶದಲ್ಲಿ ಅಳವಡಿಸಿಕೊಂಡರೆ, ಆರ್ಥಿಕ ವ್ಯವಸ್ಥೆಯ ದಿಕ್ಕೇ ಬದಲಾಗುತ್ತದೆ. ಇದರಿಂದ ಕಪ್ಪುಹಣ, ಭಯೋತ್ಪಾದನೆ, ಲ್ಯಾಂಡ್ ಮಾಫಿಯಾ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ಹೊಡೆತ ಬೀಳುತ್ತದೆ. ಜತೆಗೆ ಆರ್ಥಿಕ ಪ್ರಗತಿಯೂ ಆಗುತ್ತದೆ'' ಎಂಬ ಆಶಯ ವ್ಯಕ್ತಪಡಿಸಿದರು.
''ನೋಟು ರದ್ದತಿಯಿಂದ ಈಗಾಗಲೇ ಶೇ.10ರಷ್ಟು ಕಪ್ಪುಹಣದ ಪ್ರಮಾಣ ತಗ್ಗಿದೆ. ಈ ಕ್ರಮವು ಕಪ್ಪುಹಣವನ್ನು ನಾಶ ಮಾಡುವ ದಿಟ್ಟ ನಿರ್ಧಾರವಾಗಿದೆ. ದೇಶದಲ್ಲಿ ನೋಟು ಇಲ್ಲದ ಪದ್ಧತಿ ಜಾರಿಯಾಗಬೇಕು. ಮುಂದಿನ ಹತ್ತು ವರ್ಷಗಳಲ್ಲಿ ನಗದು ರಹಿತ ವಹಿವಾಟು ಆರ್ಥಿಕ ವ್ಯವಸ್ಥೆ ಖಚಿತವಾಗಿ ಯಶಸ್ವಿಯಾಗುತ್ತದೆ'' ಎಂದು ಅಭಿಪ್ರಾಯಪಟ್ಟರು.
''ನೋಟು ಅಮಾನ್ಯೀಕರಣದ ಕ್ರಮದಿಂದ ಬ್ಯಾಂಕ್ ಸಿಬ್ಬಂದಿಗಳು ದಿನದ 24 ಗಂಟೆಗಳ ಕಾಲ ಕೆಲಸ ನಿರ್ವಹಿಸಿದ್ದಾರೆ. ಇದು ದೇಶದ ಉನ್ನತಿಗಾಗಿ ನೀಡಿರುವ ಕೊಡುಗೆ. ಹಾಗೆಯೇ ಜಮ್ಮು ಕಾಶ್ಮೀರದಲ್ಲಿ ಮೈನಸ್ 50 ಡಿಗ್ರಿ ಹವಾಮಾನದಲ್ಲಿ 20 ಸಾವಿರಕ್ಕೂ ಹೆಚ್ಚು ಸೈನಿಕರು ಯಾವುದನ್ನು ಲೆಕ್ಕಿಸದೇ ದೇಶದ ಗಡಿ ಕಾಯುತ್ತಿದ್ದಾರೆ. ಇದು ಅವರು ದೇಶಕ್ಕೆ ತೋರುತ್ತಿರುವ ಪ್ರೀತಿ ಮತ್ತು ಗೌರವ. ಈ ನಿಟ್ಟಿನಲ್ಲಿ ಎಲ್ಲರೂ ತಾಳ್ಮೆಯಿಂದ ದೇಶದ ಪ್ರಗತಿಗೆ ಸಹಕರಿಸಬೇಕು'' ಎಂದು ಹೇಳಿದರು.
ಶಾರದಾ ವಿಲಾಸ ಫಾರ್ಮಸಿ ಕಾಲೇಜು ಪ್ರಾಂಶುಪಾಲ ಡಾ.ಹನುಮಂತಚಾರ್ ಜೋಶಿ, ಮೈಸೂರು ಲೀಡ್ ಬ್ಯಾಂಕ್ ನಿವೃತ್ತ ಮುಖ್ಯ ಮ್ಯಾನೇಜರ್ ಕೆ.ಪಿ.ಪ್ರದ್ಯುಮ್ನ ಇದ್ದರು.