ಆ್ಯಪ್ನಗರ

​ ಕೋರ್ಟ್ ಆದೇಶಕ್ಕೂ ಮುನ್ನವೇ ಮದ್ಯದಂಗಡಿಗೆ ನೋಟಿಸ್ ಹೋಗಿತ್ತು

ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮದ್ಯದಂಗಡಿ ತೆರವುಗೊಳಿಸುವ ಸಂಬಂಧ ಸುಪ್ರಿಂಕೋರ್ಟ್ ಹೊರಡಿಸಿರುವ ಆದೇಶಕ್ಕೆ ಮುನ್ನವೇ ಮೈಸೂರು ಜಿಲ್ಲಾ ಅಬಕಾರಿ ಪೊಲೀಸರು, ಒಂದು ವರ್ಷದ ಹಿಂದೆಯೇ ಮದ್ಯದಂಗಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ.

Vijaya Karnataka Web 18 Dec 2016, 8:57 am
ಹರೀಶ್ ಎಲ್ ತಲಕಾಡು, ಮೈಸೂರು
Vijaya Karnataka Web
​ ಕೋರ್ಟ್ ಆದೇಶಕ್ಕೂ ಮುನ್ನವೇ ಮದ್ಯದಂಗಡಿಗೆ ನೋಟಿಸ್ ಹೋಗಿತ್ತು

ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮದ್ಯದಂಗಡಿ ತೆರವುಗೊಳಿಸುವ ಸಂಬಂಧ ಸುಪ್ರಿಂಕೋರ್ಟ್ ಹೊರಡಿಸಿರುವ ಆದೇಶಕ್ಕೆ ಮುನ್ನವೇ ಮೈಸೂರು ಜಿಲ್ಲಾ ಅಬಕಾರಿ ಪೊಲೀಸರು, ಒಂದು ವರ್ಷದ ಹಿಂದೆಯೇ ಮದ್ಯದಂಗಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ.

ಸುಪ್ರಿಂಕೋರ್ಟ್ ನೀಡಿರುವ ಆದೇಶ ರಾಜ್ಯ ಅಬಕಾರಿ ಕಾಯಿದೆಯಲ್ಲಿಯೇ ಇದ್ದು, ಅನುಷ್ಠಾನಗೊಳಿಸುವಲ್ಲಿ ನಿರ್ಲಕ್ಷ್ಯವಹಿಸಿರುವ ಅಧಿಕಾರಿಗಳ ಮೇಲೆ ಚಾಟಿ ಬೀಸಿದೆ. ರಾಜ್ಯ ಅಬಕಾರಿ ಕಾಯಿದೆ ಅನ್ವಯ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇದ್ದ ಮದ್ಯದಂಗಡಿಗಳನ್ನು ಗುರುತಿಸಿ, ಅವುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅದರಲ್ಲಿ ಭಾಗಶಃ ಯಶಸ್ವಿ ಕೂಡ ಆಗಿದ್ದಾರೆ.

ಮೈಸೂರು ನಗರ ಸೇರಿದಂತೆ ಜಿಲ್ಲಾ ವ್ಯಾಪ್ತಿಯಲ್ಲಿ 400 ಮದ್ಯದಂಗಡಿಗಳಿದ್ದು, ಹೆದ್ದಾರಿ ಎಂದು ಘೋಷಣೆಯಾಗುವ ಮುನ್ನವೇ ಮೈಸೂರು ನಗರದಿಂದ ಹಾದು ಹೋಗುವ ಮೈಸೂರು- ಬೆಂಗಳೂರು ರಸ್ತೆ, ಮೈಸೂರು- ಹುಣಸೂರು ರಸ್ತೆ, ಮಾನಂದವಾಡಿ ರಸ್ತೆ, ಊಟಿ ರಸ್ತೆ, ತಿ.ನರಸೀಪುರ ಹೆದ್ದಾರಿಗಳಲ್ಲಿ ಇರುವ 42 ಮದ್ಯದಂಗಡಿಗಳನ್ನು ಗುರುತಿಸಿ, ತೆರವುಗೊಳಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈಗಾಗಲೇ ಅಬಕಾರಿ ಪೊಲೀಸರ ನೋಟಿಸ್ ಹಿನ್ನ್ನೆಲೆಯಲ್ಲಿ ಐದು ಮದ್ಯದಂಗಡಿಗಳನ್ನು ಸ್ಥಳಾಂತರಗೊಳಿಸಲಾಗಿದೆ. ನೋಟಿಸ್ ನೀಡಿಯೂ ಯಾವುದೇ ಕ್ರಮ ವಹಿಸಿದ 2 ಮದ್ಯದಂಗಡಿಗಳನ್ನು ಮುಚ್ಚಲಾಗಿದೆ. ಎಚ್.ಡಿ.ಕೋಟೆಯಲ್ಲಿರುವ ರೆಸಾರ್ಟ್ ಮತ್ತು ನಂಜನಗೂಡು ರಸ್ತೆಯಲ್ಲಿರುವ ಮದ್ಯದಂಗಡಿಯನ್ನು ಮುಚ್ಚಲಾಗಿದೆ.

ಮಾನಂದವಾಡಿ ರಸ್ತೆಯಲ್ಲಿರುವ ರೆಸಾರ್ಟ್ ಸೇರಿದಂತೆ ಹೆದ್ದಾರಿಗಳಲ್ಲಿರುವ 35 ಮದ್ಯದಂಗಡಿಗಳನ್ನು ತೆರವುಗೊಳಿಸಲು ನೋಟಿಸ್ ನೀಡಲಾಗಿದ್ದು, ಮದ್ಯದಂಗಡಿಗಳ ಮಾಲೀಕರು ಅಬಕಾರಿ ಇಲಾಖೆಯ ಮೇಲ್ಮನವಿ ಪ್ರಾಧಿಕಾರದ ಮೊರೆ ಹೋಗುವ ಮೂಲಕ ತಡೆಯಾಜ್ಞೆ ತಂದಿದ್ದಾರೆ. ಈಗಾಗಲೇ ಎಂಟು ತಡೆಯಾಜ್ಞೆಯನ್ನು ಮೇಲ್ಮನವಿ ಪ್ರಾಧಿಕಾರ ತೆರವುಗೊಳಿಸಿದ್ದು, ಅಬಕಾರಿ ಪೊಲೀಸರ ಪರವಾಗಿ ತೀರ್ಪು ನೀಡಿದೆ.

ಘೋಷಣೆಗೂ ಮುನ್ನ ಸ್ಥಾಪನೆ: ಅಬಕಾರಿ ಕಾಯಿದೆಯ ಅನ್ವಯ ಹೆದ್ದಾರಿಗಳಲ್ಲಿ ಮದ್ಯದಂಗಡಿಗಳ ಸ್ಥಾಪನೆಗೆ ಅವಕಾಶವಿಲ್ಲ. ಆದರೆ ಈಗಿರುವ ಮದ್ಯದಂಗಡಿಗಳು ಲೋಕೋಪಯೋಗಿ ಇಲಾಖೆಯಿಂದ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಣೆ ಮಾಡುವ ಮುನ್ನ ಸ್ಥಾಪಿತವಾಗಿವೆ. ಘೋಷಣೆಯಾದ ಬಳಿಕ ಇರುವ ಮದ್ಯದಂಡಗಿಗಳ ತೆರವಿಗೆ ಕಾಯಿದೆ ಅನ್ವಯ ಅಬಕಾರಿ ಪೊಲೀಸರು ತೆರವುಗೊಳಿಸುವ ಕಾರ್ಯ ಆರಂಭಿಸಬೇಕು. ಈ ಬಗ್ಗೆ ನಿರ್ಲಕ್ಷ್ಯವಹಿಸಿದ್ದ ಪರಿಣಾಮ ಸುಪ್ರಿಂಕೋರ್ಟ್ ತನ್ನ ಆದೇಶದ ಮೂಲಕ ಚಾಟಿ ಬೀಸಿದೆ.

ಪ್ರಕರಣ ದಾಖಲು: ಮೈಸೂರು ನಗರ ವ್ಯಾಪ್ತಿಯಲ್ಲಿ ಹಾದು ಹೋಗುವ ಹೆದ್ದಾರಿಯಲ್ಲಿ ಮೈಸೂರು ನಗರ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಕಾರ್ಯಾಚರಣೆ ನಡೆಸಿ, ದಂಡ ವಸೂಲಿ ಮಾಡಿದ್ದಾರೆ.

ಅದರಂತೆ ಕುಡಿದು ವಾಹನ ಚಾಲನೆ ಮಾಡುವ ವಾಹನ ಸವಾರರಿಗೆ ದಂಡ ವಿಧಿಸಲಾಗುತ್ತಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಇಂದಿಗೂ ದಂಡ ವಿಧಿಸುವ ಪಕ್ರಿಯೆ ಪರಿಣಾಮಕಾರಿಯಾಗಿ ನಡೆಯದೇ ಇರುವುದರಿಂದ ಹೆದ್ದಾರಿಗಳಲ್ಲಿ ದಂಡ ವಿಧಿಸದೇ ಇರುವುದರಿಂದ ಮದ್ಯ ಸೇವಿಸಿ ವಾಹನ ಚಾಲನೆ ಮಾಡಲಾಗುತ್ತಿದೆ ಎನ್ನುತ್ತಾರೆ ಪೊಲೀಸರು.

ಅನೈತಿಕ, ಅಕ್ರಮ ಚಟುವಟಿಕೆ: ಹೆದ್ದಾರಿಗಳಲ್ಲಿರುವ ಮದ್ಯದಂಗಡಿಳೊಂದಿಗೆ ರೆಸಾರ್ಟ್, ಡಾಬಾಗಳಿದ್ದು, ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಏನಾದರೂ ಗಲಾಟೆ ಗದ್ದಲಗಳು ನಡೆಯುವುದೇ ಈ ಹೈವೇ ಡಾಬಾಗಳಲ್ಲೇ. ಹೊರ ರಾಜ್ಯಗಳಿಂದ ನಗರಕ್ಕೆ ಬರುವ ಪ್ರವಾಸಿಗರು, ಜನರು, ಹೆದ್ದಾರಿಗಳಲ್ಲಿ ಸಿಗುವ ರೆಸಾರ್ಟ್ ಮತ್ತು ಡಾಬಾಗಳಲ್ಲಿ ರಾತ್ರಿ ಹೊತ್ತು ವಾಸ್ತವ್ಯ ಹೂಡಿದರೆ, ಸ್ಥಳೀಯರು ಕೂಡ ತಮ್ಮ ಕಾರ್ಯ ಚಟುವಟಿಕೆಗಳನ್ನು ನಡೆಸುವುದು ಹೆದ್ದಾರಿಗಳಲ್ಲಿರುವ ಡಾಬಾಗಳಲ್ಲಿ. ಸಾಕಷ್ಟು ಗಲಾಟೆಗಳು ಕೂಡ ಈ ಹೆದ್ದಾರಿಗಳಲ್ಲಿರುವ ಡಾಬಾಗಳಲ್ಲೇ ನಡೆಯುತ್ತವೆ. ಬಹುತೇಕ ಡಾಬಾಗಳಲ್ಲಿ ಪೊಲೀಸರ ಕುಮ್ಮಕಿನಿಂದಲೇ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ದೂರುತ್ತಾರೆ ಸ್ಥಳೀಯ ನಿವಾಸಿಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ