ಸಾಲಿಗ್ರಾಮ: ತಾಲೂಕಿನ ಸರಕಾರಿ ಗೋಮಾಳಗಳಲ್ಲಿ ಉಳುಮೆ ಮಾಡುತ್ತಿರುವ ರೈತರು ಅಕ್ರಮ-ಸಕ್ರಮದಡಿ ಸಲ್ಲಿಸಿದ್ದ ಅರ್ಜಿಗಳನ್ನು ವಿಲೇಮಾರಿ ಮಾಡಿ ಅವರ ಸಮಸ್ಯೆಯನ್ನು ತಕ್ಷ ಣವೇ ಬಗೆಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಶಾಸಕ ಸಾ.ರಾ.ಮಹೇಶ್ ಸೂಚಿಸಿದರು.
ಅಕ್ರಮ-ಸಕ್ರಮ ಸಮಿತಿ ಸದಸ್ಯರು, ತಹಸೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಅರ್ಜಿದಾರರ ಜಮೀನುಗಳಿಗೆ ಭೇಟಿ ನೀಡಿ ಶಾಸಕರು ಪರಿಶೀಲಿಸಿದರು.
ಸಾಗುವಳಿ ಪತ್ರ ವಿತರಿಸುವಂತೆ ಕಳೆದ ಮೂವತ್ತು ವರ್ಷದ ಹಿಂದೆ ರೈತರು ಅರ್ಜಿ ಹಾಕಿದ್ದರು. ಇದುವರೆಗೂ ರೈತರಿಗೆ ಸಾಗುವಳಿ ಪತ್ರ ದೊರೆತಿರಲಿಲ್ಲ. ಇಂಥ ಅರ್ಜಿದಾರರ ಹೆಸರಿರುವ ಪಟ್ಟಿಯನ್ನು ಸಿದ್ದಪಡಿಸಿ, ಖುದ್ದಾಗಿ ಅರ್ಜಿ ಪರಿಶೀಲಿಸಿ ಅಕ್ರಮ-ಸಕ್ರಮದಡಿ ಸಾಗುವಳಿ ಪತ್ರ ವಿತರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಹೊಸ ಅಗ್ರಹಾರ ಹೋಬಳಿಯ ದೊಡ್ಡವಡ್ಡರಗುಡಿ, ಬೊಮ್ಮೇನಹಳ್ಳಿ, ಕಾಕನಹಳ್ಳಿ,ಗುಳುವಿನ ಅತ್ತಿಗುಪ್ಪೆ ಗ್ರಾಮಗಳಿಗೆ ತೆರಳಿದ್ದ ಶಾಸಕರು, ಆಯಾ ಗ್ರಾಮಗಳಲ್ಲಿ ಕೆಲವೊಂದು ಕಡತಗಳನ್ನು ಖುದ್ದಾಗಿ ಪರಿಶೀಲಿಸಿದರು. ಯಾವುದು ಅರ್ಹ ಎಂಬುದನ್ನು ಮನಗಂಡು ಅಂತಹ ರೈತರ ಅರ್ಜಿಗಳಿಗೆ ಸಂಬಂಧಿಸಿದ ಆದೇಶ ಪ್ರತಿಗಳಿಗೆ ಸ್ಥಳದಲ್ಲೆ ಸಹಿ ಮಾಡಿದರು.
ಕೆಲವೊಂದು ಅರ್ಜಿಗಳಲ್ಲಿ ಅಣ್ಣ-ತಮ್ಮಂದಿರ ವ್ಯಾಜ್ಯಗಳಿದ್ದು,ಅಂತಹ ಅರ್ಜಿಗಳನ್ನು ಮುಂದಿನ ಶುಕ್ರವಾರ ತಾಲೂಕು ಕಚೇರಿಯಲ್ಲಿ ನಡೆಯುವ ಆಕ್ರಮ-ಸಕ್ರಮ ಸಮಿತಿ ಸಭೆಯಲ್ಲಿ ಬಗೆಹರಿಸಲಾಗುವುದು ಎಂದು ತಿಳಿಸಿದರು.
ಅರಣ್ಯಾಧಿಕಾರಿಗಳಿಗೆ ತರಾಟೆ: ಗುಳುವಿನ ಅತ್ತಿಗುಪ್ಪೆ ಗ್ರಾಮದಲ್ಲಿ ಗೋಮಾಳ ಜಮೀನುಗಳನ್ನು ತಾವು ಉಳುಮೆ ಮಾಡಿದ್ದು,ಅರಣ್ಯ ಇಲಾಖೆಯವರು ಇದು ತಮ್ಮ ವ್ಯಾಪ್ತಿ ಎಂದು ಜಮೀನನ್ನು ಒತ್ತವರಿ ಮಾಡಿಕೊಂಡು ಕಿರುಕುಳ ನೀಡುತ್ತಿದ್ದಾರೆæಂದು ರೈತರು ದೂರಿದಾಗ, ಕೂಡಲೇ ತಾಲೂಕಿನ ಅರಣ್ಯ ವಲಯಾಧಿಕಾರಿ ಕುಮಾರ್ ಮತ್ತು ಮಠದಕಾವಲು ರಕ್ಷಿತಾ ಅರಣ್ಯ ಪ್ರದೇಶದ ಅರಣ್ಯಾಧಿಕಾರಿ ನಾರಾಯಣ್ ಅವರನ್ನು ದೂರವಾಣಿ ಮೂಲಕ ತರಾಟೆ ತೆಗೆದುಕೊಂಡ ಶಾಸಕರು, ಇದು ನಿಮ್ಮ ಅರಣ್ಯ ವ್ಯಾಪ್ತಿಗೆ ಸೇರಿದ ಜಮೀನಲ್ಲ. ಗೋಮಾಳ ನಿಮ್ಮ ವ್ಯಾಪ್ತಿಗೆ ಬರುವುದಿಲ್ಲ. ನೀವೇನಾದರೂ ರೈತರಿಗೆ ಕಿರುಕುಳ ನೀಡಿದರೆ ಮುಂದಾಗುವ ಅನಾಹುತಕ್ಕೆ ನೀವೇ ಹೊಣೆಗಾರರು ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಕೂಡಲೇ ರೈತರ ಜಮೀನುಗಳಲ್ಲಿ ಅರಣ್ಯ ಇಲಾಖೆ ತೆಗೆಸಿರುವ ಟ್ರಂಚ್ ಅನ್ನು ಮುಚ್ಚಿಸಿ ಎಂದು ಸೂಚಿಸಿದರು.
ತಹಸೀಲ್ದಾರ್ ನಾಗರಾಜ್, ರಾಜಸ್ವ ನಿರೀಕ್ಷ ಕ ತನುರಾಜ್, ಆಕ್ರಮ-ಸಕ್ರಮ ಸಮಿತಿ ಸದಸ್ಯ ಕಾಳಯ್ಯ, ಗ್ರಾಮಲೆಕ್ಕಿಗರಾದ ರಾಜಶೇಖರ್,ಮಹೇಶ್, ಗ್ರಾ.ಪಂ.ಅಧ್ಯಕ್ಷ ರಾದ ಡಿವಿ ಗುಡಿ ಯೋಗೇಶ್, ಭೇರ್ಯ ಶಿವಶಂಕರ್,.ಮಾಜಿ ಅದ್ಯಕ್ಷ ಅನೀಫ್ಗೌಡ, ಮಾಜಿ ಸದಸ್ಯ ಶಂಭು, ಹೋಬಳಿ ಜಾ.ದಳ ಯುವಘಟಕ ಅಧ್ಯಕ್ಷ ಚಿದಂಬರ,ಗ್ರಾ.ಪಂ.ಸದಸ್ಯರಾದ ಚಲುವರಾಜ್, ಪಟೇಲ್ ದೇವರಾಜ್, ಜೆಡಿಎಸ್ ಮುಖಂಡರಾದ ಎಚ್.ಕೆ.ಕೃಷ್ಣ, ಮಂಜೇಗೌಡ, ಡೈರಿ ಲೋಕೇಶ್, ಜುನೇದ್ಬೇಗ್ ಇದ್ದರು.