ಮೈಸೂರು: ನನಗೆ ಗೌರಿ ಲಂಕೇಶ್ರೂ ಗೊತ್ತಿಲ್ಲ, ಅವರ ಅಪ್ಪನೂ ಗೊತ್ತಿಲ್ಲ. ನನ್ನ ಬಗ್ಗೆ ಅವರೇಕೆ ಬರೆಯುತ್ತಿದ್ದರೋ ಅದು ಸಹ ನನಗೆ ಗೊತ್ತಿಲ್ಲ ಎಂದು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.
ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಬುಧವಾರ ಭಿಕ್ಷಾಂದೇಹಿ ಎಂಬ ಸಾಮಾಜಿಕ ಅಭಿಯಾನದ ಮೂಲಕ ದೇಣಿಗೆ ರೂಪದಲ್ಲಿ ಸಂಗ್ರಹವಾಗಿದ್ದ 555ಕ್ಕೂ ಹೆಚ್ಚು ಕ್ವಿಂಟಾಲ್ ಅಕ್ಕಿ ಚೀಲಗಳನ್ನು ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
''ಗೌರಿ ಲಂಕೇಶ್ ಅವರ ಪತ್ರಿಕೆಯನ್ನು ಇದುವರೆಗೂ ನಾನು ಓದಿಲ್ಲ. ನಮ್ಮ ವಿರುದ್ಧವಾಗಿ ಬರೆದಿದ್ದಕ್ಕೆ ಯಾವ ಬೇಸರವೂ ಇಲ್ಲ,'' ಎಂದು ಸ್ಪಷ್ಟಪಡಿಸಿದರು.
''ಗೌರಿ ಲಂಕೇಶ್ ಅವರಿಗೂ ನನಗೂ ಯಾವುದೇ ವೈಯುಕ್ತಿಕ ಭಿನ್ನಾಭಿಪ್ರಾಯ ಇರಲಿಲ್ಲ. ಏನೇ ಭಿನ್ನಾಭಿಪ್ರಾಯಗಳಿದ್ದರೂ ಸಂಘ ಪರಿವಾರ ದೈಹಿಕ ಹಿಂಸೆಯನ್ನು ಸಹಿಸುವುದಿಲ್ಲ. ಗೌರಿ ಲಂಕೇಶ್ ಹತ್ಯೆಯನ್ನು ಆರ್ಎಸ್ಎಸ್ ತೀವ್ರವಾಗಿ ಖಂಡಿಸುತ್ತದೆ,'' ಎಂದು ಹೇಳಿದರು.
''ದೇಶದಲ್ಲಿ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಗೌರಿ ಲಂಕೇಶ್ಗೂ ಬರೆಯುವ ಸ್ವಾತಂತ್ರ್ಯ ಇತ್ತು. ಆದರೆ ಅದರ ಮಿತಿ ಮೀರಿ ಬರೆಯುವುದು ಸರಿಯಲ್ಲ. ಅವರ ವಿಚಾರಗಳೇ ಬೇರೆ, ನಮ್ಮ ವಿಚಾರಗಳೇ ಬೇರೆ. ನಮ್ಮದು ರಾಷ್ಟ್ರೀಯ ವಿಚಾರವಾದ, ಅವರದ್ದು ಬೇರೊಂದು ವಿಚಾರವಾದ,'' ಎಂದು ಹೇಳಿದರು.
''ನಾವು ದೇಶಿಯ ಸಂಸ್ಕೃತಿಯನ್ನು ಬೆಳೆಸಿಕೊಂಡು ಬರುತ್ತಿದ್ದೇವೆ. ಅವರು ದೇಶ ಮಾರುವವರ ಜತೆಗೆ ಇದ್ದಾರೆ. ನಾವು ದೇಶ ಉಳಿಸುವವರ ಪರವಾಗಿ ಇದ್ದೇವೆ,'' ಎಂದರು.
''ಯಾರನ್ನೂ ವೈಯುಕ್ತಿಕವಾಗಿ ಚಾರಿತ್ರ್ಯ ವಧೆ ಮಾಡುವುದು ಸರಿಯಲ್ಲ. ಅವರ ಕೊಲೆ ಯಾವ ಕಾರಣಕ್ಕಾಗಿ ಆಗಿದೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಅವರ ಕೊಲೆಯನ್ನು ನಾನು ಖಂಡಿಸುತ್ತೇನೆ. ಹಿಂಸೆಯಿಂದ ಹಿಂಸೆಯನ್ನು ತಡೆಗಟ್ಟಲು ಸಾಧ್ಯವಿಲ್ಲ. ಆರ್ಎಸ್ಎಸ್ ಎಂದೂ ಹಿಂಸೆಯನ್ನು ಬೆಂಬಲಿಸುವುದಿಲ್ಲ,'' ಎಂದು ಹೇಳಿದರು.
''ವಿಚಾರವಾದಿಗಳು ಎಂದು ಹೇಳಿಕೊಳ್ಳುವವರು ವಿದೇಶಿ ಶಕ್ತಿಗಳೊಂದಿಗೆ ಸಂಪರ್ಕ ಇರಿಸಿಕೊಂಡಿದ್ದಾರೆ. ವಿದೇಶದಿಂದ ಅವರಿಗೆ ಬರುತ್ತಿರುವ ಕಮೀಷನ್ ಹಣ ತಪ್ಪಿ ಹೋಗುವ ಭಯದಿಂದ ನಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಎಡಪಂಥೀಯರು ಅಲ್ಲ, ಬಲಪಂಥೀಯರು ಅಲ್ಲ, ನಾವು ರಾಷ್ಟ್ರೀಯ ವಾದಿಗಳಾಗಿದ್ದೇವೆ,'' ಎಂದು ಹೇಳಿದರು.
ಮಾಜಿ ಸಚಿವ ಎಸ್.ಎ.ರಾಮದಾಸ್, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ನ ಪ್ರಶಾಂತ್, ಮೈಸೂರು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಇದ್ದರು.
'ಜನರ ಬಳಿ ಭಿಕ್ಷೆ ಬೇಡುವೆ, ಸಿದ್ದರಾಮಯ್ಯ ಬಳಿ ಹೋಗಲ್ಲ'
ನಾನು ಜನರ ಬಳಿ ಭಿಕ್ಷೆ ಬೇಡುತ್ತೇನೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಬಳಿ ಅಥವಾ ಸಚಿವ ರಮಾನಾಥ ರೈ ಬಳಿ ಹೋಗುವುದಿಲ್ಲ ಎಂದು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕಾ ಪ್ರಹಾರ ನಡೆಸಿದ ಅವರು, ''ರಾಕ್ಷ ಸ, ರಾವಣ, ಕೌರವ, ಕಂಸನ ಬಳಿ ಯಾರಾದ್ರು ಭಿಕ್ಷೆ ಬೇಡಿದ್ದಾರಾ? ಹಾಗೆ ನಾನು ಸಹ ಸಿದ್ದರಾಮಯ್ಯರ ಬಳಿ ಹೋಗುವುದಿಲ್ಲ,'' ಎಂದು ಹೇಳಿದರು.
''ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಶಾಲೆಗೆ ಮತ್ತೆ ಅನುದಾನ ನೀಡಲು ಮುಂದೆ ಬಂದಿದ್ದಾರೆ. ಆದರೆ ಶಾಲೆಗೆ ಅನುದಾನ ಪಡೆಯುವ ವಿಚಾರದಲ್ಲಿ ಮತ್ತೆ ಸರಕಾರವನ್ನು ಕೇಳುವ ಪ್ರಶ್ನೆಯೇ ಇಲ್ಲ. ಅವರಿಂದ ಯಾವ ಭಿಕ್ಷೆಯೂ ಬೇಕಿಲ್ಲ. ಈ ವಿಚಾರದಲ್ಲಿ ನಾನೂ ಯಾವುದೇ ರಾಜಕೀಯ ಮಾಡುತ್ತಿಲ್ಲ,'' ಎಂದು ಹೇಳಿದರು.
''ಅಹಿಂದ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶೇ. 94ರಷ್ಟು ಹಿಂದುಳಿದ ವರ್ಗದ ಮಕ್ಕಳು ಓದುತ್ತಿರುವ ಕಲ್ಲಡ್ಕದ ಶ್ರೀರಾಮ ವಿದ್ಯಾಶಾಲೆಗೆ ಅನ್ನಭಾಗ್ಯ ನೀಡದೇ ಅನ್ಯಾಯ ಮಾಡಿದ್ದಾರೆ,'' ಎಂದರು.
''ನಾನು ಸಿದ್ದರಾಮಯ್ಯರನ್ನು ರಾಕ್ಷ ಸ ಎಂದು ಹೇಳುವುದಿಲ್ಲ. ಆದರೆ, ಅವರಲ್ಲಿ ರಾಕ್ಷ ಸ ಪ್ರವೃತ್ತಿ ಇದೆ,'' ಎಂದು ಟೀಕಿಸಿದರು. ಅವರು ಮಕ್ಕಳ ಊಟ ಕಿತ್ತುಕೊಳ್ಳುವ ಅಧರ್ಮದ ಕೆಲಸ ಮಾಡಿದ್ದಾರೆ. ಅಧರ್ಮದ ಕೆಲಸ ಮಾಡುವ ಯಾರೇ ಆಗಿದ್ದರೂ ಅವರು ರಾಕ್ಷ ಸ ಪ್ರವೃತ್ತಿಯವರು,'' ಎಂದು ಅಸಮಾಧಾನ ವ್ಯಕ್ತಪಡಿಸಿದರು.