ವಿಕ ಸುದ್ದಿಲೋಕ ಮೈಸೂರು
ಮನುಕುಲದಲ್ಲಿದ್ದ ಸಂಕುಚಿತ ಮನೋಭಾವನೆ ಹೋಗಲಾಡಿಸಿ ಹೃದಯ ವೈಶಾಲ್ಯತೆಯನ್ನು ಬೆಳೆಸಿದವರು ವಚನಕಾರರು ಎಂದು ಮೈಸೂರು ಬಸವ ಬಳಗ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಎಂ.ಎಚ್.ಮಹದೇವಸ್ವಾಮಿ ಹೇಳಿದರು.
ಶರಣು ವಿಶ್ವವಚನ ಫೌಂಡೇಶನ್ ಮತ್ತು ಸ್ಯಾಂಡಲ್ರೋಸ್ ಕಾನ್ವೆಂಟ್ ಸಹಯೋಗದೊಂದಿಗೆ ಸಾಲುಂಡಿಯ ಪ್ರಥಮ ಕನ್ವೆನ್ಷನ್ ಹಾಲ್ನಲ್ಲಿ ಆಯೋಜಿಸಿದ್ದ ಶಾಲೆಗಳೆಡೆಗೆ ವಚನಗಳ ನಡಿಗೆ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಧುನಿಕ ಪ್ರಪಂಚದಲ್ಲಿ ಸಂಸ್ಕಾರ ಎಂಬುದು ಮರೀಚಿಕೆಯಾಗಿದೆ ಆದರೆ ವಚನಗಳು ಅಂತಹ ಸಂಸ್ಕಾರ ಮೂಡಿಸಲು ಸಹಕಾರಿಯಾಗಿದ್ದು, ಮಕ್ಕಳಿಗೆ ಎಳೆಯ ಪ್ರಾಯದಲ್ಲಿಯೇ ಸಮಾನತೆಯ ದ್ಯೋತಕವಾದ ವಚನಗಳನ್ನು ಪ್ರಚುರಪಡಿಸಿ ವಿಶ್ವಮಾನವರಾಗಲು ಅಣಿಗೊಳಿಸುತ್ತಿರುವುದು ಶ್ಲಾಘನೀಯ. ಕಾಯಕದಿಂದ ಜೀವನ ಸಾಗಿಸುವ ಪ್ರವೃತ್ತಿ ಮಕ್ಕಳಲ್ಲಿ ಮೈಗೂಡಿದ್ದೇ ಆದರೆ ಸದೃಢ ಸಮಾಜ ನಿರ್ಮಾಣ ಮಾಡಲ ಸಾಧ್ಯ ಎಂದರು.
ಮೈಸೂರು ಎಸ್.ಎಂ.ಪಿ. ಫೌಂಡೇಶನ್ ಅಧ್ಯಕ್ಷ ಎಸ್.ಎಂ.ಶಿವಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರ ಜೀವನವೂ ಸಾರ್ಥಕತೆಯ ಹಾದಿಯಲ್ಲಿ ರೂಪುಗೊಳ್ಳಬೇಕಾದರೆ ವಚನಕಾರರ ಜೀವನವೇ ನೈಜ ಉದಾಹರಣೆಯಾಗಿದೆ. ಬಡವ, ಬಲ್ಲಿದ, ಮೇಲು, ಕೀಳು ಎಂಬ ಭೇದವಿಲ್ಲದೆ ಎಲ್ಲರನ್ನೂ ಅಪ್ಪಿಕೊಂಡು ವಿಚಾರ ಕ್ರಾಂತಿಗೆ ಕಾರಣವಾದ ವಚನ ಸಾಹಿತ್ಯ ಎಲ್ಲಾ ಕಾಲಘಟ್ಟದಲ್ಲೂ ಅನ್ವಯವಾಗುತ್ತದೆ ಎಂದರು.
ಶರಣು ವಿಶ್ವವಚನ ಫೌಂಡೇಶನ್ ನಿರ್ದೇಶಕಿ ರೂಪಕುಮಾರಸ್ವಾಮಿ ಮಾತನಾಡಿ, ಬಸವಣ್ಣನವರ ಅಸ್ಪೃಶ್ಯತೆ ನಿವಾರಣೆ, ಸಾಮಾಜಿಕ ಸಮಾನತೆ ಕಂಡು ದೇಶದ ಮಹಾನ್ ವ್ಯಕ್ತಿಗಳಾದ ಮಹಾತ್ಮಗಾಂಧಿ ಮತ್ತು ರಾಧಾಕೃಷ್ಣನ್ ಶ್ಲಾಘನೀಯ ಮಾತುಗಳನ್ನಾಡಿದ್ದಾರೆ. ಇಂದು ನಾವು ವಚನಕಾರರನ್ನು ಪೂಜೆ ಮಾಡುವುದಕ್ಕಷ್ಟೇ ಸೀಮಿತವಾಗದೆ ಅವರ ವಚನಗಳ ಬಗ್ಗೆ ವಿಚಾರ ಸಂಕಿರಣ, ಚರ್ಚೆ ಮುಂತಾದ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಿ ಅವರ ತತ್ವಗಳನ್ನು ಜನಮಾನಸಕ್ಕೆ ತಲುಪಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಧನಗಹಳ್ಳಿ ಗ್ರಾ.ಪಂ ಅಧ್ಯಕ್ಷ ಬಸವರಾಜು, ಮೈಸೂರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜವರೇಗೌಡ, ಎಚ್.ಡಿ.ಕೋಟೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಮಂಜುನಾಥ್, ಶರಣು ವಿಶ್ವ ವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ಸ್ಯಾಂಡಲ್ ರೋಸ್ ಕಾನ್ವೆಂಟ್ ಸಂಸ್ಥಾಪಕ ಕಾರ್ಯದರ್ಶಿ ಬಿ. ಶೋಭಾ ಶಿವರಾಜು, ಲತಾ ಬಸಪ್ಪ, ನಿಂಗೇಗೌಡ, ಪಂಪಾಪತಿ, ಲಿಂಗಣ್ಣ, ಪ್ರಭುಸ್ವಾಮಿ ಉಪಸ್ಥಿತರಿದ್ದರು.