ಆ್ಯಪ್ನಗರ

ದಸರಾ ಫಲಪುಷ್ಪ ಪ್ರದರ್ಶನಕ್ಕೆ 4.5 ಲಕ್ಷ ಮಂದಿ ಭೇಟಿ

ಜಂಬೂ ಸವಾರಿ ಮೆರವಣಿಗೆ ಮುಗಿದರೂ ಮೈಸೂರು ನಗರದಿಂದ ವಿಮುಖರಾಗದ ಪ್ರವಾಸಿಗರು ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ ಆಗಮಿಸುವ ಪ್ರವಾಸಿಗರು ಕುಪ್ಪಣ್ಣ ಪಾರ್ಕಿನಲ್ಲಿ ಅ.21ರವರೆಗೆ ನಡೆಯುತ್ತಲಿರುವ ಫಲಪುಷ್ಪ ಪ್ರದರ್ಶನಕ್ಕೂ ಭೇಟಿ ನೀಡುತ್ತಿದ್ದು, ಇಡೀ ಉದ್ಯಾನವನದ ಆವರಣ ಜನಜಂಗುಳಿಯಿಂದ ತುಂಬಿ ತುಳುಕುತ್ತಿದೆ.

Vijaya Karnataka 21 Oct 2018, 11:01 am
ಹರೀಶ್‌ ಎಲ್‌. ತಲಕಾಡು
Vijaya Karnataka Web dasara flower show


ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಮುಗಿದರೂ ದಸರಾ ಗುಂಗಿನಿಂದ ಇನ್ನೂ ಪ್ರವಾಸಿಗರು ಹೊರ ಬಂದಿಲ್ಲ ಎಂಬುದಕ್ಕೆ ಫಲಪುಷ್ಪ ಪ್ರದರ್ಶನವೇ ಸಾಕ್ಷಿಯಾಗಿದೆ.

ಕಳೆದ ಶುಕ್ರವಾರ ಜಂಬೂ ಸವಾರಿ ಮೆರವಣಿಗೆ ಮುಗಿದರೂ ಮೈಸೂರು ನಗರದಿಂದ ವಿಮುಖರಾಗದ ಪ್ರವಾಸಿಗರು ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ ಆಗಮಿಸುವ ಪ್ರವಾಸಿಗರು ಕುಪ್ಪಣ್ಣ ಪಾರ್ಕಿನಲ್ಲಿ ಅ.21ರವರೆಗೆ ನಡೆಯುತ್ತಲಿರುವ ಫಲಪುಷ್ಪ ಪ್ರದರ್ಶನಕ್ಕೂ ಭೇಟಿ ನೀಡುತ್ತಿದ್ದು, ಇಡೀ ಉದ್ಯಾನವನದ ಆವರಣ ಜನಜಂಗುಳಿಯಿಂದ ತುಂಬಿ ತುಳುಕುತ್ತಿದೆ.

4.5 ಲಕ್ಷ ಮಂದಿ ಭೇಟಿ: ಕಳೆದ 10 ದಿನಗಳಲ್ಲಿ 4.5 ಲಕ್ಷಕ್ಕೂ ಅಧಿಕ ಮಂದಿ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿದ್ದಾರೆ. ಕಳೆದ ವರ್ಷದ 11 ದಿನಗಳ ಕಾಲ ನಡೆದ ದಸರಾ ಫಲಪುಷ್ಪ ಪ್ರದರ್ಶನಕ್ಕೆ 3.50 ಲಕ್ಷ ಮಂದಿ ಭೇಟಿ ನೀಡಿದ್ದರು. ಈ ಬಾರಿ 12 ದಿನಗಳ ಕಾಲ ಪ್ರದರ್ಶನ ನಡೆಯುತ್ತಿದ್ದು, ನಿರೀಕ್ಷೆಗೂ ಮೀರಿ ವೀಕ್ಷಕರು ಭೇಟಿ ನೀಡಿದ್ದಾರೆ. ಪ್ರದರ್ಶನ ಆರಂಭವಾದಗಿನಿಂದ ಹೆಚ್ಚಿನ ಮಂದಿ ಹರಿದು ಬರುತ್ತಿದ್ದು, ವಾರಾಂತ್ಯದ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಲಕ್ಷ ದಾಟಿದೆ.

ಕುಪ್ಪಣ್ಣ ಪಾರ್ಕ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ಬಣ್ಣ ಬಣ್ಣದ ಲಕ್ಷಾಂತರ ಗುಲಾಬಿ ಹೂವುಗಳಿಂದ ಅರಮನೆಯ ದ್ವಾರ, ಅಶೋಕ ಸ್ತಂಭ, ಪೆಂಗ್ವಿನ್‌, ಅಮರ್‌ ಜವಾನ್‌ ಸ್ತಂಭ, ಫಿರಂಗಿ, ಡಾಲ್ಫಿನ್‌, ಟಿ ಕಪ್ಪು, ಸಾಸರ್‌, ಜಗ್ಗು, ಟ್ರೀ ಹೌಸ್‌, ಡೋರ್ಮೋನ್‌, ಹೆಲ್ಪಿಂಗ್‌ ಹ್ಯಾಂಡ್‌, ಡ್ಯಾನ್ಸಿಂಗ್‌ ಡಾಲ್ಸ್‌, ಕುಂಬಾರಿಕೆ ಕಲೆ ಸೇರಿದಂತೆ ವಿವಿಧ ಆಕೃತಿ ನಿರ್ಮಿಸಲಾಗಿದೆ. ಇದರ ವೀಕ್ಷಣೆಗೆ ಮೈಸೂರು, ಬೆಂಗಳೂರು, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು ಸೇರಿದಂತೆ ನಾನಾ ಕಡೆಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಅನ್ಯ ರಾಜ್ಯಗಳಿಂದಲೂ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಫಲಪುಷ್ಪ ಪ್ರದರ್ಶನ ಆಯೋಜಿಸಿರುವ ಕುಪ್ಪಣ್ಣ ಪಾರ್ಕ್‌ ತುಂಬಿ ತುಳುಕುತ್ತಿದೆ.

''ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ 95 ಸಾವಿರ, ಸೋಮವಾರ 60 ಸಾವಿರ, ಮಂಗಳವಾರ ಸಂಜೆಯೆವರೆಗೆ 45 ಸಾವಿರ ಪ್ರೇಕ್ಷಕರು ಭೇಟಿ ನೀಡಿದ್ದರು,'' ಎಂದು ಗುತ್ತಿಗೆದಾರ ಅಲಿಫ್‌ ಟ್ರೆಡರ್ಸ್‌ನ ಸುಹೇಲ್‌ ಮತ್ತು ರಾಜೇಶ್‌ತಿಳಿಸಿದ್ದಾರೆ.

ಸೆಲ್ಫಿ ಕ್ರೇಜ್‌: ಪ್ರದರ್ಶನದಲ್ಲಿ ನಾನಾ ಬಗೆಯ ಹೂವಿನ ಅಲಂಕಾರ ಮಾಡಿದ್ದರೂ ಗಾಜಿನ ಮನೆಯಲ್ಲಿದ್ದ ಲೋಟಸ್‌ ಟೆಂಪಲ್‌ ಪ್ರಮುಖ ಆಕರ್ಷಣೀಯ ಕೇಂದ್ರ ಬಿಂದುವಾಗಿದ್ದು, ಪ್ರತಿಯೊಬ್ಬರು ಈ ಟೆಂಪಲ್‌ ಎದುರು ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.

ದಸರಾ ಫಲಪುಷ್ಪ ಪ್ರದರ್ಶನಕ್ಕೆ ನಿರೀಕ್ಷೆಗೂ ಮೀರಿ ಜನಸಾಗರ ಹರಿದು ಬರುತ್ತಿದ್ದು, ಕಳೆದ 10 ದಿನಗಳಲ್ಲಿ 4.5 ಲಕ್ಷ ಅಧಿಕ ಮಂದಿ ಭೇಟಿ ನೀಡಿದ್ದಾರೆ. ಭಾನುವಾರ ಕೂಡ ಪ್ರದರ್ಶನ ಇರಲಿದ್ದು, ಪ್ರದರ್ಶನದ ಸಮಾರೋಪ ಸಮಾರಂಭ ನಡೆಯಲಿದೆ. ಈ ವೇಳೆ ನಾನಾ ಸ್ಪರ್ಧೆಗಳಲ್ಲಿ ವಿಜೇತರಾದ ಸಂಘ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಬಹುಮಾನ ವಿತರಿಸಲಾಗುವುದು.
- ಹಬೀಬಾ ನಿಶಾತ್‌, ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ