ಆ್ಯಪ್ನಗರ

ಶೀಘ್ರವೇ ಮೈಸೂರಿನಿಂದ 8 ವಿಮಾನಗಳ ಹಾರಾಟ: ಸಂಸದ

ಶೀಘ್ರದಲ್ಲಿ 8 ವಿಮಾನಗಳು ಮೈಸೂರಿನಲ್ಲಿ ಹಾರಾಟ ನಡೆಸಲಿವೆ ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದರು.

Vijaya Karnataka 23 Feb 2019, 5:00 am
ಮೈಸೂರು : ಶೀಘ್ರದಲ್ಲಿ 8 ವಿಮಾನಗಳು ಮೈಸೂರಿನಲ್ಲಿ ಹಾರಾಟ ನಡೆಸಲಿವೆ ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದರು.
Vijaya Karnataka Web 8 flights from mysore soon mp
ಶೀಘ್ರವೇ ಮೈಸೂರಿನಿಂದ 8 ವಿಮಾನಗಳ ಹಾರಾಟ: ಸಂಸದ


ನಗರದ ಖಾಸಗಿ ಹೋಟೆಲ್‌ನಲ್ಲಿ ಕಾನ್ಫಡರೇಷನ್‌ ಆಫ್‌ ಇಂಡಿಯನ್‌ ಇಂಡಸ್ಟ್ರಿ ಹಾಗೂ ಯಂಗ್‌ ಇಂಡಿಯನ್ಸ್‌ ಸಹಯೋಗದಲ್ಲಿ ನಡೆದ ಮೈಸೂರು 2.0 ಕಾರ‍್ಯಕ್ರಮದಲ್ಲಿ ಮಾತನಾಡಿದರು.

''2007ರಲ್ಲಿ ಮೈಸೂರಿಗೆ ವಿಮಾನ ನಿಲ್ದಾಣ ಬಂದರೂ 2014ರವರೆಗೂ ಅಭಿವೃದ್ಧಿಯಾಗಲಿಲ್ಲ. ಬೇರೆ ಬೇರೆ ವಿಮಾನ ಸೇವೆ ಆರಂಭವಾದರೂ ಹೆಚ್ಚೆಂದರೆ ಒಂದು ತಿಂಗಳು ಉಳಿಯುತ್ತಿರಲಿಲ್ಲ. ನಾನು ಸಂಸದನಾಗಿ ಬಂದ ಮೇಲೆ ವಿಮಾನ ಸೇವೆ ಹೆಚ್ಚಿನ ಆದ್ಯತೆ ನೀಡಿದ್ದು, ಸದ್ಯ ಗೋವಾ, ಕೊಚ್ಚಿನ್‌, ಹೈದರಾಬಾದ್‌, ಬೆಳಗಾವಿ ಸೇರಿದಂತೆ ಎಂಟು ನಗರಗಳಿಗೆ ವಿಮಾನ ಸೇವೆ ಶೀಘ್ರವೇ ಆರಂಭವಾಗಲಿವೆ,'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

''ವಿಮಾನ ನಿಲ್ದಾಣದ ಮೇಲೆ ರನ್‌ ವೇ ಹಾಗೂ ಕೆಳಗೆ ಅಂಡರ್‌ಪಾಸ್‌ ಬರಲಿದೆ. ಇದಕ್ಕೆ 430 ಕೋಟಿ ಬಿಡುಗಡೆಯಾಗಿದೆ. ಇನ್ನು 3 ವರ್ಷದಲ್ಲಿ 25 ವಿಮಾನ ಮೈಸೂರಿನಲ್ಲಿ ಹಾರಾಟ ನಡೆಸಲಿವೆ,'' ಎಂದರು.

ಎಕ್ಸ್‌ಪ್ರೆಸ್‌ ಲೈನ್‌ ಆಗಲಿಲ್ಲ: ''1998ರಲ್ಲೇ ಅಂದಿನ ಪ್ರಧಾನಿ ವಾಜಪೇಯಿ ಮೈಸೂರು ಅಭಿವೃದ್ಧಿಗೆ ಎಸ್‌ಟಿಪಿಐ ಹಾಕಿಕೊಟ್ಟರೂ ಸಮರ್ಪಕವಾಗಿ ಅನುಷ್ಠಾನಗೊಳ್ಳಲಿಲ್ಲ. ಸದ್ಯ 2021ರ ವೇಳೆಗೆ ಮೈಸೂರು-ಬೆಂಗಳೂರು ನಡುವೆ 10 ಲೈನ್‌ ಹೈವೆ ಕಾಮಗಾರಿ ಮುಕ್ತಾಯಗೊಳ್ಳಲಿದೆ. ಇದಕ್ಕಾಗಿ 11 ಬೇಸ್‌ ಕ್ಯಾಂಪ್‌ಗಳನ್ನು ಮಾಡಲಾಗಿದೆ. ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ ಸೇರಿದಂತೆ 6 ಸಿಟಿಗಳಿಗೆ 53 ಕಿ.ಮೀ. ಬೈಪಾಸ್‌ ರಸ್ತೆ ಮಾಡಲಾಗುತ್ತಿದೆ. ಭೂಮಿ ವಶಪಡಿಸಿಕೊಳ್ಳಲು 3 ಸಾವಿರ ಕೋಟಿ ನೀಡಲಾಗಿದೆ. ಯಾವುದೇ ತಕರಾರು ಎದುರಾಗಿಲ್ಲ. 1994ರಲ್ಲಿ ಎಚ್‌.ಡಿ.ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಮೈಸೂರು-ಬೆಂಗಳೂರು ನಡುವೆ ನೈಸ್‌ ಎಕ್ಸ್‌ಪ್ರೆಸ್‌ ಕಾರಿಡಾರ್‌ ಮಾಡುತ್ತೇನೆ ಎಂದಿದ್ದರು. ಆದರೆ, 25 ವರ್ಷವಾದರೂ ಅದು ಸಾಧ್ಯವಾಗಲೇ ಇಲ್ಲ,'' ಎಂದು ದೂರಿದರು.

''ಮೈಸೂರು-ಕೊಡಗು ಕ್ಷೇತ್ರಕ್ಕೆ ಬಿಜೆಪಿ ನನಗೆ ಟಿಕೆಟ್‌ ಘೋಷಿಸಿದಾಗ ರಾಜಕೀಯದಂತೆ ಮೈಸೂರು ನಗರ ಕೂಡ ಹೊಸದಾಗಿತ್ತು. ಮೈಸೂರಿಗೆ ಎಲ್ಲಿಗಾದರೂ ಹೋಗಬೇಕಾದರೆ ಗೂಗಲ್‌ ಮ್ಯಾಪ್‌ ಹಾಕಿಕೊಂಡು ಹೋಗುತ್ತಿದ್ದೆ. ಮೈಸೂರಿನಲ್ಲಿ 12 ಎಂಜಿನಿಯರಿಂಗ್‌ ಕಾಲೇಜು, 85 ಪದವಿ ಕಾಲೇಜು, ಪ್ರವಾಸೋದ್ಯಮಕ್ಕೆ ಪೂರಕವಾದ ಎಲ್ಲಾ ವಾತಾವರಣವಿದೆ. ಇಂಡಸ್ಟ್ರಿಗಳಿದ್ದರೂ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಯಾಕೆ? ಎಂದು ಬಹುತೇಕರು ನನ್ನನ್ನು ಪ್ರಶ್ನಿಸಿದರು. ಇದಕ್ಕೆ ಮುಖ್ಯ ಕಾರಣ ಸಂಪರ್ಕ ವ್ಯವಸ್ಥೆ ಎಂದು ತಿಳಿದು ಬಂತು. ಪ್ರತಿದಿನ ಮೈಸೂರು-ಬೆಂಗಳೂರಿನ ನಡುವೆ 36 ಸಾವಿರ ವಾಹನಗಳು ಓಡಾಡುವುದು ತಿಳಿದು ಬಂತು. ಇದರಿಂದ ಟ್ರಾಫಿಕ್‌ ಜಾಮ್‌ ಆಗುತ್ತಿತ್ತು. ಅಲ್ಲಿಂದ ರಸ್ತೆ, ರೈಲು, ವಿಮಾನ ಸಂಪರ್ಕ ವ್ಯವಸ್ಥೆ ಕಲ್ಪಿಸಲು ನಾನಾ ಯೋಜನೆಗಳನ್ನು ಹಮ್ಮಿಕೊಂಡು ಬಂದೆ,'' ಎಂದು ಹೇಳಿದರು.

''ನಾನು ಸಂಸದನಾಗಿ ಬಂದಾಗ ರಿಂಗ್‌ ರೋಡ್‌ ಕಾಮಗಾರಿ ನಿಂತು ಹೋಗಿತ್ತು. ನನ್ನ ಅವಧಿಯಲ್ಲಿ ಸಂಪೂರ್ಣ ಕಾಮಗಾರಿ ನಡೆಸಿ ರಾಷ್ಟ್ರೀಯ ಹೆದ್ದಾರಿಯಾಗಿ ಗುರುತಿಸಿಕೊಳ್ಳುವಂತೆ ಮಾಡಿದೆ. ಇದೀಗ 177 ಕೋಟಿ ಮತ್ತೆ ಬಿಡುಗಡೆಯಾಗಿದ್ದು, ರಿಂಗ್‌ ರಸ್ತೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು. ಮಂಡ್ಯಕ್ಕೂ ಪಾಸ್‌ಪೋರ್ಟ್‌ ಕೇಂದ್ರ ಬರಲಿದೆ,'' ಎಂದರು.

ಇತಿಹಾಸ ತಜ್ಞ ಈಚನೂರು ಕುಮಾರ್‌, ಭಾಸ್ಕರ್‌ ಕಳಲೆ, ಘನಶ್ಯಾಮ್‌ ಮುರಳಿ, ರವಿಶಂಕರ್‌ ಡಿ. ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ