ಆ್ಯಪ್ನಗರ

ಟಿಪ್ಪು ಜಯಂತಿಗೆ ಗೈರಾಗಿರುವ ಸಿಎಂ, ಡಿಸಿಎಂ ಜತೆ ಮಾತಾಡುವೆ: ಸಿದ್ದರಾಮಯ್ಯ

ರಾಜ್ಯ ಸರಕಾರ ಟಿಪ್ಪು ಜಯಂತಿಯನ್ನು ಆಚರಿಸಿದೆ. ಸಚಿವರು ಟಿಪ್ಪು ಜಯಂತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಆದರೂ, ಸಿಎಂ ಹಾಗೂ ಡಿಸಿಎಂ ಅವರ ಜೊತೆ ಈ ಕುರಿತು ಮಾತಾಡುತ್ತೇನೆ. ತಾವು ಮುಖ್ಯಮಂತ್ರಿಯಾದಾಗಲೂ ಟಿಪ್ಪು ಜಯಂತಿ ಅಂಗವಾಗಿ ಮೆರವಣಿಗೆ ನಡೆಸುವುದನ್ನು ನಿರ್ಬಂಧಿಸಿದ್ದೆವು. ಈಗಲೂ ನಿರ್ಬಂಧಿಸಲಾಗಿದೆ ಎಂದರು.

Vijaya Karnataka Web 10 Nov 2018, 6:41 pm
ಮೈಸೂರು: ಟಿಪ್ಪು ಜಯಂತಿ ಆಚರಣೆಗೆ ಗೈರು ಹಾಜರಾಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರ ಚರ್ಚಿಸುವೆ ಎಂದು ರಾಜ್ಯದ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Vijaya Karnataka Web siddu2


ಶನಿವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅನಾರೋಗ್ಯದ ಕಾರಣದಿಂದ ಕುಮಾರಸ್ವಾಮಿ ಟಿಪ್ಪು ಜಯಂತಿ ಸಮಾರಂಭದಲ್ಲಿ ಪಾಲ್ಗೊಂಡಿಲ್ಲ. ಡಾ.ಪರಮೇಶ್ವರ್ ಅವರು ಪೂರ್ವನಿಗದಿತ ಕಾರ್ಯಕ್ರಮದಿಂದಾಗಿ ಸಿಂಗಾಪೂರ್‌ಗೆ ತೆರಳಿದ್ದಾರೆ. ರಾಜ್ಯ ಸರಕಾರ ಟಿಪ್ಪು ಜಯಂತಿಯನ್ನು ಆಚರಿಸಿದೆ. ಸಚಿವರು ಟಿಪ್ಪು ಜಯಂತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಆದರೂ, ಸಿಎಂ ಹಾಗೂ ಡಿಸಿಎಂ ಅವರ ಜೊತೆ ಈ ಕುರಿತು ಮಾತಾಡುತ್ತೇನೆ. ತಾವು ಮುಖ್ಯಮಂತ್ರಿಯಾದಾಗಲೂ ಟಿಪ್ಪು ಜಯಂತಿ ಅಂಗವಾಗಿ ಮೆರವಣಿಗೆ ನಡೆಸುವುದನ್ನು ನಿರ್ಬಂಧಿಸಿದ್ದೆವು. ಈಗಲೂ ನಿರ್ಬಂಧಿಸಲಾಗಿದೆ ಎಂದರು.

ಟಿಪ್ಪು ಜಯಂತಿ ಸಮರ್ಥಿಸಿರುವ ತಮ್ಮನ್ನು ವಿರೋಧಿಗಳು ‘ಸಿದ್ದು ಖಾನ್’ ಎಂದು ಟೀಕಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈ ಹಿಂದೆ ಯಡಿಯೂರಪ್ಪ ಅವರು ಕೆಜೆಪಿಯಲ್ಲಿದ್ದಾಗ ಟಿಪ್ಪು ಜಯಂತಿ ಆಚರಿಸಿದ್ದರು. ಟಿಪ್ಪು ರೀತಿ ವೇಷಭೂಷಣ ತೊಟ್ಟಿದ್ದರು. ಹಾಗಿದ್ದರೆ ಅವರನ್ನು ‘ಯಡ್ಡಿ ಖಾನ್’ ಎಂದು ಕರೆಯಲೇ? ಎಂದು ಪ್ರಶ್ನಿಸಿದರು.

ಸಿದ್ದು ಖಾನ್‌ಗೆ ಪ್ರತಿಯಾಗಿ ಯಡ್ಡಿ ಖಾನ್ ಎಂದು ಕರೆಯಲೇ?

ಮಾಜಿ ಸಿಎಂ ಜಗದೀಶ ಶೆಟ್ಟರ್, ಶಾಸಕರಾದ ಅಶೋಕ್, ಶ್ರೀರಾಮುಲು, ಸಂಸದ ಪಿ.ಸಿ.ಮೋಹನ್ ಅವರೂ ಟಿಪ್ಪು ರೀತಿ ವೇಷ ಧರಿಸಿ ಹೊಗಳಿದ್ದರು. ಹಾಗಿದ್ದರೆ ಇವರನ್ನು ಏನಂತ ಈಗ ಕರೆಯಲಿ? ಇವರೆಲ್ಲಾ ಗೋಮುಖ ವ್ಯಾಘ್ರಗಳು ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಇದಕ್ಕೂ ಮುನ್ನ ಇಲ್ಲಿನ ಪುರಭವನದಲ್ಲಿ ನಡೆದ ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯಘಿ, ತಮ್ಮನ್ನು ಟಿಪ್ಪುಗಿಂತ ಮತಾಂಧ ಎಂದು ಟೀಕಿಸಿದ ಸಂಸದ ನಳಿನ್ ಕುಮಾರ ಕಟೀಲು ಅವರಿಗೆ ತೀಕ್ಷ್ಣವಾಗಿ ಪ್ರತ್ಯುತ್ತರ ನೀಡಿದರು.

‘‘ಯಾರು ಕೋಮುವಾದಿಯೋ ಅವರೇ ನನ್ನನ್ನು ಮತಾಂಧ ಅಂತ ಟೀಕಿಸಿದ್ದಾರೆ. ಕೋಮುವಾದಿ ಅಂದ್ರೆ ಇನ್ನೊಂದು ಧರ್ಮವನ್ನು ದ್ವೇಷಿಸುವವರು ಅಂದ್ರೆ ಮನುಷ್ಯರನ್ನು ದ್ವೇಷಿಸುವವರು. ನನ್ನನ್ನು ಮತಾಂಧ ಅಂತ ಕರೆದರೆ ಇವರನ್ನು ಅಮಾನವೀಯರು ಅಂತ ಕರೆಯಬೇಕಾಗುತ್ತದೆ. ದಯೆಯೇ ಧರ್ಮದ ಮೂಲವಯ್ಯ ಅಂದವರು ಬಸವಣ್ಣನವರು. ಹೀಗಿರುವಾಗ ಮತಾಂಧರು ಹೇಗೆ ಧರ್ಮದ ಅನುಯಾಯಿಗಳಾಗುತ್ತಾರೆ?’’ ಎಂದು ಸಿದ್ದರಾಮಯ್ಯ ಕುಟುಕಿದರು. ಕುವೆಂಪು ಅವರು ರಚಿಸಿರುವ ನಾಡಗೀತೆಯನ್ನು ಉಲ್ಲೇಖಿಸಿ ‘ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಸೆಳೆಯುವ ಕಂಗಳ ನೋಟ’ ಎನ್ನುವ ಸಾಲುಗಳನ್ನು ಒತ್ತಿ ಹೇಳಿದರು.

ತಾವು ಮುಖ್ಯಮಂತ್ರಿಯಾಗಿದ್ದಾಗ ಟಿಪ್ಪು ಜಯಂತಿ ಒಂದನ್ನೇ ಆಚರಿಸಿಲಿಲ್ಲಘಿ. ದಾಸರು, ಶರಣರು, ಸ್ವಾತಂತ್ರ್ಯ ಸೇನಾನಿಗಳ ಜಯಂತಿ ಆಚರಣೆ ಘೋಷಿಸಿದ್ದನ್ನು ಮೆಲುಕು ಹಾಕಿದರು. ಟಿಪ್ಪು ಕರ್ನಾಟಕದವನು. ಬ್ರಿಟಿಷರ ವಿರುದ್ಧ ನಾಲ್ಕು ಯುದ್ದಗಳನ್ನು ಮಾಡಿದ. ಬ್ರಿಟಿಷರಿಗೆ ಎಲ್ಲರೂ ಶರಣಾದರೂ ಟಿಪ್ಪು ಶರಣಾಗಲಿಲ್ಲ. ಬ್ರಿಟಿಷರ ವಿರುದ್ಧ ಹೋರಾಡುತ್ತಲೇ ವೀರ ಮರಣ ಅಪ್ಪಿದ. ಸತ್ಯ ಹೇಳಲು ಯಾವತ್ತೂ ಹಿಂಜರಿಯಬಾರದು. ಸತ್ಯ ಹೇಳೋದೇ ನಮ್ಮ ಕಾಯಕವಾಗಬೇಕು. ಟಿಪ್ಪು ಕನ್ನಡ ವಿರೋಧಿಯಾಗಿರಲಿಲ್ಲ. ಆತನೊಬ್ಬ ಅಪ್ಪಟ ದೇಶಪ್ರೇಮಿ. ಇಂಥವರ ಜಯಂತಿ ಆಚರಿಸಿದರೆ ತಪ್ಪೇನು? ಇಂಥವರ ಜಯಂತಿಗಳು ಜಾತಿಗಳಿಗೆ ಸೀಮಿತವಾಗಬಾರದು ಎಂದು ಸಿದ್ದರಾಮಯ್ಯ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ