ಆ್ಯಪ್ನಗರ

ಅಡಗೂರು ಆಸ್ಪತ್ರೆಯಲ್ಲಿ ಕಾಯಂ ವೈದ್ಯರೇ ಇಲ್ಲ

ತಾಲೂಕಿನ ಅಡಗೂರು ಗ್ರಾಮದ ಆಸ್ಪತ್ರೆಗೆ ಹಲವು ವರ್ಷಗಳಿಂದ ಕಾಯಂ ವೈದ್ಯರೇ ಇಲ್ಲ. ಜ್ವರ, ಮೈಕೈ ನೋವಿಗೂ ದೂರದ ಹಂಪಾಪುರ, ಇಲ್ಲವೆ ಕೃಷ್ಣರಾಜನಗರ ಆಸ್ಪತ್ರೆಗಳಿಗೆ ಎಡತಾಕುವಂತಹ ಪರಿಸ್ಥಿತಿ.

Vijaya Karnataka 4 Mar 2019, 5:00 am
ರಾಜೇಂದ್ರ ಕೃಷ್ಣರಾಜನಗರ : ತಾಲೂಕಿನ ಅಡಗೂರು ಗ್ರಾಮದ ಆಸ್ಪತ್ರೆಗೆ ಹಲವು ವರ್ಷಗಳಿಂದ ಕಾಯಂ ವೈದ್ಯರೇ ಇಲ್ಲ. ಜ್ವರ, ಮೈಕೈ ನೋವಿಗೂ ದೂರದ ಹಂಪಾಪುರ, ಇಲ್ಲವೆ ಕೃಷ್ಣರಾಜನಗರ ಆಸ್ಪತ್ರೆಗಳಿಗೆ ಎಡತಾಕುವಂತಹ ಪರಿಸ್ಥಿತಿ.
Vijaya Karnataka Web adgoor hospital
ಅಡಗೂರು ಆಸ್ಪತ್ರೆಯಲ್ಲಿ ಕಾಯಂ ವೈದ್ಯರೇ ಇಲ್ಲ


ಜಾ.ದಳ ರಾಜ್ಯಾಧ್ಯಕ್ಷ , ಹುಣಸೂರು ಶಾಸಕ ಎಚ್‌.ವಿಶ್ವನಾಥ್‌ ತವರೂರಾದ ಇಲ್ಲಿಗೆ ವಿಶ್ವನಾಥ್‌ ತಮ್ಮ ಅಧಿಕಾರವಧಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತಂದರು. ಆದರೆ ಈ ಆಸ್ಪತ್ರೆ ಇಂದಿಗೂ ಜನತೆಯ ಆರೋಗ್ಯ ಕಾಪಾಡುವಲ್ಲಿ ಸಫಲವಾಗಿಲ್ಲ ಎಂಬುದು ನೋವಿನ ಸಂಗತಿ.

ಅಡಗೂರು, ಮಾರಗೌಡನಹಳ್ಳಿ, ದೊಡ್ಡಕೊಪ್ಪಲು, ಕಾರ್ಗಳ್ಳಿ ಕೊಪ್ಪಲು, ಗಳಿಗೆಕೆರೆ, ಅರ್ಜುನಹಳ್ಳಿ, ಕಂಚಿನಕೆರೆ ಸೇರಿದಂತೆ ಈ ಭಾಗದ ನೂರಾರು ಜನರಿಗೆ ಆರೋಗ್ಯ ಸೌಲಭ್ಯ ಕಲ್ಪಿಸಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಹಲವು ವರ್ಷಗಳಿಂದ ಆಸ್ಪತ್ರೆಗೆ ಕಾಯಂ ವೈದ್ಯರಿಲ್ಲದ ಕಾರಣ ವಾರದಲ್ಲಿನ ಎರಡು ದಿನ ತಾಲೂಕಿನ ಯಾವುದಾದರೊಂದು ಆಸ್ಪತ್ರೆಯ ವೈದ್ಯರು ಬಂದು ಕರ್ತವ್ಯ ನಿರ್ವಹಿಸುವಂತೆ ನಿಯಮ ಮಾಡಲಾಗಿತ್ತು. ಈ ವೇಳೆ ವೈದ್ಯರು ಬಂದರಷ್ಟೇ ತಪಾಸಣೆ, ಇಲ್ಲದಿದ್ದರೆ ರೋಗಿಗಳಿಗೆ ಕಾದು ವಾಪಸ್ಸಾಗಬೇಕಾದ ಸ್ಥಿತಿ. ಕೆಲವು ದಿನಗಳ ಹಿಂದೆ ಒಬ್ಬ ಗುತ್ತಿಗೆ ಆಧಾರದ ವೈದ್ಯರನ್ನು ನೇಮಕ ಮಾಡಿದ್ದು ಅವರೂ ಸಮಯಕ್ಕೆ ಸರಿಯಾಗಿ ಬಾರದ ಕಾರಣ ಈ ಭಾಗದ ಜನತೆ ಅಗತ್ಯ ಚಿಕಿತ್ಸೆಗೆ ಪರದಾಡುವಂತಾಗಿದೆ.

ಪ್ರತಿದಿನ ಹತ್ತಾರು ರೋಗಿಗಳು ಬರುವ ಇಲ್ಲಿ ಅಗತ್ಯ ವೈದ್ಯರ ಸೇವೆ ಇಲ್ಲದ ಕಾರಣ ವೈದ್ಯರಿಗಾಗಿ ಕಾದು ಕಾದು ಸುಸ್ತಾಗಿ ಕೊನೆಗೆ ಇತ್ತ ಚಿಕಿತ್ಸೆಯೂ ಇಲ್ಲದೆ ಅತ್ತ ಸಮಯವನ್ನೂ ಹಾಳುಮಾಡಿಕೊಂಡು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಾ ತೆರಳುವುದು ಮಾಮೂಲಿಯಾಗಿದೆ.

ವೈದ್ಯರಿಲ್ಲದ ಸಂದರ್ಭ ಇಲ್ಲಿನ ದಾದಿಯರು ವೈದ್ಯರ ಕೆಲಸ ಮಾಡುವಂತಾಗಿದ್ದು, ಕೆಲವು ಪ್ರಾಥಮಿಕ ಚಿಕಿತ್ಸೆಗಳನ್ನು ಮಾತ್ರ ನೀಡಿ ರೋಗಿಗಳನ್ನು ಕಳುಹಿಸುವ ಕೆಲಸ ನಡೆಯುತ್ತಿದೆ. ಕೇಂದ್ರದಲ್ಲಿ ಸಣ್ಣಪುಟ್ಟ ಕಾಯಿಲೆಗಳಿಗೂ ಅಗತ್ಯ ಔಷಧ ದೊರೆಯದೆ ರೋಗಿಗಳು ಪರದಾಡುವಂತಾಗಿದೆ.

ತುರ್ತು ಚಿಕಿತ್ಸೆಯಂಥÜ ಯಾವುದೇ ಅಗತ್ಯ ಸೇವೆ ಇಲ್ಲಿ ದೊರೆಯದಾಗಿದೆ. ಏನಾದರೂ ಬೆಂಕಿ ಅವಘಡ ಸಂಭವಿಸಿದರೆ ಅದನ್ನು ಅರಿಸಲು ಇರುವ ಅಗತ್ಯ ಸಾಧನದ ಅನಿಲ ರೀಫಿಲ್ಲಿಂಗ್‌ ಮಾಡಿಸಿ 6 ವರ್ಷಗಳೇ ಕಳೆದಿದೆ. ಇದು ಆಸ್ಪತ್ರೆ ಸ್ಥಿತಿ ಯಾವ ಮಟ್ಟದಲ್ಲಿದೆ ಎಂಬುದಕ್ಕೆ ಹಿಡಿದ ಕನ್ನಡಿಯಾಗಿದೆ.

ಹೆಸರಿಗೆ ಮಾತ್ರ ಆಸ್ಪತ್ರೆಯಾಗಿರುವ ಇಲ್ಲಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಕಾಯಂ ವೈದ್ಯರನ್ನು ನೇಮಕ ಮಾಡಿ ಅಗತ್ಯ ಸಿಬ್ಬಂದಿ ಮತ್ತು ಔಷಧಗಳನ್ನು ನೀಡುವಂತೆ ಜನತೆ ಒತ್ತಾಯಿಸಿದ್ದಾರೆ.

ವಸತಿ ಗೃಹ ಪಾಳು: ಆಸ್ಪತ್ರೆ ಹಲವು ವರ್ಷಗಳಲ್ಲಿ ಹಲವಾರು ಬಾರಿ ದುರಸ್ತಿಗೊಂಡಿದ್ದು, ಆಸ್ಪತ್ರೆ ಪ್ರಾರಂಭವಾದಾಗಿನಿಂದಲೂ ಯಾವ ವೈದ್ಯರೂ ವಾಸವಿರದೇ ಪಾಳುಬಿದ್ದಿರುವ ವೈದ್ಯರ ವಸತಿಗೃಹಕ್ಕೆ ಸುಣ್ಣ ಬಣ್ಣ ಬಳಿಯಲಾಗಿದೆ. ಅಲ್ಲದೆ ವೈದ್ಯರ ವಸತಿ ಗೃಹ ಎಂಬ ನಾಮಫಲಕವನ್ನು ಬಿಟ್ಟು ಸುಣ್ಣ ಬಣ್ಣ ಬಳಿಯಲಾಗಿದೆ. ಇದೊಂದು ಬಿಲ್‌ ಮಾಡುವ ನೆಪಮಾತ್ರದ ಕೆಲಸಕ್ಕೆ ಸಾಕ್ಷಿಯಾಗಿದೆ ಎಂಬುದು ಜನತೆಯ ಆರೋಪ.


ಅಡಗೂರು ಆಸ್ಪತ್ರೆಗೆ ಹಲವು ದಿನಗಳಿಂದ ವೈದ್ಯರಿಲ್ಲದ ಕಾರಣ ಗುತ್ತಿಗೆ ಆಧಾರದ ವೈದ್ಯರನ್ನು ನೇಮಕ ಮಾಡಲಾಗಿತ್ತು. ಆದರೆ ಈಗ ರಾಜ್ಯ ಕಮಿಷನರ್‌ ವತಿಯಿಂದ ಹೊಸದಾಗಿ ವೈದ್ಯರನ್ನು ನೇಮಕ ಮಾಡಲಾಗಿದ್ದು, ವೈದ್ಯರ ಕೊರತೆ ಶೀಘ್ರದಲ್ಲೆ ನೀಗಲಿದೆ. ಅಲ್ಲದೆ ಅಗತ್ಯ ಔಷಧ ಮತ್ತು ಸಿಬ್ಬಂದಿ ನೀಡಲಾಗುವುದು.

-ಡಾ.ಬಸವರಾಜು, ಜಿಲ್ಲಾ ಆರೋಗ್ಯಾಧಿಕಾರಿ, ಮೈಸೂರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ