ಆ್ಯಪ್ನಗರ

ಹುಲಿ ಹತ್ಯೆ ಮಾಡಿ, ಉಗುರು, ಕೋರೆ ಹಲ್ಲು ಕದ್ದಿದ್ದ ಮತ್ತೊಬ್ಬ ಆರೋಪಿ ಸೆರೆ; ಬಂಡೀಪುರ ಸೂಪರ್‌ ಶ್ವಾನ ರಾಣಾನಿಂದ ಸಿಕ್ಕಿಬಿದ್ದಿದ್ದ ಮೊದಲ ಕಳ್ಳ

ಬಂಡೀಪುರ ಉದ್ಯಾನದ ಶ್ವಾನ ರಾಣಾನ ಚಾಣಾಕ್ಷತನದಿಂದ ತಟ್ಟೆಕೆರೆ ಹಾಡಿ ಬಳಿಯ ಆರೋಪಿ ಸಂತೋಷ್‌ನನ್ನು ಬಂಧಿಸಿ 7 ಉಗುರುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆತ ನೀಡಿದ ಸುಳಿವಿನ ಮೇರೆಗೆ ಉಳಿದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು.

Vijaya Karnataka Web 1 Sep 2020, 8:41 pm
ಹುಣಸೂರು: ನಾಗರಹೊಳೆ ಉದ್ಯಾನದ ಕಲ್ಲಹಳ್ಳ ವಲಯದ ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು, ಹುಲಿಯ ನಾಲ್ಕು ಉಗುರು, ಎರಡು ಕೋರೆ ಹಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಕೊಡಗಿನ ವಿರಾಜಪೇಟೆ ತಾಲೂಕಿನ ಬಾಳೆಲೆ ಹೋಬಳಿಯ ನಿಟ್ಟೂರಿನ ವಟ್ಟಂಗಡ ರಂಜು ಅಲಿಯಾಸ್‌ ಬಿದ್ದಪ್ಪ ಬಂಧಿತ ಆರೋಪಿ. ಆ. 26ರಂದು ಕಲ್ಲಹಳ್ಳ ವಲಯದಲ್ಲಿ 6 ವರ್ಷದ ಗಂಡು ಹುಲಿಯನ್ನು ಹತ್ಯೆಗೈದು, ಹುಲಿಯ ನಾಲ್ಕು ಕಾಲುಗಳನ್ನು ಕತ್ತರಿಸಿ, ಕೋರೆ ಹಲ್ಲುಗಳನ್ನು ಹೊತ್ತೊಯ್ದಿದ್ದರು.

ಬಂಡೀಪುರ ಉದ್ಯಾನದ ಶ್ವಾನ ರಾಣಾನ ಚಾಣಾಕ್ಷತನದಿಂದ ತಟ್ಟೆಕೆರೆ ಹಾಡಿ ಬಳಿಯ ಆರೋಪಿ ಸಂತೋಷ್‌ನನ್ನು ಬಂಧಿಸಿ 7 ಉಗುರುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆತ ನೀಡಿದ ಸುಳಿವಿನ ಮೇರೆಗೆ ಉಳಿದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ಮೊಬೈಲ್‌ ಜಾಡು ಹಿಡಿದು ರಂಜುನನ್ನು ರಾಮನಗರದ ಬಸ್‌ ನಿಲ್ದಾಣದ ಬಳಿ ಆ. 31ರ ರಾತ್ರಿ ಬಂಧಿಸಿ ಕರೆತಂದು ವಿಚಾರಣೆಗೊಳಪಡಿಸಿ, ಆತನ ಮನೆ ಹತ್ತಿರದ ಕಾಫಿ ತೋಟದಲ್ಲಿ ಹುದುಗಿಸಿಟ್ಟಿದ್ದ ಹುಲಿಯ ಹಲ್ಲು ಹಾಗೂ ಉಗುರುಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ಉಳಿದ ಆರೋಪಿಗಳ ಬಂಧನಕ್ಕೂ ಬಲೆ ಬೀಸಲಾಗಿದೆ. ಈವರೆಗೆ 11 ಉಗುರು ಸಿಕ್ಕಿದ್ದು, ಇನ್ನೂ 7 ಉಗುರುಗಳು ಪತ್ತೆಯಾಗಬೇಕಿದೆ ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಡಿ.ಮಹೇಶ್‌ಕುಮಾರ್‌ ತಿಳಿಸಿದ್ದಾರೆ.

ಎಸಿಎಫ್‌ಗಳಾದ ಪೌಲ್‌ ಆಂಟೋಣಿ, ಸತೀಶ್‌, ಆರ್‌ಎಫ್‌ಒಗಳಾದ ಗಿರೀಶ್‌ ಜಿ.ಚೌಗುಲೆ, ಸಂತೋಷ್‌ ಹೂಗಾರ್‌, ಅಮಿತ್‌ಗೌಡ, ಡಿಆರ್‌ಎಫ್‌ಒ ಯೋಗೀಶ್‌, ಅರಣ್ಯ ರಕ್ಷಕರಾದ ಭರಮಪ್ಪ, ಗಣೇಶ್‌, ವಾಹನ ಚಾಲಕರಾದ ನಿರಾಲ್‌ಕುಮಾರ್‌, ಬಸವರಾಜು ಕಾರ್ಯಾಚರಣೆಯಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ