ಆ್ಯಪ್ನಗರ

ತೂಕದಲ್ಲೂ ಅರ್ಜುನನೇ ಬಲಭೀಮ

ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊರಲಿರುವ ಅರ್ಜುನ ಸೇರಿದಂತೆ ಆರು ಆನೆಗಳ ತೂಕದ ಪರಿಶೀಲನೆಯನ್ನು ಗುರುವಾರ ನಡೆಸಿದ್ದು, ಈ ಬಾರಿಯೂ ಅರ್ಜುನ ಬಲಶಾಲಿಯಾಗಿ ಗುರುತಿಸಿಕೊಂಡಿದ್ದಾನೆ.

Vijaya Karnataka 7 Sep 2018, 5:00 am
ದಸರಾ: ಆರು ಆನೆಗಳ ತೂಕ ಪರಿಶೀಲನೆ
Vijaya Karnataka Web arjuna is right in weight
ತೂಕದಲ್ಲೂ ಅರ್ಜುನನೇ ಬಲಭೀಮ


ಮೈಸೂರು:
ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊರಲಿರುವ ಅರ್ಜುನ ಸೇರಿದಂತೆ ಆರು ಆನೆಗಳ ತೂಕದ ಪರಿಶೀಲನೆಯನ್ನು ಗುರುವಾರ ನಡೆಸಿದ್ದು, ಈ ಬಾರಿಯೂ ಅರ್ಜುನ ಬಲಶಾಲಿಯಾಗಿ ಗುರುತಿಸಿಕೊಂಡಿದ್ದಾನೆ.

ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಆನೆಗಳಿಗೆ ತೂಕ ಪರಿಶೀಲನೆ ನಡೆಸುವುದರ ಜತೆಗೆ, ತಾಲೀಮು ಕೂಡಾ ನಡೆಸಲಾಯಿತು. ಅ.19ರಂದು ನಡೆಯಲಿರುವ ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊರಲಿರುವ ಅರ್ಜುನ ಸೇರಿ 12 ಆನೆಗಳು ಭಾಗವಹಿಸಲಿದ್ದು, ಜಂಬೂ ಸವಾರಿವರೆಗೆ ನಿತ್ಯ ಮುಂಜಾನೆ ಹಾಗೂ ಸಂಜೆ ಹೊತ್ತು ತಾಲೀಮು ನಡೆಯಲಿದೆ.

ಗುರುವಾರ ಬೆಳಗ್ಗೆ ಪಶು ವೈದ್ಯ ಡಾ.ನಾಗರಾಜ್‌ ಅವರು ಆನೆಗಳ ಆರೋಗ್ಯ ಸ್ಥಿತಿ ತಪಾಸಣೆ ಮಾಡಿದ ಬಳಿಕ ತೂಕ ಪರಿಶೀಲನೆ ಮಾಡಲಾಯಿತು. ಅರಮನೆ ಆವರಣದಿಂದ ಹೊರಟ ಆನೆಗಳ ತಂಡದಲ್ಲಿ ಅರ್ಜುನ ಮೊದಲಿಗನಾಗಿ ಗಾಂಭೀರ್ಯದ ಹೆಜ್ಜೆ ಹಾಕುತ್ತಾ ಸಾಗಿದರೆ, ವರಲಕ್ಷ್ಮಿ, ಚೈತ್ರಾ, ಗೋಪಿ, ವಿಕ್ರಮ, ಧನಂಜಯ ಆನೆಗಳು ಅರಮನೆಯ ಬಲರಾಮ ದ್ವಾರದ ಮೂಲಕ ಹೊರಬಂದು ಚಾಮರಾಜೇಂದ್ರ ವೃತ್ತ, ಕೆ.ಆರ್‌. ವೃತ್ತ, ಸಯ್ಯಾಜಿರಾವ್‌ ರಸ್ತೆ ಹಾಗೂ ಧನ್ವಂತರಿ ರಸ್ತೆಯಲ್ಲಿ ಸಾಗಿದವು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಆನೆಗಳನ್ನು ನೋಡಿ ಸಂಭ್ರಮಿಸಿದರೆ, ಪ್ರತಿವರ್ಷದಂತೆ ಈ ಬಾರಿಯು ದೇವರಾಜ ಮಾರುಕಟ್ಟೆ ಅಂಗಡಿಯವರು ಬಾಳೆಹಣ್ಣು ನೀಡಿದರು.

ತೂಕದಲ್ಲೂ ಅರ್ಜುನ ಹೆಚ್ಚು: ಈ ವೇಳೆ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಮ್‌ ಅಂಡ್‌ ಕೋ ವೇ ಬ್ರಿಡ್ಜ್‌ನಲ್ಲಿ ದಸರಾ ಆನೆಗಳನ್ನು ತೂಕ ಮಾಡಲಾಯಿತು. ಕ್ಯಾಪ್ಟನ್‌ ಅರ್ಜುನ ಬರೋಬ್ಬರಿ 6150 ಕೆ.ಜಿ. ತೂಗುವ ಮೂಲಕ ಎಲ್ಲಾ ಆನೆಗಳಿಗಿಂತಲೂ ತಾನೇ ಬಲಶಾಲಿ ಎಂದು ಮತ್ತೊಮ್ಮೆ ಸಾಬೀತು ಪಡಿಸಿದನು. ಕಳೆದ ವರ್ಷ 5035 ಕೆಜಿ ಇದ್ದ ಅರ್ಜುನ ಈ ಬಾರಿ 500 ಕೆಜಿ ಜಾಸ್ತಿ ಇರುವುದು ಗಮನಾರ್ಹ. ಮುಂದಿನ ದಿನಗಳಲ್ಲಿ ಉತ್ತಮ ಆರೈಕೆಯಿಂದ ಅರ್ಜುನ ಮತ್ತಷ್ಟು ತೂಕ ಹೆಚ್ಚಿಸಿಕೊಳ್ಳುವ ಸಾಧ್ಯತೆಯಿದೆ. ಚೈತ್ರಾ-2920, ವರಲಕ್ಷ್ಮಿ-3120, ಧನಂಜಯ-4045, ಗೋಪಿ- 4435, ವಿಕ್ರಮ-3905 ಕೆ.ಜಿ. ತೂಗಿದವು. ನಂತರ, ಎಲ್ಲ ಆನೆಗಳನ್ನು ಅದೇ ಮಾರ್ಗದಲ್ಲಿ ತಾಲೀಮು ಮಾಡಿಸಿಕೊಂಡು ಅರಮನೆಗೆ ಕರೆತರಲಾಯಿತು.

ವಿಶೇಷ ಆತಿಥ್ಯ: ಆನೆಗಳಿಗೆ ತೂಕ ಮಾಡಲಾಗಿದ್ದು, ಇನ್ನು ಜಂಬೂಸವಾರಿ ಮುಗಿಯುವ ತನಕ ವಿಶೇಷವಾದ ಆತಿಥ್ಯ ಕೊಡಲಾಗುತ್ತದೆ. ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಬೇರೆ ಬೇರೆ ಆಹಾರ ನೀಡಲಾಗುವುದು. ಕಾಡಿನಲ್ಲಿ ಹೆಚ್ಚು ಸವಿಯುವ ಅಲದಸೊಪ್ಪನ್ನು ನೀಡಿದರೂ ಒಣಹುಲ್ಲಿನ ಜತೆಗೆ ಬೆಲ್ಲ, ಭತ್ತದ ತೌಡು, ಇತರ ಪೌಷ್ಟಿಕ ಆಹಾರ ಕೊಡಲಾಗುತ್ತದೆ ಎಂದು ಆನೆ ವೈದ್ಯ ಡಾ.ನಾಗರಾಜ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ