ಆ್ಯಪ್ನಗರ

ಭಾರ ಹೊರಿಸುವ ತಾಲೀಮು ಆರಂಭಿಸಿದ ಅರ್ಜುನ

ದಸರಾ ಗಜಪಡೆ ನಾಯಕ ಅರ್ಜುನನಿಗೆ ಶುಕ್ರವಾರದಿಂದ ಭಾರ ಹೊರಿಸುವ ತಾಲೀಮು ಆರಂಭಿಸಲಾಯಿತು.

Vijaya Karnataka 7 Sep 2019, 5:00 am
ಮೈಸೂರು: ದಸರಾ ಗಜಪಡೆ ನಾಯಕ ಅರ್ಜುನನಿಗೆ ಶುಕ್ರವಾರದಿಂದ ಭಾರ ಹೊರಿಸುವ ತಾಲೀಮು ಆರಂಭಿಸಲಾಯಿತು.
Vijaya Karnataka Web MYSPHOTOS-6025612


ಭಾರ ಹೊರುವ ತಾಲೀಮಿನ ಮೊದಲ ದಿನ 35 ಕೆ.ಜಿ.ತೂಕದ ಆರು ಮರಳಿನ ಮೂಟೆ ಹೊತ್ತ ಅರ್ಜುನ ನಿರಾಯಾಸವಾಗಿ ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನ ತಲುಪಿದ.

ಈ ಸಾಲಿನ ದಸರಾ ಮಹೋತ್ಸವದಲ್ಲಿಪಾಲ್ಗೊಳ್ಳುವ ಗಜಪಡೆಯ ಮೊದಲ ತಂಡ ಆ.22ರಂದು ಮೈಸೂರಿನ ಅಶೋಕಪುರಂ ಅರಣ್ಯ ಭವನಕ್ಕೆ ಆಗಮಿಸಿತ್ತು. ಆ.26ರಂದು ಅರಮನೆ ಅಂಗಳ ಪ್ರವೇಶಿಸಿದ್ದ ಅರ್ಜುನ ನೇತೃತ್ವದ ಆರು ಆನೆಗಳಿಗೆ ಶಕ್ತಿ ವೃದ್ಧಿಸಲು ಪೌಷ್ಟಿಕ ಆಹಾರ ನೀಡಲಾರಂಭಿಸಲಾಗಿತ್ತು. ಆ.27ರಿಂದ ತಾಲೀಮು ಆರಂಭಿಸಲಾಗಿತ್ತು. ಜಂಬೂಸವಾರಿ ಕೇವಲ 32 ದಿನ ಇರುವ ಹಿನ್ನೆಲೆಯಲ್ಲಿಇಂದಿನಿಂದ ಭಾರ ಹೊರಿಸು ತಾಲೀಮಿಗೆ ಚಾಲನೆ ನೀಡಲಾಗಿದೆ.

ಇಂದು ಬೆಳಗ್ಗೆ ಅರಮನೆ ಆವರಣದಲ್ಲಿರುವ ಶ್ರೀ ಕೋಡಿ ಸೋಮೇಶ್ವರ ದೇವಾಲಯಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಆನೆ ಬೆನ್ನಿನ ಮೇಲೆ ಇಡುವ ಗಾದಿ ಮತ್ತು ನಮ್ದಗೂ ಪೂಜೆ ಸಲ್ಲಿಸಿ ಅರ್ಜುನನ ಮೇಲಿಟ್ಟು ಕಟ್ಟಲಾಯಿತು. ಬಳಿಕ ತೊಟ್ಟಿಲು ಇಟ್ಟು ಅದರೊಳಗೆ ಆರು ಮರಳಿನ ಮೂಟೆ ಇಡಲಾಯಿತು. ಬೆಳಿಗ್ಗೆ 8.10ಕ್ಕೆ ಅರಮನೆಯಿಂದ ಹೊರತೆ ಬಂದ ಅರ್ಜುನ ನೇತೃತ್ವದ ಗಜಪಡೆ ಕೆ.ಆರ್‌.ವೃತ್ತದ ಮೂಲಕ ಸಯ್ಯಾಜಿರಾವ್‌ ರಸ್ತೆ ಸಾಗಿತು. ಆಯುರ್ವೇದ ವೃತ್ತ ಹಾಗೂ ಹಳೆ ಆರ್‌ಎಂಸಿ ವೃತ್ತದಲ್ಲಿಐದು ನಿಮಿಷ ವಿಶ್ರಾಂತಿ ನೀಡಲಾಯಿತು. ಬಳಿಕ ಹೈವೆ ವೃತ್ತದ ಮೂಲಕ ಬೆಳಿಗ್ಗೆ 9.30ಕ್ಕೆ ಬನ್ನಿಮಂಟಪದ ಪಂಜಿನ ಕವಾಯತ್‌ ಮೈದಾನ ತಲುಪಿತು. ಮೈದಾನದಲ್ಲಿಅರ್ಜುನನ ಮೇಲಿಡಲಾಗಿದ್ದ ಮರಳು ಮೂಟೆಯನ್ನು ಕೆಳಗಿಳಿಸಿ ಕೆಲಕಾಲ ವಿಶ್ರಾಂತಿ ನೀಡಲಾಯಿತು. ನಂತರ ಕೇವಲ ತೊಟ್ಟಿಲಿನೊಂದಿಗೆ ಮತ್ತೆ ಅರಮನೆಗೆ ಅರ್ಜುನನನ್ನು ಕರೆತರಲಾಯಿತು. ಡಿಸಿಎಫ್‌ ಅಲೆಕ್ಸಾಂಡರ್‌ ಮತ್ತಿತರರು ಇದ್ದರು.

ಕ್ರಮೇಣ ಭಾರ ಹೆಚ್ಚಿಸುತ್ತೇವೆ: ಭಾರ ಹೊರಿಸುವ ತಾಲೀಮು ಆರಂಭಿಸಲಾಗಿದೆ. ಮೊದಲ ದಿನವಾದ ಇಂದು 350 ಕೆ.ಜಿ. ತೂಕದ ಆರು ಮರಳಿನ ಮೂಟೆ ಇಟ್ಟು ತಾಲೀಮು ನಡೆಸಲಾಗಿದೆ. ಹಂತಹಂತವಾಗಿ ಬಾರ ಹೆಚ್ಚಿಸಲಾಗುತ್ತದೆ. ಅಲ್ಲದೆ ಮುಂದಿನ ವಾರದ ನಂತರ ಮರದ ಅಂಬಾರಿಯನ್ನು ಕಟ್ಟಿ ತಾಲೀಮು ನಡೆಸಲಾಗುತ್ತದೆ. ಇಂದು ಬಾರ ಹೊತ್ತ ಅರ್ಜುನ ನಿರಾಯಾಸವಾಗಿ ಬನ್ನಿಮಂಟಪದ ಪಂಜಿನ ಕವಾಯತ್‌ ಮೈದಾನ ತಲುಪಿದ್ದಾನೆ. ಅರ್ಜುನನೊಂದಿಗೆ ಅಭಿಮನ್ಯುವಿಗೂ ಭಾರ ಹೊರುವ ತಾಲೀಮು ನೀಡಲಾಗುತ್ತದೆ ಎಂದು ಪಶುವೈದ್ಯ ಡಾ.ಡಿ.ಎನ್‌.ನಾಗರಾಜು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ