ಮೈಸೂರು: ವರುಣಾ ಕ್ಷೇತ್ರದಲ್ಲಿ 'ಮಣ್ಣಿನ ಮಗ'ನ ದಾಳ ಉರುಳಿಸಿ ತಮ್ಮ ಪುತ್ರ ಡಾ.ಯತೀಂದ್ರ ಪರ ಪ್ರಚಾರ ನಡೆಸಿರುವ ಸಿಎಂ ಸಿದ್ದರಾಮಯ್ಯ ಪಕ್ಕದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಾವು 'ಮುಖ್ಯಮಂತ್ರಿ ಅಭ್ಯರ್ಥಿ' ಎಂಬುದನ್ನು ಪದೇ ಪದೇ ಉಚ್ಚರಿಸುತ್ತಾ ಬುಧವಾರ ಮತಯಾಚಿಸಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವ ಭೀತಿಯಿಂದ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿಯೂ ಸ್ಪರ್ಧಿಸುವ ಮಾತು ಕೇಳಿ ಬರುತ್ತಿರುವ ಹೊತ್ತಲ್ಲೇ ಚಾಮುಂಡೇಶ್ವರಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ ಸಿದ್ದರಾಮಯ್ಯ ಅಹಿಂದ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಭಾಷಣ ಮಾಡಿದರು. ತಮ್ಮ ಸರಕಾರ ಅಹಿಂದ ವರ್ಗಗಳ ಏಳಿಗೆಗೆ ನೀಡಿರುವ ಕಾರ್ಯಕ್ರಮಗಳನ್ನು ವಿವರಿಸಿದರು.
''ವರುಣಾ ಕ್ಷೇತ್ರದವರು ನನ್ನನ್ನು ಎರಡು ಸಲ ಗೆಲ್ಲಿಸಿ ಮುಖ್ಯಮಂತ್ರಿಯನ್ನಾಗಿಯೂ ಮಾಡಿದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಈ ಹಿಂದೆ 5 ಬಾರಿ ಗೆದ್ದಿದ್ದೇನೆ. ಉಪ ಚುನಾವಣೆ 2006ರಲ್ಲಿ ನಡೆದಾಗ ಮಹಾಭಾರತದ ಯುದ್ಧದಂತೆ ನಡೆಯಿತು. ಜೆಡಿಎಸ್, ಬಿಜೆಪಿ ಒಗ್ಗೂಡಿದ್ದರು. ಅಂತಹ ಕಷ್ಟದ ಪರಿಸ್ಥಿತಿಯಲ್ಲಿಯೂ ಈ ಕ್ಷೇತ್ರದ ಮತದಾರರು ನನ್ನ ಕೈಬಿಡಲಿಲ್ಲ. ನಾನೀಗ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ. ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡುವುದು ನಿಮ್ಮ ಕೈಯಲ್ಲಿದೆ. ಇದು ನನ್ನ ಕೊನೆಯ ಚುನಾವಣೆ'' ಎಂದರು ಸಿದ್ದರಾಮಯ್ಯ.
ಸಿದ್ದರಾಮಯ್ಯ ತಮ್ಮ ಭಾಷಣದ ಮಧ್ಯೆದಲ್ಲಿಯೇ ಪ್ರಶ್ನೆ ಕೇಳಿ ಮತದಾರರ ಕೈಯಲ್ಲಿ ತಾವು 'ಮುಖ್ಯಮಂತ್ರಿ ಅಭ್ಯರ್ಥಿ' ಎಂಬುದನ್ನು ಹೇಳಿಸಿದರು. ವರುಣಾ ಕ್ಷೇತ್ರದವರು ನನ್ನನ್ನು ಗೆಲ್ಲಿಸಿ ಮುಖ್ಯಮಂತ್ರಿಯನ್ನಾಗಿ ಮಾಡಿದರು. ಚಾಮುಂಡೇಶ್ವರಿ ಕ್ಷೇತ್ರದವರೂ ಹೀಗೆ ಮಾಡಬೇಕಲ್ಲವೇ? ಎಂದು ಕೇಳಿದರು. ಅಂತಹ ಅವಕಾಶ ಈಗ ಇಲ್ಲಿನ ಮತದಾರರ ಕೈಯಲ್ಲಿದೆ ಎಂದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಳೆದ 5 ವರ್ಷಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಪಟ್ಟಿ ಮಾಡಿದರು. ಪರಿಶಿಷ್ಟ ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿರುವ ಕುಮಾರಬೀಡು ಗ್ರಾಮದಲ್ಲಿ ಆ ವರ್ಗದ ಏಳಿಗೆಗೆ ರೂಪಿಸಿರುವ ಕಾರ್ಯಕ್ರಮಗಳನ್ನು ಒತ್ತಿ ಹೇಳಿದರು. ಗುತ್ತಿಗೆ ನೀಡುವಾಗಲೂ ಮೀಸಲಾತಿ ನಿಯಮವನ್ನು ಜಾರಿಗೆ ತಂದ ದೇಶದ ಮೊದಲ ಸರಕಾರ ತಮ್ಮದು. ಬೇರೆ ಪಾರ್ಟಿಯವರು ಏನೂ ಮಾಡಿಲ್ಲ. ಹೀಗಿರುವಾಗ ನಾವು ಮಾಡಿರುವ ಕೆಲಸಕ್ಕೆ ಕೂಲಿ ಕೊಡಬೇಕಲ್ಲವೇ? ಎಂದು ಕೇಳಿದರು.
ಬೀರಿಹುಂಡಿ ಗ್ರಾಮದಲ್ಲಿ ಸಿದ್ದರಾಮಯ್ಯ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಕಾವೇರಿ ನದಿಯಿಂದ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿರುವ ಬಗ್ಗೆ ಸಿದ್ದರಾಮಯ್ಯ ಪ್ರಸ್ತಾಪಿಸಿದಾಗ ಅಲ್ಲಿದ್ದವರು 'ಇನ್ನೂ ನೀರು ಬಂದಿಲ್ಲ' ಎಂದು ಕೂಗಿದರು. ಆಗ ಸಿದ್ದರಾಮಯ್ಯ, 'ವಾಟರ್ ಟ್ಯಾಂಕ್ ಆಗಿದೆ. ಪೈಪ್ ಲೈನ್ ಆಗಿದೆ. ಇನ್ನೇನು ನೀರು ಬರಬೇಕಷ್ಟೇ. ಊರಿಗೆ ಬಂದವರು ನೀರಿಗೆ ಬರದೇ ಇರ್ತಾರಾ?' ಎಂಬ ಗಾದೆ ಮಾತು ಉಲ್ಲೇಖಿಸಿ ನೀರು ಬರುತ್ತದೆ ಎಂದಾಗ ನೆರೆದಿದ್ದವರಿಗೆ ನಗು ತಡೆಯಲಾಗಲಿಲ್ಲ.
ಸಿದ್ದರಾಮಯ್ಯ ಜೆಟ್ಟಿಹುಂಡಿಯಿಂದ ಪ್ರಚಾರ ಆರಂಭಿಸಿ ಗೋಹಳ್ಳಿ, ಕುಮಾರಬೀಡು, ಬೀರಿಹುಂಡಿ, ಶೆಟ್ಟಿನಾಯಕನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು. ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಮಾಜಿ ಶಾಸಕ ಎಂ.ಸತ್ಯನಾರಾಯಣ, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮತ್ತಿತರರಿದ್ದರು.