ಆ್ಯಪ್ನಗರ

ಕನ್ನಡ ಕಲಿಯದ ಬೆಂಗಳೂರಿನ ವ್ಯಾಪಾರಿಗಳು !

ಬೆಂಗಳೂರು, ಮೈಸೂರಿನಲ್ಲಿರುವ ಕೇರಳ, ತಮಿಳುನಾಡು ಮೂಲದ ವ್ಯಾಪಾರಿಗಳು ಹಾಗೂ ಮಾರ್ವಾಡಿಗಳಿಗೆ ಕನ್ನಡ ಕಲಿಸುವ ಕೆಲಸವನ್ನು ಮಾಡಬೇಕಿದೆ ಎಂದು ನಿತ್ಯೋತ್ಸವ ಕವಿ ಡಾ.ಕೆ.ಎಸ್‌.ನಿಸಾರ್‌ ಅಹಮದ್‌ ಹೇಳಿದರು.

Vijaya Karnataka 18 Dec 2017, 5:00 am

* ನಿತ್ಯೋತ್ಸವ ಕವಿ ನಿಸಾರ್‌ ಅಹಮದ್‌ ಸಾತ್ವಿಕ ಸಿಟ್ಟು

ಮೈಸೂರು: ಬೆಂಗಳೂರು, ಮೈಸೂರಿನಲ್ಲಿರುವ ಕೇರಳ, ತಮಿಳುನಾಡು ಮೂಲದ ವ್ಯಾಪಾರಿಗಳು ಹಾಗೂ ಮಾರ್ವಾಡಿಗಳಿಗೆ ಕನ್ನಡ ಕಲಿಸುವ ಕೆಲಸವನ್ನು ಮಾಡಬೇಕಿದೆ ಎಂದು ನಿತ್ಯೋತ್ಸವ ಕವಿ ಡಾ.ಕೆ.ಎಸ್‌.ನಿಸಾರ್‌ ಅಹಮದ್‌ ಹೇಳಿದರು.

67ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಮೈಸೂರು ಜಿಲ್ಲಾ ಕನ್ನಡ ಚಳುವಳಿಗಾರರ ಸಂಘ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಸಾಹಿತಿಗಳಿಗೆ ಅಭಿನಂದನಾ ಕಾರ‍್ಯಕ್ರಮದಲ್ಲಿ ಮಾತನಾಡಿದರು.

''ಬೆಂಗಳೂರಿನಲ್ಲಿ ಕನ್ನಡ ಉಳಿದುಕೊಂಡಿಲ್ಲ. ಅದೊಂದು ಬೆರಕೆ ಸಿಟಿ. ಹಲವು ವರ್ಷಗಳಿಂದ ಹೋಟೆಲ್‌, ತರಕಾರಿ ಅಂಗಡಿ ನಡೆಸುವ ಕೇರಳಿಗರು, ತಮಿಳುಗರು ಹಾಗೂ ಮಾರ್ವಾಡಿಗಳು ಎಷ್ಟೇ ವರ್ಷ ಉರುಳಿದರೂ ಕನ್ನಡ ಕಲಿಯುವುದಿಲ್ಲ. ಕನ್ನಡ ನಾಡಿನಲ್ಲಿ ಕನ್ನಡ ಅಗತ್ಯವಿಲ್ಲ ಎಂಬುದು ಅವರ ಭಾವನೆ. ಇದಕ್ಕೂ ಪೂರಕವಾಗಿ ಇವರೊಡನೆ ಸಂವಹನ ನಡೆಸುವ ನಮ್ಮ ಕನ್ನಡಿಗರು ಅವರ ಭಾಷೆಯಲ್ಲಿ ವ್ಯವಹರಿಸುತ್ತಾರೆ. ರಾಜ್ಯದಲ್ಲಿ ನೆಲೆಸಿರುವ 28ಕ್ಕೂ ಹೆಚ್ಚು ಭಾಷಿಕರ ಭಾಷೆ ಕನ್ನಡಿಗರಿಗೆ ಅರ್ಥವಾಗುತ್ತದೆ. ಅವುಗಳನ್ನು ಕಲಿಯಲು ಕನ್ನಡಿಗರಿಗೆ ವಿಶೇಷ ಆಸಕ್ತಿ. ಕನ್ನಡಿಗರೇ ಇಲ್ಲಿನ ವ್ಯಾಪಾರಿಗಳಿಗೆ ಕನ್ನಡ ಕಲಿಸಬೇಕು. ಆಗ ಮಾತ್ರ ಕನ್ನಡ ಉಳಿದುಕೊಳ್ಳುತ್ತದೆ,'' ಎಂದು ಹೇಳಿದರು.

''ಕೇರಳದವರು ಕರ್ನಾಟಕದ ಬಹುತೇಕ ಕಡೆ ಹೋಟೆಲ್‌ ನಡೆಸುತ್ತಿದ್ದಾರೆ. ಇವರ ಆಹಾರಕ್ಕೆ ಮನಸೋಲುವ ನಮ್ಮವರು ಕೇರಳ ಪರೋಟ ಕೇಳುತ್ತಾರೆ. ಹೋಟೆಲ್‌ ನಡೆಸುವ ಜಾಗ ನಮ್ಮದು, ಮೈದಾ ನಮ್ಮದು, ಎಣ್ಣೆ ನಮ್ಮದು, ನೀರು ನಮ್ಮದು ಇದೆನ್ನೆಲ್ಲಾ ಉಪಯೋಗಿಸಿಕೊಂಡು ತಯಾರಿಸಿದ ಪರೋಟ ಕೇರಳ ಪರೋಟ ಹೇಗಾಗುತ್ತದೆ? ಎಂಬುದೇ ಪ್ರಶ್ನೆಯಾಗಿದೆ. ಕರ್ನಾಟಕದ ಇಳಕಲ್‌ ಸೀರೆಯನ್ನು ಮಹಾರಾಷ್ಟ್ರ ಸೀರೆ ಎಂದು ಪ್ರಸಿದ್ಧ ಮಾಡಲಾಗಿದೆ. ಕನ್ನಡಿಗರು ಇಷ್ಟು ನಿರಾಭಿಮಾನಿಗಳಾಗಬಾರದು,'' ಎಂದು ಬೇಸರಿಸಿದರು.

ಕನ್ನಡ ಚಳವಳಿಗಾರರು ದಗಲ್ಬಾಜಿಗಳಲ್ಲ: ''ಕನ್ನಡ ಚಳುವಳಿಗಾರರನ್ನು ದಗಲ್ಬಾಜೀಗಳು, ಧಂಗೆಕೊರರು, ವಸೂಲಿಕೋರರು ಎಂದೆಲ್ಲ ವ್ಯಾಖ್ಯಾನಿಸುತ್ತಾರೆ. ಇದು ತಪ್ಪು. ಚಳಿವಳಿಗಾರರಿಗೆ ಹಲ್ಮಿಡಿ ಶಾಸನ ಗೊತ್ತಿಲ್ಲ, ಸಾಹಿತ್ಯ ಚರಿತ್ರೆ ಗೊತ್ತಿಲ್ಲ ನಿಜ. ಆದರೆ ಕನ್ನಡ ಅಭಿವೃದ್ಧಿ, ಅದರ ಉಳಿವಿಗಾಗಿ ಯಾವುದೇ ಕೆಲಸ ಮಾಡಲು ಅವರು ಸಿದ್ಧರಿರುತ್ತಾರೆ. ಲಾಟಿ ಏಟು ತಿಂದು ಜೈಲಿನ ಸೆರೆವಾಸ ಅನುಭವಿಸುತ್ತಾರೆ. ಇದು ನಮಗೆ ಕಾಣುವುದಿಲ್ಲ,'' ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕೆ.ಎಸ್‌.ನಿಸಾರ್‌ ಅಹಮದ್‌ ಮತ್ತು ಡಾ.ಸಿ.ಪಿ.ಕೃಷ್ಣಕುಮಾರ್‌ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಾಹಿತಿ ಡಾ.ಮಳಲಿ ವಸಂತಕುಮಾರ್‌ ಅಭಿನಂದನಾ ನುಡಿಗಳನ್ನಾಡಿದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಚ್‌.ಕೆ.ರಾಮು ಸಮಾರಂಭ ಉದ್ಘಾಟಿಸಿದರು. ಮಾಜಿ ಸಚಿವರಾದ ಅಡಗೂರು ಎಚ್‌.ವಿಶ್ವನಾಥ್‌, ಎಂ.ಶಿವಣ್ಣ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ, ಕೆ.ರಘುರಾಂ, ಜಿಲ್ಲಾ ಕನ್ನಡ ಚಳುವಳಿಗಾರರ ಸಂಘದ ಅಧ್ಯಕ್ಷ ಬಿ.ಎ.ಶಿವಶಂಕರ್‌ ಉಪಸ್ಥಿತರಿದ್ದರು.

----------------------------

ಯಾರಿಗೆ ಹೆದರಿ ನನಗೆ ಆಹ್ವಾನ ನೀಡಲಿಲ್ಲ ?

Vijaya Karnataka Web bangalore traders not learning kannada
ಕನ್ನಡ ಕಲಿಯದ ಬೆಂಗಳೂರಿನ ವ್ಯಾಪಾರಿಗಳು !

* ಕಸಾಪ ಅಧ್ಯಕ್ಷರಿಗೆ ವಿಶ್ವನಾಥ್‌ ಪ್ರಶ್ನೆ

ಮೈಸೂರಿನಲ್ಲಿ ನಡೆದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತನ್ನನ್ನು ಏಕೆ ಆಹ್ವಾನಿಸಲಿಲ್ಲವೆಂದು ಮಾಜಿ ಸಚಿವ ಅಡಗೂರು ಎಚ್‌.ವಿಶ್ವನಾಥ್‌ ಅವರು ವೇದಿಕೆಯಲ್ಲಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅವರನ್ನು ಪ್ರಶ್ನಿಸಿದರು.

ಸಾಹಿತಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ''ನಾನು ಇದುವರೆಗೆ ಏಳು ಕೃತಿಗಳನ್ನು ರಚಿಸಿದ್ದು, ಸಾಹಿತಿಗಳ ಜತೆ ಗುರುತಿಸಿಕೊಂಡಿದ್ದೇನೆ. ಅನೇಕ ಕನ್ನಡ ಪರ ಹೋರಾಟಗಳನ್ನು ಎದುರಿಸಿದ್ದೇನೆ. ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿ, ಶಿಕ್ಷಣ ಖಾತೆ ಮಂತ್ರಿಯಾಗಿ ಕಾರ‍್ಯ ನಿರ್ವಹಿಸಿರುವ ನನ್ನನ್ನು ಮೈಸೂರಿನಲ್ಲೇ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಯಾರಿಗೆ ಹೆದರಿ ನೀವು ಆಹ್ವಾನಿಸಲಿಲ್ಲ,'' ಎಂದು ಅಸಮಾಧಾನ ವ್ಯಕ್ತಪಡಿಸಿದರು.

''ರಾಜಕೀಯ, ರಾಜಕಾರಣ ಮೈಲಿಗೆಯಲ್ಲ. ರಾಜಕೀಯದ ಕುರಿತಾದ ಗೋಷ್ಠಿಯನ್ನು ಸಮ್ಮೇಳನದಲ್ಲಿ ಇಡಬೇಕಿತ್ತು. ಏಕೆ ಇಡಲಿಲ್ಲ,'' ಎಂದು ಪ್ರಶ್ನೆ ಮಾಡಿದ ಅವರು, ''ರಾಜಕೀಯ ಗೋಷ್ಠಿ ಇದ್ದಿದ್ದರೆ ನ್ಯಾಯ ಅನ್ಯಾಯದ ಪರ ಚರ್ಚೆಗಳಾಗುತ್ತಿತ್ತು. ಇದರಿಂದ ಅವಶ್ಯಕ ಸಲಹೆ ಸೂಚನೆಗಳು ದೊರೆಯುತ್ತಿದ್ದವು,'' ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ''ವಿಶ್ವನಾಥ್‌ ಅವರ ಬಗ್ಗೆ ಅಪಾರ ಗೌರವವಿದೆ. ಗೋಷ್ಠಿಗಳಿಗೆ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ಕೇಂದ್ರ ಕಸಾಪದ ಸಮಿತಿ ಹೊಣೆ. ವಿಶ್ವನಾಥ್‌ ಅವರನ್ನು ಆಹ್ವಾನಿಸಿ ಎಂದು ಸೂಚಿಸಲಾಗಿತ್ತು. ಆದರೆ, ರಾಯಚೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳದಲ್ಲಿ ಗೋಷ್ಠಿಯಲ್ಲಿ ವಿಶ್ವನಾಥ್‌ ಭಾಗವಹಿಸಿದ್ದರು. ಒಮ್ಮೆ ಭಾಗವಹಿಸಿದವರು 3 ವರ್ಷಗಳ ಕಾಲ ಭಾಗವಹಿಸುವಂತಿಲ್ಲ. ಹೀಗಾಗಿ ಅವರನ್ನು ಗೋಷ್ಠಿಗೆ ಆಹ್ವಾನಿಸಲಿಲ್ಲ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ