ಆ್ಯಪ್ನಗರ

ಕುತೂಹಲ ಮೂಡಿಸಿದ ಹುಣಸೂರು ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಆಯ್ಕೆ

ಜಿಟಿ ದೇವೇಗೌಡ ಪ್ರಭಾವಿ ಒಕ್ಕಲಿಗ ನಾಯಕರಾಗಿದ್ದು, ಉಪಚುನಾವಣೆಯಲ್ಲಿ ತಮ್ಮ ಮಗ ಜಿಡಿ ಹರೀಶ್‌ ಗೌಡ ಸ್ಫರ್ಧಿಸಿದರೆ ಗೆಲುವು ಸಾಧ್ಯ ಎಂದು ಬಿಜೆಪಿ ನಾಯಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

Vijaya Karnataka Web 12 Nov 2019, 4:30 pm
Vijaya Karnataka Web Hunsur By Election
ಮೈಸೂರು: ಡಿಸೆಂಬರ್‌ 5ರಂದು ನಡೆಯಲಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಕುತೂಹಲ ಮೂಡಿಸಿದೆ.

ಬುಧವಾರ ಅನರ್ಹ ಶಾಸಕರ ಕುರಿತಾದ ತೀರ್ಪು ಹೊರಬೀಳಲಿದ್ದು, ಅಕಸ್ಮಾತ್ ಎಚ್‌ ವಿಶ್ವನಾಥ್ ಸ್ಪರ್ಧೆ ಸಾಧ್ಯವಾಗದಿದ್ದರೆ, ಬಿಜೆಪಿ ಮುಖಂಡ ಸಿಪಿ ಯೋಗೇಶ್ವರ್ ಕಣಕ್ಕೆ ಇಳಿಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಪುತ್ರನ ಪರ ಜಿಟಿಡಿ ಲಾಬಿ?

ಇನ್ನೊಂದು ಕಡೆ ಜಿಟಿ ದೇವೇಗೌಡ ಪುತ್ರ ಹರೀಶ್‌ಗೆ ಟಿಕೆಟ್ ನೀಡುವ ವಿಚಾರವಾಗಿಯೂ ಲಾಬಿ ನಡೆಯುತ್ತಿದೆ. ಈ ಸಂಬಂಧ ಜಿಟಿಡಿ ಬಿಜೆಪಿ ನಾಯಕರನ್ನು ಸಂಪರ್ಕಿಸಿ ಮಾತುಕತೆ ನಡೆಸುತ್ತಿದ್ದಾರೆಂದು ಸಹ ಹೇಳಲಾಗುತ್ತಿದೆ. ಮೈಸೂರು – ಕೊಡಗು ಸಂಸದ ಪ್ರತಾಪ್‌ ಸಿಂಹ ಅವರ ಮೂಲಕ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್‌ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಜಿಟಿ ದೇವೇಗೌಡ ಪ್ರಭಾವಿ ಒಕ್ಕಲಿಗ ನಾಯಕರಾಗಿದ್ದು, ಉಪಚುನಾವಣೆಯಲ್ಲಿ ತಮ್ಮ ಮಗ ಸ್ಫರ್ಧಿಸಿದರೆ ಗೆಲುವು ಸಾಧ್ಯ ಎಂದು ಬಿಜೆಪಿ ನಾಯಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಇವೆಲ್ಲವನ್ನೂ ಗಮನಿಸಿದರೆ ಶಾಸಕ ಜಿಟಿ ದೇವೇಗೌಡ ಬಿಜೆಪಿಗೆ ಸೇರ್ಪಡೆಯಾಗುವ ದಿನವೂ ಬಹುತೇಕ ಸನ್ನಿಹಿತವಾದಂತಿದೆ.

ಕಣಕ್ಕಿಳಿಯಲು ಯೋಗೇಶ್ವರ್‌ ಯತ್ನ

ಒಂದು ಕಡೆ ಹರೀಶ್‌ ಪರ ಲಾಬಿ ನಡೆಯುತ್ತಿದ್ದರೆ ಇನ್ನೊಂದು ಕರೆ ಹೇಗಾದರೂ ಆಗಲಿ ಈ ಕ್ಷೇತ್ರದಿಂದಲೇ ಕಣಕ್ಕಿಳಿಯಬೇಕೆಂದು ಬಿಜೆಪಿಯ ಸಿಪಿ ಯೋಗೇಶ್ವರ್ ಯತ್ನಿಸುತ್ತಿದ್ದಾರೆ. ಈ ಸಂಬಂಧ ಅವರು ಒಂದರ ಮೇಲೊಂದರಂತೆ ಸಭೆಗಳನ್ನು ನಡೆಸುತ್ತಿದ್ದಾರೆ.

ಹುಣಸೂರು ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ಅಧಿಕವಾಗಿದ್ದು ಇದನ್ನೇ ನಂಬಿಕೊಂಡು ಕಣಕ್ಕಿಳಿಯಲು ಅವರು ಮುಂದಾಗಿದ್ದಾರೆ. ಇದರ ಜೊತೆಗೆ ವಿಶ್ವನಾಥ್ ಹಾಗೂ ಸ್ಥಳೀಯ ಮುಖಂಡರ ಬೆಂಬಲ ಕೋರಿದ್ದಾರೆ ಎನ್ನಲಾಗುತ್ತಿದೆ.

ಹೀಗೆ ಬಿಜೆಪಿ ಪಾಳಯದಲ್ಲಿ ಬಿರುಸಿನ ಬೆಳವಣಿಗೆಗಳ ನಡೆಯುತ್ತಿದ್ದರೆ, ಅತ್ತ ಅಭ್ಯರ್ಥಿ ಘೋಷಿಸಿರುವ ಕಾಂಗ್ರೆಸ್‌ ಚುರುಕಿನಿಂದ ಪ್ರಚಾರ ಆರಂಭಿಸಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಾಲಿಗೆ ಇದೊಂದು ಪ್ರತಿಷ್ಠೆಯ ಕಣವಾಗಿದ್ದು ಶತಾಯ ಗತಾಯ ತಮ್ಮ ವೈರಿ ವಿಶ್ವನಾಥ್‌ ಸೋಲಿಸಲು ಸಿದ್ದರಾಮಯ್ಯ ರಣತಂತ್ರ ರೂಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ