ಆ್ಯಪ್ನಗರ

ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ: ಸಿದ್ದರಾಮಯ್ಯ

ಸಂಪುಟ ಪುನರ್‌ ರಚನೆ ಅಥವಾ ವಿಸ್ತರಣೆ ಮಾಡುವ ಕಾರ್ಯಕ್ಕೆ ಮುಂದಾಗುವುದಿಲ್ಲ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

Vijaya Karnataka 28 May 2019, 5:00 am
ಯಾರೊಬ್ಬರೂ ಪಕ್ಷ ಬಿಡಲ್ಲ: ವಿಶ್ವಾಸ | ಇವಿಎಂ: ಈಗಲೂ ಅನುಮಾನವಿದೆ
Vijaya Karnataka Web cabinet expansion is no longer available siddaramaiah
ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ: ಸಿದ್ದರಾಮಯ್ಯ


ಮೈಸೂರು: ಸಂಪುಟ ಪುನರ್‌ ರಚನೆ ಅಥವಾ ವಿಸ್ತರಣೆ ಮಾಡುವ ಕಾರ್ಯಕ್ಕೆ ಮುಂದಾಗುವುದಿಲ್ಲ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಸೋಮವಾರ ಮೈಸೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.

''ಸಂಪುಟ ಪುನರ್‌ ರಚಿಸುವ ಪ್ರಯತ್ನ ನಡೆಸಿಲ್ಲ. ಈ ಕುರಿತು ನಮ್ಮ ಮುಂದೆ ಯಾವುದೇ ಪ್ರಸ್ತಾಪವಿಲ್ಲ. ಕಾಂಗ್ರೆಸ್‌ನಲ್ಲಿ ಒಂದು ಹಾಗೂ ಜೆಡಿಎಸ್‌ನಲ್ಲಿ ಎರಡು ಸಚಿವ ಸ್ಥಾನ ಖಾಲಿ ಇವೆ. ಅದರಲ್ಲಿ ನಮ್ಮ ಸ್ಥಾನ ತುಂಬಲು ನಿರ್ಧಾರ ಮಾಡಿದ್ದೇವೆ. ಜೆಡಿಎಸ್‌ನವರು ಏನು ಮಾಡುತ್ತಾರೆ ಎಂಬುದು ನಮಗೆ ತಿಳಿದಿಲ್ಲ,'' ಎಂದರು.

ಯಾರೊಬ್ಬರೂ ಪಕ್ಷ ಬಿಡಲ್ಲ:
''ರಮೇಶ್‌ ಜಾರಕಿಹೊಳಿ ಸೇರಿದಂತೆ ಯಾರೊಬ್ಬರೂ ಪಕ್ಷ ಬಿಟ್ಟು ಹೋಗಲ್ಲ. ಶಾಸಕ ಸುಧಾಕರ್‌, ಜಾರಕಿಹೊಳಿ ಅವರು ಬಿಜೆಪಿಯ ಆರ್‌.ಅಶೋಕ್‌ ಮತ್ತು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರನ್ನು ಭೇಟಿ ಮಾಡಿರುವುದು ಕೇವಲ ಆಕಸ್ಮಿಕ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಅವರು ಕಾಂಗ್ರೆಸ್‌ನಲ್ಲೇ ಇದ್ದಾರೆ. ಮುಂದೆಯೂ ಬೇರೆ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಿಲ್ಲ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯಾವುದೇ ಪರಿಣಾಮವಿಲ್ಲ: ''ಕೇಂದ್ರದಲ್ಲಿ ಯಾವ ಸರಕಾರ ಅಧಿಕಾರದಲ್ಲಿರಬೇಕು ಎಂಬ ದೃಷ್ಟಿಕೋನದಲ್ಲಿ ರಾಷ್ಟ್ರಮಟ್ಟದ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಜನರು ಲೋಕಸಭೆ ಚುನಾವಣೆಯಲ್ಲಿ ಮತ ನೀಡಿದ್ದಾರೆ. ಅಂತೆಯೆ 2018ರಲ್ಲೇ ರಾಜ್ಯದ ಆಡಳಿತಕ್ಕೆ ಸಂಬಂಧಿಸಿದಂತೆ ಜನಾದೇಶ ದೊರೆತಿದೆ. ಹೀಗಾಗಿ ಲೋಕಸಭಾ ಚುನಾವಣೆ ಫಲಿತಾಂಶ ರಾಜ್ಯ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಮುನ್ಸಿಪಾಲಿಟಿಗಳು ರಾಜೀನಾಮೆ ನೀಡಬೇಕೆ? ಉಪ ಚುನಾವಣೆಗಳಲ್ಲಿ ನಾವು ಗೆದ್ದೆವು ಎಂದ ಮಾತ್ರಕ್ಕೆ ನರೇಂದ್ರ ಮೋದಿ ಅವರು ರಾಜೀನಾಮೆ ನೀಡಿದ್ದಾರೆಯೆ,'' ಎಂದು ಪ್ರಶ್ನಿಸಿದರು.

ರಾಜೀನಾಮೆ ನೀಡುವರೆ?

''ಜೂನ್‌ 1ಕ್ಕೆ ಹೊಸ ಸರಕಾರ ಅಸ್ತಿತ್ವಕ್ಕೆ ಬರಲಿದೆ'' ಎಂಬ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ''ಯಡಿಯೂರಪ್ಪ ಮೇಲಿಂದ ಮೇಲೆ ಹೀಗೆ ಹೇಳುತ್ತಲೇ ಇದ್ದಾರೆ. ಒಂದು ವೇಳೆ ಅವರು ಹೇಳಿದಂತೆ ಆಗದಿದ್ದರೆ ಯಡಿಯೂರಪ್ಪ ರಾಜೀನಾಮೆ ನೀಡುವರೆ?,'' ಎಂದು ಪ್ರಶ್ನಿಸಿದರು.

''ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಯಾವ ಕಾರಣಕ್ಕೆ ಕಾಂಗ್ರೆಸ್‌ ಸೋತಿದೆ ಎಂಬುದು ಗೊತ್ತಿಲ್ಲ. ಫಲಿತಾಂಶದ ಬಗ್ಗೆ ತಳಮಟ್ಟದ ಕಾರ್ಯಕರ್ತರ ಜತೆ ಸುದೀರ್ಘ ಪರಾಮರ್ಶೆ ನಡೆಸಲಾಗುವುದು. ಇವಿಎಂ ಯಂತ್ರಗಳ ಮೇಲೆ ನನಗೆ ಈಗಲೂ ಅನುಮಾನವಿದೆ. ತಜ್ಞರೊಂದಿಗೆ ಚರ್ಚಿಸಿ ಪ್ರತಿಕ್ರಿಯೆ ನೀಡುತ್ತೇನೆ,'' ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ