ಆ್ಯಪ್ನಗರ

ಚಿಕ್ಕಂದಿನಲ್ಲಿ ಎಮ್ಮೆ ಕಾಯೋವಾಗ ಇಂಥ ಮಳೆ ನೋಡ್ತಿದ್ದೆ: ಸಿಎಂ

ದಸರಾ ಪಾಸ್‌ಗಳ ವಿತರಣೆಯಲ್ಲಿ ಲೋಪ ಕಂಡುಬಂದಿರುವ ನಿಟ್ಟಿನಲ್ಲಿ ಮುಂದಿನ ನಾಡಹಬ್ಬಕ್ಕೆ ಪಾಸ್‌ ವ್ಯವಸ್ಥೆ ರದ್ದು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Vijaya Karnataka 1 Oct 2017, 11:06 am

ಮೈಸೂರು: ದಸರಾ ಪಾಸ್‌ಗಳ ವಿತರಣೆಯಲ್ಲಿ ಲೋಪ ಕಂಡುಬಂದಿರುವ ನಿಟ್ಟಿನಲ್ಲಿ ಮುಂದಿನ ನಾಡಹಬ್ಬಕ್ಕೆ ಪಾಸ್‌ ವ್ಯವಸ್ಥೆ ರದ್ದು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಚಾಮುಂಡಿ ಬೆಟ್ಟದ ತಪ್ಪಲಿನಿಲ್ಲಿರುವ ಸುತ್ತೂರು ಮಠದಲ್ಲಿ ಶನಿವಾರ ನಡೆದ ವಿಜಯದಶಮಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

'ಪಾಸ್‌ ನೀಡುವ ವಿಷಯದಲ್ಲಿ ನಾವು ಕೆಟ್ಟ ಹೆಸರು ತೆಗೆದುಕೊಂಡಿದ್ದೇವೆ. ಅರಮನೆ ಆವರಣ ಹಾಗೂ ಬನ್ನಿ ಮಂಟಪದಲ್ಲಿ ಸಾಮರ್ಥ್ಯ‌ ಇರುವಷ್ಟು ಮಾತ್ರ ಪಾಸ್‌ ಮುದ್ರಿಸಲಾಗಿದೆ. ಆದರೆ, ಅದಕ್ಕೂ ಮೀರಿ ಪಾಸ್‌ಗಳ ಬೇಡಿಕೆ ಬರುತ್ತಿದೆ. ಹಾಗಾಗಿ ಬರುವ ವರ್ಷದಿಂದ ಪಾಸ್‌ ವ್ಯವಸ್ಥೆಯನ್ನೇ ರದ್ದುಮಾಡಲು ಕ್ರಮ ಕೈಗೊಳ್ಳಲಾಗುವುದು,' ಎಂದು ಅವರು ತಿಳಿಸಿದರು.

ಚಿಕ್ಕಂದಿನಲ್ಲಿ ನೋಡಿದ್ದ ಮಳೆ:

Vijaya Karnataka Web cancel pass system for next draft cm
ಚಿಕ್ಕಂದಿನಲ್ಲಿ ಎಮ್ಮೆ ಕಾಯೋವಾಗ ಇಂಥ ಮಳೆ ನೋಡ್ತಿದ್ದೆ: ಸಿಎಂ


'ಈ ರೀತಿ ಮಳೆ ಸುರಿದಿದ್ದನ್ನು ನಾನು ಚಿಕ್ಕಂದಿನಲ್ಲಿ ನೋಡಿದ್ದೆ. ಎಮ್ಮೆ ಮೇಯಿಸುವಾಗ ಈಶಾನ್ಯ ದಿಕ್ಕಿಗೆ ಮೋಡ ಕಂಡರೆ ಮನೆ ಕಡೆಗೆ ಕಾಲು ಕೀಳುತ್ತಿದ್ದೆವು. ಅಂಥ ಮಳೆ ಈಗ ನೋಡುತ್ತಿದ್ದೇನೆ. ಹಳೆಯದೆಲ್ಲ ಈಗ ನೆನಪಾಗುತ್ತಿದೆ,'ಎಂದೂ ಅವರು ತಿಳಿಸಿದರು.

ಸಚಿವರಾದ ಎಚ್‌.ಆಂಜನೇಯ, ಡಾ. ಎಚ್‌. ಸಿ. ಮಹದೇವಪ್ಪ, ಯು. ಟಿ. ಖಾದರ್‌, ತನ್ವೀರ್‌ ಸೇಠ್‌, ಗೀತಾ ಮಹಾದೇವ ಪ್ರಸಾದ್‌, ಸಂಸದ ಧ್ರುವ ನಾರಾಯಣ್‌ ಮೊದಲಾದವರು ಸುತ್ತೂರು ಶ್ರೀಗಳ ಆಶೀರ್ವಾದ ಪಡೆದರು. ಸಿದ್ದರಾಮಯ್ಯ ಸೇರಿದಂತೆ ಎಲ್ಲ ನಾಯಕರನ್ನೂ ಆಶೀರ್ವದಿಸಿದ ಶ್ರೀಗಳು ಬುದ್ಧನ ಪ್ರತಿಮೆಯನ್ನು ನೆನಪಿನ ಕಾಣಿಕೆಯಾಗಿ ನೀಡಿದರು.

ಹಾಸ್ಯ ಪ್ರಿಯ ಸಿಎಂ

ಶ್ರೀಗಳ ಆಶೀರ್ವಾದ ಪಡೆಯಲು ತಡವಾಗಿ ಬಂದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರನ್ನುದ್ದೇಶಿಸಿ ಸಿಎಂ ಅವರು ತಮಾಷೆ ಮಾಡಿದರು. ಸಚಿವ ತನ್ವೀರ್‌ಸೇಠ್‌ ಅವರು ಆಗಮಿಸಿದ ಕೂಡಲೇ 'ಬನ್ರೀ ಸಾಬ್ರೇ' ಎಂದು ಅವರು ಕೂಗಿದರು. ನೆರೆದಿದ್ದವರೆಲ್ಲ ಗೊಳ್ಳೆಂದು ನಕ್ಕರು.

ಪಾಸ್‌ ಬದಲು ಬೇರೆ ಕ್ರಮವೇನು?

ದಸರೆಯಲ್ಲಿ ಪಾಸ್‌ ವ್ಯವಸ್ಥೆ ರದ್ದು ಮಾಡುವ ಸುಳಿವು ನೀಡಿರುವ ಸಿಎಂ ಸಿದ್ದರಾಮಯ್ಯ ಅವರು ಮುಂದಿನ ಕ್ರಮ ಏನು ಎಂಬ ಬಗ್ಗೆ ಏನೂ ಹೇಳಲಿಲ್ಲ.

ದಸರೆ ಮೈಸೂರಿನ ಒಂದು ಬ್ರಾಂಡ್‌ ಆಗಿರುವುದಿರಂದ ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವುದು ಇದರ ಉದ್ದೇಶ ಇರಬಹುದು.

ಈ ವರ್ಷದಿಂದ ದಸರೆ ಗೋಲ್ಡ್‌ ಕಾರ್ಡ್‌, ಪಾಸ್‌ ಹಾಗೂ ಬನ್ನಿ ಮಂಟಪದ ಟಿಕೆಟ್‌ಅನ್ನು ಬುಕ್‌ ಮೈ ಶೋ ಮೊದಲಾದ ವೆಬ್‌ ಫ್ಲಾಟ್‌ಫಾರ್ಮ್‌ ಮೂಲಕ ಮಾರಾಟ ಮಾಡಲಾಗಿದೆ. ಇದೇ ವ್ಯವಸ್ಥೆಯನ್ನು ಮುಂದುವರಿಸುವುದು ಸಿಎಂ ಹೇಳಿಕೆ ಹಿಂದಿನ ಉದ್ದೇಶವೇ ಎಂಬ ಪ್ರಶ್ನೆ ಕಾಡುತ್ತಿದೆ. ಪಾಸ್‌ ಬದಲು ಸಂಪೂರ್ಣ ಟಿಕೆಟ್‌ಗಳನ್ನು ಅಂತರ್ಜಾಲ ತಾಣಗಳ ಮೂಲಕವೇ ಮಾರಾಟ ಮಾಡಿ ದಸರೆ ಖರ್ಚು ಸರಿದೂಗಿಸುವ ಆಲೋಚನೆ ಇದಾಗಿರಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ