ಚಾಮರಾಜನಗರ: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಸೋಮವಾರ ಹುಲಿ ಮೃತದೇಹ ಪತ್ತೆಯಾಗಿದ್ದು, ಹುಲಿಗಳ ಕಾದಾಟದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಸುಮಾರು 8 ರಿಂದ 9 ವರ್ಷದ ಹೆಣ್ಣು ಹುಲಿ ಇದಾಗಿದ್ದು, ಉದ್ಯಾನದ ಮೂಲೆಹೊಳೆ ಅರಣ್ಯ ವಲಯ ವ್ಯಾಪ್ತಿಯ ಮುತ್ತಿಗೆತೌಡು ಬೀಟ್ನಲ್ಲಿ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ನೌಕರರು ಹುಲಿ ಮೃತದೇಹ ಪತ್ತೆಹಚ್ಚಿದ್ದಾರೆ.
''ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆವು. ಭುಜ, ಬೆನ್ನು, ಕಾಲುಗಳಲ್ಲಿ ಆಳವಾದ ಗಾಯದ ಗುರುತುಗಳಿದ್ದವು. ನವೆಂಬರ್, ಡಿಸೆಂಬರ್ ತಿಂಗಳು ಹುಲಿಗಳಿಗೆ ಡೇಟಿಂಗ್ ಸಮಯ. ಹೀಗಾಗಿ ಕಾದಾಟದಿಂದ ಉಂಟಾದ ಗಾಯದಿಂದ ಹುಲಿ ಮೃತಪಟ್ಟಿರುವ ಸಾಧ್ಯತೆ ಇದೆ. ವನ್ಯಪ್ರಾಣಿಗಳ ನಡುವಿನ ಕಾದಾಟ ಅರಣ್ಯದಲ್ಲಿ ನಡೆಯುವ ಸಹಜ ಪ್ರಕ್ರಿಯೆ. ಪಶುವೈದ್ಯ ಡಾ.ನಾಗರಾಜು ಮರಣೋತ್ತರ ಪರೀಕ್ಷೆ ನಡೆಸಿ ಮಾದರಿ ಸಂಗ್ರಹಿಸಿದ ನಂತರ ಸ್ಥಳದಲ್ಲೇ ಮೃತದೇಹವನ್ನು ದಹನ ಮಾಡಲಾಯಿತು,'' ಎಂದು ಹುಲಿ ಯೋಜನೆ ನಿರ್ದೇಶಕ ಅಂಬಾಡಿ ಮಾಧವ್ ಪತ್ರಿಕೆಗೆ ತಿಳಿಸಿದರು.
ಗೌರವ ವನ್ಯಜೀವಿ ಪರಿಪಾಲಕ ಚೋಳರಾಜು, ಸಹಾಯಕ ಅರಣ್ಯ ಸಂರಕ್ಷ ಣಾಧಿಕಾರಿಗಳಾದ ಆಂತೋನಿ ಮರಿಯಪ್ಪ, ರವಿಕುಮಾರ್, ಮೂಲೆಹೊಳೆ ಮತ್ತು ಮದ್ದೂರು ವಲಯ ಅರಣ್ಯಾಧಿಕಾರಿಗಳಾದ ಸುನೀಲ್ಕುಮಾರ್, ಶೈಲೇಂದ್ರಕುಮಾರ್, ಹಿಮಗಿರಿ ವನ್ಯಜೀವಿ ಟ್ರಸ್ಟ್ ಕಾರ್ಯನಿರ್ವಾಹಕ ಆರ್.ರಘುರಾಂ ಹಾಜರಿದ್ದರು.