ಆ್ಯಪ್ನಗರ

ಮೋಡ ಬಿತ್ತನೆ ಬಿಟ್ಟು, ಕಾಡು ಬಿತ್ತನೆ ಮಾಡುವಂತೆ ಪಾದಯಾತ್ರೆ

ಮೋಡ ಬಿತ್ತನೆ ಮಾಡುವ ಬದಲು ಕಾಡು ಬಿತ್ತನೆ ಮಾಡುವಂತೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಯಿತು.

Vijaya Karnataka 5 Jul 2019, 5:00 am
ಮೈಸೂರು: ಮೋಡ ಬಿತ್ತನೆ ಮಾಡುವ ಬದಲು ಕಾಡು ಬಿತ್ತನೆ ಮಾಡುವಂತೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಯಿತು.
Vijaya Karnataka Web cloud sowing
ಮೋಡ ಬಿತ್ತನೆ ಬಿಟ್ಟು, ಕಾಡು ಬಿತ್ತನೆ ಮಾಡುವಂತೆ ಪಾದಯಾತ್ರೆ


ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಜಮಾವಣೆಗೊಂಡು ಚಾಮುಂಡಿಬೆಟ್ಟದವರೆಗೆ ಪಾದಯಾತ್ರೆ ನಡೆಸಿ ಆಕ್ರೋಶವ್ಯಕ್ತಪಡಿಸಿದರು.

ಈ ಸಂದರ್ಭ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಅವರು ಮಾತನಾಡಿ, ಅರಣ್ಯ ಸಂಪತ್ತನ್ನು ಲೂಟಿಗೈದು ಮರಳನ್ನು ಬರಿದು ಮಾಡುತ್ತಾ ಅಭಿವೃದ್ಧಿ ಹೆಸರಿನಲ್ಲಿ ಕಲ್ಲು ಗುಡ್ಡಗಳನ್ನು ಮಾಯ ಮಾಡಿ ಇತ್ತೀಚೆಗೆ ಮಳೆಗಾಗಿ ಮೋಡ ಬಿತ್ತನೆಗೆ ಮೊರೆ ಹೋಗುತ್ತಿರುವ ಸರಕಾರಗಳನ್ನು ಕಾಡಿನತ್ತ ಮುಖ ಮಾಡುವುದು ಅಗತ್ಯವಾಗಿದೆ ಎಂದು ಹೇಳಿದರು.

ಜಿಪಂ ವತಿಯಿಂದ ಕಳೆದ 20 ವರ್ಷಗಳಿಂದ 50 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಕೊಳವೆ ಬಾವಿ ಕೊರೆತಕ್ಕೆ ವಿನಿಯೋಗಿಸಿರುವುದು ದುರಂತದ ಸಂಗತಿ. ಇಷ್ಟೇ ಹಣವನ್ನು ಮಳೆನೀರು ಸಂಗ್ರಹಣೆ, ಅಂತರ್ಜಲ ಮರುಪೂರಣ ಕಾರ್ಯಕ್ರಮಗಳು, ಕಾಡು ಬೆಳೆಸಲು ವಿನಿಯೋಗಿಸಿದ್ದರೆ ನಾಡಿಗರಿಗೆ ಬರ ತಲೆದೋರುತ್ತಿರಲಿಲ್ಲ ಎಂದು ಅಸಮಾಧಾನವ್ಯಕ್ತಪಡಿಸಿದರು.

ಹೊರ ರಾಜ್ಯದಿಂದ ಬಂದಂತಹ ಉದ್ದಿಮೆಗಳ ಬೃಹತ್‌ ಕಟ್ಟಡ ಕಟ್ಟಲು, ರಾಜ್ಯದ ನದಿ,ತೊರೆ ಹಳ್ಳಗಳನ್ನು, ಮರಗಳನ್ನು ನಾಶ ಮಾಡಿದ ಪರಿಣಾಮ ಅಂತರ್ಜಲ ಬರಿದಾಗಿದೆ. ಕೊಡಗು ಸೇರಿದಂತೆ ರಾಜ್ಯದ ವಿವಿಧೆಡೆ ಮರಗಳ ಹನನ ಎಗ್ಗಿಲ್ಲದೆ ಸಾಗುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಒಂದೇ ಕಾಮಗಾರಿಯನ್ನು ಹತ್ತಾರು ಬಾರಿ ಮಾಡುತ್ತಿರುವುದು ಮತ್ತು ಅದಕ್ಕಾಗಿ ಕಲ್ಲು ಕೋರೆಗಳನ್ನು ಕರಗಿಸಿ ಜಲ್ಲಿಗಳನ್ನಾಗಿ ಪರಿವರ್ತಿಸುತ್ತಿರುವುದು ದುರಂತದ ಸಂಗತಿ ಎಂದು ಬೇಸರವ್ಯಕ್ತಪಡಿಸಿದರು.

ನಾಗರಹೊಳೆ,ಚಾಮುಂಡಿಬೆಟ್ಟ ಸೇರಿದಂತೆ ಹಲವಾರು ಅರಣ್ಯಗಳಿಗೆ ಈಗಾಗಲೇ ಬೆಂಕಿ ಬಿದ್ದಿದ್ದು, ಅರಣ್ಯವನ್ನು ಉಳಿಸಿ ಬೆಳೆಸಬೇಕಾದ ಕರ್ತವ್ಯ ಸರಕಾರ ಮತ್ತು ಎಲ್ಲರದ್ದಾಗಿದೆ. ಆ ನಿಟ್ಟಿನಲ್ಲಿ ಅರಿವು ಮೂಡಿಸಲು ಪಾದಯಾತ್ರೆಯನ್ನು ನಡೆಸುತ್ತಿರುವುದಾಗಿ ತಿಳಿಸಿದರು.

ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭವಾದ ಪಾದಯಾತ್ರೆ ಮೃಗಾಲಯದ ಮುಂಭಾಗದ ರಸ್ತೆಯ ಮೂಲಕ ಸಾಗಿ ವಾಹನಗಳು ಸಂಚರಿಸುವ ರಸ್ತೆಯಲ್ಲಿಯೇ ಬೆಟ್ಟವನ್ನು ಹತ್ತಿ ಚಾಮುಂಡಿದೇವಿಗೆ ಪೂಜೆ ಸಲ್ಲಿಸಿದರು.

ಈ ವೇಳೆ ರಾಜ್ಯಾ ಉಪಾಧ್ಯಕ್ಷ ದಿನೇಶ್‌, ರಾಜ್ಯ ಯುವ ಘಟಕ ಉಪಾಧ್ಯಕ್ಷ ರಂಜಿತ್‌ಗೌಡ, ರಾಜ್ಯ ಯುವ ಘಟಕ ಅಧ್ಯಕ್ಷ ಶ್ರೀನಿವಾಸ್‌, ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಹರೀಶ್‌, ರಾಜ್ಯ ಮಹಿಳಾ ಅಧ್ಯಕ್ಷೆ ಮಂಗಳಮ್ಮ, ರಾಜ್ಯ ಕಾರ್ಯದರ್ಶಿ ಚಂದ್ರೇಗೌಡ ಇತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ