ಆ್ಯಪ್ನಗರ

ಒಂದೇ ವೇದಿಕೆಯಲ್ಲಿ ಸಿದ್ದು ಈಶು, ಕಾರಲ್ಲೂ ಜೊತೆ ಜೊತೆಯಲ್ಲೇ ..! ಏನಿದು ದೋಸ್ತಿ ಕಹಾನಿ

ಪರಸ್ಪರ ರಾಜಕೀಯ ವಿರೋಧಿಗಳಾದರೂ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಎಸ್ ಈಶ್ವರಪ್ಪ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದೇ ಅಲ್ಲದೆ ಒಂದೇ ಕಾರಲ್ಲಿ ಪ್ರಯಾಣ ಮಾಡುವ ಮೂಲಕ ಗಮನ ಸೆಳೆದರು

Vijaya Karnataka Web 19 Jan 2020, 4:41 pm
ಮೈಸೂರು: ರಾಜಕೀಯವಾಗಿ ಪರಸ್ಪರ ಬದ್ಧ ವೈರಿಗಳು. ಒಬ್ಬರಿಗೊಬ್ಬರ ಬಗ್ಗೆ ಸದಾ ಚುಚ್ಚು ಮಾತನ್ನಾಡುವ ಎದುರಾಳಿಗಳು. ಹೌದು, ಹೀಗಿರುವ ಮೂಲಕ ಸುದ್ದಿಯಾಗುತ್ತಿರುವವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಎಸ್‌ ಈಶ್ವರಪ್ಪ. ಆದರೆ ಭಾನುವಾರ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬ್ಬರು ಖುಷಿಖುಷಿಯಾಗಿ ಒಂದೇ ವೇದಿಕೆ ಹಂಚಿಕೊಂಡಿದ್ದು ಮಾತ್ರವಲ್ಲದೆ ಜೊತೆಯಾಗಿ ಕಾರಲ್ಲಿ ಪ್ರಯಾಣ ಮಾಡುವ ಮೂಲಕ ಗಮನ ಸೆಳೆದರು.
Vijaya Karnataka Web siddu eash
ಒಂದೇ ವೇದಿಕೆಯಲ್ಲಿ ಸಿದ್ದು ಈಶು, ಕಾರಲ್ಲೂ ಜೊತೆ ಜೊತೆಯಲ್ಲೇ ..! ಏನಿದು ದೋಸ್ತಿ ಕಹಾನಿ


ಮೈಸೂರಿನ ಕೆ. ಆರ್‌ ನಗರದ ದೊಡ್ಡಕೊಪ್ಪಳು ಗ್ರಾಮದಲ್ಲಿ ನಡೆದ ಸಂಗೋಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹಾಗೂ ಕೆ.ಎಸ್ ಈಶ್ವರಪ್ಪ ಭಾಗವಹಿಸಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ರಾಜಕೀಯ ಎದುರಾಳಿಗಳಾದ ಸಿದ್ದರಾಮಯ್ಯ ಹಾಗೂ ಈಶ್ವರಪ್ಪ ಜೊತೆಗೆ ಎಚ್. ವಿಶ್ವನಾಥ್ ಕೂಡಾ ಕಾಣಿಸಿಕೊಂಡರು.

ಮೂವರು ನಾಯಕರು ವೇದಿಕೆಯಲ್ಲಿ ಆತ್ಮೀಯವಾಗಿ ಮಾತನಾಡಿದರು. ಸಿದ್ದರಾಮಯ್ಯ ಮಧ್ಯದಲ್ಲಿದ್ದರೆ ಎಡ ಹಾಗೂ ಬಲ ಭಾಗದಲ್ಲಿ ಈಶ್ವರಪ್ಪ ಮತ್ತು ಎಚ್. ವಿಶ್ವನಾಥ್ ಕುಳಿತುಕೊಂಡಿದ್ದರು. ಇಬ್ಬರಿಗೂ ಸಿದ್ದರಾಮಯ್ಯ ಬಿಸ್ಕೆಟ್‌ ನೀಡಿದರು.

ಕಾರ್ಯಕ್ರಮದ ಬಳಿಕ ಸಿದ್ದರಾಮಯ್ಯ ಹಾಗೂ ಈಶ್ವರಪ್ಪ ಒಂದೇ ಕಾರಲ್ಲಿ ಪ್ರಯಾಣ ಮಾಡಿದರು. ಸಿದ್ದರಾಮಯ್ಯ ಕಾರಿನ ಮುಂದಿನ ಸೀಟಲ್ಲಿ ಕುಳಿತುಕೊಂಡಿದ್ದರೆ ಈಶ್ವರಪ್ಪ ಹಿಂದಿದ್ದರು. ಕಾರನ್ನು ಮುತ್ತಿಕೊಂಡ ಅಭಿಮಾನಿಗಳಿಗೆ ಉಭಯ ನಾಯಕರು ನಿಂತು ಕೈ ಬೀಸಿದರು.

ಇತ್ತೀಚೆಗೆ ಸಿದ್ದರಾಮಯ್ಯ ಹೃದಯ ಸಂಬಂಧಿ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾಗ ಸಿಎಂ ಬಿ.ಎಸ್‌ ಯಡಿಯೂರಪ್ಪ ಜೊತೆಗೆ ಈಶ್ವರಪ್ಪ ಕೂಡಾ ತೆರಳಿ ಆರೋಗ್ಯ ವಿಚಾರಿಸಿದ್ದರು. ಆಸ್ಪತ್ರೆಯಲ್ಲಿ ಸಿದ್ದರಾಮಯ್ಯ ಜೊತೆಗೆ ನಗೆ ಚಟಾಕಿ ಹಾರಿಸಿದ ವಿಡಿಯೋ ಹಾಗೂ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಭಿನ್ನ ಸಿದ್ದಾಂತದ ನಾಯಕರು ಜೊತೆಗೆ ಕಾಣಿಸಿಕೊಂಡಿದ್ದು ಮೆಚ್ಚುಗೆಗೆ ಪಾತ್ರವಾಗಿತ್ತು.

ಸಿದ್ದರಾಮಯ್ಯ ಜೊತೆಗೆ ಸೆಲ್ಫಿಗೆ ಮುಗಿಬಿದ್ದ ಯುವತಿಯರು

ಮೈಸೂರಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ನಡೆದ ಸಂಗೋಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಜೊತೆಗೆ ಯುವತಿಯರು ಸೆಲ್ಫಿಗೆ ಮುಗಿಬಿದ್ದರು. ವೇದಿಕೆಗೆ ತೆರಳಿ ಸಿದ್ದರಾಮಯ್ಯ ಜೊತೆ ಸೆಲ್ಫಿ ತೆಗೆಸಿಕೊಂಡ ಯುವತಿಯರು ಫುಲ್ ಖುಷಿಯಾದರು. ಸಿದ್ದರಾಮಯ್ಯ ಕೂಡಾ ಯಾರಿಗೂ ಬೇಡ ಎನ್ನದೆ ಯುವತಿಯರ ಸೆಲ್ಫಿಗೆ ಪೋಸ್ ಕೊಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ