ಆ್ಯಪ್ನಗರ

ಕ್ರೆಡಿಟ್‌ ಕಾರ್ಡ್‌ ರವಿ ಬಂಧನ

ಸಭೆ ಸಮಾರಂಭಗಳಿಗೆ ಹೋಗುತ್ತಿದ್ದ ಈತ ಜನರ ಕಣ್ತಪ್ಪಿಸಿ ಕ್ರೆಡಿಟ್ ಕಾರ್ಡ ಕದಿಯುತ್ತಿದ್ದ.

Vijaya Karnataka 5 Jul 2019, 8:27 am
ಮೈಸೂರು : ಎಲ್ಲಾದರೂ ಸಭೆ, ಸಮಾರಂಭ ನಡೆದರೆ ತಕ್ಷಣ ಈತ ಹಾಜರ್‌. ಬಂದವರ ಗಮನವೆಲ್ಲ ಕಾರ್ಯಕ್ರಮದ ಮೇಲಿದ್ದರೆ ಈತನ ಗಮನ ಮಾತ್ರ ಮಹಿಳೆಯರ ವ್ಯಾನಿಟಿ ಬ್ಯಾಗ್‌ ಮೇಲೆ. ಸಭಿಕನಂತೆ ಕುಳಿತು ಮಹಿಳೆಯರ ಬ್ಯಾಗ್‌ಗಳಲ್ಲಿನ ಎಟಿಎಂ ಕಾರ್ಡ್‌ ಎಗರಿಸಿ ಪರಾರಿಯಾಗುತ್ತಿದ್ದ. ವಿಶೇಷವೆಂದರೆ ಲಡ್ಡು ಬಂದು ಬಾಯಿಗೆ ಬಿದ್ದಂತೆ ಈತ ಕದಿಯುತ್ತಿದ್ದ ಎಟಿಎಂ ಕಾರ್ಡ್‌ನೊಂದಿಗೆ ಪಿನ್‌ಕೋಡ್‌ ಕೂಡ ಸಿಗುತಿತ್ತು. ಈ ರೀತಿ ಎಟಿಎಂ ಕಾರ್ಡ್‌ಗಳನ್ನು ಕದಿಯುವುದನ್ನೇ ವೃತ್ತಿಯಾಗಿಸಿಕೊಂಡಿದ್ದ ಖದೀಮನನ್ನು ಅಶೋಕಪುರಂ ಠಾಣೆಯ ಇನ್ಸ್‌ಪೆಕ್ಟರ್‌ ಪಿ.ಎಂ.ಸಿದ್ದರಾಜು ಮತ್ತು ಸಿಬ್ಬಂದಿ ಜೈಲಿಗಟ್ಟಿದ್ದಾರೆ.
Vijaya Karnataka Web Arrest


ವಿಲಾಸಿ ಜೀವನ ನಡೆಸುತ್ತಿದ್ದ ಮೈಸೂರಿನ ಯರಗನಹಳ್ಳಿಯ ರವಿ ಅಲಿಯಾಸ್‌ ಕ್ರೆಡಿಟ್‌ ಕಾರ್ಡ್‌ ರವಿ(48) ಬಂಧಿತ. ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮೂರು ತಿಂಗಳ ಹಿಂದೆ ಏಪ್ರಿಲ್‌ 20ರಂದು ಕುವೆಂಪು ನಗರ ಗಾನ ಭಾರತಿ ವೀಣೆ ಶೇಷಣ್ಣ ಭವನದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪ್ರೇಕ್ಷಕನಂತೆ ಭಾಗವಹಿಸಿದ್ದ ರವಿ, ಪಕ್ಕದಲ್ಲಿದ್ದ ಕುಳಿತಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್‌ ಮೇಲೆ ಕಣ್ಣು ಹಾಕಿದ್ದ. ಅವರು ಬ್ಯಾಗ್‌ ಅನ್ನು ಆಸನದ ಮೇಲೆ ಇಟ್ಟು ಮೂರ್ನಾಲ್ಕು ಬಾರಿ ತೆರಳುತ್ತಿದ್ದುದನ್ನು ಗಮನಿಸಿ, ಬ್ಯಾಗ್‌ನಿಂದ ಎಟಿಎಂ ಮತ್ತು ಕ್ರೆಡಿಟ್‌ ಕಾರ್ಡ್‌ನೊಂದಿಗೆ ಕಾರ್ಡ್‌ಗಳ ಪಿನ್‌ ನಂಬರ್‌ ಬರೆದಿದ್ದ ಚಿಕ್ಕ ಪುಸ್ತಕವನ್ನು ದೋಚಿದ್ದ. ಈ ಬಗ್ಗೆ ಮಹಿಳೆ ಅಶೋಕಪುರಂ ಪೊಲೀಸ್‌ ಠಾಣೆಯಲ್ಲಿ ದೂರು ನೀಡುವಷ್ಟರಲ್ಲಿ ರವಿ ಅವರ ಎಟಿಎಂನಿಂದ ಒಂದು ಲಕ್ಷಕ್ಕೂ ಅಧಿಕ ಹಣವನ್ನು ನಾನಾ ಎಟಿಎಂ ಕೇಂದ್ರಗಳಲ್ಲಿ ಡ್ರಾ ಮಾಡಿದ್ದ.

ಲಕ್ಷ್ಮಿಪುರಂ ಪೊಲೀಸ್‌ ಠಾಣೆ ವ್ಯಾಪ್ತಿಯ ರಾಮ ಮಂದಿರದಲ್ಲಿ ನಡೆದ ಭಜನಾ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿನ ಎಟಿಎಂ ಕಾರ್ಡ್‌ ಕದ್ದು, ಇನ್ಸ್‌ಪೆಕ್ಟರ್‌ ಸಿದ್ದರಾಜು ಅವರ ಕೈಗೆ ಸಿಕ್ಕಿ ಬಿದ್ದಿದ್ದ. ಅಶೋಕಪುರಂ ಠಾಣೆಗೆ ವರ್ಗವಾಗಿ ಬಂದ ಸಿದ್ದರಾಜು ಅವರು, ರಾಮ ಮಂದಿರದಲ್ಲಿ ನಡೆದ ಕಳ್ಳತನದ ಮಾದರಿಯನ್ನು ಗಮನಿಸಿ, ರವಿ ಡ್ರಾ ಮಾಡಿದ್ದ ಎಟಿಎಂ ಕೇಂದ್ರಗಳಲ್ಲಿ ಸಿಕ್ಕ ಸಿಸಿ ಟಿವಿ ಫೂಟೇಜ್‌ ಪರಿಶೀಲಿಸಿದರು. ಈತನನ್ನು ಪತ್ತೆ ಹಚ್ಚಿದರು.

ಬೆಂಗಳೂರು ಸೇರಿದಂತೆ ಬೇರೆ ಊರುಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸಭಿಕನಾಗಿ ಎಟಿಎಂ ಕಾರ್ಡ್‌ಗಳನ್ನು ಎಗರಿಸಿಕೊಂಡು ರಾತ್ರಿ ಹೊತ್ತಿಗೆ ಮನೆ ಸೇರುತ್ತಿದ್ದ ಈತನನ್ನು ಕಾರ್ಯಾಚರಣೆ ನಡೆಸಿದ ಇನ್ಸ್‌ಪೆಕ್ಟರ್‌ ಸಿದ್ದರಾಜು ಮತ್ತು ಸಿಬ್ಬಂದಿ ಬಂಧಿಸಿದ್ದಾರೆ.

ಕ್ಯಾಪ್‌ ಧರಿಸಿ ಡ್ರಾ:

ಮೈಸೂರು ನಗರದ ಕೆ.ಆರ್‌.ಠಾಣೆ, ಲಕ್ಷ್ಮೇಪುರಂ, ಅಶೋಕಪುರಂ ಪೊಲೀಸ್‌ ಠಾಣೆಯೊಂದಿಗೆ ಬೆಂಗಳೂರಿನ ನಾನಾ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಈತ ಎಟಿಎಂ ಕಾರ್ಡ್‌ಗಳನ್ನು ಕಳವು ಮಾಡಿದ್ದಾನೆ. ಎಟಿಎಂ ಕಾರ್ಡ್‌ ಕಳೆದುಕೊಂಡವರು ಬ್ಲಾಕ್‌ ಮಾಡಿಸಬಹುದು ಎಂಬ ಎಚ್ಚರಿಕೆಯಿಂದ ಕ್ಷಣಾರ್ಧದಲ್ಲಿ ಎಷ್ಟು ಹಣ ಸಲ ಡ್ರಾ ಮಾಡಲು ಸಾಧ್ಯವೋ ಅಷ್ಟು ಬಾರಿ ಹಣ ಡ್ರಾ ಮಾಡುತ್ತಿದ್ದ. ಸಿಸಿ ಟಿವಿ ಕ್ಯಾಮೆರಾದಲ್ಲಿ ಮುಖ ಕಾಣದಂತೆ ಕ್ಯಾಪ್‌ ಧರಿಸುತ್ತಿದ್ದ.

ಕದ್ದಿದ್ದು ಲಕ್ಷ.. ಸಿಕ್ಕಿದ್ದು 20 ಸಾವಿರ: ಕುವೆಂಪು ನಗರದ ಗಾನ ಭಾರತಿ ಸಭಾಂಗಣದಲ್ಲಿ ಮಹಿಳೆಯ ಎಟಿಎಂ ಕಾರ್ಡ್‌ ಕದ್ದಿದ್ದ ರವಿ, ನಗರದ ನಾನಾ ಎಟಿಎಂ ಕೇಂದ್ರಗಳಲ್ಲಿ 1.25 ಲಕ್ಷ ರೂ. ಡ್ರಾ ಮಾಡಿದ್ದ. ಮೂರು ತಿಂಗಳಲ್ಲಿ ಒಂದು ಲಕ್ಷ ರೂ. ತನ್ನ ವಿಲಾಸಿ ಜೀವನಕ್ಕೆ ಖರ್ಚು ಮಾಡಿದ್ದು, ಉಳಿದ 20 ಸಾವಿರ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ