ಆ್ಯಪ್ನಗರ

ದಸರೆ ಗಜಪಡೆ: ಭವಿಷ್ಯದ ಉತ್ತರಾಧಿಕಾರಿಗೆ ತಯಾರಿ

ವಿಶ್ವಖ್ಯಾತಿಯ ನಾಡ ಹಬ್ಬ ಮೈಸೂರು ದಸರೆಗೆ ಹಸಿರು ನಿಶಾನೆ ಸಿಕ್ಕಿದ್ದು, ಆ. 22ಕ್ಕೆ ಮೊದಲ ತಂಡದ ಗಜಪಯಣ ಆರಂಭವಾಗಲಿದೆ.

Vijaya Karnataka 15 Aug 2019, 5:00 am
ರಾಂಪುರದ 'ರೋಹಿತ' ಮೇಲೆ ಎಲ್ಲರ ಕಣ್ಣು - 22ರಿಂದ ಗಜ ಪಯಣ ಆರಂಭ: 14 ಆನೆಗಳ ಆಯ್ಕೆ
Vijaya Karnataka Web dasare gajapade preparing for a future heir
ದಸರೆ ಗಜಪಡೆ: ಭವಿಷ್ಯದ ಉತ್ತರಾಧಿಕಾರಿಗೆ ತಯಾರಿ


ಐತಿಚಂಡ ರಮೇಶ್‌ ಉತ್ತಪ್ಪ ಮೈಸೂರು

ವಿಶ್ವಖ್ಯಾತಿಯ ನಾಡ ಹಬ್ಬ ಮೈಸೂರು ದಸರೆಗೆ ಹಸಿರು ನಿಶಾನೆ ಸಿಕ್ಕಿದ್ದು, ಆ. 22ಕ್ಕೆ ಮೊದಲ ತಂಡದ ಗಜಪಯಣ ಆರಂಭವಾಗಲಿದೆ.

ಈ ಬಾರಿ ಹೊಸಬರಿಬ್ಬರ ಸೇರ್ಪಡೆಯಾಗಿರುವುದು ವಿಶೇಷ. ಭವಿಷ್ಯದಲ್ಲಿ ಚಿನ್ನದ ಅಂಬಾರಿ ಹೊರಲು ಉತ್ತರಾಧಿಕಾರಿಯ ಹುಡುಕಾಟದಲ್ಲಿರುವ ತಂಡಕ್ಕೆ 'ರೋಹಿತ್‌' ಪ್ರಮುಖ ಆಕರ್ಷಣೆಯಾಗಿದ್ದಾನೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬುಧವಾರ ಉನ್ನತ ಮಟ್ಟದ ಸಭೆ ನಡೆದು ಹಲವು ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ಈ ಬಾರಿ 14 ಸದಸ್ಯರು: ದಸರಾ ಆನೆಗಳಲ್ಲಿಯೂ ಎರಡನೇ ಹಂತದ ನಾಯಕತ್ವ ಬೆಳೆಸಲು ಈಗಾಗಲೇ ಅರಣ್ಯ ಇಲಾಖೆ ಯೋಜನೆ ಹಾಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ಹೊಸಬರ ಸೇರ್ಪಡೆ ಸಾಧ್ಯತೆ ಕುರಿತು ವಿಜಯ ಕರ್ನಾಟಕ ಆ.8 ರಂದು ''ದಸರೆ ಗಜಪಡೆ: 2ನೇ ಹಂತದ ನಾಯಕತ್ವಕ್ಕೆ ಸಿದ್ಧತೆ'' ಎಂಬ ವಿಶೇಷ ವರದಿ ಪ್ರಕಟಿಸಿತ್ತು. ಅದರಂತೆ ಈ ಬಾರಿ ಗಜಪಡೆಯಲ್ಲಿ ನಾಲ್ಕು ಆನೆಗಳನ್ನು ಮೊದಲ ಬಾರಿಗೆ ಕರೆತರಲಾಗುತ್ತಿದೆ. ಈ ಆನೆಗಳನ್ನು ಡಿಸಿಎಫ್‌ಒ ಅಲೆಕ್ಸಾಂಡರ್‌, ವೈದ್ಯಾಧಿಕಾರಿ ಡಾ. ನಾಗರಾಜ್‌ ಅವರ ನೇತೃತ್ವದ ತಂಡ ಪರಿಶೀಲಿಸಿ ಆಯ್ಕೆ ಮಾಡಿತ್ತು. ಈ ಆನೆಗಳು ಸೇರಿದಂತೆ ಒಟ್ಟು 14 ಆನೆಗಳು ದಸರೆಯಲ್ಲಿ ಭಾಗವಹಿಸಲು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಒಪ್ಪಿಗೆ ನೀಡಿದ್ದಾರೆ.

ರೋಹಿತ್‌ ಮೇಲೆ ಕಣ್ಣು: ಮೊದಲ ಬಾರಿಗೆ ನಾಲ್ಕು ಹೆಚ್ಚುವರಿಯಾಗಿ ಸೇರ್ಪಡೆಯಾಗಿವೆ. ಬಂಡೀಪುರ ರಕ್ಷಿತಾರಣ್ಯದ ರಾಂಪುರ ಕ್ಯಾಂಪ್‌ನಲ್ಲಿರುವ 19 ವರ್ಷದ ರೋಹಿತ್‌, 17 ವರ್ಷದ ಲಕ್ಷ್ಮಿ ಹಾಗೂ 57 ವರ್ಷದ ಜಯಪ್ರಕಾಶ್‌, ದುಬಾರೆಯ 49 ವರ್ಷದ ಈಶ್ವರ ದಸರಾ ಸಂಭ್ರಮದಲ್ಲಿ ಪಾಲ್ಗೊಳ್ಳಲಿವೆ. ಈ ವರ್ಷ ಹಿರಿಯರೊಂದಿಗೆ ಯಾವುದೇ ತಂಟೆ, ತಕರಾರು ಮಾಡದೆ ರೋಹಿತ್‌ ಹೆಜ್ಜೆ ಹಾಕಿದರೆ ಮುಂದೆ ಆತನನ್ನು ಉತ್ತರಾಧಿಕಾರಿಯಾಗಿಸುವ ಪ್ರಯತ್ನ ನಡೆಯಬಹುದು. ಆತ ಜನಸಾಗರದ ನಡುವೆ ಹೇಗೆ ವರ್ತಿಸುತ್ತಾನೆ ಎನ್ನುವುದರ ಮೇಲೆ ಭವಿಷ್ಯ ಅಡಗಿದೆ. ರೋಹಿತ್‌ ಹಾಗೂ ಲಕ್ಷ್ಮಿ ಬಂಡೀಪುರದಲ್ಲಿ ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.

ಗಟ್ಟಿಮುಟ್ಟಿನ ಆಸಾಮಿ: ರೋಹಿತ್‌ ಯುವಪಡೆಯಲ್ಲಿ ಗಟ್ಟಿಮುಟ್ಟು. ಗಂಭೀರ ಸ್ವಭಾವದವ. ಇಲ್ಲಿವರೆಗೆ ಯಾರನ್ನೂ ಬೆದರಿಸಿಲ್ಲ. ಯಾರಿಗೂ ಆತಂಕ ಉಂಟು ಮಾಡಿಲ್ಲ. ತನ್ನ ಮಾವುತ ಹೇಳದೆ ಹುಲ್ಲುಕಡ್ಡಿಯನ್ನೂ ಮುಟ್ಟುವುದಿಲ್ಲ. ಸುಮಾರು 30 ವರ್ಷಕ್ಕೂ ಮೀರಿದ ಆನೆಗಳ ಗಾಂಭೀರ್ಯ ಈತನಿಗಿದ್ದು, ಅಷ್ಟೇ ದಷ್ಟಪುಷ್ಟನಾಗಿದ್ದಾನೆ. ಉತ್ತಮ ನಡತೆಯಿಂದಾಗಿ ವಿಶೇಷ ಗಮನ ಸೆಳೆದಿರುವ ರೋಹಿತ್‌ ಕೆಲವು ವರ್ಷ ಪಳಗಿದಲ್ಲಿ ಜಂಬೂಸವಾರಿಯ ಪ್ರಮುಖ ಸದಸ್ಯನಾಗಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.

--------------

ನಂಬರ್‌ 3ಕ್ಕೆ ಹುಡುಕಾಟ

ದಸರಾ ಜಂಬೂಸವಾರಿ ಪಡೆಯಲ್ಲಿ ನಂಬರ್‌ ತ್ರಿಗೆ ಹುಡುಕಾಟ ನಡೆಯುತ್ತಿದೆ. ಈಗ ಅಂಬಾರಿ ಹೊರುತ್ತಿರುವ ಅರ್ಜುನನಿಗೆ 59 ವರ್ಷ. ನಂಬರ್‌ 2 ಸ್ಥಾನದಲ್ಲಿರುವವನು ಅಭಿಮನ್ಯು. ಹುಲಿ ಕಾರ್ಯಾಚರಣೆಯ ನಿಷ್ಣಾತನಾಗಿರುವ ಅಭಿಮನ್ಯುವಿಗೆ ಈಗಾಗಲೇ ಅಂಬಾರಿ ಹೊರುವ ತಾಲೀಮು ಮಾಡಲಾಗಿದೆ. ಮುಂದೆ ಈತನೇ ಅಂಬಾರಿ ಹೊರಬಹುದು. ಈತನಿಗೂ 53 ವರ್ಷ. ಈ ಕಾರಣಕ್ಕಾಗಿ ನಂಬರ್‌ 3 ಹುಡುಕಾಟ ನಡೆಯುತ್ತಿದೆ. ಹತ್ತು ವರ್ಷ ಅಭಿಮನ್ಯು ಅಂಬಾರಿ ಹೊತ್ತರೆ ನಂತರ ಯಾರು ಎಂಬ ಪ್ರಶ್ನೆ ಇದೆ. ತಂಡದಲ್ಲಿದ್ದ ರೌಡಿ ರಂಗ ಖಾಸಗಿ ಬಸ್‌ ಅಪಘಾತದಲ್ಲಿ ಸಾವಿಗೀಡಾಗಿದ್ದಾನೆ. ಜೂನಿಯರ್‌ ದ್ರೋಣ ಹೃದಯಾಘಾತದಿಂದ ಕಣ್ಮರೆಯಾಗಿದ್ದಾನೆ. ಇನ್ನು ತಂಡದಲ್ಲಿ ಗೋಪಿ, ವಿಕ್ರಮ, ಧನಂಜಯ, ಈಶ್ವರ ಇದ್ದರೂ ಉತ್ತರಾಧಿಕಾರಿಯಾಗುವ ಸಾಧ್ಯತೆ ಕಡಿಮೆ. ಹೀಗಾಗಿ ಹತ್ತು ವರ್ಷದಲ್ಲಿ ನಂಬರ್‌ ತ್ರೀ ಸ್ಥಾನಕ್ಕೆ ರೋಹಿತ್‌ ಸಿದ್ಧನಾಗಬಹುದೇ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ.

---------------

ಜಂಬೂಸವಾರಿ ಗಜ ಪಡೆ

ಬಳ್ಳೆ ಕ್ಯಾಂಪ್‌ನ ಅರ್ಜುನ (59), ಮತ್ತಿಗೋಡುವಿನ ಬಲರಾಮ (61), ಅಭಿಮನ್ಯು (53), ವರಲಕ್ಷ್ಮಿ (63), ದುಬಾರೆಯಿಂದ ಕಾವೇರಿ (42), ವಿಜಯ (62), ವಿಕ್ರಮ (46), ಗೋಪಿ (37), ಧನಂಜಯ (36), ಈಶ್ವರ (49), ಕೆ.ಗುಡಿಯಿಂದ ದುರ್ಗಾ ಪರಮೇಶ್ವರಿ (52), ರಾಂಪುರದಿಂದ ಜಯಪ್ರಕಾಶ್‌ (57), ಲಕ್ಷ್ಮಿ (17), ರೋಹಿತ್‌ (19).

--------------

ಮುಖ್ಯಮಂತ್ರಿ ನೇತೃತ್ವದ ಸಭೆಯಲ್ಲಿ ದಸರಾ ಕುರಿತು ಚರ್ಚಿಸಲಾಗಿದೆ. ನಾವು ತಯಾರಿಸಿದ ಗಜಪಡೆಯ ಪಟ್ಟಿಗೆ ಒಪ್ಪಿಗೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಆ. 22ರಂದು ಮೊದಲ ತಂಡದ ಪಯಣ ವೀರನಹೊಸಳ್ಳಿಯಿಂದ ಆರಂಭವಾಗಲಿದೆ.
-ಅಲೆಕ್ಸಾಂಡರ್‌, ಡಿಸಿಎಫ್‌.

--------------

ದಸರೆಗೆ ಆಯ್ಕೆಯಾಗಿರುವ 14 ಆನೆಗಳೂ ಆರೋಗ್ಯದಿಂದ ಇವೆ. ಈಗಾಗಲೇ ಅವುಗಳನ್ನು ಸಂಪೂರ್ಣ ಪರೀಕ್ಷೆಗೆ ಒಳಪಡಿಸಿದ್ದೇವೆ. ಸಾಮಾನ್ಯವಾಗಿ 12 ಆನೆಗಳು ಬರುತ್ತಿದ್ದವು. ಈ ಬಾರಿ ಎರಡು ಹೆಚ್ಚುವರಿ ಆನೆಗಳನ್ನು ಆಯ್ಕೆ ಮಾಡಿದ್ದೇವೆ. ದಸರಾಕ್ಕೆ ಇವು ಸಿದ್ಧವಾಗಿವೆ.
-ಡಾ. ನಾಗರಾಜ್‌, ವೈದ್ಯಾಧಿಕಾರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ