ಆ್ಯಪ್ನಗರ

ದಸರಾಗೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜು

ನಾಡಹಬ್ಬ ಐತಿಹಾಸಿಕ ಮೈಸೂರು ದಸರಾ ಉತ್ಸವದ ಚಾಲನೆಗೆ ಕ್ಷಣಗಣನೆ ಆರಂಭವಾಗಿದೆ. ಇನ್‌ಫೋಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರು ಚಾಮುಂಡಿಬೆಟ್ಟದಲ್ಲಿ ಬುಧವಾರ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲಿಸುವ ಮೂಲಕ ವಿಶ್ವವಿಖ್ಯಾತ ಮೈಸೂರು ದಸರೆಗೆ ವಿಧ್ಯುಕ್ತ ಚಾಲನೆ ನೀಡುವರು.

Vijaya Karnataka 10 Oct 2018, 7:38 am
ಮೈಸೂರು: ಬೆಳಗ್ಗೆ ನಡೆಯುವ ಶುಭ ತುಲಾ ಲಗ್ನದಲ್ಲಿ ದಸರಾ ಉದ್ಘಾಟನೆಯಾಗಲಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಭಾಗವಹಿಸುವರು. ಅರಮನೆಯಲ್ಲಿ ಸಂಜೆ 6ಕ್ಕೆ ನಡೆಯುವ ಸಮಾರಂಭದಲ್ಲಿ ಸಿಎಂ ಕುಮಾರಸ್ವಾಮಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು. ರಾಜ್ಯ ಸಂಗೀತ ವಿದ್ವಾನ್‌ ಪ್ರಶಸ್ತಿಯನ್ನು ಪ್ರದಾನ ಮಾಡುವರು.
Vijaya Karnataka Web 84d03b67-4b6f-4c7f-bfe4-beb744b1ab82


ಮಂಡ್ಯ ಲೋಕಸಭೆ ಮರು ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆಯ ಬಿಸಿ ದಸರೆಗೂ ತಗುಲಿತ್ತು. ಚುನಾಯಿತ ಪ್ರತಿನಿಧಿಗಳಿಗೆ ನೀತಿ ಸಂಹಿತೆಯಿಂದ ವಿನಾಯಿತಿ ನೀಡಬೇಕೆಂದು ಕೋರಿ ದಸರಾ ವಿಶೇಷಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ಕೇಂದ್ರ ಚುನಾವಣಾ ಆಯೋಗವನ್ನು ಸೋಮವಾರ ಕೋರಿದ್ದರು. ದಸರಾ ಉತ್ಸವವನ್ನು ಎಂದಿನಂತೆ ನಡೆಸಲು ಆಯೋಗವು ಮಂಗಳವಾರ ಅನುಮತಿಸಿದೆ. ಹೀಗಾಗಿ, ಚುನಾಯಿತ ಪ್ರತಿನಿಧಿಗಳು ನಿಟ್ಟುಸಿರು ಬಿಟ್ಟಿದ್ದು, ಮೂರು ದಿನಗಳಿಂದ ದಸರಾ ಕಾರ್ಯಕ್ರಮಗಳಿಂದ ದೂರ ಉಳಿದಿದ್ದ ಸಚಿವರು ಮಂಗಳವಾರ ಸಂಜೆಯಿಂದ ಸಿದ್ಧತಾ ಕಾರ್ಯದಲ್ಲಿ ತೊಡಗಿಸಿಕೊಂಡರು.

ಮೈಸೂರು ದಸರಾ ಅ.10ರಿಂದ 19ರವರೆಗೆ ನಡೆಯಲಿದೆ. ವಿಜಯ ದಶಮಿಯ ಜಂಬೂಸವಾರಿ ಮೆರವಣಿಗೆ ಅ.19ರಂದು ಮಧ್ಯಾಹ್ನ ಅರಮನೆ ಆವರಣದಿಂದ ಹೊರಡಲಿದೆ.

ಪೊಲೀಸರು ಎರಡು ಹಂತದಲ್ಲಿ ಭದ್ರತೆ ಕೈಗೊಂಡಿದ್ದಾರೆ. ಅ. 10ರಿಂದ 17ರವರೆಗೆ ಮೊದಲ ಹಂತ, ಅ. 18ರಿಂದ 19ರವರೆಗೆ ಎರಡನೇ ಹಂತದಲ್ಲಿ ಭದ್ರತೆ ಕೈಗೊಂಡಿದ್ದು, ಐದು ಸಾವಿರಕ್ಕೂ ಹೆಚ್ಚು ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 1,600 ಗೃಹ ರಕ್ಷಕ ದಳದ ಸಿಬ್ಬಂದಿ, ಇಮಿಡಿಯಟ್‌ ಬ್ಯಾಕಪ್‌ ಸಪೋರ್ಟ್‌(ಐಬಿಯುಎಸ್‌) ಮತ್ತು ಮೈಸೂರು ನಗರ ಕಮಾಂಡೋ ಪಡೆಯ 70 ಕಮಾಂಡೋಗಳು, ಕೆಎಸ್‌ಆರ್‌ಪಿ, ಸಿಎಆರ್‌ ಮತ್ತು ಡಿಎಆರ್‌ ಸೇರಿ ಒಟ್ಟು 57 ತುಕಡಿಗಳು, 46 ಭದ್ರತಾ ತಪಾಸಣಾ ಪಡೆಗಳನ್ನು ನಿಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ಮೊಬೈಲ್‌ ಕಮಾಂಡ್‌ ಸೆಂಟರ್‌ ವಾಹನವನ್ನು ಭದ್ರತೆಗೆ ಬಳಸಲಾಗಿದೆ.

ದಸರಾ ಹಬ್ಬದ ಆಕರ್ಷಣೆಗಳಲ್ಲೊಂದಾದ ಚಲನಚಿತ್ರೋತ್ಸವ ಬುಧವಾರ ಬೆಳಗ್ಗೆ ಆರಂಭವಾಗಲಿದೆ. ಸಿಎಂ ಎಚ್‌.ಡಿ.ಕುಮಾರಸ್ವಾಮಿ 8 ದಿನಗಳ ಚಲನಚಿತ್ರೋತ್ಸವವನ್ನು ಕಲಾಮಂದಿರದಲ್ಲಿ ಉದ್ಘಾಟಿಸುವರು. ಚಲನಚಿತ್ರ ನಟ ನಿಖಿಲ್‌ ಕುಮಾರಸ್ವಾಮಿ, ನಟರಾದ ವಿಜಯ್‌ ರಾಘವೇಂದ್ರ, ಹರ್ಷಿಕಾ ಪೂಣಚ್ಚ, ಪಾರುಲ್‌ ಯಾದವ್‌, ಚಲನಚಿತ್ರ ನಿರ್ದೇಶಕ ರಿಷಬ್‌ ಶೆಟ್ಟಿ ಭಾಗವಹಿಸುವರು. 65 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

ದಸರಾ ಆಹಾರ ಮೇಳ, ದಸರಾ ಕುಸ್ತಿ, ಪುಸ್ತಕ ಮಳಿಗೆ, ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾಕೂಟ, ವಸ್ತುಪ್ರದರ್ಶನ, ಫಲಪುಷ್ಪ ಪ್ರದರ್ಶನ, ದೀಪಾಲಂಕಾರ ಬುಧವಾರ ಉದ್ಘಾಟನೆಯಾಗಲಿದೆ. ಕುಪ್ಪಣ್ಣ ಪಾರ್ಕ್‌ನಲ್ಲಿ ಗಾಜಿನ ಮನೆ ಲೋಕಾರ್ಪಣೆಗೊಳ್ಳಲಿದೆ. ಕುಮಾರಸ್ವಾಮಿ ಸಚಿವ ಸಂಪುಟದ ಅನೇಕ ಸಚಿವರು, ಶಾಸಕರು ಸಮಾರಂಭಗಳಲ್ಲಿ ಪಾಲ್ಗೊಳ್ಳುವರು.

ಕುಮಾರಸ್ವಾಮಿ


ದಸರಾ ಮಹೋತ್ಸವವನ್ನು ಉದ್ಘಾಟಿಸಲು ಮಂಗಳವಾರ ಸಂಜೆ ವಿಶೇಷ ವಿಮಾನದಲ್ಲಿ ಮಂಡಕಳ್ಳಿ ವಿಮಾನನಿಲ್ದಾಣಕ್ಕೆ ಇನ್‌ಫೋಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಡಾ.ಸುಧಾ ಮೂರ್ತಿ ಆಗಮಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ''ಸಂಸ್ಕೃತಿಯ ಪ್ರತೀಕವಾಗಿರುವ ದಸರಾ ಹಬ್ಬವನ್ನು ಪಠ್ಯದಲ್ಲಿ ಅಳವಡಿಸಿ ಮುಂದಿನ ಪೀಳಿಗೆಗೆ ಅರಿವು ಮೂಡಿಸಬೇಕು'' ಎಂದರು.

ಒಂದು ವಾರದಿಂದ ಮೈಸೂರಿನಲ್ಲಿ ಮುಷ್ಕರ ಹೂಡಿದ್ದ ಪೌರಕಾರ್ಮಿಕರು ಮಂಗಳವಾರ ತಮ್ಮ ಮುಷ್ಕರವನ್ನು ಹಿಂತೆಗೆದುಕೊಂಡರು. ಸಿಎಂ ಕುಮಾರಸ್ವಾಮಿ ನೇತೃತ್ವ ಬೆಂಗಳೂರಿನಲ್ಲಿ ಮಂಗಳವಾರ ನಡೆದ ಸಭೆ ನಂತರ ಪೌರಕಾರ್ಮಿಕರು ತಮ್ಮ ಮುಷ್ಕರವನ್ನು ವಾಪಸ್‌ ಪಡೆದಿದ್ದು, ದಸರೆ ಸಂಭ್ರಮದ ಮೇಲೆ ಕವಿದಿದ್ದ ಕಾರ್ಮೋಡ ಕರಗಿದೆ. ಮಂಗಳವಾರ ರಾತ್ರಿಯಿಂದ ಸ್ವಚ್ಛತಾ ಕಾರ್ಯ ಆರಂಭಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ