ಬರ ನಿರ್ವಹಣೆ: ಅಧಿಕಾರಿಗಳ ವಿರುದ್ಧ ಆಕ್ರೋಶ
ಕೇಂದ್ರ ಸರಕಾರದ ಬರ ಅಧ್ಯಯನ ಸಮಿತಿ ಮೈಸೂರು ಜಿಲ್ಲೆಯಲ್ಲಿ ಶನಿವಾರ ಪ್ರವಾಸ ಕೈಗೊಂಡ ವೇಳೆ ಗ್ರಾಮಸ್ಥರು ಬರವನ್ನು ಸರಿಯಾಗಿ ನಿಭಾಯಿಸಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
-2 ತಿಂಗಳಲ್ಲಿ ಎರಡೇ ಬಾರಿ ಮೇವು ವಿತರಣೆ: ರೈತರ ಅಳಲು
ಮೈಸೂರು: ಕೇಂದ್ರ ಸರಕಾರದ ಬರ ಅಧ್ಯಯನ ಸಮಿತಿ ಮೈಸೂರು ಜಿಲ್ಲೆಯಲ್ಲಿ ಶನಿವಾರ ಪ್ರವಾಸ ಕೈಗೊಂಡ ವೇಳೆ ಗ್ರಾಮಸ್ಥರು ಬರದಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಸಮಿತಿಯ ಗಮನ ಸೆಳೆಯುವ ಜೊತೆಗೆ ಬರವನ್ನು ಸರಿಯಾಗಿ ನಿಭಾಯಿಸಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸರಕಾರಿ ಅತಿಥಿಗೃಹದಲ್ಲಿ ಮೈಸೂರು ಜಿಲ್ಲೆಯ ಹಿಂಗಾರು ಬರ ಪರಿಸ್ಥಿತಿ ಕುರಿತು ಜಿಲ್ಲಾಧಿಧಿಕಾರಿ ಡಿ.ರಣದೀಪ್ ಅವರು ಕೇಂದ್ರ ಸರಕಾರದ ಬರ ಅಧ್ಯಯನ ಸಮಿತಿ ಮುಂದೆ ವರದಿ ಮಂಡಿಸಿದ ಬಳಿಕ ಬರ ಅಧ್ಯಯನ ಸಮಿತಿ ಮೊದಲಿಗೆ ಮೈಸೂರು ತಾಲೂಕಿನ ಜಟ್ಟಿಹುಂಡಿ ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಿತು. 922 ಜನಸಂಖ್ಯೆ ಹೊಂದಿರುವ ಜಟ್ಟಿಹುಂಡಿ ಗ್ರಾಮದಲ್ಲಿ ಕುಡಿಯುವ ನೀರಿನ ಲಭ್ಯತೆ ಇಲ್ಲದ ಕಾರಣ 2 ಟ್ಯಾಂಕರ್ ಮೂಲಕ ಗ್ರಾಮಸ್ಥರಿಗೆ ನೀರು ಪೂರೈಕೆ ಮಾಡುತ್ತಿರುವ ಬಗ್ಗೆ ಕೇಂದ್ರ ಸರಕಾರದ ಬರ ಅಧ್ಯಯನ ಸಮಿತಿಗೆ ಮಾಹಿತಿ ನೀಡಲಾಯಿತು.
ಜಟ್ಟಿಹುಂಡಿಯಿಂದ ಜಯಪುರಕ್ಕೆ ತೆರಳಿದ ಬರ ಅಧ್ಯಯನ ಸಮಿತಿ ಮೇವು ಬ್ಯಾಂಕ್ಗೆ ಭೇಟಿ ನೀಡಿತು. ಈ ಸಂದರ್ಭ ಸಾರ್ವಜನಿಕರು ''ಮೇವು ಬ್ಯಾಂಕಿನಿಂದ ಸರಿಯಾಗಿ ಮೇವು ವಿತರಣೆ ಆಗುತ್ತಿಲ್ಲ. ಇದುವರೆಗೆ ಕೇವಲ ಎರಡು ಬಾರಿ ಮೇವು ವಿತರಣೆ ಮಾಡಲಾಗಿದೆ. ಬರವನ್ನು ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಬರ ಅಧ್ಯಯನ ಸಮಿತಿ ಬಂದಿರುವ ಸಂದರ್ಭ ತೂಕ ಅಳೆಯುವ ಯಂತ್ರವನ್ನು ತರಲಾಗಿದೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.
''ಕಳೆದ 2 ತಿಂಗಳಿನಲ್ಲಿ ಕೇವಲ 2 ಬಾರಿ ಮೇವು ವಿತರಿಸಲಾಗಿದೆ. ತೂಕ ಮಾಡದೆ ಒಂದು ಬಾರಿ 9ರಿಂದ 10 ಕಂತೆ ಮೇವು ನೀಡಲಾಗಿದೆ. ಇದು ಕೇವಲ ಎರಡು ದಿನಕ್ಕೆ ಸಾಕಾಗುತ್ತದೆ. ಮೇವನ್ನು ಕಂತೆ ಲೆಕ್ಕದಲ್ಲಿ ತೂಕ ಮಾಡದೆ ನೀಡಲಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಮೇವು ಪೂರೈಕೆ ಮಾಡಲಾಗದ ಕಾರಣ ಅನಿವಾರ್ಯವಾಗಿ ಮೇವನ್ನು ಹೊರಗಡೆಯಿಂದ ಖರೀದಿ ಮಾಡಬೇಕಿದೆ'' ಎಂದು ಗ್ರಾಮಸ್ಥ ಕುಮಾರ್ ಎನ್ನುವವರು ಬರ ಅಧ್ಯಯನ ಸಮಿತಿ ಮುಂದೆ ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭ ಹಲವು ಗ್ರಾಮಸ್ಥರು ಇದುವರೆಗೆ ಎರಡೇ ಬಾರಿ ಮೇವು ವಿತರಣೆ ಮಾಡಲಾಗಿದೆ ಎಂದು ಎಂಟ್ರಿ ಪುಸ್ತಕವನ್ನು ಸಮಿತಿ ಮುಂದೆ ತೋರಿಸಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಡಿ.ರಣದೀಪ್, ''ಬರ ನಿರ್ವಹಣೆಗೆ ಹೆಚ್ಚಿನ ಅನುದಾನ ನೀಡುವ ನಿಟ್ಟಿನಲ್ಲಿ ಕೇಂದ್ರದಿಂದ ಬರ ಅಧ್ಯಯನ ಸಮಿತಿ ಬಂದಿದೆ. ಕೇಂದ್ರಕ್ಕೆ ಸಮಿತಿ ವರದಿ ಸಲ್ಲಿಸಿದ ಬಳಿಕ ಹೆಚ್ಚಿನ ಅನುದಾನ ಸಿಗಲಿದೆ. ಗೋ ಶಾಲೆ ಆರಂಭಿಸಿದರೆ ರೈತರಿಗೆ ಉಚಿತವಾಗಿ ಮೇವು ಲಭಿಸಲಿದೆ. ಈ ತಿಂಗಳ ಕೊನೆಯಲ್ಲಿ ಗೋ ಶಾಲೆ ಆರಂಭಿಸಲು ಕ್ರಮ ವಹಿಸಲಾಗುವುದು,'' ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.
ಗ್ರಾಮಸ್ಥರು ಈ ಸಂದರ್ಭ ಕುಡಿಯುವ ನೀರಿನ ಸಮಸ್ಯೆಯನ್ನೂ ಮುಂದಿಟ್ಟರು. ಹಾರೋಹಳ್ಳಿ, ಮದ್ದೂರು, ಮದ್ದೂರು ಹುಂಡಿ, ಎಸ್ ಕಲ್ಲಹಳ್ಳಿ, ಸೋಲಿಗರ ಕಾಲನಿ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಅವಲತ್ತುಕೊಂಡರು. ಎಚ್.ಡಿ.ಕೋಟೆ ತಾಲೂಕಿನ ಚಾಮನಹಳ್ಳಿ, ಹಂಪಾಪುರ, ಹುಣಸೂರು ತಾಲೂಕಿನ ಆಲನಹಳ್ಳಿಗೆ ಭೇಟಿ ನೀಡಿದ ತಂಡ ಬಳಿಕ ಹಾಸನಕ್ಕೆ ಬರ ಅಧ್ಯಯನಕ್ಕೆ ತೆರಳಿತು.