ಆ್ಯಪ್ನಗರ

ದಸರಾ ಆನೆಗಳಿಗೆ ಸಿಡಿಮದ್ದಿನ ತಾಲೀಮು

ನಾಡಹಬ್ಬದ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾದ ಜಂಬೂಸವಾರಿ ವೇಳೆ ಗಜಪಡೆಗಳು ಸಿಡಿಮದ್ದಿನ ಸದ್ದಿಗೆ ಬೆದರದಂತೆ ನೋಡಿಕೊಳ್ಳಲು ಅರಮನೆಯ ಮಾರಮ್ಮನ ದೇವಸ್ಥಾನದ ಬಳಿ ಸಿಡಿಮದ್ದು ಸಿಡಿಸುವ ತಾಲೀಮು ಆರಂಭಿಸಲಾಯಿತು.

Vijaya Karnataka 28 Sep 2018, 8:10 am
ಮೈಸೂರು : ನಾಡಹಬ್ಬದ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾದ ಜಂಬೂಸವಾರಿ ವೇಳೆ ಗಜಪಡೆಗಳು ಸಿಡಿಮದ್ದಿನ ಸದ್ದಿಗೆ ಬೆದರದಂತೆ ನೋಡಿಕೊಳ್ಳಲು ಅರಮನೆಯ ಮಾರಮ್ಮನ ದೇವಸ್ಥಾನದ ಬಳಿ ಸಿಡಿಮದ್ದು ಸಿಡಿಸುವ ತಾಲೀಮು ಆರಂಭಿಸಲಾಯಿತು.
Vijaya Karnataka Web Eli


ಕರ್ನಾಟಕ ವಸ್ತು ಪ್ರದರ್ಶನ ಮಾರ್ಗದಲ್ಲಿರುವ ಕೋಟೆ ಮಾರಮ್ಮನ ದೇವಸ್ಥಾನದ ಬಳಿ ಆವರಣದಲ್ಲಿ ಚಿನ್ನದ ಅಂಬಾರಿ ಹೊರಲಿರುವ ಅರ್ಜುನ ನೇತೃತ್ವ ಗಜಪಡೆಯ 12 ಆನೆಗಳು, ಕುದುರೆಗಳನ್ನು ನಿಲ್ಲಿಸಿ ಸುಮಾರು 18 ಸುತ್ತು ಸಿಡಿಮದ್ದು ಸಿಡಿಸಲಾಯಿತು. ಮೈಸೂರು ನಗರದ ಸಿಎಆರ್‌ನ ನುರಿತ 30 ಸಿಬ್ಬಂದಿ ಏಕಕಾಲದಲ್ಲಿ ಫಿರಂಗಿಗಳಿಂದ ಸಿಡಿಮದ್ದು ಸಿಡಿಸಿದರು. ಫಿರಂಗಿ ಸಿಡಿಮದ್ದಿನ ಜೋರು ಶಬ್ದಕ್ಕೆ ಧನಂಜಯ, ದ್ರೋಣ, ಪ್ರಶಾಂತ, ಚೈತ್ರ ಆನೆಗಳು ಬೆಚ್ಚಿ ಹಿಂದಕ್ಕೆ ತಿರುಗಿದರೆ, ಅರ್ಜುನ ಮತ್ತು ಅಭಿಮನ್ಯು ಸ್ವಲ್ಪವೂ ಅಂಜದೆ ಗಾಂಭೀರ್ಯತೆ ಪ್ರದರ್ಶಿಸಿದವು. ಕ್ಯಾಪ್ಟನ್‌ ಅರ್ಜುನ ಪಿರಂಗಿ ಸದ್ದಿಗೆ ಕೊಂಚವು ಅಲುಗಾಡದೇ ನಿಂತಿದ್ದು ವಿಶೇಷವಾಗಿತ್ತು.

ಇದೇ ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಳ್ಳಲಿರುವ ಆನೆ ಧನಂಜಯ ಫಿರಂಗಿ ಶಬ್ಧಕ್ಕೆ ವಿಚಲಿತನಾದ. ಈ ಹಿಂದೆ ಹಲವು ಬಾರಿ ಅಂಬಾರಿ ಹೊತ್ತ ಬಲರಾಮ ಹಾಗೂ ದಸರಾ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದ ಚೈತ್ರ, ದ್ರೋಣ ಆನೆಗಳು ಬೆದರಿವೆ. ಮತ್ತೆ ಎರಡು ಬಾರಿ ಸಿಡಿಮದ್ದು ಸಿಡಿಸುವ ತಾಲೀಮು ನಡೆಯಲಿದ್ದು, ಈ ವೇಳೆಗೆ ಆನೆಗಳು ಸಿಡಿಮದ್ದಿಗೆ ಬೆದರಂತೆ ಕ್ರಮ ಕೈಗೊಳ್ಳಲಾಗುತ್ತದೆ.


ಪಶು ವೈದ್ಯ ಡಾ. ನಾಗಾರಾಜು ಮಾತನಾಡಿ, ''ಮೊದಲ ಬಾರಿಗೆ ಭಾಗವಹಿಸುವ ಧನಂಜಯ ಆನೆ ಸ್ಪಲ್ಪ ಹೆದರಿಕೊಂಡಿದೆ. ಉಳಿದಂತೆ ಉತ್ತಮ ಪ್ರದರ್ಶನ ನೀಡಿದ್ದಾನೆ. ಎಲ್ಲ ಆನೆಗಳು ಆರೋಗ್ಯವಾಗಿವೆ. ಈಗ ಕಡಿಮೆ ಶಬ್ದದಲ್ಲಿ ಕುಶಾಲ ತೋಪು ಸಿಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಶಬ್ಧದ ಪಿರಂಗಿ ಸಿಡಿಸಲಾಗುವುದು,'' ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ನಗರ ಪೊಲೀಸ್‌ ಆಯುಕ್ತ ಎ.ಸುಬ್ರಹ್ಮಣ್ಯೇಶ್ವರ ರಾವ್‌, ವಿಜಯದಶಮಿ ಹಾಗೂ ಬನ್ನಿಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಫಿರಂಗಿ ಕುಶಾಲತೋಪು ನಡೆಸಲಾಗುವುದು. ಈ ಹಿನ್ನೆಲೆಯಲ್ಲಿ ಗಜಪಡೆ ಪಳಗಿಸಲು ತಾಲೀಮು ನಡೆಸಲಾಗುತ್ತಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮವಾಗಿ ತಾಲೀಮು ನಡೆಯಿತು. ಇದೇ ರೀತಿ ಇನ್ನೂ ಎರಡು ಸುತ್ತು ತಾಲೀಮು ನಡೆಸಲಾಗುವುದು ಎಂದು ತಿಳಿಸಿದರು.

ದಸರಾಗೆ ಎಲ್ಲ ರೀತಿಯ ಸಿದ್ಧತೆ ನಡೆಯುತ್ತಿದೆ. ಈ ವರ್ಷವೂ ಶೇ. 90 ಭಾಗ ಹಿಂದೆ ನಿಗದಿಪಡಿಸಿದ್ದ ಸ್ಥಳಗಳಲ್ಲೇ ಕಾರ್ಯಕ್ರಮಗಳು ಜರುಗಲಿದ್ದು, ಸೂಕ್ತ ಭದ್ರತೆ ವ್ಯವಸ್ಥೆ ಕಲ್ಪಿಸಲು ಸಿದ್ದತೆ ನಡೆಸಲಾಗಿದೆ. ಉಳಿದ ಸ್ಥಳಗಳ ಪಟ್ಟಿಯನ್ನು ಜಿಲ್ಲಾಡಳಿತ ಬಿಡುಗಡೆ ಮಾಡಬೇಕಿದ್ದು, ನಂತರ ಭದ್ರತೆ ಕಲ್ಪಿಸಲಾಗುವುದು. ರಾಜ್ಯ ಹಾಗೂ ಕೇಂದ್ರ ಮಟ್ಟದಿಂದ ಈ ಬಾರಿ ಸುಮಾರು 2,500ರಿಂದ 3 ಸಾವಿರ ಹೆಚ್ಚುವರಿ ಭದ್ರತೆ ಸಿಬ್ಬಂದಿ ನಿಯೋಜಿಸಿ ಬಂದೋಬಸ್ತ್‌ ಮಾಡಲಾಗುವುದು.

ಜಂಬೂಸವಾರಿಯಲ್ಲಿ ಅರಮನೆ ಒಳಗಡೆ ವಿಐಪಿ ಪಾಸ್‌ ಹೊಂದಿರುವವರಿಗೆ ನಿಗದಿಪಡಿಸಿದ ಸ್ಥಳಗಳಿಗೆ ಅಕ್ರಮವಾಗಿ ಬಂದು ಸೇರುವವರನ್ನು ನಿಯಂತ್ರಿಸಲು ಕ್ರಮಕೈಗೊಳ್ಳಲಾಗುವುದು. ಗುಂಪು ಜನಸಂದಣಿಯ (ಗ್ಯಾಂಗ್‌ ವೇ) ಹಾಗೂ ಪಾದಚಾರಿ ದಾರಿ (ಪಾಥ್‌ ವೇ) ಗಳಲ್ಲಿ ಜನ ನುಸುಳದಂತೆ ನೋಡಿಕೊಳ್ಳಲು ಹೆಚ್ಚಿನ ಸಿಬ್ಬಂದಿಗಳನ್ನು ಹಾಕಿ ಬಂದೋಬಸ್ತ್‌ ಮಾಡಲಾಗುವುದು. ಜಂಬೂಸವಾರಿ ದಿನ 4 ಡ್ರೋಣ್‌ ಕ್ಯಾಮೆರಾ ಅಳವಡಿಸಕೊಳ್ಳಲಾಗುವುದು. ಅಲ್ಲದೇ, 60 ಕಡೆ ಸಿಸಿಟಿವಿ ಹಾಕಿ ಆ ಜಾಗದ ಸುರಕ್ಷತೆ ಕಾಯ್ದುಕೊಳ್ಳುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಿಸಿಪಿ ವಿಷ್ಣುವರ್ಧನ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ