ಮೈಸೂರು: ಗಜ ಪಯಣದೊಂದಿಗೆ ನಾಡ ಹಬ್ಬ ದಸರಾದ ಸಂಭ್ರಮ ಆರಂಭವಾಗಿದ್ದರೂ ಈ ಬಾರಿ ಆನೆಗಳ ಆರೋಗ್ಯವನ್ನು ನೋಡಿಕೊಳ್ಳುವ ಅನುಭವಿ ವೈದ್ಯರ ಕೊರತೆ ಕಾಡುತ್ತಿದೆ. ದಸರಾದಂತಹ ಸಂದರ್ಭ ಆನೆಗಳ ಆರೈಕೆಯೇ ಪ್ರಮುಖ ಭಾಗವಾಗಿದ್ದರೂ, ಅನುಭವಿಗಳನ್ನು ವರ್ಗ ಮಾಡಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.
ಆನೆಗಳನ್ನು ನೋಡಿಕೊಳ್ಳಲು 2014ರಲ್ಲಿ ಅರಣ್ಯ ಇಲಾಖೆ ಭದ್ರಾ ಹುಲಿ ಸಂರಕ್ಷಿತ ಪ್ರದೇಶ, ಅಣಶಿ-ದಾಂಡೇಲಿ ಹುಲಿ ಸಂರಕ್ಷಿತ ಪ್ರದೇಶ, ಮೈಸೂರು, ಬೆಂಗಳೂರು, ಮಂಗಳೂರು, ಕೊಡಗು ವೃತ್ತಗಳಲ್ಲಿ ಪಶುವೈದ್ಯಾಧಿಕಾರಿ ಹುದ್ದೆಯನ್ನು ಅರಣ್ಯ ಇಲಾಖೆ ಸೃಜಿಸಿತ್ತು. ಇವುಗಳಿಗೆ ಪಶು ಪಾಲನಾ ಮತ್ತು ಪಶು ವಿಜ್ಞಾನ ಇಲಾಖೆಯಿಂದ ವೈದ್ಯರನ್ನು ನಿಯೋಜನೆ ಮಾಡಿಕೊಳ್ಳಲಾಗುತ್ತಿತ್ತು. ಈ ಬಾರಿ ದಸರಾಕ್ಕಿಂತ ಮುನ್ನ ಈ ರೀತಿ ಅನುಭವಿಗಳನ್ನು ಮಾತೃ ಇಲಾಖೆಗೆ ಕಳುಹಿಸಿ ಹೊಸಬರನ್ನು ನೇಮಿಸಿಕೊಂಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಅನುಭವಿಗಳು ಅಗತ್ಯ
ಕಾಡಿನ ವಾತಾವರಣಕ್ಕೆ ಹೊಂದಿಕೊಂಡಿರುವ ಆನೆಗಳು ನಾಡ ಹಬ್ಬ ಸಂದರ್ಭ ಮೈಸೂರು ನಗರಕ್ಕೆ ಆಗಮಿಸುತ್ತವೆ. ಈ ಸಂದರ್ಭ ಅವುಗಳು ನಗರದ ಸದ್ದು, ಜನರ ಓಡಾಟದಿಂದ ಸೂಕ್ಷ್ಮವಾಗಿರುತ್ತವೆ. ಆಹಾರದ ಕ್ರಮ ಕೂಡ ದಿಢೀರ್ ಬದಲಾವಣೆಯಿಂದ ಅವುಗಳ ಆರೋಗ್ಯ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ನಿತ್ಯ ಅರಮನೆ ಆವರಣದಲ್ಲಿ ಆನೆಗಳ ಚಟುವಟಿಕೆಯನ್ನು ಅನುಭವಿ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿದ್ದರು. ಯಾವ ಆನೆ ಯಾವ ರೀತಿ ವರ್ತಿಸುತ್ತಿದೆ ಎನ್ನುವುದನ್ನು ಗಮನಿಸಿ ಅವುಗಳಿಗೆ ಆಹಾರ, ಔಷಧಿ ನೀಡಲಾಗುತ್ತದೆ. ನಿತ್ಯ ಕಾವಾಡಿ, ಮಾವುತರೊಂದಿಗೆ ವೈದ್ಯರು ಒಡನಾಟ ಇಟ್ಟುಕೊಂಡು ಆನೆಗಳ ವಿವರ ಪಡೆಯಬೇಕಾಗುತ್ತದೆ.
21 ದಸರಾ ನೋಡಿದ್ದ ವೈದ್ಯರು
ಇಲ್ಲಿಯವರೆಗೆ ಡಾ. ನಾಗರಾಜ್ ಅವರು ಆನೆಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಅವರು ಕಳೆದ 21 ವರ್ಷಗಳಿಂದ ದಸರಾದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇವರಲ್ಲದೆ ನಾಗರಹೊಳೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ. ಮುಜೀಬ್ 8 ದಸರಾಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ವಿವಿಧ ಭಾಗಗಳಲ್ಲಿ ಆನೆ, ಹುಲಿ ಸೆರೆ ಕಾರ್ಯಾಚರಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ. ನಾಗರಾಜ್ರನ್ನು ಮಾತೃ ಇಲಾಖೆಗೆ ಕಳುಹಿಸಿ ಬನ್ನೇರುಘಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವ ವೈದ್ಯರನ್ನು ನಾಗರಹೊಳೆಗೆ ನೇಮಿಸಲಾಗಿದೆ. ಡಾ. ಮುಜೀಬ್ ಬಿಳಿಗಿರಿ ರಂಗನಬೆಟ್ಟಕ್ಕೆ ವರ್ಗವಾಗಿದ್ದಾರೆ.
ಅನುಭವದ ಕೊರತೆ
ದಸರಾದಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎನ್ನುವ ಅನುಭವ ಇಲ್ಲದ ಹಿನ್ನೆಲೆಯಲ್ಲಿ ಒಂದೆರಡು ವರ್ಷ ಅನುಭವಿ ವೈದ್ಯರೊಂದಿಗೆ ಯುವ ವೈದ್ಯರನ್ನು ನಿಯೋಜಿಸಬೇಕಿತ್ತು. ಇದರಿಂದ ಯುವ ವೈದ್ಯರಿಗೆ ಅನುಭವ ಬರುತ್ತಿತ್ತು. ಆದರೆ, ಇದೀಗ ಏಕಾಏಕಿಯಾಗಿ ನೇಮಿಸಿರುವ ಹಿನ್ನೆಲೆಯಲ್ಲಿ ಕಾವಾಡಿಗಳು, ಮಾವುತರು ಹಾಗೂ ಸಿಬ್ಬಂದಿ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ.
ಪೌಷ್ಟಿಕ ಆಹಾರ ನೀಡಬೇಕು
ಆನೆಗಳ ಆರೋಗ್ಯ ಗಮನಿಸಿ ನಿತ್ಯ ಚಿಕಿತ್ಸೆ ನೀಡಬೇಕು. ಅವುಗಳಿಗೆ ಜ್ವರ ಬಂದಿದ್ದಲ್ಲಿ, ಭೇದಿ ಲಕ್ಷಣಗಳು ಕಾಣಿಸಿಕೊಂಡಲ್ಲಿ ಆಹಾರದಲ್ಲಿ ಮಾತ್ರೆಗಳನ್ನು ಬೆರೆಸಿ ನೀಡಲಾಗುತ್ತದೆ. ಇದಕ್ಕೆ ಅನುಭವ ಬೇಕು. ಅದರಲ್ಲಿಯೂ ಅಂಬಾರಿ ಹೊರುವ ಆನೆಗಳಿಗೆ ವಿಶೇಷ ಪೌಷ್ಟಿಕ ಆಹಾರ ನೀಡಬೇಕು. ಅವುಗಳ ತೂಕ ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ಒಟ್ಟಿನಲ್ಲಿ ಆನೆಗಳನ್ನು ವಿಶೇಷ ಆರೈಕೆ ಮಾಡಲು ಅನುಭವದ ಅಗತ್ಯವಿದೆ. ನಾಗರಹೊಳೆಯಲ್ಲಿದ್ದ ಮತ್ತೊಬ್ಬ ಅನುಭವಿ ವೈದ್ಯ ಡಾ. ಮುಜೀಬ್ ಅವರನ್ನೂ ವರ್ಗ ಮಾಡಲಾಗಿದ್ದು, ದಸರಾದಲ್ಲಿ ಅವರ ಸೇವೆಯೂ ಇಲ್ಲದಂತಾಗಿದೆ.
ಗೌರವಯುತವಾಗಿ ಕಳುಹಿಸಬೇಕಿತ್ತು
ಈ ಹಿಂದೆ ಹಲವು ವರ್ಷಗಳವರೆಗೆ ಆನೆಗಳೊಂದಿಗೆ ಕಾರ್ಯನಿರ್ವಹಿಸಿ ಆನೆ ಡಾಕ್ಟ್ರು ಎಂದೇ ಕರೆಯಿಸಿಕೊಂಡಿರುವ ಡಾ.ಚಿಟ್ಟಿಯಪ್ಪ ಅವರನ್ನು ಕೂಡ ಇದೇ ರೀತಿ ದಿಢೀರ್ ಎಂದು ಮಾತೃ ಇಲಾಖೆಗೆ ಕಳುಹಿಸಲಾಯಿತು. ಆನೆಗಳ ಕುರಿತು ಅಪಾರ ಅನುಭವ ಹೊಂದಿದ್ದರೂ ಅದನ್ನು ಇಲಾಖೆ ಬಳಸಿಕೊಳ್ಳಲಿಲ್ಲ ಎನ್ನುವ ಅಸಮಾಧಾನ ಪ್ರಾಣಿಪ್ರಿಯರಲ್ಲಿದೆ. ಇದೀಗ ಡಾ. ನಾಗರಾಜ್ ಹಾಗೂ ಡಾ. ಮುಜೀಬ್ ಅವರಿಂದ ಯುವ ವೈದ್ಯರಿಗೆ ತರಬೇತಿ ನೀಡಿ ದಸರಾದಲ್ಲಿ ಗೌರವಯುತವಾಗಿ ಕಳುಹಿಸಬಹುದಿತ್ತು ಎನ್ನುವ ಅಭಿಪ್ರಾಯವಿದೆ.
'ದಸರಾ ಮಾತ್ರವಲ್ಲದೆ ಮೈಸೂರು, ನಾಗರಹೊಳೆ, ಬಂಡೀಪುರ ವ್ಯಾಪ್ತಿಯಲ್ಲಿ ಆನೆ, ಹುಲಿ ಕಾರ್ಯಾಚರಣೆ ನಡೆಯುತ್ತಿರುತ್ತದೆ. ಈ ಸಂದರ್ಭ ಅನುಭವಿ ವೈದ್ಯರಿಲ್ಲದಿದ್ದಲ್ಲಿ ಅಪಾಯ ಎದುರಾಗಬಹುದು. ದಸರಾಕ್ಕಾದರೂ ಹಿಂದಿನ ವೈದ್ಯರ ಅನುಭವ ಪಡೆಯಲು ಇಲಾಖೆ ಮುಂದಾಗಬೇಕು' ಎಂದು ವಾಚರ್ ಇಂಡಿಯ ಟ್ರಸ್ಟ್ ಅಧ್ಯಕ್ಷ ವಲ್ಲಿಶ್ರೀ ಕೌಶಿಕ್ ಹೇಳುತ್ತಾರೆ.