ಆ್ಯಪ್ನಗರ

ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸ್ವಂತ ಜಾಗ ನೀಡಲು ಮುಂದಾದ ಅಭಿಮಾನಿ!

ಈಗ ಸ್ಮಾರಕ ನಿರ್ಮಾಣಕ್ಕೆ ಪ್ರಧಾನ ಸಮಸ್ಯೆಯಾಗಿರುವುದು ಜಾಗ. ಆದ್ದರಿಂದ ಉಚಿತ ನಿವೇಶನ ನೀಡಲು ಮುಂದಾಗಿದ್ದೇನೆ ಎಂದು ಅಭಿಮಾನಿ ತಿಳಿಸಿದ್ದಾರೆ.

Vijaya Karnataka Web 29 Nov 2018, 9:01 pm
ಮೈಸೂರು: ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕುರಿತು ಸರಕಾರ ಮತ್ತು ವಿಷ್ಣು ಕುಟುಂಬ ವರ್ಗದವರ ನಡುವೆ ನಡೆಯುತ್ತಿರುವ ಜಟಾಪಟಿಯಿಂದ ಬೇಸತ್ತ ವಿಷ್ಣು ಅಭಿಮಾನಿಯೊಬ್ಬರು, ಸ್ಮಾರಕಕ್ಕಾಗಿ ತಮ್ಮ ನಿವೇಶನ ನೀಡಲು ಮುಂದಾಗಿದ್ದಾರೆ.
Vijaya Karnataka Web vishnu


ಮಂಡ್ಯ ಜಿಲ್ಲೆ ಕೆಆರ್‌ಎಸ್ ನಿವಾಸಿಯಾಗಿರುವ ಗುತ್ತಿಗೆದಾರ ಕೆ.ಸಿ.ಪಿ.ರಾಜಣ್ಣ ಅವರು ತಮ್ಮ ಸ್ವಯಾರ್ಜಿತ 100*80 ನಿವೇಶನವನ್ನು ಸ್ಮಾರಕ ನಿರ್ಮಾಣಕ್ಕೆಂದು ಉಚಿತವಾಗಿ ನೀಡಲು ನಿರ್ಧರಿಸಿದ್ದಾರೆ. ಈ ಕುರಿತು ಸರಕಾರಕ್ಕೆ ಮತ್ತು ಕುಟುಂಬಸ್ಥರಿಗೆ ಪತ್ರ ಬರೆಯವುದಾಗಿ ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದ್ಧಾರೆ.

‘ಡಾ.ವಿಷ್ಣುವರ್ಧನ್ ಅವರನ್ನು ಅಂತ್ಯಕ್ರಿಯೆ ಮಾಡಿದ ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಜಾಗವು ವಿವಾದದಲ್ಲಿದೆ. ಇನ್ನು ಎಚ್.ಡಿ.ಕೋಟೆ ಮುಖ್ಯರಸ್ತೆಯಲ್ಲಿರುವ ಮೈಸೂರು ತಾಲೂಕು ಚೌಡಳ್ಳಿಯಲ್ಲಿ ಗುರುತಿಸಲಾದ ಐದು ಎಕರೆ ಜಾಗದ ಸಮಸ್ಯೆಯೂ ಹೈಕೋರ್ಟ್‌ನಲ್ಲಿದೆ. ಇದರಿಂದ ವಿಷ್ಣು ಸ್ಮಾರಕ ನಿರ್ಮಾಣ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ನಟ, ಮಾಜಿ ಸಚಿವ ಎಂ.ಎಚ್.ಅಂಬರೀಷ್ ಅವರ ಸ್ಮಾರಕವನ್ನು ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸುವುದಾಗಿ ಸರಕಾರ ಘೋಷಿಸಿದ ಹಿನ್ನೆಲೆಯಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಸಂಘರ್ಷ ಶುರುವಾಯಿತು. ಹಾಗಾಗಿ ಇದನೆಲ್ಲ ಗಮನಿಸಿ ನಿವೇಶನ ನೀಡಲು ನಿರ್ಧರಿಸಿದ್ದೇನೆ,’ ಎಂದು ರಾಜಣ್ಣ ಹೇಳಿದರು.

‘ಕೆಆರ್‌ಎಸ್‌ನ ರೈಲ್ವೆ ನಿಲ್ದಾಣದ ಬಳಿ ತಮ್ಮ ನಿವೇಶನವಿದೆ. ಅದಕ್ಕೆ ಹೊಂದಿಕೊಂಡಂತೆ 13 ಗುಂಟೆ ಜಾಗವು ಇದೆ. ನನ್ನ ಮನವಿಯನ್ನು ಕುಟುಂಬಸ್ಥರು ಒಪ್ಪಿದ್ದಲ್ಲಿ ಉಚಿತವಾಗಿ 13 ಗುಂಟೆ ಜಾಗ ನೀಡಲಾಗುವುದು. ಮೂರು ತಿಂಗಳ ಹಿಂದೆಯಷ್ಟೇ ನಿವೇಶನ ಖರೀದಿಸಿದ್ದೆ. ಈಗಾಗಲೇ ವಿಷ್ಣುವರ್ಧನ್ ಅವರು ನಿಧನರಾಗಿ 9 ವರ್ಷಗಳೇ ಕಳೆದಿದ್ದು ಸರಕಾರ ಸ್ಮಾರಕ ನಿರ್ಮಾಣಕ್ಕೆ ಮೀನಾಮೇಷ ಎಣಿಸುತ್ತಿದೆ,’ ಎಂದು ಬೇಸರ ವ್ಯಕ್ತಪಡಿಸಿದರು.

‘ಈಗ ಸ್ಮಾರಕ ನಿರ್ಮಾಣಕ್ಕೆ ಪ್ರಧಾನ ಸಮಸ್ಯೆಯಾಗಿರುವುದು ಜಾಗ. ಆದ್ದರಿಂದ ಉಚಿತ ನಿವೇಶನ ನೀಡಲು ಮುಂದಾಗಿದ್ದೇನೆ,’ ಎಂದು ರಾಜಣ್ಣ ತಿಳಿಸಿದರು.

‘ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಾ. ಭಾರತಿ ವಿಷ್ಣುವರ್ಧನ್, ವಿಷ್ಣು ಅಳಿಯ ಅನಿರುದ್ಧ್ ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ. ಶೀಘ್ರದಲ್ಲೇ ಸ್ಮಾರಕ ನಿರ್ಮಾಣವಾಗಬೇಕು,’ ಎಂದು ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ