ಆ್ಯಪ್ನಗರ

ಪ್ರವಾಹ ಭೀತಿ: ಗೂಗಲ್‌ ನೀಡಲಿದೆ ಮಾಹಿತಿ

ಇನ್ನು ಮುಂದೆ ದೇಶದ ಯಾವುದೇ ಭಾಗದಲ್ಲಿ ಯಾವುದೇ ಪ್ರದೇಶ ಮಳೆ ಹಾಗೂ ಪ್ರವಾಹದಿಂದ ಮುಳುಗುವ ಭೀತಿ ಇದ್ದಲ್ಲಿ ಆ ಮಾಹಿತಿಯನ್ನು ಮೂರು ದಿನಕ್ಕೂ ಮುನ್ನವೇ ಗೂಗಲ್‌ ಜನತೆಗೆ ಒದಗಿಸಲಿದೆ. ಅಲ್ಲದೇ, ಆ ಮೂಲಕ ಪ್ರವಾಹಕ್ಕೂ ಮುನ್ನವೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಎಚ್ಚರಿಸುತ್ತದೆ.

Vijaya Karnataka 14 Jul 2018, 11:32 am
-ದೇವರಾಜು ಕೆ. ಹೊಸೂರು ಮೈಸೂರು
Vijaya Karnataka Web flood


ಇನ್ನು ಮುಂದೆ ದೇಶದ ಯಾವುದೇ ಭಾಗದಲ್ಲಿ ಯಾವುದೇ ಪ್ರದೇಶ ಮಳೆ ಹಾಗೂ ಪ್ರವಾಹದಿಂದ ಮುಳುಗುವ ಭೀತಿ ಇದ್ದಲ್ಲಿ ಆ ಮಾಹಿತಿಯನ್ನು ಮೂರು ದಿನಕ್ಕೂ ಮುನ್ನವೇ ಗೂಗಲ್‌ ಜನತೆಗೆ ಒದಗಿಸಲಿದೆ. ಅಲ್ಲದೇ, ಆ ಮೂಲಕ ಪ್ರವಾಹಕ್ಕೂ ಮುನ್ನವೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಎಚ್ಚರಿಸುತ್ತದೆ.

ಹೀಗೆ ಪ್ರವಾಹ ಮುನ್ಸೂಚನೆಯನ್ನು ಮೂರು ದಿನಕ್ಕೂ ಮುನ್ನವೇ ಪಡೆಯಲು ಹಾಗೂ ಅಷ್ಟೇ ಶೀಘ್ರವಾಗಿ ಸಂತ್ರಸ್ತರಿಗೆ ಆ ಮಾಹಿತಿಯನ್ನು ರವಾನಿಸುವ ಮೂಲಕ ಸಾವು ನೋವು ತಡೆಗಟ್ಟಲು ಕೇಂದ್ರ ಸರಕಾರದ ಕೇಂದ್ರೀಯ ಜಲ ಆಯೋಗವು ಗೂಗಲ್‌ನೊಂದಿಗೆ ಕೈಜೋಡಿಸಿದೆ. ಪರಿಣಾಮ ಮುಂದೆ ಗೂಗಲ್‌ ಮ್ಯಾಫ್ಸ್‌ ಹಾಗೂ ನೋಟಿಫಿಕೇಷನ್‌ಗಳಲ್ಲಿ ಪ್ರವಾಹ ಕುರಿತು ಸ್ಮಾರ್ಟ್‌ಫೋನ್‌ ಅಥವಾ ವೆಬ್‌ಸೈಟ್‌ಗಳಲ್ಲಿ ಪ್ರವಾಹ ಮಾಹಿತಿ ಲಭ್ಯವಾಗುವ ಸೂಚನೆ ಇದೆ.

2016ರ ವರೆಗೂ ಲಭ್ಯವಿದ್ದ ತಂತ್ರಜ್ಞಾನದಲ್ಲಿ ಪ್ರವಾಹವನ್ನು 24 ತಾಸುಗಳಿಗೂ ಮುನ್ನವಷ್ಟೇ ಅದರ ಸೂಚನೆ ಪಡೆಯಬಹುದು. ಆದರೆ, 2017ರ ವೇಳೆಗೆ ಮೂರು ದಿನಕ್ಕೂ ಮುನ್ನವೇ ಪ್ರವಾಹದ ಮುನ್ಸೂಚನೆ ಪಡೆಯಲು ಮಳೆ ಪ್ರಮಾಣವನ್ನು ಆಧರಿಸಿ ನಿರ್ಧರಿಸಲಾಗುತ್ತಿತ್ತು. ಇದೂ ಈಗ ಪ್ರಾಯೋಗಿಕ ಹಂತದಲ್ಲಿದೆ. ಇನ್ನು ಮುಂದೆ ಕೇಂದ್ರವು, ಗೂಗಲ್‌ನ ಅರ್ತ್‌ ಎಂಜಿನ್‌ನಂಥ ತಂತ್ರಜ್ಞಾನವನ್ನೂ ಬಳಸಿ, ಮುನ್ಸೂಚನೆ ಪಡೆದು, ಗೂಗಲ್‌ನ ಮಾಹಿತಿ ಜಾಲದ ಮೂಲಕವೇ ಅದನ್ನು ಜನರಿಗೆ ತಲುಪಿಸಲು ಮುಂದಾಗಿದೆ. ಈ ಸಂಬಂಧ ಗೂಗಲ್‌ನೊಂದಿಗೆ ಒಪ್ಪಂದವನ್ನೂ ಕೇಂದ್ರೀಯ ಜಲ ಆಯೋಗ ಮಾಡಿಕೊಂಡಿರುವುದಾಗಿ ಕೇಂದ್ರ ಸರಕಾರದ ಪಿಐಬಿ ವೆಬ್‌ಸೈಟ್‌ನಲ್ಲಿ ಮಾನವ ಸಂಪನ್ಮೂಲ ಸಚಿವಾಲಯ ತಿಳಿಸಿದೆ.

ಗೂಗಲ್‌ ಈಗಾಗಲೇ ಅಭಿವೃದ್ಧಿ ಪಡಿಸಿರುವ ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಹಾಗೂ ಭೂವ್ಯೋಹ ನಕ್ಷೆ (ಗೂಗಲ್‌ ಅರ್ತ್‌) ಅನ್ನು ಬಳಸಿಕೊಂಡು, ಜಲಸಂಪನ್ಮೂಲದ ಮೇಲೆ ಕಣ್ಣಿಡುವುದು, ಅದರಲ್ಲೂ ಮುಖ್ಯವಾಗಿ ಪ್ರವಾಹ ಮುನ್ಸೂಚನೆ ಹಾಗೂ ಪ್ರವಾಹಕ್ಕೆ ಸಂಬಂಧಿಸಿದ ಮಾಹಿತಿಯನ್ನು ಗೂಗಲ್‌ ಅನ್ನೇ ವೇದಿಕೆಯಾಗಿ ಬಳಸಿಕೊಂಡು ಪ್ರಸಾರ ಮಾಡುವುದು. ಆ ಮೂಲಕ ವಿಪತ್ತು ನಿರ್ವಹಣೆ ಮಾಡುವ ಏಜೆನ್ಸಿಗಳಿಗೆ ನೆರವಾಗುವುದು ಈ ಒಪ್ಪಂದ ಉದ್ದೇಶ ಎಂದು ಯೋಜನೆಯ ಉದ್ದೇಶ.

ಇದಿಷ್ಟೇ ಅಲ್ಲದೇ, ಪ್ರವಾಹ ನಿರ್ವಹಣೆಯನ್ನು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಗೂಗಲ್‌ ಅರ್ತ್‌ ತಂತ್ರಜ್ಞಾನ ಬಳಸಿ, ಸಂಶೋಧನೆ ನಡೆಸುವುದು ಹಾಗೂ ಭಾರತೀಯ ನದಿಗಳ ಕುರಿತು ಆನ್‌ಲೈನ್‌ ಎಕ್ಸಿಬಿಷನ್‌ಗೆ ಯೋಜನೆ ಕೈಗೊಳ್ಳುವುದೂ ಈ ಒಪ್ಪಂದದ ಉದ್ದೇಶ.

2016 ರಿಂದೀಚೆಗೆ ದೇಶದಲ್ಲಿ ಸಂಭವಿಸಿದ ಪ್ರವಾಹಗಳಲ್ಲಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಜತೆಗೆ ಕೋಟ್ಯಂತರ ರೂ. ಆಸ್ತಿ ಪಾಸ್ತಿ ನಷ್ಟವಾಗಿದೆ. ಮುಂದೆ ಇಂಥ ಪರಿಸ್ಥಿತಿ ಎದುರಾಗದಂತೆ ಹಾಗೂ ಪ್ರವಾಹ ಸಂದರ್ಭದಲ್ಲಿ ಜನರ ಪ್ರಾಣ ಉಳಿಸಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ಸಚಿವಾಲಯ ತಿಳಿಸಿದೆ.

ಗೂಗಲ್‌ ಬಳಸಿ ಮಾಡುವ ಕಾರ್ಯನಿರ್ವಹಣೆ

ಪ್ರವಾಹ ಎದುರಾಗುವ ಸಂದರ್ಭದಲ್ಲಿ ಕೇಂದ್ರೀಯ ಜಲ ಆಯೋಗವು ಪಡೆಯುವ ಪ್ರವಾಹ ಮುನ್ಸೂಚನೆಯನ್ನು ಆಧರಿಸಿ, ಗೂಗಲ್‌ ತನ್ನ ತಂತ್ರಜ್ಞಾನದ ಮೂಲಕ ಹೈ ರೆಸಲೂಷನ್‌ ನಕ್ಷೆ ಹಾಗೂ ಮುಳುಗುವ ಪ್ರದೇಶಗಳ ನಕ್ಷೆಯನ್ನು ರಚಿಸುತ್ತದೆ. ಮುಖ್ಯವಾಗಿ ಮುಳುಗುವ ಪ್ರದೇಶ ಹಾಗೂ ಅದರ ಆಳ ಮತ್ತು ವಿಸ್ತಾರವನ್ನು ಮೂರು ದಿನಕ್ಕೂ ಮುನ್ನ ಗೂಗಲ್‌ ತನ್ನ ಜಾಲದಲ್ಲಿ ಪ್ರಸಾರ ಮಾಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ