ಆ್ಯಪ್ನಗರ

ಬೆಂಗಳೂರಿನಲ್ಲಿ ಅ.4ರಂದು ನೆರೆ ಸಂತ್ರಸ್ತರ ಅಧಿವೇಶನ

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಅ.4ರಂದು ದಕ್ಷಿಣ ಕರ್ನಾಟಕ ನೆರೆ ಸಂತ್ರಸ್ತರ ಅಧಿವೇಶನವನ್ನು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ಅ.2ರಂದು ತಲಕಾವೇರಿಯಿಂದ ಬೆಂಗಳೂರಿನವರೆಗೆ ಬೈಕ್‌ ಜಾಥಾ ಹಮ್ಮಿಕೊಳ್ಳಲಾಗಿದೆ.

Vijaya Karnataka 11 Sep 2019, 5:00 am
ಅ.2ಕ್ಕೆ ತಲಕಾವೇರಿಯಿಂದ ಬೆಂಗಳೂರಿಗೆ ಬೈಕ್‌ ಜಾಥಾ: ಬಡಗಲಪುರ ನಾಗೇಂದ್ರ
Vijaya Karnataka Web flood victim session in bangalore
ಬೆಂಗಳೂರಿನಲ್ಲಿ ಅ.4ರಂದು ನೆರೆ ಸಂತ್ರಸ್ತರ ಅಧಿವೇಶನ


ಮೈಸೂರು:
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಅ.4ರಂದು ದಕ್ಷಿಣ ಕರ್ನಾಟಕ ನೆರೆ ಸಂತ್ರಸ್ತರ ಅಧಿವೇಶನವನ್ನು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ಅ.2ರಂದು ತಲಕಾವೇರಿಯಿಂದ ಬೆಂಗಳೂರಿನವರೆಗೆ ಬೈಕ್‌ ಜಾಥಾ ಹಮ್ಮಿಕೊಳ್ಳಲಾಗಿದೆ.

ದಕ್ಷಿಣ ಕರ್ನಾಟಕ ಪ್ರವಾಹ ಪೀಡಿತ ಪ್ರದೇಶದ ಸಂಕಷ್ಟಗಳ ಚರ್ಚೆ ಮತ್ತು ಪರಿಹಾರೋಪಾಯಗಳಿಗಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅಧ್ಯಕ್ಷತೆಯಲ್ಲಿ ಮಂಗಳವಾರ ಮೈಸೂರಿನಲ್ಲಿ ಕರೆಯಲಾಗಿದ್ದ ವಿಭಾಗ ಮಟ್ಟದ ಸಮಾಲೋಚನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

''ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೆ.15ರಂದು ಉತ್ತರ ಕರ್ನಾಟಕ ಮತ್ತು ಹೈದರಾಬಾದ್‌ ಕರ್ನಾಟಕದ ನೆರೆ ಸಂತ್ರಸ್ತರ ಸಮಾವೇಶವನ್ನು ಬಾಗಲಕೋಟೆಯಲ್ಲಿ ಆಯೋಜಿಸಲಾಗಿದೆ. ಅದೇ ರೀತಿ ದಕ್ಷಿಣ ಕರ್ನಾಟಕ ಪ್ರವಾಹ ಪೀಡಿತ ಪ್ರದೇಶದ ಸಂಕಷ್ಟಗಳ ಕುರಿತು ಚರ್ಚಿಸಲು ಅ.4ರಂದು ಬೆಂಗಳೂರಿನಲ್ಲಿ ಸಮಾವೇಶ ಆಯೋಜಿಸಲಾಗಿದೆ. ಸಭೆಯಲ್ಲಿ ಕೊಡಗು, ಚಿಕ್ಕಮಗಳೂರು ದಕ್ಷಿಣ ಕನ್ನಡ ಉಡುಪಿ, ಹಾಸನ, ಮೈಸೂರು, ಚಾಮರಾಜ ನಗರ ಜಿಲ್ಲೆಗಳ ನೆರೆ ಸಂತ್ರಸ್ತರ ಸಮಸ್ಯೆಗಳು ಸೇರಿದಂತೆ ರೈತರ ಇನ್ನಿತರ ಸಮಸ್ಯೆಗಳ ಕುರಿತು ಚರ್ಚಿಸಲಾಗುವುದು,'' ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಂಗಳವಾರ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

''ಈ ಕಾರ್ಯಕ್ರಮಕ್ಕೂ ಮುನ್ನ ಅ.2ರಂದು ಬೆ.10.30ಕ್ಕೆ ತಲಕಾವೇರಿಯಿಂದ ಬಂಡಿ, ಮೋಟಾರ್‌ ಬೃಹತ್‌ ಜಾಥಾ ಆರಂಭವಾಗಲಿದೆ. ನಂತರ ಮಡಿಕೇರಿ ತಲುಪುತ್ತೇವೆ. ಅಲ್ಲಿ ದಕ್ಷಿಣ ಕನ್ನಡ ಜಿಲ್ಲೆಯವರು ಸೇರಿಕೊಳ್ಳುತ್ತಾರೆ. ಬಳಿಕ ವಿರಾಜಪೇಟೆ, ಗೋಣಿಕೊಪ್ಪ, ಹುಣಸೂರು ಮಾರ್ಗವಾಗಿ ಮೈಸೂರಿಗೆ ಆಗಮಿಸುತ್ತೇವೆ. ಅ.3ರಂದು ಮೈಸೂರಿನಿಂದ ಹೊರಟು ಶ್ರೀರಂಗಪಟ್ಟಣ, ಮಂಡ್ಯ ಮದ್ದೂರು ಮುಖಾಂತರ ಸಾಗಿ ಚನ್ನಪಟ್ಟಣಕ್ಕೆ ತಲುಪುತ್ತೇವೆ. ಅ.4ರಂದು ಚನ್ನಪಟ್ಟಣದಿಂದ ಹೊರಟು ಮಧ್ಯಾಹ್ನ 1ಕ್ಕೆ ಬೆಂಗಳೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ನಡೆಯುವ ಸಮಾವೇಶದಲ್ಲಿ ಭಾಗವಹಿಸಲಾಗುವುದು,'' ಎಂದರು.

ಸೆ.20ರಂದು ಪ್ರತಿಭಟನೆ: ''ಚಿಕ್ಕಮಗಳೂರು ಜಿಲ್ಲೆಯಲ್ಲಿ ರೈತರಿಗೆ ಸಂಬಂಧಿಸಿದ ದಾಖಲಾತಿಗಳು ಕಳವಾಗುತ್ತಿರುವುದನ್ನು ವಿರೋಧಿಸಿ ಸೆ.20ರಂದು ವಿಭಾಗ ಮಟ್ಟದ ಅಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಕೈಗೊಳ್ಳಲಾಗುವುದು. ಸರಕಾರಿ ಅಧಿಕಾರಿಗಳು ಬ್ರಿಟಿಷ್‌ ನಡವಳಿಕೆಯನ್ನು ಅನುಸರಿಸುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಉಪಾಧ್ಯಕ್ಷ ಮಂಜುನಾಥ್‌ಗೌಡ ಅವರಿಗೆ ಸಂಬಂಧಿಸಿದ ದಾಖಲಾತಿಯನ್ನು ತಾಲೂಕು ಪಂಚಾಯಿತಿಯಲ್ಲಿ ಕಳವು ಮಾಡಲಾಗಿದೆ. ಹಾಲಿ ಇರುವ ರೈತರ ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಮುಚ್ಚಿಟ್ಟು ಅವರ ದಾಖಲೆಯನ್ನು ಬೇರೆಯವರ ಹೆಸರಿಗೆ ಪರಿವರ್ತನೆ ಮಾಡಲಾಗುತ್ತಿದೆ. ಚಿಕ್ಕಮಗಳೂರಿನಲ್ಲಿ ಇದೇ ರೀತಿ ಸಾವಿರಾರು ಪ್ರಕರಣಗಳು ಇವೆ. ಹೀಗಾಗಿ ಇದೊಂದು ದಂಧೆಯಾಗಿ ಪರಿಣಮಿಸಿದೆ. ಅಧಿಕಾರಿಗಳು ಮಾಡುತ್ತಿರುವ ಈ ಅಕ್ರಮವನ್ನು ಖಂಡಿಸಿ ಪ್ರತಿಭಟಿಸಲಾಗುವುದು,'' ಎಂದು ತಿಳಿಸಿದರು.

ಸಂಘಟನೆಯ ಪದಾಧಿಕಾರಿಗಳಾದ ರಾಮಣ್ಣ, ಮೂಡಿಗೆರೆ ಮಂಜುನಾಥ್‌, ಮಹೇಶ್‌ ಬಾಬು, ನವೀನ್‌ ಪೂಣಚ್ಚ, ಬಸವರಾಜು, ಬಸವಣ್ಣ, ಬೊಬ್ಬೇಗೌಡ, ಶಂಕರ್‌, ಲಿಂಗಪ್ಪಾಜಿ, ಶಿವಣ್ಣ ಶೆಟ್ಟಿ ಸಿದ್ದಪ್ಪ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ