ಆ್ಯಪ್ನಗರ

ಪ್ರವಾಹ, ಮಳೆ: ಮೈಸೂರು ತಾಪಂ ವ್ಯಾಪ್ತಿಯಲ್ಲಿ 44 ಎಕರೆ ಬೆಳೆ ನಷ್ಟ

ಕಬಿನಿ ಜಲಾಶಯದಿಂದ ಹೆಚ್ಚು ನೀರು ಬಿಡುಗಡೆ ಮಾಡಿದ ಹಾಗೂ ಭೀಕರ ಮಳೆಯಿಂದ ಮೈಸೂರು ತಾಲೂಕಿನಲ್ಲಿ 44 ಎಕರೆ ಕೃಷಿ ಭೂಮಿ ಹಾಗೂ 105 ಮನೆಗಳಿಗೆ ಹಾನಿಯಾಗಿದ್ದು, ಪರಿಹಾರ ನೀಡಲು ತಾಲೂಕು ಪಂಚಾಯಿತಿ ಕ್ರಮ ಕೈಗೊಂಡಿದೆ.

Vijaya Karnataka 17 Aug 2019, 5:00 am
ಮೈಸೂರು: ಕಬಿನಿ ಜಲಾಶಯದಿಂದ ಹೆಚ್ಚು ನೀರು ಬಿಡುಗಡೆ ಮಾಡಿದ ಹಾಗೂ ಭೀಕರ ಮಳೆಯಿಂದ ಮೈಸೂರು ತಾಲೂಕಿನಲ್ಲಿ 44 ಎಕರೆ ಕೃಷಿ ಭೂಮಿ ಹಾಗೂ 105 ಮನೆಗಳಿಗೆ ಹಾನಿಯಾಗಿದ್ದು, ಪರಿಹಾರ ನೀಡಲು ತಾಲೂಕು ಪಂಚಾಯಿತಿ ಕ್ರಮ ಕೈಗೊಂಡಿದೆ.
Vijaya Karnataka Web 1608-2-1-MYSPHOTOS-2


ನಜರ್‌ಬಾದ್‌ನಲ್ಲಿರುವ ತಾಲೂಕು ಪಂಚಾಯಿತಿ ಕಾರ್ಯಾಲಯದ ಮಿನಿ ಸಭಾಂಗಣದಲ್ಲಿ ಶುಕ್ರವಾರ ತಾ.ಪಂ.ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯಅವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ಈ ಮಾಹಿತಿ ನೀಡಿದರು.

ಅಧ್ಯಕ್ಷೆ ಕಾಳಮ್ಮ ಹಾಗೂ ಉಪಾಧ್ಯಕ್ಷ ಬಿ.ಎನ್‌.ಮಂಜು ಅವರು ಪ್ರವಾಹ ಮತ್ತು ಮಳೆಯಿಂದ ತಾಲೂಕಿನ ಉಂಟಾಗಿರುವ ನಷ್ಟ ಹಾಗೂ ಅದಕ್ಕೆ ಕೈಗೊಂಡಿರುವ ಪರಿಹಾರ ಕುರಿತು ಮಾಹಿತಿ ನೀಡುವಂತೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿ ತಾಲೂಕಿನ ಕೃಷಿ ಸಹಾಯಕ ನಿರ್ದೇಶಕ ವೀರಣ್ಣ ಅವರು, ''ನದಿಯಿಂದ ಮೈಸೂರು ತಾಲೂಕಿನ ಗ್ರಾಮಗಳು ಹಾಗೂ ಕೃಷಿ ಭೂಮಿ ದೂರು ಇರುವ ಯಾವುದೇ ಹೆಚ್ಚಿನ ಹಾನಿ ಸಂಭವಿಸಿಲ್ಲ. ವರುಣಾ ನಾಲೆಯ ಸುತ್ತಮುತ್ತ ಪ್ರದೇಶ ಹಾಗೂ ತಾಲೂಕಿನ ಕುಪ್ಪೆಗಾಲ, ಇನಾಂ ಉತ್ತನಹಳ್ಳಿ ಭಾಗದಲ್ಲಿ ಈಗತನೆ ಬಿತ್ತನೆ ಮಾಡಿದ ನರ್ಸರಿ ಹಂತದ ಭತ್ತ, ಎರಡು ಎಕರೆ ಕಬ್ಬಿನ ಬೆಳೆ ಹಾನಿಯಾಗಿದೆ. ಅಕಾಲಿಕ ಮತ್ತು ಅಗತ್ಯಕ್ಕಿಂತ ಹೆಚ್ಚು ಮಳೆ ಬಿದ್ದ ಪರಿಣಾಮ ತಾಲೂಕಿನ ಜಯಪುರ, ಇಲವಾಲ ಮತ್ತಿತರ 44 ಎಕರೆ ಪ್ರದೇಶದಲ್ಲಿ ಹಾನಿಯಾಗಿದ್ದು, ರಾಗಿ, ಭತ್ತ, ಅಲಸಂದೆ ಬೆಳೆಗಳು ನಾಶವಾಗಿದೆ. ಈಗಾಗಲೇ ಎಷ್ಟು ನಷ್ಟವಾಗಿದೆ ಎಂದು ಆಂದಾಜಿಸಲಾಗಿದ್ದು, ವಾಸ್ತವ ಅರಿಯಲು ಸಮೀಕ್ಷೆ ಕೈಗೊಳ್ಳಲಾಗಿದೆ. ನಷ್ಟವಾಗಿರುವ ಕೃಷಿ ಭೂಮಿಗೆ ಒಣ ಬೇಸಾಯಕ್ಕೆ ಗುಂಟೆಗೆ 62 ರೂ., ನೀರಾವರಿ ಪ್ರದೇಶಕ್ಕೆ 135 ರೂ., ನೀಡಲಾಗುತ್ತದೆ,'' ಮಾಹಿತಿ ನೀಡಿದರು.

ಮೈಸೂರು ತಾ.ಪಂ. ಇಒ ಕೃಷ್ಣಕುಮಾರ್‌ ಮಾತನಾಡಿ, ''ಮೈಸೂರು ತಾಲೂಕಿನ 34 ಗ್ರಾ.ಪಂ.ಗಳಲ್ಲಿ ಮಳೆ ಹಾನಿಯಿಂದಾಗಿ 105 ಮನೆಗಳಿಗೆ ಹಾನಿಯಾಗಿದೆ. ಈ ಕುರಿತು ಸಮೀಕ್ಷೆ ನಡೆಸಿ ದೊಡ್ಡ ಮತ್ತು ಸಣ್ಣ ಪ್ರಮಾಣದಲ್ಲಿ ಹಾನಿ ಉಂಟಾಗಿರುವ ಕುರಿತು ವರದಿ ತಯಾರಿಸಲಾಗಿದೆ. ಜಿಲ್ಲಾಧಿಕಾರಿ, ಜಿ.ಪಂ.ಸಿಇಒ ಹಾಗೂ ತಹಸೀಲ್ದರ್‌ಗೆ ವರದಿ ನೀಡಲಾಗಿದೆ. ಇದಕ್ಕೆ ಪರಿಹಾರ ನೀಡಲು ಚೆಕ್‌ ಕೂಡ ಸಿದ್ಧವಿದೆ. ಶೀಘ್ರ ಸಂತ್ರಸ್ತರಿಗೆ ನೀಡಲಾಗುವುದು,'' ಎಂದು ಮಾಹಿತಿ ನೀಡಿದರು.

ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕ ದಿನೇಶ್‌ ಕುಮಾರ್‌ ಮಾತನಾಡಿ,''ಪ್ರವಾಹದಿಂದ ಯಾವುದೇ ಹಾನಿ ಆಗಿಲ್ಲ. ದೇಬೂರಿನ ಸುತ್ತಮತ್ತಲಿನ ತೋಟಗಾರಿಕೆ ಬೆಳೆ ಮತ್ತು ತರಕಾರಿ ಬಳೆಗೆ ಹಾನಿಯಾಗಿರುವ ಕುರಿತು ಮಾಹಿತಿ ಪಡೆಯಲಾಗಿದೆ. ವರದಿ ತರಿಸಿಕೊಂಡು ಪರಿಹಾರ ನೀಡಲು ಕ್ರಮ ವಹಿಸಲಾಗುವುದು,'' ಎಂದು ತಿಳಿಸಿದರು.

ಸಭೆಯಲ್ಲಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಂ.ಶಂಕರ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ