ಆ್ಯಪ್ನಗರ

ಬೆಂಗಳೂರಿನಲ್ಲಿ ಭಾರತೀಯ ರಸ್ತೆ ಕಾಂಗ್ರೆಸ್‌ ಸಮ್ಮೇಳನ ನ.3ರಿಂದ

ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್‌ 3ರಿಂದ 6ರ ವರೆಗೆ 78ನೇ ಭಾರತೀಯ ರಸ್ತೆ ಕಾಂಗ್ರೆಸ್‌ ಸಮ್ಮೇಳನ ನಡೆಯಲಿದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು.

Vijaya Karnataka 25 Sep 2017, 5:15 am

ಮೈಸೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್‌ 3ರಿಂದ 6ರ ವರೆಗೆ 78ನೇ ಭಾರತೀಯ ರಸ್ತೆ ಕಾಂಗ್ರೆಸ್‌ ಸಮ್ಮೇಳನ ನಡೆಯಲಿದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು.

ಸಮ್ಮೇಳನದ ವೆಬ್‌ಸೈಟ್‌ಗೆ ಶನಿವಾರ ಇಲ್ಲಿ ಚಾಲನೆ ನೀಡಿ ಸುದ್ದಿಗಾರರ ಜತೆ ಮಾತನಾಡಿದ ಡಾ.ಮಹದೇವಪ್ಪ, ''ಈ ಸಮ್ಮೇಳನಕ್ಕೆ ಸುಮಾರು 16 ಸಾವಿರ ಎಂಜಿನಿಯರುಗಳು ನೋಂದಣಿ ಮಾಡಿಕೊಳ್ಳುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಮೂರನೇ ಬಾರಿಗೆ ಈ ಸಮ್ಮೇಳನ ನಡೆಯುತ್ತಿದೆ. ರಸ್ತೆ, ಸೇತುವೆ, ಕಟ್ಟಡ ಕಾಮಗಾರಿಗಳಲ್ಲಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಕುರಿತು ಈ ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ,'' ಎಂದರು.

''ದೇಶದ ಅಭಿವೃದ್ಧಿಯಲ್ಲಿ ಮೂಲ ಸೌಕರ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಂಪತ್ತಿನ ಮೂಲಕ ದೇಶವನ್ನು ಅಭಿವೃದ್ಧಿಪಡಿಸಬೇಕು. ರಸ್ತೆ ಸಂಪತ್ತನ್ನು ಸೃಷ್ಟಿಸುತ್ತದೆ ಎಂಬ ಉದ್ದೇಶದಿಂದ ಈ ಸಮ್ಮೇಳನ ಆಯೋಜಿಸಲಾಗಿದೆ,'' ಎಂದರು.

''ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಉತ್ತಮವಾದ ರಸ್ತೆ, ಸೇತುವೆ ಮತ್ತು ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇದನ್ನು ಗಮನಿಸಿದ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಕರ್ನಾಟಕದಲ್ಲೇ 78ನೇ ಭಾರತೀಯ ರಸ್ತೆ ಕಾಂಗ್ರೆಸ್‌ ಸಮ್ಮೇಳನ ನಡೆಯಬೇಕು ಎಂದು ಸೂಚಿಸಿದ್ದಾರೆ,'' ಎಂದು ಡಾ.ಮಹದೇವಪ್ಪ ತಿಳಿಸಿದರು.

''ಚಾಮರಾಜನಗರ, ಗದಗಿನ ಮೆಡಿಕಲ್‌ ಕಾಲೇಜುಗಳು, ಬೆಂಗಳೂರಿನ ಬಹುಮಹಡಿ ನ್ಯಾಯಾಂಗ ಸಿಬ್ಬಂದಿ ಕಟ್ಟಡಕ್ಕೆ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಸಮ್ಮೇಳನದಲ್ಲಿ ನೀಡಲಾಗುವುದು,'' ಎಂದು ಡಾ.ಮಹದೇವಪ್ಪ ತಿಳಿಸಿದರು.

ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸಿದ್ದಲಿಂಗಪ್ಪ, ಮುಖ್ಯ ಎಂಜಿನಿಯರ್‌ ಶ್ರೀನಿವಾಸ್‌, ಸೂಪರಿಂಟೆಂಡೆಂಟ್‌ ಎಂಜಿನಿಯರ್‌ಗಳಾದ ಸತ್ಯನಾರಾಯಣ, ಸುರೇಶ್‌ಬಾಬು, ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಮಂಜುನಾಥ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ