ಆ್ಯಪ್ನಗರ

ಹಲ್ಲೆ ಪ್ರಕರಣ: ಪ್ರಧಾನಿ ಕಚೇರಿ ಮೊರೆ ಹೋದ ಯುವತಿ

ನಗರದ ಪಬ್‌ವೊಂದರಲ್ಲಿ ಸ್ನೇಹಿತೆಯ ಪತಿ ಸೇರಿದಂತೆ ನಾಲ್ವರಿಂದ ಹಲ್ಲೆಗೊಳಗಾದ ಯುವತಿಯೊಬ್ಬರು ರಕ್ಷಣೆ ನೀಡುವಂತೆ ಪ್ರಧಾನಿ ಮೊರೆ ಹೋಗಿದ್ದಾರೆ.

Vijaya Karnataka 26 Jun 2018, 8:08 am
ಮೈಸೂರು: ನಗರದ ಪಬ್‌ವೊಂದರಲ್ಲಿ ಸ್ನೇಹಿತೆಯ ಪತಿ ಸೇರಿದಂತೆ ನಾಲ್ವರಿಂದ ಹಲ್ಲೆಗೊಳಗಾದ ಯುವತಿಯೊಬ್ಬರು ರಕ್ಷಣೆ ನೀಡುವಂತೆ ಪ್ರಧಾನಿ ಮೊರೆ ಹೋಗಿದ್ದಾರೆ.
Vijaya Karnataka Web modi


ವಿಜಯನಗರದ ಮೂರನೇ ಹಂತದ ನಿವಾಸಿ 22 ವರ್ಷದ ಯುವತಿ, ಸ್ನೇಹಿತೆಯ ಪತಿ ಉಮೇಶ್‌ ಕುಮಾರ್‌, ವಿವೇಕ್‌ ಸೇರಿದಂತೆ ನಾಲ್ವರ ವಿರುದ್ಧ ಜಯಲಕ್ಷ್ಮೇಪುರಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದೂರಿನ ಬೆನ್ನಲ್ಲೇ ರಕ್ಷಣೆ ನೀಡುವಂತೆ ಯುವತಿ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಇ-ಮೇಲ್‌ ಮಾಡಿದ್ದಾರೆ. ಇ ಮೇಲ್‌ ಪತ್ರವನ್ನು ಸ್ವೀಕರಿಸಿದ ಕಾರ್ಯಾಲಯದ ಅಧಿಕಾರಿಗಳು, ಸಂತ್ರಸ್ತ ಯುವತಿಗೆ ಕರೆ ಮಾಡಿದ್ದು, ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಸಂತ್ರಸ್ತ ಯುವತಿಯ ಸ್ನೇಹಿತೆ ಅಮೃತ 'ವಿಜಯ ಕರ್ನಾಟಕ'ಕ್ಕೆ ಮಾಹಿತಿ ನೀಡಿದರು.

ಘಟನೆ ಹಿನ್ನೆಲೆ: ಎರಡು ವರ್ಷದ ಹಿಂದೆ ಮದ್ದೂರಿನ ಕಾಫಿ ಡೇ ಒಂದರಲ್ಲಿ ಯುವತಿ ಹಾಗೂ ಆಕೆ ಸ್ನೇಹಿತೆಯರು ಇದ್ದಾಗ ಕ್ಷುಲ್ಲಕ ವಿಚಾರಕ್ಕೆ ಉಮೇಶ್‌ ಕುಮಾರ್‌ ಮತ್ತು ವಿವೇಕ್‌ ಗಲಾಟೆ ಮಾಡಿ ಹಲ್ಲೆ ನಡೆಸಿದ್ದರು. ಈ ಸಂಬಂಧ ಮದ್ದೂರು ಪೊಲೀಸ್‌ ಠಾಣೆಗೆ ದೂರು ದಾಖಲಾಗಿತ್ತು. ಆ ಬಳಳಿಕ ಇಬ್ಬರು ಆರೋಪಿಗಳು ದೂರು ಹಿಂಪಡೆಯುವಂತೆ ಯುವತಿಮೇಲೆ ಒತ್ತಡ ಹೇರುತ್ತಿದ್ದರು. ಆದರೆ, ಯುವತಿ ದೂರು ಹಿಂಪಡೆದಿರಲಿಲ್ಲ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು.

ಜೂ.23ರಂದು ಸಂಜೆ ಒಂಟಿಕೊಪ್ಪಲಿನ ಪಬ್‌ನಲ್ಲಿ ಹಲ್ಲೆಗೊಳಗಾದ ಯುವತಿ ತನ್ನ ಸ್ನೇಹಿತೆಯೊಂದಿಗೆ ಇದ್ದಾಗ ಏಕಾಏಕಿ ದಾಳಿ ನಡೆಸಿದ ಸ್ನೇಹಿತೆಯ ಪತಿ ಉಮೇಶ್‌ ಕುಮಾರ್‌ ಮತ್ತು ಅವರ ಸ್ನೇಹಿತರಾದ ವಿವೇಕ್‌, ರವೀಶ್‌, ದಿನೇಶ್‌ ಎಂಬುವರು ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೇ ಡ್ಯಾಗರ್‌ನಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿ ಪರಾರಿಯಾಗಿದ್ದರು. ಗಾಯಗೊಂಡಿದ್ದ ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯಾಗಿರುವ ಯುವತಿ ನೀಡಿದ ದೂರಿನ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಜಯಲಕ್ಷ್ಮೇಪುರಂ ಠಾಣೆ ಪೊಲೀಸರು, ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಲ್ಲೆ ನಡೆಸಿದ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ