ಆ್ಯಪ್ನಗರ

ಮೈಸೂರು: ತುತ್ತು ಅನ್ನ ನೀಡಿದ ಸಂಸ್ಥೆಗೆ 70ರ ಅಜ್ಜಮ್ಮನಿಂದ ಮರೆಯಲಾಗದ ದಾನ!

ಮನೆಗೆಲಸ ಮಾಡಿಕೊಂಡಿದ್ದ 70 ವರ್ಷದ ಅಜ್ಜಿಯ ತುತ್ತು ಊಟಕ್ಕೆ ಲಾಕ್‌ಡೌನ್ ಕಲ್ಲು ಹಾಕಿತು. ದಾನಿಗಳು ನೀಡಿದ ಆಹಾರದಿಂದ ಸಂತೃಪ್ತರಾಗಿ ನೆಮ್ಮದಿಯ ಜೀವನ ನಡೆಸಿದರು. ಇದೀಗ ಇತರರಿಗೂ ಸಹಾಯವಾಗಲಿ ಎಂದು ಮಾಸಾಶನ ನೀಡಿದ್ದಾರೆ.

Vijaya Karnataka Web 25 May 2020, 4:50 pm
ಹರೀಶ ಎಲ್‌.ತಲಕಾಡು
Vijaya Karnataka Web mysuru
ದೇಣಿಗೆ ನೀಡುತ್ತಿರುವ ಕಮಲಮ್ಮ


ಮೈಸೂರು: 70 ವರ್ಷದ ಅಜ್ಜಿ ಮನೆಗೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಲಾಕ್‌ಡೌನ್‌ ಎಂಬುದು ಮನೆಗೆಲಸಕ್ಕೂ ಸಹ ಕುತ್ತು ತಂತು. ಕೆಲಸದ ವೇಳೆ ಮನೆ ಮಾಲೀಕರು ನೀಡುತ್ತಿದ್ದ ಊಟವೂ ಕೈ ತಪ್ಪಿದ್ದರಿಂದ ಹೊಟ್ಟೆಗೆ ತಣ್ಣಿರು ಬಟ್ಟೆಯೇ ಗತಿಯಾಗಿತ್ತು. ಆದರೆ ದಾನಿಗಳು ನೀಡಿದ ಆಹಾರದಿಂದ ಸಂತೃಪ್ತರಾಗಿ ನೆಮ್ಮದಿಯ ಜೀವನ ನಡೆಸಿದರು. ತನ್ನಂತೆ ಇತರರಿಗೂ ಆಹಾರ ನೀಡಲು ಸಹಾಯವಾಗಲಿ ಎಂದು ಅಜ್ಜಿ ತನ್ನ ಒಂದು ತಿಂಗಳ ಮಾಸಾಶನ 500 ರೂಪಾಯಿಯನ್ನು ಆಹಾರ ನೀಡಿದ ದಾನಿಗಳಿಗೆ ದೇಣಿಗೆಯಾಗಿ ನೀಡಿದ್ದಾರೆ.

ಮೈಸೂರು ನಗರದ ಚೆನ್ನಗಿರಿ ಕೊಪ್ಪಲಿನ ನಿವಾಸಿ ಕಮಲಮ್ಮ ಅವರು ಕಡು ಕಷ್ಟದ ನಡುವೆಯೂ ತಮಗೆ ನಿತ್ಯ ಆಹಾರ ನೀಡಿದ ರೋಟರಿ ಹೆರಿಟೇಜ್‌ ಸಂಸ್ಥೆಗೆ ತಿಂಗಳ ಮಾಸಾಶನ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಪತಿಯ ನಿಧನದ ಬಳಿಕ ಮಕ್ಕಳ ಮೇಲೆ ಅವಲಂಬಿತರಾಗದೇ ನಾಲ್ಕೈದು ಮನೆಗಳಲ್ಲಿಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕೊರೊನಾ ವೈರಸ್‌ ಅದಕ್ಕೂ ಕಲ್ಲುಹಾಕಿತು. ಕೈಗೆ ಸಂಬಳವು ಇಲ್ಲದೇ ಊಟ- ತಿಂಡಿಗೆ ಪರದಾಡುತ್ತಿದ್ದ ಕಮಲಮ್ಮ ಅವರಿಗೆ ರೋಟರಿ ಹೆರಿಟೇಜ್‌ ಮೈಸೂರು ಸಂಸ್ಥೆಯವರು ನೀಡುತ್ತಿದ್ದ ಊಟ ಸಂತೃಪ್ತಿ ತಂದಿದೆ.

ಕಷ್ಟ ಕಾಲದಲ್ಲಿಊಟ ನೀಡಿದ ಸಂಸ್ಥೆಗೆ ನೆರವು ನೀಡಬೇಕೆಂದು ನಿರ್ಧರಿಸಿದ ಕಮಲಮ್ಮ ತಮಗೆ ನಿತ್ಯ ಊಟ ತಂದು ಕೊಡುತ್ತಿದ್ದ ಮಹಾದೇವ್‌ ಅವರನ್ನು ಸಂಪರ್ಕಿಸಿ, ರೋಟರಿ ಹೆರಿಟೇಜ್‌ ಮೈಸೂರು ಸಂಸ್ಥೆಯ ಅಧ್ಯಕ್ಷ ತಲಕಾಡು ಮಂಜುನಾಥ್‌ ಅವರನ್ನು ಭೇಟಿ ಮಾಡಿ, ಒಂದು ತಿಂಗಳ ಮಾಸಾಶನ ನೀಡಿ, ಅವರ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಮ್ಮ ರೋಟರಿ ಹೆರಿಟೇಜ್‌ ಸಂಸ್ಥೆ ವತಿಯಿಂದ ಮೈಸೂರು ನಗರದ ಕೆಲ ಪ್ರದೇಶಗಳಲ್ಲಿಬಡವರಿಗೆ ನಿತ್ಯ ಊಟ ನೀಡಲಾಗಿದ್ದು, ಅದರಂತೆ ಚೆನ್ನಗಿರಿ ಕೊಪ್ಪಲಿಗೂ ಸಹ ನೀಡಲಾಗುತ್ತಿತ್ತು. ಅಲ್ಲಿನ ನಿವಾಸಿಯಾದ ಕಮಲಮ್ಮ ತಮ್ಮ ಸಂಕಷ್ಟದ ಪರಿಸ್ಥಿತಿಯಲ್ಲಿನಾವು ಆಹಾರ ನೀಡುವ ಸ್ಥಳಕ್ಕೆ ಬಂದು ತಮ್ಮ ಮಾಸಾಶನದ ಹಣವನ್ನು ನೀಡಿದ್ದಾರೆ.
-ತಲಕಾಡು ಮಂಜುನಾಥ್‌, ಅಧ್ಯಕ್ಷರು, ರೋಟರಿ ಹೆರಿಟೇಜ್‌ ಮೈಸೂರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ