ಆ್ಯಪ್ನಗರ

ಜೈವಿಕ ಇಂಧನ ತಯಾರಿಕೆಗೆ ಪೂರಕವಾದ ಗಿಡ ಬೆಳೆಸಿ

ವಿಶ್ವ ಜೈವಿಕ ಇಂಧನ ದಿನಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ಮತ್ತು ರೈತ ಸಮೂಹಕ್ಕೆ ಜೈವಿಕ ಇಂಧನ ತಯಾರಿಕೆ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.

Vijaya Karnataka 20 Dec 2018, 5:00 am
ಮೈಸೂರು: ವಿಶ್ವ ಜೈವಿಕ ಇಂಧನ ದಿನಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ಮತ್ತು ರೈತ ಸಮೂಹಕ್ಕೆ ಜೈವಿಕ ಇಂಧನ ತಯಾರಿಕೆ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.
Vijaya Karnataka Web 1912-2-1-MYSPHOTOS-5


ಬುಧವಾರ ನಗರದ ಎನ್‌ಐಇ ಕಾಲೇಜಿನ ವಜ್ರ ಮಹೋತ್ಸವ ಭವನದಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಜಿಪಂ, ಸಾಮಾಜಿಕ ಅರಣ್ಯ ವಿಭಾಗ ಮತ್ತು ಜಿಲ್ಲಾ ಜೈವಿಕ ಇಂಧನ ಸಂಶೋಧನೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ, ಎನ್‌ಐಇ ಕ್ರೆಸ್ಟ್‌ ಸಂಸ್ಥೆ ವತಿಯಿಂದ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು.

ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ್‌ ಅಹ್ಮದ್‌ ವಾಹನವೊಂದಕ್ಕೆ ಜೈವಿಕ ಇಂಧನ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಅರಣ್ಯ ರಕ್ಷಣೆ ನಮ್ಮೆಲ್ಲರ ಹೊಣೆ. ಕಾಡನ್ನು ಉಳಿಸಿ ಜೈವಿಕ ಇಂಧನ ತಯಾರಿಕೆಗೆ ಪೂರಕವಾದ ಗಿಡಗಳನ್ನು ಬೆಳೆಸಬೇಕು ಎಂದು ತಿಳಿಸಿದರು.

ಜಿಪಂ ಉಪಾಧ್ಯಕ್ಷ ಕೈಯ್ಯಂಬಳ್ಳಿ ನಟರಾಜು ಮಾತನಾಡಿ, ನಾವು ಚಿಕ್ಕವರಿದ್ದಾಗ ಊರಿನಲ್ಲಿ ಹೊಂಗೆ ಬೀಜ, ಹಿಪ್ಪೆ ಬೀಜ, ಬೇವಿನ ಬೀಜಗಳನ್ನು ಆಯ್ದುಕೊಂಡು ನಗರಕ್ಕೆ ಮಾರಾಟ ಮಾಡುತ್ತಿದ್ದೆವು. ಅವುಗಳಿಂದ ಇಷ್ಟೆಲ್ಲಾ ಉಪಯೋಗವಿದೆ ಎಂಬುದು ಗೊತ್ತಿರಲಿಲ್ಲ. ಈಗ ಅರಣ್ಯ ಇಲಾಖೆಯವರು ರೈತರಲ್ಲಿ ಅರಿವು ಮೂಡಿಸಿ ಹೊಂಗೆ, ಬೇವು, ಹಿಪ್ಪೆ ಸಸಿಗಳನ್ನು ಬೆಳೆಸಲು ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವೆಂಕಟೇಸನ್‌ ಮಾತನಾಡಿ, ಎನ್‌ಐಇ ಕಾಲೇಜಿನ ಕ್ರೆಸ್ಟ್‌ ಸಂಸ್ಥೆಯು ಹೊಂಗೆ ಬೀಜವನ್ನು ಪ್ರತಿ ಕೆಜಿಗೆ 25 ರೂ. ಮತ್ತು ಬೇವಿನ ಬೀಜವನ್ನು ಪ್ರತಿ ಕೆಜಿಗೆ 30 ರೂ.. ನೀಡಿ ಖರೀದಿಸುತ್ತಿದೆ. ಈ ವಿಚಾರವನ್ನು ರೈತರಿಗೆ ತಿಳಿಸಿದಲ್ಲಿ ಅವರೂ ಬೆಳೆಯಲು ಬೆಂಬಲ ನೀಡಿದಂತಾಗುತ್ತದೆ. ಅರಣ್ಯ ಇಲಾಖೆಯಿಂದ ಈ ಸಸಿಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಹುಣಸೂರಿನ ಡೀಡ್‌ ಸಂಸ್ಥೆಯ ಎಸ್‌.ಶ್ರೀಕಾಂತ್‌ ಮಾತನಾಡಿ, ಕೇಂದ್ರ ಸರಕಾರ ರೂಪಿಸಿರುವ ಅರಣ್ಯ ನೀತಿಯಲ್ಲಿ ಜೈವಿಕ ನೀತಿಯನ್ನು ಕೈಬಿಟ್ಟಿದ್ದಾರೆ. ಸಮಗ್ರ ಸಂಶೋಧನೆ ನಡೆಸಿ ಜೈವಿಕ ಇಂಧನ ಬಗೆಗಿನ ಉಪಯೋಗದ ಬಗ್ಗೆ ನೀತಿ ರೂಪಿಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಜೈವಿಕ ಇಂಧನ ತಯಾರಿಸಲು ಪ್ರೋತ್ಸಾಹ ನೀಡಬೇಕು. ಬಿ.ಎಸ್‌.ಯಡಿಯೂರಪ್ಪ ಸರಕಾರದಲ್ಲಿ 100 ಕೋಟಿ ನೀಡಲಾಗಿತ್ತು. ನಂತರ ಡಿ.ವಿ.ಸದಾನಂದಗೌಡ, ಜಗದೀಶ್‌ ಶೆಟ್ಟರ್‌, ಸಿದ್ದರಾಮಯ್ಯ ಸರಕಾರ ಸಂಪೂರ್ಣ ನಿರ್ಲಕ್ಷ್ಯಿಸಿದವು ಎಂದು ತಿಳಿಸಿದರು.

ಕೃಷಿ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಬಾಲಕೃಷ್ಣೇಗೌಡ ಉಪನ್ಯಾಸ ನೀಡಿದರು.

ಜಿಪಂ ಸದಸ್ಯರಾದ ಕೃಷ್ಣ, ಪುಷ್ಪ ನಾಗೇಶ್‌, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗತ್‌ ರಾಮ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್‌, ಎನ್‌ಐಇ ಕ್ರೆಸ್ಟ್‌ನ ನಿರ್ದೇಶಕ ಎಸ್‌.ಶ್ಯಾಮಸುಂದರ್‌,ನಳಪಾಕ್‌ ಹೋಟೆಲ್‌ನ ಸುನೀಲ್‌ ಹಾಜರಿದ್ದರು.

2035ರಿಂದ 2060 ರೊಳಗೆ ನೈಸರ್ಗಿಕವಾಗಿ ದೊರಕುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳು ಕಲ್ಲಿದ್ದಲು ನಿಕ್ಷೇಪ ಖಾಲಿಯಾಗುವ ಸಾಧ್ಯತೆಯಿದ್ದು,ನಂತರದ ದಿನಗಳಲ್ಲಿ ಜೈವಿಕ ಇಂಧನವೇ ನಮಗೆ ಆಧಾರ.

- ಲಕ್ಷ್ಮೀ ಮೋಹನ್‌, ಕೆ.ಆರ್‌.ನಗರ, ತಾಪಂ ಇಒ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ