ಆ್ಯಪ್ನಗರ

ಎಚ್​ಡಿಡಿ ಸಂಬಂಧಿಯನ್ನು ಭೇಟಿಯಾದ ಜಿಟಿಡಿ; ಜೆಡಿಎಸ್​ನಲ್ಲೇ ಉಳಿಯುವ ಮುನ್ಸೂಚನೆ​ ಕೊಟ್ಟರಾ ಗೌಡ್ರು?

ಜಿ.ಟಿ.ದೇವೇಗೌಡರು, ಎಚ್‌.ಡಿ.ರೇವಣ್ಣ ಸಚಿವರಾಗಿದ್ದಾಗ ಕೆ.ಆರ್‌.ನಗರ ವಿಧಾನಸಭಾ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿ ಮುಕ್ತಕಂಠದಿಂದ ಶ್ಲಾಘಿಸಿದರು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಸೇರಿದಂತೆ ಎಚ್‌.ಡಿ. ಕುಮಾರಸ್ವಾಮಿಯವರ ಪತ್ನಿ ಅನಿತಾ, ಪುತ್ರ ನಿಖಿಲ್‌ ಕುಮಾರಸ್ವಾಮಿಯವರು ಪಕ್ಷ ತೊರೆಯದಂತೆ ಪದೇ ಪದೆ ಒತ್ತಡ ಹೇರಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗುವ ಚಿಂತನೆಯಲ್ಲಿದ್ದ ಜಿ.ಟಿ.ದೇವೇಗೌಡರು ತಮ್ಮ ನಿಲುವು ಬದಲಿಸಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

Vijaya Karnataka 25 Oct 2021, 2:43 pm
ಸಾಲಿಗ್ರಾಮ: ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿಯವರ ಮೇಲೆ ಮುನಿಸಿಕೊಂಡು ಕಾಂಗ್ರೆಸ್‌ನತ್ತ ಚಿತ್ತ ಹರಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡರು ಪಕ್ಷದಲ್ಲಿಯೇ ಉಳಿಯುವ ಸಾಧ್ಯತೆ ದಟ್ಟವಾಗಿದೆ. ಅವರು ಪಟ್ಟಣದಲ್ಲಿ ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಸಂಬಂಧಿಕರನ್ನು ಭೇಟಿ ಮಾಡಿರುವುದು ಇದಕ್ಕೆ ಪುಷ್ಠಿ ನೀಡಿದೆ.
Vijaya Karnataka Web Gt Deve Gowda


ಜೆಡಿಎಸ್‌ ನಾಯಕ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಭಾವ ಮೈದುನ, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಎಸ್‌.ಎಂ.ಸೋಮಣ್ಣ ಅವರ ಸಾಲಿಗ್ರಾಮದಲ್ಲಿರುವ ನಿವಾಸಕ್ಕೆ ತಮ್ಮ ಆಪ್ತ ಮುಡಾ ಮಾಜಿ ಅಧ್ಯಕ್ಷ ಹರದನಹಳ್ಳಿ ವಿಜಯ್‌ ಅವರೊಂದಿಗೆ ಭಾನುವಾರ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದ ಜಿ.ಟಿ.ದೇವೇಗೌಡರು, ಎಚ್‌.ಡಿ.ರೇವಣ್ಣ ಸಚಿವರಾಗಿದ್ದಾಗ ಕೆ.ಆರ್‌.ನಗರ ವಿಧಾನಸಭಾ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿ ಮುಕ್ತಕಂಠದಿಂದ ಶ್ಲಾಘಿಸಿದರು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಸೇರಿದಂತೆ ಎಚ್‌.ಡಿ. ಕುಮಾರಸ್ವಾಮಿಯವರ ಪತ್ನಿ ಅನಿತಾ, ಪುತ್ರ ನಿಖಿಲ್‌ ಕುಮಾರಸ್ವಾಮಿಯವರು ಪಕ್ಷ ತೊರೆಯದಂತೆ ಪದೇ ಪದೆ ಒತ್ತಡ ಹೇರಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗುವ ಚಿಂತನೆಯಲ್ಲಿದ್ದ ಜಿ.ಟಿ.ದೇವೇಗೌಡರು ತಮ್ಮ ನಿಲುವು ಬದಲಿಸಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.
ಜೆಡಿಎಸ್‌ ಕೊಡುಗೆ ಸ್ಮರಿಸುತ್ತೀರಿ, ಚುನಾವಣೆಯಲ್ಲಿ ಯಾಕೆ ಕೈ ಕೊಡುತ್ತೀರಿ? ಕುಮಾರಸ್ವಾಮಿ ಪ್ರಶ್ನೆ
ನಿಖಿಲ್‌ ಕುಮಾರಸ್ವಾಮಿಯವರು ಜಿ.ಟಿ.ದೇವೇಗೌಡರ ಪುತ್ರ, ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ ಉಪಾಧ್ಯಕ್ಷ ಜಿ.ಡಿ.ಹರೀಶ್‌ಗೌಡ ಅವರನ್ನು ಇತ್ತೀಚಿಗೆ ಮೈಸೂರಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಒಂದೆಡೆಯಾದರೆ, ತಮ್ಮ ಮೇಲೆ ಸದಾ ಕಿಡಿಕಾರುತ್ತಿದ್ದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿಯವರು ಪ್ರಸ್ತುತ ಮೃದು ಧೋರಣೆ ಹೊಂದಿರುವುದು ಜಿಟಿಡಿಯವರ ನಿಲುವು ಬದಲಾಗಲು ಕಾರಣ ಎನ್ನಲಾಗುತ್ತಿದೆ. ಎಚ್‌.ಡಿ.ಕುಮಾರಸ್ವಾಮಿಯವರು ಮೈಸೂರಿಗೆ ಭೇಟಿ ನೀಡಿದಾಗಲೆಲ್ಲಾ ಶಾಸಕ ಜಿ.ಟಿ.ದೇವೇಗೌಡರ ವಿರುದ್ಧ ಕಿಡಿಕಾರುತ್ತಿದ್ದರು. ಅವರು ಪಕ್ಷ ಬಿಟ್ಟರೂ ನಮಗೇನೂ ನಷ್ಟವಿಲ್ಲ. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಪಕ್ಷದಿಂದ ಬೇರೊಬ್ಬ ಸೂಕ್ತ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. ಆದರೆ ಬದಲಾದ ಸನ್ನಿವೇಶದಲ್ಲಿ ಎಚ್‌ಡಿಕೆಯವರು ಜಿ.ಟಿ.ದೇವೇಗೌಡರ ವಿಷಯದಲ್ಲಿ ಸಕಾರಾತ್ಮಕ ನಿಲುವು ಹೊಂದಿದ್ದಾರೆ. ಹೀಗಾಗಿ ಜಿಟಿಡಿ ಪಕ್ಷದಲ್ಲೇ ಉಳಿಯುವ ಮನಸ್ಸು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರಕಾರ ಪತನದ ಬಳಿಕ ಮೈಸೂರು ಜಿಲ್ಲೆಯಲ್ಲದೆ ಇತರೆಡೆ ನಡೆಯುತ್ತಿದ್ದ ಜೆಡಿಎಸ್‌ನ ಕಾರ್ಯಕ್ರಮಗಳಿಂದ ಬಲುದೂರವೇ ಉಳಿದಿದ್ದ ಜಿ.ಟಿ.ದೇವೇಗೌಡರು ಕೆ.ಆರ್‌.ನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸ್ಥಳೀಯ ಶಾಸಕ ಸಾ.ರಾ.ಮಹೇಶ್‌ ಅವರ ಮೇಲೆ ಅಸಮಾಧಾನ ಹೊರಹಾಕುತ್ತಿದ್ದರು. ಪ್ರತಿಯಾಗಿ ಎಚ್‌.ಡಿ.ಕುಮಾರಸ್ವಾಮಿಯವರು ಜಿಟಿಡಿಯವರ ಮೇಲೆ ವಾಗ್ದಾಳಿ ನಡೆಸುತ್ತಿದ್ದರು. ಆದರೆ ಈಗ ಉಭಯ ನಾಯಕರು ಪರಸ್ಪರ ದೂಷಿಸುವುದನ್ನು ನಿಲ್ಲಿಸಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿಯವರ ಮೇಲಿನ ಮುನಿಸು ಮರೆಯಾಗಿದ್ದು, ಜಿಟಿಡಿ ಜೆಡಿಎಸ್‌ನಲ್ಲೇ ಉಳಿಯುವ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ