ಆ್ಯಪ್ನಗರ

ಹುಣಸೂರಿನ ಗಾವಡಗೆರೆ ಹೋಬಳಿಯಲ್ಲಿ ಆಲಿಕಲ್ಲು ಮಳೆ

ಕಳೆದೆರಡು ದಿನಗಳಿಂದ ತಾಲೂಕಿನ ಹನಗೋಡು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಬಿದ್ದ ಮಳೆಗೆ ತೆಂಗಿನ ಮರಗಳು ಧರೆಗುರುಳಿದ್ದು, ಕೆಲವು ಮನೆಯ ಮೇಲ್ಛಾವಣೆ ಹಾರಿ ಹೋಗಿವೆ.

Vijaya Karnataka 23 Apr 2018, 5:15 am
ಹುಣಸೂರು: ಕಳೆದೆರಡು ದಿನಗಳಿಂದ ತಾಲೂಕಿನ ಹನಗೋಡು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಬಿದ್ದ ಮಳೆಗೆ ತೆಂಗಿನ ಮರಗಳು ಧರೆಗುರುಳಿದ್ದು, ಕೆಲವು ಮನೆಯ ಮೇಲ್ಛಾವಣೆ ಹಾರಿ ಹೋಗಿವೆ.
Vijaya Karnataka Web hailstorm rain in hilly terrain
ಹುಣಸೂರಿನ ಗಾವಡಗೆರೆ ಹೋಬಳಿಯಲ್ಲಿ ಆಲಿಕಲ್ಲು ಮಳೆ


ತಾಲೂಕಿನ ಚಿಕ್ಕಹೆಜ್ಜೂರು, ಕೊಳವಿಗೆ, ಯಶೋಧರಪುರದಲ್ಲಿ ಸಾಕಷ್ಟು ಹಾನಿಯಾಗಿದೆಯಲ್ಲದೆ ಕೋಣನಹೊಸಹಳ್ಳಿ, ಮುದಗನೂರು, ಕೊಳವಿಗೆ ಗ್ರಾಮ ಹಾಗೂ ಚಂದನಗಿರಿ ಹಾಡಿಯಲ್ಲೂ ಹಾನಿಯುಂಟಾಗಿದೆ. ಚಿಕ್ಕಹೆಜ್ಜೂರಿನ ದೇವರಾಜರಿಗೆ ಸೇರಿದ ಮನೆ ಮುಂದಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ತೆಂಗಿನ ಮರ ಅಧರ್ಕ್ಕೆ ಕಡಿದು ಬಿದ್ದಿದೆ. ಮನೆಯ ಮೇಲ್ಛಾವಣಿಗೆ ಹಾಕಿದ್ದ ಹೆಂಚುಗಳು ಬಿರುಗಾಳಿಗೆ ಹಾರಿಹೋಗಿದೆ, ಗೋಡೆ ಬಿರುಕು ಬಿಟ್ಟಿವೆ.

ಇದೇ ಗ್ರಾಮದ ನಂಜುಂಡಪ್ಪರ ಮನೆಯ ಗೋಡೆಗಳು ಬಿರುಕು ಬಿಟ್ಟಿದೆ, ಮೂರ್ತಿ, ಮಾಜಿ ಅಧ್ಯಕ್ಷ ಚಂದ್ರಶೇಖರ್‌ರಿಗೆ ಸೇರಿದ ಮನೆಯ ಹೆಂಚುಗಳು ಹಾರಿಹೋಗಿದೆ. ಅಲ್ಲದೆ ರೂಪಾನಂದೀಶ್ ಎಂಬುವವರು ಇತ್ತೀಚೆಗಷ್ಟೇ ನಿರ್ಮಿಸಿದ್ದ ಹೊಸ ಮನೆಯ ಮೇಲ್ಛಾವಣೆಗೆ ಹಾಕಿದ್ದ ಶೀಟ್ ಹಾರಿಹೋಗಿ ವಿದ್ಯುತ್ ತಂತಿ ಮೇಲೆ ಬಿದ್ದು, ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು. ಸುಮಾರು 15ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕಚ್ಚಿವೆ. ಚಂದನಗಿರಿ ಹಾಡಿ ರಸ್ತೆಯಲ್ಲಿ ರಸ್ತೆಗೆ ಮರ ಉರುಳಿ ಬಿದ್ದಿದೆ.

ಮೈಸೂರು ಬಂಟ್ವಾಳ ಹೆದ್ದಾರಿಯ ಪಕ್ಕದ ಯಶೋಧರಪುರ ಬಳಿ ಹೈಟೆಷನ್ ಲೈನ್ ಮೇಲೆ ತೆಂಗಿನ ಮರ ಉರುಳಿ ಬಿದ್ದಿದ್ದರಿಂದಾಗಿ ಆ ಭಾಗದಲ್ಲಿ ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿತ್ತು. ಎಲ್ಲಡೆ ಸೆಸ್ಕ್ ಸಿಬ್ಬಂದಿಗಳು ದುರಸ್ತಿಕಾರ್ಯ ನಡೆಸಿದರು.

ಆಲಿಕಲ್ಲು ಮಳೆ: ತಾಲೂಕಿನ ಗಾವಡಗೆರೆ ಹೋಬಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ಸುಮಾರು 150 ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ಗ್ರಾಮದಬಾಲಕರ ಮೆಟ್ರಿಕ್ ವಿದ್ಯಾರ್ಥಿ ನಿಲಯದಲ್ಲಿ ಬಳಿ ಮರ ಚಂದ್ರೇಗೌಡರ ಮನೆಯ ಮೇಲೆ ಬಿದ್ದ ಪರಿಣಾಮ ಮನೆಯ ಹೆಂಚುಗಳು ಪುಡಿ-ಪುಡಿಯಾಗಿ ಗೋಡೆ ಬಿರುಕು ಬಿಟ್ಟಿದೆ. ಇದೇ ಗ್ರಾಮದ ರಮೇಶ, ಚಂದ್ರನಾಯ್ಕ, ಕಾಂತರಾಜು, ಸುರೇಶ, ಚಿಕ್ಕಮ್ಮ ಎಂಬುವವರ ಮನೆಗಳ ಮೇಲ್ಛಾವಣಿಗಳು ಹಾರಿ ಹೋಗಿ ಹಾನಿ ಸಂಭವಿಸಿದೆ.

ಗ್ರಾಮದ ಹೈಸ್ಕೂಲ್ ಬಡಾವಣೆಯ ನಟೇಶರ ದನದ ಕೊಟ್ಟಿಗೆ ಮೇಲ್ಛಾವಣಿ ಹಸುವಿನ ಮೇಲೆ ಬಿದ್ದು ಹಸುವಿನ ಕಾಲಿಗೆ ಗಾಯವಾಗಿದೆ. ಮರೂರು ಗ್ರಾಮದ ನಂಜುಂಡನಾಯಕ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದ ಪರಿಣಾಮ ಮನೆ ಹೆಂಚು ಹಾಳಾಗಿ ಮನೆಗೆ ನೀರು ನುಗ್ಗಿ ದವಸಧಾನ್ಯಗಳು ಮಳೆ ನೀರಿನಲ್ಲಿ ತೇಲಿಹೋಗಿದೆ.

ತಂಬಾಕು ನಾಟಿ ಸಸಿಗಳು ಬಾರಿ ಮಳೆ- ಗಾಳಿಗೆ ಕೊಚ್ಚಿ ಹಾನಿಯಾಗಿದೆ. ಮಳೆ ಹಾಗೂ ಬಿಸಿಲಿನ ತಾಪನೀಗಿಸಲು ತಂಬಾಕು ಸಸಿ ಮಡಿಗೆ ಬಲೆ(ನೆಟ್) ಹಾಕಿದ್ದ ರೈತರ ಬಲೆ ಹರಿದು ಹೋಗಿ ಲಕ್ಷಾಂತರ ರೂ ನಷ್ಟ ಉಂಟಾಗಿದೆ, ಅಲ್ಲಲ್ಲಿ ವಿದ್ಯುತ್ ಕಂಬ ಹಾಗೂ ತೆಂಗು, ಬೇವಿನ ಹಾಗೂ ಸಿಲ್ವರ್ ಮರಗಳು ಧರೆಗೆ ಉರುಳಿವೆ.
ಮೈಸೂರು, ಹುಣಸೂರು, ಮಳೆ, ಬಿರುಗಾಳಿ, ಮರ,

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ