ಆ್ಯಪ್ನಗರ

ಸಾಗರೆಯಲ್ಲಿ ಮರ್ಯಾದೆಗೇಡು ಹತ್ಯೆ: ತಂದೆ ಸೇರಿ ಇಬ್ಬರ ಸೆರೆ

ಸರಗೂರು ತಾಲೂಕು ಸಮೀಪದ ಸಾಗರೆ ಗ್ರಾಮದಲ್ಲಿ ಮರ್ಯಾದೆಗೇಡು ಹತ್ಯೆ ನಡೆದಿದ್ದು, ತಂದೆಯೇ ಮಗಳನ್ನು ಸಾಯಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

Vijaya Karnataka 10 May 2018, 7:27 am
ಎಚ್‌.ಡಿ.ಕೋಟೆ: ಸರಗೂರು ತಾಲೂಕು ಸಮೀಪದ ಸಾಗರೆ ಗ್ರಾಮದಲ್ಲಿ ಮರ್ಯಾದೆಗೇಡು ಹತ್ಯೆ ನಡೆದಿದ್ದು, ತಂದೆಯೇ ಮಗಳನ್ನು ಸಾಯಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
Vijaya Karnataka Web honour kill


ಶಿಲ್ಪಾ (19) ಕೊಲೆಗೀಡಾದ ಯುವತಿ. ಈಕೆಯ ತಂದೆ ಪ್ರಕಾಶ್‌, ಈತನ ಸಹೋದರ ಗೋವಿಂದರಾಜು ಹಾಗೂ ಇತರೆ ಮೂವರು ಸೇರಿ ಗ್ರಾಮದ ಕಪಿಲಾ ನದಿ ದಂಡೆಯಲ್ಲಿ ಶಿಲ್ಪಾಳನ್ನು ಕೊಲೆ ಮಾಡಿ ಸುಟ್ಟು ಹಾಕಿದ್ದಾರೆ ಎಂಬುದು ತನಿಖೆ ವೇಳೆ ಬಹಿರಂಗಗೊಂಡಿದೆ.

ಎರಡು ದಿನಗಳಿಂದ ಗ್ರಾಮದಲ್ಲಿ ಶಿಲ್ಪಾಳ ಬಗ್ಗೆ ಗುಸುಗುಸು ಪ್ರಾರಂಭವಾಗಿ, ಅದು ಸರಗೂರು ಪೊಲೀಸ್‌ ಠಾಣೆಗೆ ತಲುಪಿದೆ. ಕೂಡಲೇ ಕಾರ‍್ಯ ಪ್ರವೃತ್ತರಾದ ವೃತ್ತ ನಿರೀಕ್ಷ ಕ ಹರೀಶ್‌ ಕುಮಾರ್‌ ಮತ್ತು ಸರಗೂರು ಠಾಣೆ ಪಿಎಸ್‌ಐ ನಿತ್ಯಾನಂದ ಗ್ರಾಮಕ್ಕೆ ತೆರಳಿ ಪ್ರಕಾಶ್‌ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಅವರು ಮಗಳನ್ನು ಕೊಲೆ ಮಾಡಿ ಸುಟ್ಟು ಹಾಕಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಆತನ ಸಹೋದರ ಗೋವಿಂದರಾಜನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

15 ದಿನಗಳ ಹಿಂದೆ ತಾಲೂಕಿನ ಸೋನಹಳ್ಳಿ ಗ್ರಾಮದ ಬಸವರಾಜ್‌ ಎಂಬುವವರೊಂದಿಗೆ ಶಿಲ್ಪಾಳ ಮದುವೆ ಯಾಗಿತ್ತು. ಮದುವೆಯಾದ 7 ದಿನದ ನಂತರ ಶಿಲ್ಪಾ ಗ್ರಾಮದ ಸೋಮನಾಯಕ ಎಂಬುವವರ ಮಗ ರಾಕೇಶ್‌ನನ್ನು ಪ್ರೀತಿಸಿರುವುದನ್ನು ತಿಳಿಸಿ, ನಾನು ಇಲ್ಲಿ ಬಾಳುವುದು ಸಾಧ್ಯವಿಲ್ಲ ಎಂದು ಗಂಡನ ಮನೆಯಲ್ಲಿ ರಾದ್ಧಾಂತ ಮಾಡಿದ್ದಾಳೆ. ಯಾವುದೇ ರಾಜಿ ಸಂಧಾನ ಮಾಡಿದರೂ ಪ್ರಯೋಜನವಾಗಿಲ್ಲ. ನಂತರ ಬಸವರಾಜ್‌ ಕುಟುಂಬದವರಿಗೆ ಸಮಾಧಾನ ಹೇಳಿ ಪ್ರಕಾಶ್‌ ತಮ್ಮ ಮಗಳನ್ನು ಸಾಗರೆ ಗ್ರಾಮದ ಸ್ವಂತ ಮನೆಗೆ ಕರೆದು ಕೊಂಡು ಬಂದಿದ್ದಾರೆ. ನೆಪವೊಡ್ಡಿ ಕಪಿಲಾ ನದಿಯ ಬಳಿಗೆ ಆಕೆಯನ್ನು ಕರೆದುಕೊಂಡು ಬಂದ ತಂದೆ ಮತ್ತು ಆತನ ಸಹೋದರ ಹಾಗೂ ಇತರರು ಕೊಲೆಗೈದು, ಅಲ್ಲಿಯೇ ದಹನಮಾಡಿ ಬೂದಿಯನ್ನು ಕಪಿಲಾ ನದಿಗೆ ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾ ಗಿದ್ದ ಇನ್ನೂ ಮೂವರು ತಲೆಮರಿಸಿಕೊಂಡಿದ್ದು, ಅವರ ಸೆರೆಗೆ ಬಲೆ ಬೀಸಲಾಗಿದೆ ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ