ಆ್ಯಪ್ನಗರ

ನಂಜನಗೂಡು: ಶ್ರೀಕಂಠೇಶ್ವರನ ಸನ್ನಿಧಿಗೆ ಭಕ್ತಸಾಗರ

ಬೆಳಗ್ಗೆ 4ರ ಸಮಯದಲ್ಲಿ ಶ್ರೀಕಂಠೇಶ್ವರಸ್ವಾಮಿಗೆ ವಿವಿಧ ಅಭಿಷೇಕಗಳನ್ನು ನೆರವೇರಿಸಿ ನಾನಾ ಬಗೆಯ ಪುಷ್ಪಗಳು ಹಾಗೂ ಬಿಲ್ವಪತ್ರೆಯಿಂದ ಸರ್ವಾಲಂಕೃತಗೊಳಿಸಿ ನಂತರ ಮಹಾಮಂಗಳಾರತಿಯೊಂದಿಗೆ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

Vijaya Karnataka 20 Sep 2021, 8:19 pm
ನಂಜನಗೂಡು: ದಕ್ಷಿಣ ಕಾಶಿ ಪ್ರಸಿದ್ಧಿಯ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಹುಣ್ಣಿಮೆ ಪ್ರಯುಕ್ತ ಸೋಮವಾರ ಸಾವಿರಾರು ಸಂಖ್ಯೆಯ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು. ಇನ್ನು ರಾಜ್ಯದ ನಾನಾ ಮೂಲೆಗಳಿಂದ ಸಾವಿರಾರು ಸಂಖ್ಯೆಯ ಜನರು ದೇವಾಲಯಕ್ಕೆ ಭೇಟಿ ನೀಡಿದ್ದರಿಂದ ಬೆಳಗಿನಿಂದ ಸಂಜೆವರೆಗೂ ದೇಗುಲದ ಅಂಗಳ ಜನರಿಂದ ತುಂಬಿ ತುಳುಕಿತು.
Vijaya Karnataka Web ನಂಜನಗೂಡು ದೇವಾಲಯ
ನಂಜನಗೂಡು ದೇವಾಲಯ


ಕೊರೊನಾ ಆತಂಕದ ನಡುವೆಯೂ ನಂಜನಗೂಡಿನಲ್ಲಿ ಸೋಮವಾರ ಜನಜಂಗುಳಿ ಜೋರಾಗಿತ್ತು. ಎಲ್ಲಿ ನೋಡಿದರೂ ಜನ ಸಾಗರವೇ ಕಂಡುಬರುತ್ತಿತ್ತು.

ಭಕ್ತರು ಕಪಿಲಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ನಂತರ ಸರತಿ ಸಾಲಿನಲ್ಲಿ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದುಕೊಂಡರು. ಇನ್ನು ದೇವಾಲಯದ ಆಗಮಿಕ ಜೆ.ನಾಗಚಂದ್ರ ದೀಕ್ಷಿತ್‌ ನೇತೃತ್ವದಲ್ಲಿ ಬೆಳಗ್ಗೆ 4ರ ಸಮಯದಲ್ಲಿ ಶ್ರೀಕಂಠೇಶ್ವರಸ್ವಾಮಿಗೆ ವಿವಿಧ ಅಭಿಷೇಕಗಳನ್ನು ನೆರವೇರಿಸಿ ನಾನಾ ಬಗೆಯ ಪುಷ್ಪಗಳು ಹಾಗೂ ಬಿಲ್ವಪತ್ರೆಯಿಂದ ಸರ್ವಾಲಂಕೃತಗೊಳಿಸಿ ನಂತರ ಮಹಾಮಂಗಳಾರತಿಯೊಂದಿಗೆ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

ದೇವರ ದರ್ಶನಕ್ಕೆ ಆಗಮಿಸಿದ್ದ ಕೆಲವರು ಹರಿಕೆ ಮುಡಿಯನ್ನು ಸಮರ್ಪಿಸಿದರೆ ಇನ್ನೂ ಕೆಲವರು ದೇವಾಲಯದ ಮುಂಭಾಗ ಉರುಳು ಸೇವೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸಿದರು. ಸಾಮಾನ್ಯ ಸರತಿ ಸಾಲಿನಲ್ಲಿದೇವಾಲಯದ ಒಳ ಪ್ರವೇಶಿಸಲು ಗಂಟೆಗಟ್ಟಲೆ ಕಾಯಬೇಕಿದ್ದರಿಂದ ಕೆಲವರು 30 ರೂ. ಹಾಗೂ 100 ರೂ. ಗಳ ವಿಶೇಷ ಟಿಕೇಟ್‌ ಖರೀದಿಸಿ ದೇವಾಲಯದ ಒಳ ಪ್ರವೇಶಿಸಿ ದೇವರ ದರ್ಶನ ಪಡೆದುಕೊಂಡರು.

ಇನ್ನು ಕೊರೊನಾದಿಂದಾಗಿ ಕೆಲ ದಿನಗಳಿಂದ ದೇವಾಲಯಕ್ಕೆ ಭಕ್ತರ ಹಾಜರಾತಿ ಕಡಿಮೆಯಿತ್ತಾದರೂ ಸೋಮವಾರ ಅನಂತನ ಹುಣ್ಣಿಮೆ ದಿನದಂದು ಸಾವಿರಾರು ಸಂಖ್ಯೆಯ ಭಕ್ತರು ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ